ನಾವು ಕ್ಷೇತ್ರವನ್ನು ಅಧಿಕಾರಕ್ಕಾಗಿ ಸೀಮಿತಗೊಳಿಸಿಲ್ಲ : ಶಾಸಕ ಇಕ್ಬಾಲ್ ಹುಸೇನ್

KannadaprabhaNewsNetwork |  
Published : Apr 17, 2026, 01:15 AM IST
Ramanagara

ಸಾರಾಂಶ

ಕಳೆದ 25- 30 ವರ್ಷಗಳಿಂದ ಶಾಸಕರಾಗಿದ್ದವರು ರಾಮನಗರ ಕ್ಷೇತ್ರದ ಬಗ್ಗೆ ಎಂದೂ ಗಮನ ಹರಿಸಲಿಲ್ಲ. ಕೇವಲ ಅಧಿಕಾರ ದಕ್ಕಿಸಿಕೊಳ್ಳಲು ಕ್ಷೇತ್ರವನ್ನು ಸೀಮಿತ ಮಾಡಿಕೊಂಡಿದ್ದರು. ಈ ಕಾರಣದಿಂದಾಗಿಯೇ ಕ್ಷೇತ್ರದಲ್ಲಿ ಇಷ್ಟೊಂದು ಸಮಸ್ಯೆಗಳು ಜೀವಂತವಾಗಿದ್ದು, ಇದನ್ನು ಕ್ಷೇತ್ರದ ಜನರು ಅರ್ಥ ಮಾಡಿಕೊಳ್ಳಬೇಕು 

 ರಾಮನಗರ :  ಕಳೆದ 25- 30 ವರ್ಷಗಳಿಂದ ಶಾಸಕರಾಗಿದ್ದವರು ರಾಮನಗರ ಕ್ಷೇತ್ರದ ಬಗ್ಗೆ ಎಂದೂ ಗಮನ ಹರಿಸಲಿಲ್ಲ. ಕೇವಲ ಅಧಿಕಾರ ದಕ್ಕಿಸಿಕೊಳ್ಳಲು ಕ್ಷೇತ್ರವನ್ನು ಸೀಮಿತ ಮಾಡಿಕೊಂಡಿದ್ದರು. ಈ ಕಾರಣದಿಂದಾಗಿಯೇ ಕ್ಷೇತ್ರದಲ್ಲಿ ಇಷ್ಟೊಂದು ಸಮಸ್ಯೆಗಳು ಜೀವಂತವಾಗಿದ್ದು, ಇದನ್ನು ಕ್ಷೇತ್ರದ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ

ತಾಲೂಕಿನ ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಾಗಲಿ ಅಥವಾ ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರಾಗಲಿ, ಅವರಂತೆ ರಾಜಕಾರಣ ಮಾಡಲು ಬಂದಿಲ್ಲ. ನಮಗೆ ಅಧಿಕಾರಕ್ಕಿಂತ ಅಭಿವೃದ್ಧಿ ಮುಖ್ಯ ಎಂದರು.

ನಾವು ಬೆಳಗಾದರೆ ಸ್ಥಳೀಯ ಜನರೊಂದಿಗೆ ಬೆರೆತು ಜೀವನ ನಡೆಸುತ್ತೇವೆ. ಅವರಂತೆ ನಾವು ಕ್ಷೇತ್ರವನ್ನು ಅಧಿಕಾರಕ್ಕಾಗಿ ಸೀಮಿತ ಮಾಡಿಕೊಂಡಿಲ್ಲ. ಡಿ.ಕೆ.ಶಿವಕುಮಾರ್ ರವರ ಮಾತನ್ನು ನಂಬಿ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಕೊಟ್ಟ ಮಾತಿನಂತೆ ಮನೆ ಮಗನಾಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

 ಅನೇಕ ಭಾಗಗಳಲ್ಲಿ ಬೋರ್ ವೆಲ್ ಗಳು ಮತ್ತು ಕೆರೆಗಳು ಬತ್ತಿಹೋಗುತ್ತಿವೆ

ಬೇಸಿಗೆ ಆರಂಭವಾಗಿದ್ದು, ಅನೇಕ ಭಾಗಗಳಲ್ಲಿ ಬೋರ್ ವೆಲ್ ಗಳು ಮತ್ತು ಕೆರೆಗಳು ಬತ್ತಿಹೋಗುತ್ತಿವೆ. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿಗೆ ಕೊರತೆ ಆಗದಂತೆ ಎಚ್ಚರಿಕೆ ವಹಿಸಿದ್ದೇವೆ. ಅರ್ಕಾವತಿ ನದಿ ಭಾಗದಲ್ಲಿ ನೀರಿನಲ್ಲಿ ಫ್ಲೋರಿಡ್ ಅಂಶ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಅರಣ್ಯ ದಂಚಿನ ಪ್ರದೇಶಗಳಲ್ಲಿ ಅನುಭವದಲ್ಲಿರುವ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡಲು ಅರಣ್ಯ ಇಲಾಖೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರುಗಳು ಬಂದಿವೆ. ಅವುಗಳನ್ನು ಉಪ ಗ್ರಾಮವನ್ನಾಗಿ ಪರಿವರ್ತಿಸಿ ಹಕ್ಕು ಪತ್ರ ವಿತರಿಸುವ ಕೆಲಸ ಮಾಡುತ್ತಿದ್ದೇವೆ. ನಗರ ಮತ್ತು ಗ್ರಾಮಗಳ ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗುತ್ತಿದೆ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗ್ಯಾರಂಟಿ ಸಮಿತಿ ಯೋಜನೆಗಳ‌ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಎಚ್.ರಾಜು, ಮಾಜಿ ಅಧ್ಯಕ್ಷ ಜಯರಾಮಯ್ಯ, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಎ.ಬಿ.ಚೇತನ್ ಕುಮಾರ್, ತಾಪಂ‌ ಮಾಜಿ ಸದಸ್ಯ ಸಿದ್ದೇಗೌಡ, ಮುಖಂಡರಾದ ವಾಸು ಪುಟ್ಟಮಾಸ್ತಿಗೌಡ, ಚೇತನ್, ಮಲ್ಲೇಗೌಡ, ಅಪ್ಪಾಜಿ ಮತ್ತಿತರರು ಹಾಜರಿದ್ದರು‌.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಯುಜಿಡಿ ಸಮಸ್ಯೆಗೆ ಶೀಘ್ರ ಮುಕ್ತಿ : ಸಿ.ಪಿ.ಯೋಗೇಶ್ವರ್
ದಕ್ಷಿಣಕ್ಕೆ ಅನ್ಯಾಯ ಆಗಲ್ಲ, ಇದು ಗ್ಯಾರಂಟಿ : ಮೋದಿ