ಬಾಪೂಜಿ ಅಕಾಡೆಮಿಯ ಪದವಿ ಪ್ರದಾನ ಸಮಾರಂಭ
ವಿಶ್ವದಲ್ಲಿ ಆರ್ಥಿಕ ಅಭಿವೃದ್ಧಿಯು ಶೇಕಡ 2.8ರ ಮಂದಗತಿಯಲ್ಲಿದ್ದರೂ ಭಾರತದಲ್ಲಿ ಮಾತ್ರ ಶೇಕಡ 6.2ರ ತೀವ್ರಗತಿಯಲ್ಲಿದೆ. ನಮ್ಮ ಪದವೀಧರರು ಕ್ರಿಯಾಶೀಲರಾಗಿ ದೇಶವು ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗುವಲ್ಲಿ ದುಡಿಯಬೇಕಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ನಿವೃತ್ತ ರಿಜಿಸ್ಟಾರ್ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಬಿ.ಬಕ್ಕಪ್ಪ ಕರೆ ನೀಡಿದರು.
ನಗರದಲ್ಲಿ ಶನಿವಾರ ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಮತ್ತು ರಿಸರ್ಚ್ನ ಪದವಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಕೈಗಾರಿಕಾ ಕ್ರಾಂತಿಯ ಯುಗದ ವೇಗಕ್ಕಿಂತ ತಂತ್ರಜ್ಞಾನ ಅಭಿವೃದ್ಧಿ ವೇಗವು 300 ಪಟ್ಟು ಮುಂದೆ ಇದೆ. ಹಿಂದೆ ದೇಶೀಯವಾಗಿದ್ದ ಜ್ಞಾನ ಅಷ್ಟೇ ಸಾಕಾಗುತ್ತಿತ್ತು. ಆದರೆ ಈಗ ಹಾಗಲ್ಲ, ಜಾಗತಿಕ ಜ್ಞಾನ ಅತ್ಯವಶ್ಯ. ಇದರ ಪ್ರಾಪ್ತಿಗೆ ಆಧುನಿಕ ತಂತ್ರಜ್ಞಾನವು ಅತ್ಯಂತ ಸಹಕಾರಿಯಾಗಿದೆ ಎಂದರು.ಡಿಜಿಟಲ್ ರೂಪಾಂತರ ಕೃತಕ ಬುದ್ಧಿಮತ್ತೆಯ ಹಂತ ತಲುಪಿದ್ದು ಇದು ವಿಧಾಯಕ ಕಾರ್ಯಗಳಿಗಷ್ಟೇ ಬಳಕೆಯಾಗಬೇಕು. ವಾರ್ಷಿಕ 65 ಮಿಲಿಯನ್ ಜನಸಂಖ್ಯೆ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದು ಈ ಮಾನವ ಶಕ್ತಿಯ ಗರಿಷ್ಠ ಬಳಕೆಯ ಬಗ್ಗೆಯೂ ಮ್ಯಾನೇಜ್ಮೆಂಟ್ ಪದವೀಧರರು ಆಲೋಚಿಸಬೇಕಿದೆ ಎಂದರು.
ಕಾಲೇಜಿನ ನಿರ್ದೇಶಕ ಡಾ.ಎಚ್.ವಿ.ಸ್ವಾಮಿ ತ್ರಿಭುವಾನಂದ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿ.ಜಯಶ್ರೀ, ಎಸ್.ಪಿ.ಲತಾ ಕಾರ್ಯಕ್ರಮ ನಿರೂಪಿಸಿದರೆ, ಸಹಾಯಕ ಪ್ರಾಧ್ಯಾಪಕಿ ಪ್ರೊ.ಎಸ್.ಸರೋಜಾ ವರದಿ ವಾಚನ ಮಾಡಿದರು. ಜಿ.ಬಿ. ಶ್ವೇತಾ, ವರ್ಷಾ ರಾಯ್ಕರ್ ಅತಿಥಿಗಳ ಪರಿಚಯ ಮಾಡಿದರು. ಸಹ ಪ್ರಾಧ್ಯಾಪಕ ಡಾ.ಕೆ.ಎಸ್.ವಿಜಯ್, ಡಾ.ಶ್ರುತಿ ಮಾಕನೂರು ಪದವಿ ಪ್ರದಾನ ನಿರ್ವಹಿಸಿದರೆ. ಪ್ರತಿಜ್ಞಾವಿಧಿಯನ್ನು ವಿಭಾಗ ಮುಖ್ಯಸ್ಥ ಡಾ.ಎಸ್.ಎಚ್.ಸುಜಿತ್ ಕುಮಾರ್ ಬೋಧಿಸಿದರು. ಪ್ರಾಚಾರ್ಯ ಡಾ.ಪ್ರಕಾಶ್ ಎಸ್.ಅಳಲಗೇರಿ ವಂದಿಸಿದರು.