ರೈತರ ಭೂಮಿ ಕಸಿಯುವ ವಕ್ಫ್‌ ಬೋರ್ಡ್‌ಗೆ ಜಮೀರ್‌ ಕುಮ್ಮಕ್ಕು

KannadaprabhaNewsNetwork | Published : Oct 30, 2024 12:44 AM

ಸಾರಾಂಶ

ರೈತರು ತಲೆತಲಾಂತರಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿರುವ ವಕ್ಫ್ ಬೋರ್ಡ್‌ ಕಿತಾಪತಿಗೆ ಸಚಿವ ಜಮೀರ್ ಅಹಮ್ಮದ್ ಕುಮ್ಮಕ್ಕು ನೀಡುತ್ತಿದ್ದಾರೆ. ಹಾಗಾಗಿ ಜಮೀರ್‌ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಕೆ ನೀಡಿದರು. ಹಲವಾರು ದಶಕಗಳಿಂದ ರೈತರು ಉಳುಮೆ ಮಾಡುತ್ತಿದ್ದು, ಇದನ್ನು ವಕ್ಫ್ ಬೋರ್ಡ್‌ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಇದಕ್ಕೆ ಕುಮಕ್ಕು ಕೊಡುವ ಕೆಲಸ ಜಮೀರ್ ಅಹಮ್ಮದ್ ಮಾಡುತ್ತಿರುವುದು ದುರದೃಷ್ಟಕರ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ರೈತರು ತಲೆತಲಾಂತರಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿರುವ ವಕ್ಫ್ ಬೋರ್ಡ್‌ ಕಿತಾಪತಿಗೆ ಸಚಿವ ಜಮೀರ್ ಅಹಮ್ಮದ್ ಕುಮ್ಮಕ್ಕು ನೀಡುತ್ತಿದ್ದಾರೆ. ಹಾಗಾಗಿ ಜಮೀರ್‌ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಗಳವಾರ ಹಾಸನಾಂಬೆ ದರ್ಶನ ಪಡೆದ ನಂತರ ಮಾಧ್ಯದೊಮದೊಂದಿಗೆ ಮಾತನಾಡಿ, ಇವತ್ತು ಬೇಲಿನೆ ಎದ್ದು ಹೊಲ ಮೇದಂತೆ ಆಗಿದೆ. ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸ ಸಚಿವರಿಂದ ಆಗುತ್ತಿದೆ. ಹಲವಾರು ದಶಕಗಳಿಂದ ರೈತರು ಉಳುಮೆ ಮಾಡುತ್ತಿದ್ದು, ಇದನ್ನು ವಕ್ಫ್ ಬೋರ್ಡ್‌ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಇದಕ್ಕೆ ಕುಮಕ್ಕು ಕೊಡುವ ಕೆಲಸ ಜಮೀರ್ ಅಹಮ್ಮದ್ ಮಾಡುತ್ತಿರುವುದು ದುರದೃಷ್ಟಕರ. ತಕ್ಷಣ ಇದನ್ನ ಸುಧಾರಿಸದೇ ಹೋದರೇ ನೀವು ಹೆಚ್ಚಿರುವ ಕಿಡಿಯಿಂದ ರಾಜ್ಯಾದ್ಯಂತ ಬೆಂಕಿ ಹಚ್ಚಿಕೊಳ್ಳುತ್ತದೆ. ಅದನ್ನ ಆರಿಸಲು ಸಾಧ್ಯವಾಗುವುದಿಲ್ಲ ಈ ಸರಕಾರಕ್ಕೆ ಎಂದು ಎಚ್ಚರಿಸಿದರು.

ಇಂತಹ ಕಿಡಿ ಹಚ್ಚುವ ಕೆಲಸ ಬಿಟ್ಟು ದೇವರು ಮೆಚ್ಚುವ ಕೆಲಸ ಮಾಡಿದರೇ ಒಳ್ಳೆಯದು. ವಕ್ಫ್‌ ಕಿತಾಪತಿ ಶುರು ಮಾಡಿರುವ ಜಿಲ್ಲೆಗಳಿಗೆ ಎಷ್ಟು ರೈತರ ಭೂಮಿ ಕಬಳಿಸಲು ಯತ್ನಿಸಲಾಗುತ್ತಿದೆ ಎನ್ನುವುದನ್ನು ಅಧ್ಯಯನ ಮಾಡಲು ನಮ್ಮ ತಂಡ ಹೋಗಿದ್ದು, ವರದಿ ಕೊಡಲಿದೆ. ಮುಂದೆ ಯಾವ ಹೋರಾಟ ಮಾಡಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಯತ್ನಾಳ್, ರಮೇಶ್ ಜಾರಕಿಹೋಳಿ ಅಸಮಾಧಾನ ವಿಚಾರದ ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಅವರ ಅಸಮಾಧಾನ ಹೊರಹಾಕಲು ಬೇರೆ ವ್ಯವಸ್ಥೆ ಮಾಡಿಕೊಡಬೇಕು. ಆ ದಿಕ್ಕಿನಲ್ಲಿ ಯೋಚನೆ ಮಾಡ್ತಾ ಇದ್ದೇವೆ. ನಾನಂತೂ ಅದರ ಬಗ್ಗೆ ಏನು ತಲೆಕೆಡಿಸಿಕೊಳ್ಳುವ ಪ್ರಶ್ನೆ ಇಲ್ಲ. ಮಾಡಲು ಬೇಕಾದಷ್ಟು ಕೆಲಸವಿದೆ. ಅದರಲ್ಲೂ ಸಂಘಟನೆ ಕೆಲಸ ಇದ್ದು, ಉಪಚುನಾವಣೆ ನಡೆಯುತ್ತಿದ್ದು, ಚುನಾವಣೆಯಲ್ಲಿ ಯಾವ ಪಕ್ಷಗಳು ಇದ್ದರೂ ಪಲಿತಾಂಶ ನಮ್ಮ ಪರವಾಗಿರುತ್ತದೆ. ಇವತ್ತು ವಕ್ಫ್ ವಿಚಾರವಾಗಿ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ. ಆ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಗೋವಿಂದ ಕಾರಜೋಳ ತಂಡ ಬಿಜಾಪುರದ ಎಲ್ಲಾ ಕಡೆ ತಂಡ ಭೇಟಿ ನೀಡಿದ್ದು, ಅಧಿಕಾರಿಗಳು, ರೈತರನ್ನು ಭೇಟಿ ಮಾಡುತ್ತಿದ್ದಾರೆ. ಹಿಂದೆ ಬ್ರಿಟಿಷರು ಹೊಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಆ ನೀತಿ ಕುತಂತ್ರವನ್ನು ಕಾಂಗ್ರೆಸ್ ಸರಕಾರ ಅನುಸರಿಸುತ್ತಿದೆ. ಜಮೀರ್ ಅಹಮದ್ ಬಾಯಿಯಲ್ಲಿ ಮಾತು ಕೇಳಿದರೇ ಇವರು ಸಂವಿಧಾನ ಹೆಸರು ಹೇಳಿಕೊಂಡು ಅದಕ್ಕೆ ಬದ್ಧವಾಗಿ ನಡೆದುಕೊಳ್ಳದೇ ಅದಕ್ಕೆ ಅಪಚಾರ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಇದೇ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ, ಶಾಸಕ ಸಿಮೆಂಟ್ ಮಂಜು, ಹುಲ್ಲಳ್ಳಿ ಸುರೇಶ್, ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಇತರರು ಉಪಸ್ಥಿತರಿದ್ದರು. * ಬಾಕ್ಸ್‌: ಹೊಂದಾಣಿಕೆ ರಾಜಕಾರಣ ಮಾಡಿದವರು ಪಕ್ಷದಿಂದ ಹೊರಕ್ಕೆ

ಮನೆಗೆ ಅತಿಥಿಗಳು ಬಂದಾಗ ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಮನೆಯಿಂದ ಹೊರ ಹೋದ ಮೇಲೆ ಅದರ ಪ್ರಶ್ನೆಯೇ ಇಲ್ಲ. ಹೊರ ಹೋದ ಮೇಲೆ ಯಾರ್ಯಾರು ಹೊಂದಾಣಿಕೆ ರಾಜಕಾರಣ ಮಾಡ್ತಾರೆ ಒಬ್ಬೊಬ್ಬರನ್ನೇ ಪಕ್ಷದಿಂದ ಹೊರಹಾಕುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ. ನಮ್ಮ ಪಕ್ಷ ಶುದ್ಧೀಕರಣ ಆಗಬೇಕೆಂದು ಅನೇಕ ಹಿರಿಯರ ಆಸೆ ಇತ್ತು. ಅವರ ಆಸೆಗೆ ತಕ್ಕಂತೆ ಶುದ್ಧೀಕರಣ ಕೂಡ ಆಗುತ್ತಿದೆ. ಬರುವ ದಿನಗಳಲ್ಲಿ ಎಲ್ಲವೂ ಕೂಡ ಸರಿ ಹೋಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share this article