- ಕೈದಾಳೆ, ಬೆಳವನೂರು, ಹೊನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಬೆಳಗಿನ ನಡೆ-ಗ್ರಾಮಗಳ ಕಡೆ ಕಾರ್ಯಕ್ರಮ - - -
ಕೈದಾಳೆ ಗ್ರಾಮ ಪಂಚಾಯಿತಿ ಕಟ್ಟಡದ ಮೇಲ್ಭಾಗದ ಗ್ರಂಥಾಲಯದಲ್ಲಿರುವ ಪುಸ್ತಕಗಳ ಸಂಗ್ರಹ, ಡಿಜಿಟಲ್ ಲೈಬ್ರರಿ, ಗ್ರಂಥಾಲಯದ ಆಕರ್ಷಕ ಗೋಡೆ ಬರಹ, ಸಂದೇಶಗಳ ಬಗ್ಗೆ, ನಿರ್ವಹಣೆ ಬಗ್ಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ವಿವಿಧ ಗ್ರಾ.ಪಂ.ಗಳು, ಗ್ರಾಮಗಳಿಗೆ ಮಂಗಳವಾರ ಬೆಳಗ್ಗೆ ಬೆಳಗಿನ ನಡೆ-ಗ್ರಾಮಗಳ ಕಡೆ ಕಾರ್ಯಕ್ರಮದ ವೇಳೆ ಕೈದಾಳೆ ಗ್ರಾಪಂ ಕಟ್ಟಡದ ಮೇಲ್ಭಾಗದ ಗ್ರಂಥಾಲಯಕ್ಕೆ ಭೇಟಿ ನೀಡಿದ್ದರು. ಗ್ರಾಪಂ ಗ್ರಂಥಾಲಯವನ್ನು ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಿರ್ಮಿಸಿ, ಎಸ್ಸೆಸ್ಸೆಲ್ಸಿ ನಂತರ ಮುಂದೇನು ಎಂಬ ಮಾಹಿತಿ ನೀಡುವ ಚಿತ್ರವನ್ನು ಮರ, ಕೊಂಬೆ, ರೆಂಬೆಗಳ ಮಾದರಿಯಲ್ಲಿ ಬಿಡಿಸಿರುವ ಚಿತ್ರದ ಬಗ್ಗೆಯೂ ಶ್ಲಾಘಿಸಿದರು.ಕೈದಾಳೆ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಅವರು, ನರೇಗಾ ಯೋಜನೆಯಡಿ ಆಟದ ಮೈದಾನ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಜೆಜೆಎಂ ಕಾಮಗಾರಿ ಹಾಗೂ ಓವರ್ ಹೆಡ್ ಟ್ಯಾಂಕ್ಗಳನ್ನು ಪರಿಶೀಲಿಸಬೇಕು. ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮದ ಅಂಗನವಾಡಿ ಕೇಂದ್ರವನ್ನು ಗ್ರಾಪಂ ಜಾಗದಲ್ಲಿ ಹೊಸದಾಗಿ ಕಟ್ಟಡ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳವನೂರು ಗ್ರಾಪಂ ವ್ಯಾಪ್ತಿಯ ತುರ್ಚಘಟ್ಟ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಗ್ರಂಥಾಲಯದ ಉತ್ತಮ ನಿರ್ವಹಣೆಗೆ ಪ್ರಸಂಸೆ ವ್ಯಕ್ತಪಡಿಸಿದರು. ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಸಿಗುವ ಸೇವೆಗಳ ಬಗ್ಗೆ ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ರೋಗಿಗಳು, ಗ್ರಾಮಸ್ಥರಿಂದ ಸಿಇಒ ಮಾಹಿತಿ ಪಡೆದು, ಪರಿಶೀಲನೆ ನಡೆಸಿದರು.
ಹೊನ್ನೂರು ಗ್ರಾ.ಪಂ.ಗೆ ಭೇಟಿ ನೀಡಿ, ಅಲ್ಲಿನ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ, ಗ್ರಂಥಾಲಯ ಹಾಗೂ ಗ್ರಾಪಂ ಕಟ್ಟಡವನ್ನು ವೀಕ್ಷಿಸಿದರು. ಅನಂತರ ನರೇಗಾ ಯೋಜನೆಯಡಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡರು. ಬೆಳಗಿನ ನಡೆ– ಗ್ರಾಮಗಳ ಕಡೆ ಕಾರ್ಯಕ್ರಮದ ವೇಳೆ ಆಯಾ ಗ್ರಾಪಂಗಳ ವ್ಯಾಪ್ತಿಯ ಸಮಸ್ಯೆ, ಸಾರ್ವಜನಿಕರ ಸಮಸ್ಯೆ, ಅಹವಾಲುಗಳನ್ನು ಸಿಇಒ ಆಲಿಸಿದರು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ, ಸಾರ್ವಜನಿಕ ಸೌಲಭ್ಯಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು.
- - -
ದಾವಣಗೆರೆ ತಾಲೂಕಿನ ಕೈದಾಳೆ, ಬೆಳವನೂರು, ಹೊನ್ನೂರು ಗ್ರಾಪಂ ವ್ಯಾಪ್ತಿಯ ಗ್ರಂಥಾಲಯಗಳಿಗೆ ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದರು. --6ಕೆಡಿವಿಜಿ4, 5: