ಗ್ಯಾರಂಟಿ ಬಗ್ಗೆ ಹೆಚ್ಚು ಅರಿವು ಕಾರ್ಯಕ್ರಮ ನಡೆಸಿ

KannadaprabhaNewsNetwork | Published : May 22, 2025 1:17 AM
ಗೃಹಲಕ್ಷ್ಮೀ ಯೋಜನೆ ಬಗ್ಗೆ ಹೆಚ್ಚು ಅರಿವು ಕಾರ್ಯಕ್ರಮ ಮಾಡಬೇಕು, ಈ ಯೋಜನೆಯ ಬಗ್ಗೆ ಎಲ್ಲರಿಗೂ ಪ್ರಚಾರ ಮಾಡಿ ಮಾದರಿ ಯೋಜನೆಯನ್ನಾಗಿ ಮಾಡಬೇಕು
Follow Us

ಕನ್ನಡಪ್ರಭ ವಾರ್ತೆ ಮೈಸೂರುಗ್ಯಾರಂಟಿ ಯೋಜನೆಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು, ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಅರಿವು ಕಾರ್ಯಕ್ರಮಗಳನ್ನು ಹೆಚ್ಚು ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್‌. ಅರುಣ್ ಕುಮಾರ್ ಹೇಳಿದರು.ಜಿಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಸರ್ಕಾರದಿಂದ ಸಿಗುವಂತಹ ಪಂಚ ಗ್ಯಾರೆಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ಪ್ರತಿಯೊಂದು ಇಲಾಖೆಯು ಕಾರ್ಯ ನಿರ್ವಹಿಸಬೇಕು. ಎಲ್ಲಾ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ತಿಳಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಏನಾದರೂ ಸಮಸ್ಯೆಗಳಿದ್ದರೆ ಅವರಿಗಾಗಿ ದೂರು ಪೆಟ್ಟಿಗೆ ತೆರೆಯಬೇಕು ಎಂದು ಅವರು ಸೂಚಿಸಿದರು. ಗೃಹಲಕ್ಷ್ಮೀ ಯೋಜನೆ ಬಗ್ಗೆ ಹೆಚ್ಚು ಅರಿವು ಕಾರ್ಯಕ್ರಮ ಮಾಡಬೇಕು, ಈ ಯೋಜನೆಯ ಬಗ್ಗೆ ಎಲ್ಲರಿಗೂ ಪ್ರಚಾರ ಮಾಡಿ ಮಾದರಿ ಯೋಜನೆಯನ್ನಾಗಿ ಮಾಡಬೇಕು. ಸಿ.ಡಿ.ಪಿ.ಓಗಳು ಪ್ರತಿ ಗ್ರಾಪಂಗಳಿಗೂ ಹೋಗಿ ವಿಚಾರಣೆ ಮಾಡಬೇಕು. ಹತ್ತಿರದಲ್ಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳಿಗೆ ಅನುಕೂಲ ಅಗುತ್ತಿದೆಯೇ ಎಂದು ವಿಚಾರಣೆ ಮಾಡಬೇಕು ಎಂದು ಹೇಳಿದರು.

ಗ್ಯಾರೆಂಟಿ ಯೋಜನೆಗಳ ಸೂಕ್ತ ಅನುಷ್ಠಾನದಲ್ಲಿ ಎಲ್ಲಾ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡಬೇಕು. ಸರ್ಕಾರದ ಕೆಲಸ ಎಂದು ತಿಳಿಯದೇ ಪ್ರತಿಯೊಂದು ಇಲಾಖೆಯಯವರು ಜೊತೆಗೂಡಿ ಕೆಲಸ ನಿರ್ವಹಿಸಬೇಕೆಂದು ಎಲ್ಲಾ ಅಧಿಕಾರಿಗಳಿಗೂ ಸೂಚಿಸಿದರು.

ಅನ್ನಭಾಗ್ಯ ಯೋಜನೆಯ ಬಗ್ಗೆ ಎಲ್ಲಾ ಕಡೆಗಳಲ್ಲಿಯೂ ಪ್ರಚಾರ ಫಲಕಗಳನ್ನು ಅಳವಡಿಸಬೇಕು. ತಾಲೂಕುವಾರು ನ್ಯಾಯ ಬೆಲೆ ಅಂಗಡಿಗಳ ಕಡೆ ಹೆಚ್ಚು ಗಮನವಹಿಸಬೇಕು. ಅನ್ನಭಾಗ್ಯ ಯೋಜನೆಯಲ್ಲಿ ಯಾವುದೇ ಲೋಪ ನಡೆಯದಂತೆ ಕ್ರಮ ವಹಿಸಬೇಕು. ಇದು ಪ್ರತಿಯೊಬ್ಬ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅನ್ನಭಾಗ್ಯ ಯೋಜನೆಯ ಸಂಬಂಧ ಪಟ್ಟಂತೆ ಆಪ್ ಅನ್ನು ಕ್ರಿಯೇಟ್ ಮಾಡಬೇಕು ಎಂದು ಹೇಳಿದರು.

ರಾಜ್ಯದ ಜನರಿಗೆ 200 ಯೂನಿಟ್ ಉಚಿತ ವಿದ್ಯುತ್ ಅನ್ನು ಗೃಹಜ್ಯೋತಿ ಯೋಜನೆಯಡಿ ನೀಡುತ್ತಿದ್ದು, ಈ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 11154 ಅಭ್ಯರ್ಥಿಗಳು ನೊಂದಣಿಯಾಗಿದ್ದು, ಫೆಬ್ರವರಿ ಮಾಹೆಯ ಅಂತ್ಯಕ್ಕೆ 8286 ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಯಾವುದೇ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಬರದಂತೆ ಪ್ರತಿಯೊಂದು ಇಲಾಖೆಯವರು ಹೆಚ್ಚು ಕ್ರಮವಹಿಸಬೇಕು. ಪ್ರತಿಯೊಂದು ಯೋಜನೆಗಳು ಜನರಿಗೆ ತಲುಪುವಂತೆ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಸಿಇಒ ಯುಕೇಶ್ ಕುಮಾರ್, ಗ್ಯಾರಂಟಿ ಯೋಜನೆಯ ಜಿಲ್ಲಾ ಮಟ್ಟದ ಉಪಾಧ್ಯಕ್ಷ ಚಂದ್ರಶೇಖರ್, ಸಾ.ಮಾ. ಯೋಗೇಶ್, ಪ್ರೊ. ಶಿವಕುಮಾರ್, ಹುಣಸೂರು ಬಸವಣ್ಣ, ಸದಸ್ಯರಾದ ಲತಾ, ಕೆ. ಮಾರುತಿ, ರಘು, ಅಬ್ದುಲ್ ಖಾನ್, ಪ್ರಸನ್ನ ಬಾಬು ಮೊದಲಾದವರು ಇದ್ದರು.