ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ, ರೋಟರಿ ಕ್ಲಬ್ ಆಫ್ ಹಾಸನ್ ಟೈಗರ್ಸ್ ಸಹಯೋಗದಲ್ಲಿ ಬೆಂಗಳೂರಿನ ಮನೋಜ್ಞ ನೃತ್ಯಕಲಾ ಅಕಾಡೆಮಿ ವತಿಯಿಂದ ನಗರದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಡಿನ ಕೊಳಲು ಕುವೆಂಪು ಗೀತೆಗಳ ನೃತ್ಯ ರೂಪಕ ಸಮಾರಂಭದಲ್ಲಿ ಮಾತನಾಡಿ, ಕುವೆಂಪು ಅವರನ್ನು ಎಲ್ಲರಿಗೂ ಪರಿಚಯಿಸಬೇಕಿದೆ. ಸಾಂಸ್ಕೃತಿಕ, ಆಧ್ಯಾತಿಕವಾಗಿ ಭಾರತ ಸಾಕಷ್ಟು ಖ್ಯಾತಿ ಹೊಂದಿದೆ. ಪುರಾತನ ಪರಂಪರೆ ಬಗ್ಗೆ ವಿಶ್ವವೇ ಅಚ್ಚರಿ ವ್ಯಕ್ತಪಡಿಸುತ್ತದೆ. ಅಂತಹ ಶಕ್ತಿಯನ್ನು ಸಾಹಿತ್ಯದ ಮೂಲಕ ಪರಿಚಯಿಸಿಕೊಟ್ಟವರು ರಾಷ್ಟ್ರಕವಿ ಕುವೆಂಪು ಎಂದರು.
ಮನುಷ್ಯ ಚಿಂತನೆಗಳಲ್ಲಿ ಭಾವ ಹಾಗೂ ಅಭಾವ ಮುಖ್ಯವಾಗುತ್ತದೆ. ಯಾವುದನ್ನೇ ಆಗಲಿ ಭಾವದಿಂದ ನೋಡಬೇಕೆ ಹೊರತು, ಅಭಾವದಿಂದ ಅಲ್ಲ. ಋಷಿಗಳಿಗೆ ನೋಡಿದ್ದೆಲ್ಲ ಭಾವವಾಗಿ ಕಾಣುತ್ತದೆ. ಆದ್ದರಿಂದಲೇ ಅವರು ಅಸಾಧ್ಯವಾದುದನ್ನು ಸಾಧಿಸಿದ್ದಾರೆಂದರು. ಭಾವನೆಗಳು ಬದಲಾದರೆ ಮನುಷ್ಯರಾಗಲು ಸಾಧ್ಯವಿಲ್ಲ. ಮನುಷ್ಯ ಭಾವನೆಗಳನ್ನು ಹೊಂದಬೇಕು. ವ್ಯಕ್ತಿಯ ಚಿಂತನಾ ಲಹರಿ ಆಳಕ್ಕಿಳಿಯಬೇಕೆಂದರೆ ಕುವೆಂಪು ಸಾಹಿತ್ಯ ಓದಬೇಕು. ಮರಣ ಇಲ್ಲದ ವಸ್ತು ಎಂದರೆ ಪುಸ್ತಕ ಮಾತ್ರ. ಭಗವಂತ ಕೊಟ್ಟ ಸುಂದರ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ಸತ್ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಹೇಳಿದರು.ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ, ಸಾಹಿತಿ ಪ್ರೊ. ಡಾ. ಜಯಪ್ರಕಾಶ್ ಗೌಡ ಮಾತನಾಡಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ನಾಡಿನ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಸಾಹಿತ್ಯ, ಆಧ್ಯಾತ್ಮ ಹಾಗೂ ವೈಜ್ಞಾನಿಕತೆಗೆ ಪ್ರೋತ್ಸಾಹ ನೀಡಿದ್ದಾರೆಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜೆ.ಆರ್.ಕೆಂಚೇಗೌಡ, ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಶಿವರಾಮೇಗೌಡ ಮಾತನಾಡಿದರು.