ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಯುವಜನತೆ ಧೂಮಪಾನ ಮತ್ತು ಮದ್ಯಪಾನ ದಂತಹ ದುಶ್ಚಟಗಳಿಗೆ ಒಳಗಾಗದೆ ಉತ್ತಮ ಹವ್ಯಾಸವನ್ನು ರೂಢಿಸಿಕೊಂಡು ಸ್ವಚ್ಚಂದ ಬದುಕು ರೂಪಿಸಿಕೊಳ್ಳಬೇಕು ಎಂದು ಜವನಿಕಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಜಗದೀಶ್ ಹೇಳಿದರು.ಇಲ್ಲಿನ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು ಯುವಕರು, ಮೋಜು ಮಸ್ತಿಗಾಗಿ ಸಿಗರೇಟ್, ಗಾಂಜಾ ಸೇವನೆ ಮಾಡುತ್ತಾರೆ. ಇದರ ಜತೆಗೆ ಮದ್ಯಪಾನವನ್ನು ಸೇವಿಸಿ ಮುಂದೆ ಅದನ್ನೇ ಚಟವಾಗಿಸಿಕೊಳ್ಳುತ್ತಾರೆ. ಇದರಿಂದ ಬದುಕು ಹಾಳಾಗಲಿದೆ. ವಿದ್ಯಾರ್ಥಿಗಳು ಇಂಥ ದುಶ್ಚಟಗಳನ್ನು ಕಲಿಯುವ ಮುನ್ನ ಭವಿಷ್ಯದ ಬದುಕಿನ ಬಗ್ಗೆ ಒಳ್ಳೆಯ ರೀತಿಯಲ್ಲಿ ಯೋಚಿಸಬೇಕು ಎಂದು ಹೇಳಿದರು.
ಸಂತೋಷಕ್ಕಾಗಿ ಮನೆ ಮಂದಿಯೆಲ್ಲ ಕುಳಿತುಕೊಂಡು ಒಳ್ಳೆಯ ಊಟ ಮಾಡಿ. ಉತ್ತಮ ಪುಸ್ತಕಗಳು ನಮ್ಮ ಬದುಕನ್ನು ರೂಪಿಸುತ್ತವೆ. ಅವುಗಳನ್ನು ಓದುವ ಮೂಲಕ ಸಂತೋಷ ಮತ್ತು ಜ್ಞಾನ ಪಡೆದು ಕೊಳ್ಳಬೇಕು. ಮಹಾತ್ಮ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವದ ಮಹಾನ್ ನಾಯಕರು. ಅಂಥ ಮಹೋನ್ನತ ನಾಯಕರನ್ನು ನೀಡಿದ ದೇಶ ನಮ್ಮದು. ಅವರ ಆದರ್ಶ ಮತ್ತು ತತ್ವಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಿ ಬೆಳೆಯಿರಿ ಎಂದು ಕಿವಿಮಾತು ಹೇಳಿದರು.ಕಾಲೇಜಿನ ಕಾರ್ಯದರ್ಶಿ ಡಾ.ಜೆ. ಸೋಮಣ್ಣ ಮಾತನಾಡಿ, ಎಳೆಯ ವಯಸ್ಸಿನಲ್ಲಿ ಕಲಿತ ಒಳ್ಳೆಯ ಗುಣಗಳು ಕೊನೆಯ ತನಕ ಜತೆಯಲ್ಲಿ ಬರುತ್ತವೆ. ಜೀವನದಲ್ಲಿ ನೈತಿಕ ಮೌಲ್ಯ ಬಹಳ ಮುಖ್ಯ. ಯಾವತ್ತೂ ಕೆಟ್ಟ ವಿಷಯಗಳ ಬಗ್ಗೆ ಚಿಂತಿಸಬಾರದು. ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಮುನ್ನಡೆಯ ಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಅಭಿಜಿತ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಸಾಮಾನ್ಯ ಜ್ಞಾನ ಮೂಡಿಸುವ ಮತ್ತು ಉತ್ತಮ ಬದುಕಿನತ್ತ ಕೊಂಡೊಯ್ಯುವ ಮಾರ್ಗದರ್ಶನ ಬಹಳ ಮುಖ್ಯ. ಈ ಕಾರಣದಿಂದ ಉತ್ತಮ ವ್ಯಕ್ತಿಗಳನ್ನು ಕರೆಸಿ ಬೇರೆ ಬೇರೆ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಸುನೀತಾ ಶೆಟ್ಟಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಮಿತಾ, ಸೇವಾ ಪ್ರತಿನಿಧಿ ಆರತಿ, ಉಪನ್ಯಾಸಕರಾದ ಪಿ. ಶಿವನಂಜು, ರಜನಿ, ನವೀನ್, ಅರ್ಪಿತಾ, ಸುಧಾ ಇದ್ದರು.