ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ 4 ಯೋಜನೆಗಳನ್ನ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. ಉಳಿದ ಯುವ ನಿಧಿ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇತ್ತೀಚೆಗೆ ಚಾಲನೆ ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಪ್ರಕಾಶ್ ಜಿ. ಟಿ ನಿಟ್ಟಾಲಿ ಹೇಳಿದರು.ತಮ್ಮ ಕಚೇರಿಯಲ್ಲಿ ಕರಪತ್ರಗಳು ಮತ್ತು ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಯೋಜನೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚು ಪ್ರಚಾರಗೊಳಿಸಲು ಯುವನಿಧಿ ಯೋಜನೆ ಕುರಿತು ಪ್ರಚಾರ ಮಾಡಲಾಗುವುದು ಎಂದರು.
2 ವರ್ಷ ನಿರುದ್ಯೋಗ ಭತ್ಯೆಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಯುವನಿಧಿ’ ಯೋಜನೆಯಡಿ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರು.ಗಳನ್ನು ನೀಡಲಾಗುವುದು. ಡಿಪ್ಲೋಮೊ ಪಾಸ್ ನಿರುದ್ಯೋಗಿಗಳಿಗೆ ಮಾಸಿಕ 1500 ರು. ನಿರುದ್ಯೋಗ ಭತ್ಯೆ ಸಿಗಲಿದೆ. ಈ ಭತ್ಯೆಯನ್ನು 2 ವರ್ಷಗಳ ಅವಧಿಗೆ ಮಾತ್ರ ನೀಡಲಾಗುತ್ತದೆ. ಫಲಾನುಭವಿಯು 2 ವಷರ್ಗಳ ಒಳಗೆ ಉದ್ಯೋಗವನ್ನು ಕಂಡುಕೊಂಡರೆ ನಿರುದ್ಯೋಗ ಭತ್ಯೆಯನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ ಎಂದರು.
ಮಾರ್ಗಸೂಚಿಗಳೇನು?ಪದವಿ, ಡಿಪ್ಲೋಮೊ ಪಡೆದ ವಿದ್ಯಾರ್ಥಿಗಳು 180 ದಿನಗಳ ನಂತರವೂ ಯಾವುದೇ ಉದ್ಯೋಗ ಪಡೆಯದ ನಿರುದ್ಯೋಗಿಗಳು ಹಾಗೂ 2022-23 ಶೈಕ್ಷಣಿಕ ವರ್ಷದಲ್ಲಿ ಪದವಿ/ಡಿಪ್ಲೋಮೋ ಪಡೆದ/ಡಿಪ್ಲೋಮೊ ಪಡೆದ ವಿದ್ಯಾರ್ಥಿಗಳು ಯುವನಿಧಿ ಯೋಜನೆಗೆ ನೋಂದಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ. 2023ರಲ್ಲಿ ಪದವಿ ಅಥವಾ ಡಿಪ್ಲೋಮೊ ತೇರ್ಗಡೆಯಾದ ನಂತರ ಕನಿಷ್ಠ 6 ತಿಂಗಳವರೆಗೆ ಉದ್ಯೋಗವನ್ನು ಪಡೆಯದ ಮತ್ತು ಕರ್ನಾಟಕದಲ್ಲಿ ವಾಸವಿದ್ದು, ವಿದ್ಯಾರ್ಥಿಯಾಗಿರುವ ಕನ್ನಡಿಗರಿಗೆ ಮಾತ್ರ ಈ ಯೋಜನೆಯ ಅನ್ವಯಿಸುತ್ತದೆ ಎಂದರು.
ಅಭ್ಯರ್ಥಿಗಳು ನೇರ ನಗದು ವರ್ಗಾವಣೆಗಳನ್ನು(ಡಿಬಿಟಿ) ಸ್ವೀಕರಿಸಲು ಆಧಾರ್ ಸಂಖ್ಯೆಗೆ ಸೇಪರ್ಡೆಯಾದ ಬ್ಯಾಂಕ್ ಖಾತೆಯನ್ನು ಹೊಂದಿರತಕ್ಕದ್ದು, ಅಭ್ಯರ್ಥಿಗಳು ತಮ್ಮ ಆಧಾರ್ ಸಂಖ್ಯೆಯನ್ನು ತಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಕೊಳ್ಳತಕ್ಕದ್ದು. ಯುವನಿಧಿ ಯೊಜನೆಯ ಪ್ರಯೋಜನೆಗಳನ್ನು ಪಡೆಯಲು ಆಸಕ್ತಿ ಹೊಂದಿದ ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬಹುದು.ಅಗತ್ಯ ದಾಖಲೆ ಸಲ್ಲಿಸಬೇಕು
ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮುಂಚಿತವಾಗಿ ಅಂದರೆ ತಾತ್ಕಾಲಿಕ ಪದವಿ ಪತ್ರ ಪಡೆದು 180 ದಿನಗಳು ಪೂರ್ಣಗೊಳ್ಳುವ ಮುಂಚೆ ಅರ್ಜಿ ಸಲ್ಲಿಸತಕ್ಕದ್ದು. ಅಭ್ಯರ್ಥಿಯು ನಿರುದ್ಯೋಗಿ ಎಂದು ಸ್ವಯಂ ಧೃಡಿಕರಿಸಬೇಕು ಮತ್ತು ಘೋಷಣೆಯನ್ನು ಸಲ್ಲಿಸುವುದು. ನೋಂದಾಯಿತ ಅಭ್ಯರ್ಥಿ ವಿವರಗಳನ್ನು ಎನ್ ಎ ಡಿ ಮೂಲಕ ಪರಿಶೀಲಿಸಲಾಗುವುದು ಎಂದರು.ಪದವಿ/ಡಿಪ್ಲೋಮಾದ ಪ್ರಮಾಣಪತ್ರಗಳನ್ನು ಅಪ್ ಲೋಡ್ ಮಾಡಿದರೆ, ಅಪ್ ಲೋಡ್ ಮಾಡಿದ ದಾಖಲೆಗಳ ವಿವರಗಳನ್ನು ಆಯಾ ವಿಶ್ವವಿದ್ಯಾಲಯದ ರಿಜಿಸ್ಟಾರ್(ಮೌಲ್ಯಮಾಪನ)ಅವರಿಗೆ ರವಾನಿಸಲಾಗುವುದು, ಅವರಿಗೆ ಲಾಗಿನ್ ಅನ್ನು ಒದಗಿಸಲಾಗುವುದು. ರಿಜಿಸ್ಟಾರ್(ಮೌಲ್ಯಮಾಪನ) ರವರು ದಾಖಲೆಗಳ ಧೃಡೀಕರಣವನ್ನು ಪರಿಶೀಲಿಸುವುದು ಮತ್ತು 5 ಕೆಲಸದ ದಿನಗಳ ನಿಗದಿತ ಅವಧಿಯೊಳಗೆ ಎನ್ ಎ ಡಿ ಪೋರ್ಟಲ್ ನಲ್ಲಿ ಅದನ್ನು ಅಪ್ ಲೋಡ್ ಮಾಡಲಿದ್ದಾರೆ ಎಂದರು.
ಮಾಹಿತಿ ತಪ್ಪಾಗಿದ್ದರೆ ದಂಡಈ ವೇಳೆ ಅಭ್ಯರ್ಥಿಯು ತಪ್ಪು ಮಾಹಿತಿಯನ್ನು ಘೋಷಿಸಿಕೊಂಡಿದ್ದರೆ ದಂಡ ವಿಧಿಸಲಾಗುತ್ತದೆ. ಪಾವತಿಸಿದ ಮೊತ್ತವನ್ನು ಕಾನೂನಿನ ಪ್ರಕಾರ ವಸೂಲಿ ಮಾಡಲಾಗುವುದು. ಆದ್ದರಿಂದ ಅರ್ಹ ಫಲಾನುಭವಿಗಳು ಮಾತ್ರ ನೋಂದಾಯಿಸಿಕೊಳ್ಳುವುದು.ಜಿಲ್ಲೆಯಲ್ಲಿ ಪದವಿ ಮುಗಿಸಿದವರು6027, ಡಿಪ್ಲೋಮಾ ಆದವರು 1500, ಸ್ನಾತಕೊತ್ತರ ಪದವಿ ಮುಗಿಸಿದವರು 1000, ಬಿ.ಇ ಪದವಿ ಮುಗಿಸಿದವರು 1500 ಅಭ್ಯರ್ಥಿಗಳು ಸೇರಿದಂತೆ ಸುಮಾರು ಹತ್ತು ಸಾವಿರ ಅಭ್ಯರ್ಥಿಗಳು ಈ ಯೋಜನೆಗೆ ಅರ್ಹ ಅಭ್ಯರ್ಥಿಗಳು ಲಭ್ಯರಾಗುವ ನೀರಿಕ್ಷೆಯಿದೆ ಎಂದು ಹೇಳಿದರು.
ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪ್ರಸಾದ್, ಜಿಲ್ಲಾ ಅಭಿಯಾನ ವ್ಯವಸ್ಥಾಪಕ ವೆಂಕಟಾಚಲಪತಿ, ಜಿ.ಪಂ.ಉಪ ಕಾರ್ಯದರ್ಶಿ ಡಾ.ಎನ್.ಭಾಸ್ಕರ್ ಮತ್ತತರರು ಇದ್ದರು.