ಹಾವೇರಿ: ತಂಬಾಕು ಮತ್ತು ಅದರ ಉತ್ಪನ್ನಗಳಲ್ಲಿ ಅತ್ಯಂತ ಅಪಾಯಕಾರಿಯಾದ ಕ್ಯಾನ್ಸರ್ ಕಾರಕ ರಸಾಯನಿಕಗಳು ಸೇರಿದಂತೆ ಸುಮಾರು ಮೂರರಿಂದ ನಾಲ್ಕು ಸಾವಿರ ವಿಷಯುಕ್ತ ರಾಸಾಯನಿಕಗಳು ಸೇರಿಕೊಂಡಿರುತ್ತವೆ. ಅಂತಹ ಪದಾರ್ಥಗಳ ಸೇವನೆಯಿಂದ ಮೊದಮೊದಲು ಖುಷಿ ನೀಡಿದರೂ ಕ್ರಮೇಣ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ. ಇಂತಹ ವ್ಯವಸ್ಥಿತ ಮಾಯಾಜಾಲದೊಳಗೆ ದೇಶದ ಯುವ ಜನತೆ ಸಿಲುಕಿ ನರಳುತ್ತಿದೆ. ಈ ಕುರಿತು ಅವರಲ್ಲಿ ಜಾಗೃತಿ ಮೂಡಿಸಿ ಆ ಮಾಯಾಜಾಲದೊಳಗಿಂದ ಯುವಜನತೆಯನ್ನು ಹೊರತರಬೇಕಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ದಾದಾಪೀರ್ ಹುಲಿಕಟ್ಟಿ ಕರೆ ನೀಡಿದರು.ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸರ್ವೇಕ್ಷಣ ಘಟಕಗಳ ಅಡಿಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಕೆಲವು ತುಂಬಾಕು ಉತ್ಪನ್ನಗಳ ಕಂಪನಿಗಳು ದುರುದ್ದೇಶದಿಂದ ಯುವಜನತೆಯನ್ನು ಗುರಿಯಾಗಿಸಿ ಶಾಲಾ ಕಾಲೇಜು ಹತ್ತಿರದಲ್ಲಿ ಉಚಿತವಾಗಿ ತಂಬಾಕು ಉತ್ಪನ್ನಗಳಾದ ಸಿಗರೇಟ್, ಗುಟ್ಕಾ, ಡ್ರಗ್ಸ್ ಸೇರಿದಂತೆ ನಾನಾ ರೀತಿಯ ಉತ್ಪನ್ನಗಳನ್ನು ಹಂಚುತ್ತಾರೆ. ಈ ಮೂಲಕ ಯುವಜನತೆಗೆ ಅದರ ರುಚಿ ತೋರಿಸಿ ತಮ್ಮ ಜಾಲದೊಳಗೆ ಸೆಳೆದುಕೊಳ್ಳುತ್ತಾರೆ. ಚಟಕ್ಕೆ ದಾಸರಾಗುವ ಯುವಕರು ಕ್ರಮೇಣ ಸಂಪೂರ್ಣ ಆರೋಗ್ಯವನ್ನು ಕಳೆದುಕೊಂಡು ಯೌವನದಲ್ಲೇ ಅಸುನೀಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಆದ್ದರಿಂದ ತುರ್ತಾಗಿ ಈ ಬಗ್ಗೆ ಅರಿವು ಮೂಡಿಸಿ ಯುವಜನತೆಯನ್ನು ಇಂತಹ ದುಶ್ಚಟಗಳಿಂದ ಮುಕ್ತರನ್ನಾಗಿ ಮಾಡಬೇಕಿದೆ ಎಂದು ಪ್ರಾತ್ಯಕ್ಷಿಕೆ ಮತ್ತು ವಿಡಿಯೋ ತೋರುವ ಮೂಲಕ ಮನದಟ್ಟು ಮಾಡಿಕೊಟ್ಟರು.
ನಂತರ ಜೀವಶಾಸ್ತ್ರ ಉಪನ್ಯಾಸಕಿ ಪುಷ್ಪಲತಾ ಡಿ.ಎಲ್. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ತಂಬಾಕು ಸೇವನೆಯ ಗೀಳಿಗೆ ಇಳಿಯಬಾರದು.ಇದು ಸುಂದರ ಬದುಕನ್ನ ನರಕವಾಗಿಸುತ್ತದೆ. ನಿಮ್ಮ ಮನೆಯಲ್ಲಿ, ಸುತ್ತಮುತ್ತಲಿನಲ್ಲಿ ತಂಬಾಕು ಉಪಯೋಗಿಸುತ್ತಿರುವವರಿಗೆ ತಿಳಿ ಹೇಳಿ ಅದರಿಂದ ಮುಕ್ತರನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ಕುರಿತ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅಲ್ಲಿ ವಿಜೇತರಾದ ಕವಿತಾ ಹೊಳಲ ಪ್ರಥಮ ಸ್ಥಾನ, ರಕ್ಷಿತಾ ಕುಂಬಾರ. ದ್ವಿತೀಯ ಸ್ಥಾನ, ಗಿರಿಜಾ ಕಡೆಕೊಪ್ಪ ತೃತೀಯ ಸ್ಥಾನ ಪಡೆದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಉಪನ್ಯಾಸಕ ಎಸ್.ಸಿ.ಮರಡಿ ವಿದ್ಯಾರ್ಥಿನಿಯರು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ತಂಬಾಕು ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ಮಾರಕವಾಗಿವೆ. ಅವುಗಳನ್ನ ತ್ಯಜಿಸಿ ಮೌಲ್ಯಯುತ ಬದುಕನ್ನ ಕಟ್ಟಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ನಿಮಗೆ ಪ್ರೇರಣೆಯಾಗಲಿ ಎಂದರು. ಉಪನ್ಯಾಸಕ ರವಿ ಸಾದರ, ವಿ.ಎಸ್. ಪಾಟೀಲ, ಸುನಂದ ಶೀಲಿ ಇತರರು ಇದ್ದರು.
ಚೇತನಾ ಎಚ್. ಸ್ವಾಗತಿಸಿದಳು. ಅಫೀಫಾ ಹರಿಹರ ನಿರೂಪಿಸಿ ವಂದಿಸಿದಳು.