ಮೋದಿ ಸರ್ಕಾರಕ್ಕಿಂದು ಅಗ್ನಿಪರೀಕ್ಷೆ

Published : Apr 17, 2026, 06:57 AM IST
narendra modi

ಸಾರಾಂಶ

ಲೋಕಸಭೆ ಹಾಗೂ ವಿಧಾಮನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆಯ ಕುರಿತಾದ ಮಹತ್ವದ ಮೂರು ವಿಧೇಯಕಗಳನ್ನು ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಂಡಿಸಿದೆ.

 ನವದೆಹಲಿ: ಲೋಕಸಭೆ ಹಾಗೂ ವಿಧಾಮನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆಯ ಕುರಿತಾದ ಮಹತ್ವದ ಮೂರು ವಿಧೇಯಕಗಳನ್ನು ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಂಡಿಸಿದೆ. ಇವುಗಳ ಕುರಿತು ಶುಕ್ರವಾರ ಸಂಜೆ 4 ಗಂಟೆಗೆ ಮತದಾನ ನಡೆಯಲಿದೆ.

ಸಾಂವಿಧಾನಿಕ ತಿದ್ದುಪಡಿ ಇರುವ ಕಾರಣ ಈ ಮಸೂದೆಗಳನ್ನು ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸುವುದು ಕಡ್ಡಾಯ. ಆದರೆ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ ಅಷ್ಟು ಬಲ ಇಲ್ಲ. ಮತ್ತೊಂದೆಡೆ ವಿಪಕ್ಷಗಳು ಈ ವಿಧೇಯಕವನ್ನು ವಿರೋಧಿಸುವುದಾಗಿ ಘೋಷಿಸಿವೆ. ಹೀಗಾಗಿ ವಿಧೇಯಕ ಅಂಗೀಕಾರ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವ ತಂತ್ರ ರೂಪಿಸಲಿದೆ ಎಂಬ ಕುತೂಹಲ ಮೂಡಿದೆ.

ಒಂದು ವೇಳೆ ಈಗಾಗಲೇ ಘೋಷಿಸಿರುವಂತೆ ವಿಪಕ್ಷಗಳು, ಮಹಿಳಾ ಮೀಸಲು ವಿಧೇಯಕ ವಿರೋಧಿಸಿದರೆ ಅದನ್ನು ಮುಂಬರುವ ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮತ್ತು ಮುಂಬರುವ ದಿನಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಮುಖ ವಿಷಯವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ವಿಪಕ್ಷಗಳ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮಂಡನೆ:

ಮಹಿಳಾ ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ವಿಧೇಯಕ ಸೇರಿ 3 ಮಸೂದೆಗಳನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಅದರ ಬಗ್ಗೆ ಆಡಳಿತ ಮತ್ತು ವಿಪಕ್ಷಗಳು ಸುದೀರ್ಘ ಚರ್ಚೆ ನಡೆಸಿವೆ.

ವಿಧೇಯಕ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿ ಬಿಜೆಪಿಯ ನಾಯಕರು ಮಹಿಳಾ ಮೀಸಲು ಜಾರಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಮಹಿಳಾ ಮೀಸಲು ಜಾರಿಯಿಂದ ಪುರುಷರಿಗಾಗಲೀ ಅಥವಾ ದಕ್ಷಿಣದ ಸೇರಿದಂತೆ ಯಾವುದೇ ರಾಜ್ಯಗಳಿಗಾಗಲೀ ಅನ್ಯಾಯವಾಗದು. ಶೇ.50ರಷ್ಟು ಸೀಟು ಹೆಚ್ಚಳದ ಕಾರಣ ಎಲ್ಲಾ ರಾಜ್ಯಗಳು ಏರಿಕೆಯ ಲಾಭ ಪಡೆದುಕೊಳ್ಳಲಿವೆ. ಲೋಕಸಭಾ ಸ್ಥಾನವನ್ನು 543ರಿಂದ 816ಕ್ಕೆ ಏರಿಸುವ ಕಾರಣ ಮಹಿಳೆಯರಿಗೆ 272 ಸೀಟು ಲಭ್ಯವಾಗಲಿವೆ ಎಂದು ಭರವಸೆ ನೀಡಿದ್ಧಾರೆ. ಆದರೆ ಮತ್ತೊಂದೆಡೆ, ಈ ಮಸೂದೆ ಅಂಗೀಕಾರವಾದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಕಥೆಯೇ ಮುಗಿದು ಹೋಗಲಿವೆ ಎಂದು ಕಳವಳ ವ್ಯಕ್ತಪಡಿಸಿವೆ.

ಅಗ್ನಿಪರೀಕ್ಷೆ:

ಲೋಕಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಳ್ಳಲು 360 ಮತಗಳ ಅಗತ್ಯವಿದೆ. ಆದರೆ ಎನ್‌ಡಿಎ ಬಲ ಇರುವುದು 293 ಮಾತ್ರ. ವಿಪಕ್ಷಗಳ ಬಲ 233 ಇದೆ. ಉಳಿದಂತೆ 7 ಪಕ್ಷೇತರರು, 7 ಜನ ವೈಎಸ್‌ಆರ್‌ಪಿ, ಎಂಐಎಂ, ಶಿರೋಮಣಿ ಅಕಾಲಿದಳ ಸದಸ್ಯರಿದ್ದಾರೆ. ಆದರೆ ಇವರು ಇನ್ನೂ ಬಹಿರಂಗವಾಗಿ ತಮ್ಮ ನಿರ್ಧಾರ ಪ್ರಕಟಿಸಿಲ್ಲ.

ಹೀಗಾಗಿ ವಿಧೇಯಕ ಅಂಗೀಕಾರಕ್ಕೆ 360 ಮತಗಳನ್ನು ಪಡೆಯಲು, ಒಂದೋ ಅತಿದೊಡ್ಡ ವಿಪಕ್ಷವಾಗಿರುವ ಕಾಂಗ್ರೆಸ್‌ (98) ಬೆಂಬಲಿಸಬೇಕು. ಇಲ್ಲದೇ ಹೋದಲ್ಲಿ ಎಸ್‌ಪಿ (37), ಟಿಎಂಸಿ (28), ಡಿಎಂಕೆ (22) ಪೈಕಿ ಯಾವುದಾದರೂ ಎರಡು ಪಕ್ಷಗಳು ಬೆಂಬಲಿಸಬೇಕು. ಒಂದು ವೇಳೆ ಬೆಂಬಲಿಸದಿದ್ದರೂ, ಮತದಾನದ ವೇಳೆ ಗೈರಾದರು ಸದನದ ಬಲ ಕುಸಿದು ಸರ್ಕಾರ ಸುಲಭವಾಗಿ ಅಂಗೀಕಾರ ಪಡೆದುಕೊಳ್ಳಬಹುದು.

ಒಂದು ವೇಳೆ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರವಾದರೆ ಮಾತ್ರವೇ ಅದನ್ನು ರಾಜ್ಯಸಭೆಯಲ್ಲೂ ಪರಿಗಣಿಸಲಾಗುವುದು.

ಮಹಿಳಾ ಮೀಸಲು, ಕ್ಷೇತ್ರ ಮರುವಿಂಗಡನೆ ಬಿಲ್‌ ಕುರಿತು ಇಂದು ಮತ

ಮಧ್ಯಾಹ್ನ 4 ಗಂಟೆಗೆ ಲೋಕಸಭೆಯಲ್ಲಿ ಮತದಾನ, ಭಾರೀ ಕುತೂಹಲ

ಲೋಕಸಭೆಯಲ್ಲಿ 2/3 ಬಹುಮತ ಇಲ್ಲದ ಸರ್ಕಾರ ಏನು ಮಾಡುತ್ತೆ?

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ತಂದೆಯ ಆಡಳಿತದಲ್ಲಿ ರಾಜ್ಯ ಸುಭಿಕ್ಷವಾಗಲಿ : ಯತೀಂದ್ರ ಸಿದ್ದರಾಮಯ್ಯ
ಐದು ವರ್ಷ ತಂದೆಯೇ ರಾಜ್ಯ ಮುುನ್ನಡೆಸಲಿ : ಯತೀಂದ್ರ ಸಿದ್ದರಾಮಯ್ಯ