ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಪಂಜಾಬ್ ರಾಜ್ಯದ ಲೂಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟದ ಆಶ್ರಯದಲ್ಲಿ ಮಾರ್ಚ್ ೨೬ರಿಂದ ಏ.೧ರ ವರೆಗೆ ನಡೆದ ೩೭ನೇ ರಾಷ್ಟ್ರೀಯ ಅಂತರ ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ತಂಡವು ಪ್ರದರ್ಶಿಸಿದ ‘ಏಕಾದಶಾನನ’ ದ್ವಿತೀಯ ರಾಷ್ಟ್ರೀಯ ರಂಗ ಪ್ರಶಸ್ತಿಗೆ ಪಾತ್ರವಾಗಿದೆ.
ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಜನಪದ ವಾದ್ಯಮೇಳ ಹಾಗೂ ತಾಳವಾದ್ಯೇತರ ವಿಭಾಗಗಳಲ್ಲೂ ದ್ವಿತೀಯ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ.ಆಳ್ವಾಸ್ ಕಾಲೇಜಿನ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ತರಬೇತು ಪಡೆದ ವಿದ್ಯಾರ್ಥಿಗಳು ಶಶಿರಾಜ್ ಕಾವೂರು ಬರೆದ ‘ಏಕಾದಶಾನನ’ ನಾಟಕವನ್ನು ಜೀವನರಾಂ ಸುಳ್ಯ ಅವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದ್ದರು. ಆಳ್ವಾಸ್ ಕಾಲೇಜಿನ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಜೀವನ್ರಾಂ ಸುಳ್ಯ ನಿರ್ದೇಶನದಲ್ಲಿ ತರಬೇತು ಪಡೆದ ‘ಏಕಾದಶಾನನ’ ನಾಟಕ ತಂಡವು ಈಗಾಗಲೇ ರಾಜ್ಯ, ದಕ್ಷಿಣ ವಲಯ ಹಾಗೂ ೧೨ನೇ ಬಾರಿ ಅಖಿಲ ಭಾರತ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿದೆ.
ನಾಟಕದ ತಂಡದಲ್ಲಿ ಆಳ್ವಾಸ್ ಕಾಲೇಜಿನ ಪ್ರಮೋದ್, ಮನೀಶ್, ರೋನಿತ್, ವಿಶಾಲ್, ಐಶ್ವರ್ಯ, ಶ್ರೀವಲ್ಲಿ, ರತನ್, ರಚನ್, ಸಂತೋಷ್, ಜೋಶಿತ್, ಶ್ರೀಕಂಠ, ರೇವಣ್, ಗಗನ್ ಪಾಲ್ಗೊಂಡಿದ್ದರು. ಸುಮನಾ ಪ್ರಸಾದ್ ಗಾಯನದಲ್ಲಿ ಸಹಕರಿಸಿದ್ದರು.ತಾಳ್ಯವಾದ್ಯೇತರ ವಿಭಾಗದಲ್ಲಿ ಸ್ವಯಂ ಪ್ರಕಾಶ್ ಕೊಳಲಿಗೆ ಪ್ರಶಸ್ತಿ ಒಲಿದಿದ್ದು, ಪ್ರಸಾದ್ ಕುಮಾರ್ ತಬಲಾ ಮೂಲಕ ಸಹಕರಿಸಿದ್ದರು. ಜನಪದ ವಾದ್ಯಮೇಳದಲ್ಲಿ ಕೌಶಲ್, ಸತ್ಯಜಿತ್, ಪ್ರಸಾದ್, ಆಶಿಶ್, ಸ್ವಯಂ ಪ್ರಕಾಶ್, ರಂಜಿತ್, ಸೌಭಾಗ್ಯ, ಚಂದನ್, ಸಮೀಕ್ಷಾ, ವೈಶಾಖ್ ಮತ್ತು ತೇಜಸ್ ಇದ್ದರು.
ವಿಜೇತ ಕಲಾ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.