ಗದಗ: ದೇಹ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಚಟವನ್ನು ವ್ಯಸನ ಎಂದು ಕರೆಯುತ್ತಾರೆ. ವ್ಯಕ್ತಿ ಜೀವನದಲ್ಲಿ ನಿಶ್ಚಿತ ಗುರಿ ಸಾಧಿಸಬೇಕಾದರೆ ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಇಂದಿನ ಯುವಜನತೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ವ್ಯಸನಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಜರುಗಿದ ಡಾ. ಮಹಾಂತ ಶಿವಯೋಗಿಗಳ ಜಯಂತಿ ಪ್ರಯುಕ್ತ ನಡೆದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವಜನರು ಮದ್ಯಪಾನ, ತಂಬಾಕು, ಗುಟ್ಕಾ , ಸಿಗರೇಟು ಸೇವನೆ ಮುಂತಾದ ದುಶ್ಚಟಗಳ ದಾಸರಾಗದಂತೆ ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬೇಕು. ಇತ್ತೀಚಿನ ದಿವಸಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಮೊಬೈಲ್ನ ಅತಿಯಾದ ಬಳಕೆಯಿಂದ ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ. ವ್ಯಸನಗಳ ಬೆನ್ನಟ್ಟಿ ಹೋಗದಂತೆ ದೃಢವಾದ ಆತ್ಮವಿಶ್ವಾಸ ಹೊಂದುವುದು ಮುಖ್ಯವಾಗಿದೆ ಎಂದರು.ಅಪರ ಜಿಲ್ಲಾಧಿಕಾರಿ ಡಾ. ದುರುಗೇಶ ಮಾತನಾಡಿ, ಮಾದಕ ವಸ್ತು ಬಳಕೆ ಮತ್ತು ಸಾಗಣಿ ಒಂದು ಶಿಕ್ಷಾರ್ಹ ಅಪರಾಧ. ಆರೋಗ್ಯ ಮತ್ತು ಮನಸ್ಸಿಗೆ ಮಾರಕ. ಸಾಂಕ್ರಾಮಿಕ ರೋಗಗಳಿಗೆ ಪ್ರೇರಕ ಎಚ್.ಐ.ವಿ ಏಡ್ಸ್ ರೋಗಗಳಿಗೆ ವಾಹಕ, ಶಾಲಾ ಕಾಲೇಜುಗಳ ಗೈರು ಹಾಜರಿಗೆ ಇಂಬು ಕೊಡುವ ಕಾರ್ಕೊಟಕ, ಉದ್ಯೋಗ, ಆದಾಯ ಹಾಳು ಮಾಡಲು, ವಿದ್ವಂಸಕ ಅಪರಾಧ, ಭ್ರಷ್ಟಾಚಾರ, ಕಪ್ಪು ಹಣ, ಭಯೋತ್ಪಾದನೆಗಳಿಗೆ ಪ್ರಚೋದಕವಾಗಿವೆ. ಮಾದಕ ವಸ್ತು ಮುಕ್ತ ಸಮಾಜ ಕಟ್ಟಲು ಶ್ರಮಿಸುತ್ತೇನೆ ಎಂದರು.
ಗದಗ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಅರವಿಂದ ಕರಿನಾಗಣ್ಣವರ ಮಾತನಾಡಿ, ಚಿಕಿತ್ಸೆಗಿಂತ ತಡೆಗಟ್ಟವಿಕೆ ಉತ್ತಮವಾಗಿದ್ದು, ಒಂದು ಸಿಗರೇಟ್ ಸೇದುವುದರಿಂದ ಜೀವನದ ಅತ್ಯಮೂಲ್ಯ 11 ನಿಮಿಷಗಳನ್ನು ಕಳೆದುಕೊಳ್ಳುತ್ತೆ ಹಾಗೂ ಸಿಗರೇಟ್ನಲ್ಲಿ 6000ಕ್ಕೂ ಹೆಚ್ಚು ಹಾನಿಕಾರಕ ರಾಸಾಯನಿಕಗಳಿರುತ್ತವೆ ಮತ್ತು ಅದರಲ್ಲಿ 60ಕ್ಕೂ ಹೆಚ್ಚೂ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ದಾರಿ ಮಾಡಿ ಕೊಡುತ್ತವೆ, ವಿದ್ಯಾರ್ಥಿಗಳು ಕುತೂಹಲದಿಂದ ಮಾದಕ ವ್ಯಸನ ಪ್ರಾರಂಭಿಸಿ ಅದರಿಂದ ಹೊರಬರದಂತೆ ಅದಕ್ಕೆ ದಾಸರಾಗುತ್ತಾರೆ. ಹಾಗಾಗಿ ಒಳ್ಳೆಯ ಅಭ್ಯಾಸಗಳನ್ನು ರೂಢಿ ಮಾಡಿಕೊಂಡು ಜೀವನದಲ್ಲಿ ಸಫಲವಾಗಬೇಕು ಎಂದು ವಿವರಿಸಿದರು.ಗಮನ ಸೆಳೆದ ಜಾಗೃತಿ ಗೀತೆ, ಕಿರುನಾಟಕ: ರೋಣದ ಜೀವನ ಬೆಳಕು ಕಲಾ ತಂಡದ ರಾಜಶೇಖರ ಹಿರೇಮಠ ಹಾಗೂ ತಂಡ ಪ್ರಸ್ತುತಪಡಿಸಿದ ದೀಪ ನೃತ್ಯ ಹಾಗೂ ಮಾದಕ ವಸ್ತು ವಿರೋಧಿ ಜಾಗೃತಿ ಗೀತೆಗಳು ಶ್ರೋತೃಗಳ ಗಮನ ಸೆಳೆದವು. ಗದಗ ಬೆಟಗೇರಿಯ ಎಸ್ಎಸ್ಕೆ ಜಗದಂಬಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವ್ಯಸನಮುಕ್ತ ದಿನಾಚರಣೆಯ ನಿಮಿತ್ತ ಕಿರುನಾಟಕ ಪ್ರಸುತಪಡಿಸಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಶಿಕ್ಷಣ ಇಲಾಖೆಯ ಜಿಲ್ಲಾ ಉಪಸಮನ್ವಯಾಧಿಕಾರಿ ಎಂ.ಎಚ್. ಕಾಂಬಳಿ, ವಾರ್ತಾಧಿಕಾರಿ ವಸಂತ ಮಡ್ಲೂರ, ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರ್ವಹಿಸಿದರು.