‘ಆರೋಪ ಸಾಬೀತಾಗದಿದ್ದರೆ ನಿವೃತ್ತಿ ಘೋಷಿಸುವಿರಾ?’

KannadaprabhaNewsNetwork | Published : Nov 22, 2023 1:00 AM

ಬ್ಲೂಫಿಲಂ ತೋರಿಸಿದ್ದನ್ನು ಸಾಬೀತು ಪಡಿಸಿದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರೆ. ಅದನ್ನು ಸಾಬೀತು ಪಡಿಸುವಲ್ಲಿ ನೀವು ವಿಫಲವಾದರೆ ರಾಜಕೀಯ ನಿವೃತ್ತಿ ಘೋಷಿಸುವಿರಾ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರಿಗೆ ಮಾಜಿ ಶಾಸಕ ಕೆ.ರಾಜು ಸವಾಲು ಹಾಕಿದ್ದಾರೆ.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಮಾಜಿ ಶಾಸಕ ಕೆ.ರಾಜು ಸವಾಲು । ವಿಧಾನಸಭಾ ಚುನಾವಣೆ ಸೋಲಿನಿಂದ ಕುಮಾರಸ್ವಾಮಿಗೆ ಹತಾಶೆ

ಕನ್ನಡಪ್ರಭ ವಾರ್ತೆ ರಾಮನಗರ

ಬ್ಲೂಫಿಲಂ ತೋರಿಸಿದ್ದನ್ನು ಸಾಬೀತು ಪಡಿಸಿದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರೆ. ಅದನ್ನು ಸಾಬೀತು ಪಡಿಸುವಲ್ಲಿ ನೀವು ವಿಫಲವಾದರೆ ರಾಜಕೀಯ ನಿವೃತ್ತಿ ಘೋಷಿಸುವಿರಾ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರಿಗೆ ಮಾಜಿ ಶಾಸಕ ಕೆ.ರಾಜು ಸವಾಲು ಹಾಕಿದ್ದಾರೆ.

ಇವರೆಲ್ಲಾ ಬ್ಲೂಫಿಲಂ ತೋರಿಸಿ ಮೇಲೆ ಬಂದವರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿರವರು ಆರೋಪಿಸಿರುವ ಬೆನ್ನಲ್ಲೇ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೆ.ರಾಜು, 2023ರ ವಿಧಾನಸಭೆ ಚುನಾವಣೆಯ ನಂತರ ಕುಮಾರಸ್ವಾಮಿಯವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ವಿರುದ್ಧ ಕೆಟ್ಟ ಪದಗಳ ಬಳಕೆ ಮಾಡುತ್ತಿರುವುದು ಒಬ್ಬ ಮಾಜಿ ಸಿಎಂ ಘನತೆಗೆ ತಕ್ಕದ್ದಲ್ಲ ಎಂದು ಕಿಡಿಕಾರಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನ ಗೆದ್ದು, ಮುಖ್ಯಮಂತ್ರಿಯಾಗುವುದಾಗಿ ಕುಮಾರಸ್ವಾಮಿ ರಾಜ್ಯದೆಲ್ಲೆಡೆ ಪ್ರಚಾರ ಮಾಡಿದ್ದರು. ಆದರೆ ಕೇವಲ 19 ಸ್ಥಾನ ಗೆಲ್ಲಲು ಸಾಧ್ಯವಾಯಿತು. ರಾಮನಗರ ನನ್ನ ಕರ್ಮಭೂಮಿ ಎಂದು ಭಾವನಾತ್ಮಕವಾಗಿ ಮಾತಾಡಿ ಮರಳು ಮಾಡುತ್ತಿದ್ದ ಬಗ್ಗೆ ಅರಿತ ಜನರು ಅವರ ಮಗ ನಿಖಿಲ್‌ರವರನ್ನು ಸೋಲಿಸಿದ್ದು ಬಹಳ ಹತಾಶರಾಗುವಂತೆ ಮಾಡಿದೆ. ಹೀಗಾಗಿ ಚುನಾವಣೆ ನಂತರ ಬುದ್ಧಿಭ್ರಮಣೆ ಆದವರಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ನಾಡು ಕಂಡ ಮಹನೀಯರಾದ ಕೆಂಗಲ್ ಹನುಮಂತಯ್ಯ, ಡಿ.ದೇವರಾಜ ಅರಸು, ವಿರೇಂದ್ರ ಪಾಟೀಲ್, ಎಚ್.ಡಿ.ದೇವೇಗೌಡ ಅವರಂತಹ ಧುರೀಣರಿದ್ದ ಸ್ಥಾನದಲ್ಲಿ ಕುಳಿತ್ತಿದ್ದೇನೆ ಎಂಬ ಪರಿಜ್ಞಾನವಿಲ್ಲದೆ ಮಾತಾನಾಡುವುದು ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ. 2018ರಲ್ಲಿ ಮುಖ್ಯಮಂತ್ರಿಯಾಗಿ ಜನೋಪಕಾರಿ ಕೆಲಸ ಮಾಡದೆ ಪಂಚತಾರ ಹೋಟೆಲ್‌ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಕೆಲವು ವ್ಯಕ್ತಿಗಳನ್ನು ಗುಂಪು ಕಟ್ಟಿಕೊಂಡು ಲೂಟಿ ಮಾಡಿದರು ಎಂದು ಆರೋಪಿಸಿದ್ದಾರೆ.

ಕುಮಾರಸ್ವಾಮಿರವರ ಇತ್ತೀಚಿನ ಹೇಳಿಕೆಗಳನ್ನು ನೋಡಿ ಅಲ್ಪಸ್ವಲ್ಪ ಗೌರವ ಇಟ್ಟುಕೊಂಡವರೂ ಸಹ ಅವರ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಗಳನ್ನು ನೋಡಿ ಇವಕ್ಕೆಲ್ಲಾ ಹಣ ಎಲ್ಲಿದೆ? ಇದೆಲ್ಲಾ ಬೋಗಸ್ ಎಂದು ಜರಿಯುತ್ತಿದ್ದರು. ಆದರೆ ಈಗಾಗಲೇ ೪ ಗ್ಯಾರಂಟಿಗಳನ್ನು ಸರಕಾರ ಅನುಷ್ಠಾನಕ್ಕೆ ತಂದಿದೆ. ನಾನಿನ್ನು ಮನೆ ಸೇರುವುದು ಗ್ಯಾರಂಟಿ ಎಂದು ತಿಳಿದು ಹತಾಶರಾಗಿ ಅಸೂಯೆಯಿಂದ ಹೊಲಸು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿಯವರು ಜೆಡಿಎಸ್ ಅಧ್ಯಕ್ಷರಾಗಿದ್ದು ವಿಜಯೇಂದ್ರ ಅವರು ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಇಬ್ಬರಲ್ಲೂ ಪಕ್ಷ ಕಟ್ಟುವ ಸಾಮರ್ಥ್ಯವಿದೆ ಎಂಬ ಮಾತುಗಳು ಜನರಿಂದ ಕೇಳಿಬಂದಿವೆ. ನೀವು ಪಕ್ಷ ಕಟ್ಟುವ ಕೆಲಸಬಿಟ್ಟು ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಗ್ಗೆ ಲಘುವಾಗಿ ಹೇಳಿಕೆ ಕೊಡುವುದನ್ನು ನಿಲ್ಲಿಸಿ. ಪ್ರಚಾರಕ್ಕಾಗಿ ನಾಲಿಗೆ ಹರಿಯಬಿಡುವುದು ಒಳ್ಳೆಯ ರಾಜಕಾರಿಣಿಗಳ ಲಕ್ಷಣವಲ್ಲ. ಹೋರಾಟದ ಮೂಲಕ ಎತ್ತರದ ಸ್ಥಾನಕ್ಕೇರಬೇಕೇ ವಿನ: ಕೀಳುಮಟ್ಟದ ಹೇಳಿಕೆ ನೀಡಿ ತೃಪ್ತಿಪಡಬಾರದು. ಇನ್ನಾದರೂ ಗೌರವದಿಂದ ವರ್ತಿಸಿ ಎಂದು ಕೆ.ರಾಜು ಸಲಹೆ ನೀಡಿದ್ದಾರೆ.

-------

ಬಾಕ್ಸ್

ಧರಂಸಿಂಗ್ ಅವರ ಬೆನ್ನಿಗೆ ಚೂರಿ

ಸಜ್ಜನ ವ್ಯಕ್ತಿ ಧರಂಸಿಂಗ್ ಅವರ ಬೆನ್ನಿಗೆ ಚೂರಿ ಹಾಕಿ ಮುಖ್ಯಮಂತ್ರಿಯಾದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಗ ಎಂಬ ಕಾರಣಕ್ಕೆ ಜನರು ಮನ್ನಣೆ ನೀಡಿದರು. ಕೀಳುಮಟ್ಟದ ರಾಜಕೀಯ ಮಾಡುತ್ತಾ ವಾಮಮಾರ್ಗದಲ್ಲಿ ಯಾವ ಶ್ರಮವಿಲ್ಲದೆ ಸಿಎಂ ಪಟ್ಟಕ್ಕೇರಿದ ಕುಮಾರಸ್ವಾಮಿ ಅವರಿಂದ ಒಳ್ಳೆಯ ಪ್ರಜಾಪ್ರಭುತ್ವವನ್ನು ನಿರೀಕ್ಷಿಸಲು ಸಾಧ್ಯವೆ? ಹೀಗಾಗಿ ಅವರನ್ನು ಮುಖ್ಯಮಂತ್ರಿ ಮಾಡಿದ ಬಹುಪಾಲು ಶಾಸಕರು ಹಾಗೂ ಮುಖಂಡರು ನಯವಂಚನೆ, ಗೋಮುಖ ವ್ಯಾಘ್ರತನ, ಭ್ರಷ್ಟಾಚಾರ, ಕುಟುಂಬ ರಾಜಕಾರಣವನ್ನು ಕಂಡು ದೂರವಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

----

21ಕೆಆರ್ ಎಂಎನ್ 4.ಜೆಪಿಜಿ

ಕೆ.ರಾಜು, ಮಾಜಿ ಶಾಸಕರು, ರಾಮನಗರ