ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಬಿರುಕಿಗೆ ಯತ್ನ: ಎಚ್‌ಡಿಕೆ

KannadaprabhaNewsNetwork |  
Published : Jun 10, 2026, 01:30 AM IST
೯ಕೆಎಂಎನ್‌ಡಿ-೧ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ತಾಲೂಕಿನ ತಗ್ಗಹಳ್ಳಿಯಲ್ಲಿ ಸಿಎಸ್‌ಆರ್ ನಿಧಿಯಡಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕೊಠಡಿಗಳನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶಾಲಾ ಮಕ್ಕಳ ಜೊತೆ ಉದ್ಘಾಟಿಸಿದರು. ಮಿಚಿಲಿನ್ ಇಂಡಿಯಾ ಪ್ರೈವೇಟ್ ಕಂಪನಿ ನಿರ್ದೇಶಕ ಸಿದ್ದಾರ್ಥ ಪ್ರಸಾದ್ ಹಾಜರಿದ್ದರು. | Kannada Prabha

ಸಾರಾಂಶ

ಟಿಕೆಟ್ ಕೊಡುವಂತೆ ದೇವೇಗೌಡರು ಯಾರ ಬಳಿಯೂ ಅರ್ಜಿ ಹಾಕಿರಲಿಲ್ಲ. ಬಿಜೆಪಿ ಪಕ್ಷದಲ್ಲೇ ೬೦ ಜನ ಶಾಸಕರಿರುವಾಗ ನಾವು ಕೇಳುವುದು ಎಷ್ಟರಮಟ್ಟಿಗೆ ಸರಿ. ೭೦ ವರ್ಷದ ಗೌಡರ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎನ್ನುವುದು ಗೊತ್ತಿದೆ. ಈಗ ದೇವೇಗೌಡರ ಬಗ್ಗೆ ಅನುಕಂಪದ ಮಾತುಗಳನ್ನಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದಲ್ಲಿ ಬಿರುಕು ಮೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ರಾಜ್ಯಸಭೆ ಟಿಕೆಟ್‌ಗೆ ದೇವೇಗೌಡರು ಅರ್ಜಿಯನ್ನೇ ಹಾಕಿರಲಿಲ್ಲ. ಇದುವರೆಗೆ ದೇವೇಗೌಡರ ಬಗ್ಗೆ ಇಲ್ಲದ ಅನುಕಂಪ ಕಾಂಗ್ರೆಸ್‌ಗೆ ಈಗ ಬಂದಿದೆಯೇ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ತಾಲೂಕಿನ ತಗ್ಗಹಳ್ಳಿಯಲ್ಲಿ ರಾಜ್ಯಸಭೆ ಪ್ರವೇಶಕ್ಕೆ ದೇವೇಗೌಡರಿಗೆ ಬಿಜೆಪಿ ಟಿಕೆಟ್ ಸಿಗದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಟಿಕೆಟ್ ಕೊಡುವಂತೆ ದೇವೇಗೌಡರು ಯಾರ ಬಳಿಯೂ ಅರ್ಜಿ ಹಾಕಿರಲಿಲ್ಲ. ಬಿಜೆಪಿ ಪಕ್ಷದಲ್ಲೇ ೬೦ ಜನ ಶಾಸಕರಿರುವಾಗ ನಾವು ಕೇಳುವುದು ಎಷ್ಟರಮಟ್ಟಿಗೆ ಸರಿ. ೭೦ ವರ್ಷದ ಗೌಡರ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎನ್ನುವುದು ಗೊತ್ತಿದೆ. ಈಗ ದೇವೇಗೌಡರ ಬಗ್ಗೆ ಅನುಕಂಪದ ಮಾತುಗಳನ್ನಾಡುತ್ತಿದ್ದಾರೆ. ಮುಂಬರುವ ಚುನಾವಣೆ ಬಗ್ಗೆ ಮೈತ್ರಿಪಕ್ಷದ ಬಗ್ಗೆ ಅವರಿಗೆ ಆತಂಕವಿದೆ. ಅದಕ್ಕಾಗಿ ಮೈತ್ರಿಯಲ್ಲಿ ಬಿರುಕು ಮೂಡುವಂತೆ ಮಾಡಲು ಒಕ್ಕಲಿಗರಿಗೆ ಅನ್ಯಾಯ ಎಂದು ಬೊಗಳೆ ಬಿಡುತ್ತಿದ್ದಾರೆ ಎಂದು ದೂಷಿಸಿದರು.

ಈ ಹಿಂದೆಯೂ ದೇವೇಗೌಡರು ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಗೆ ಹೋಗಿರಲಿಲ್ಲ. ದೇವೇಗೌಡರ ವಿರುದ್ಧ ಮತ್ತೊಬ್ಬ ಅಭ್ಯರ್ಥಿ ನಿಲ್ಲುವ ಅವಕಾಶ ಇರಲಿಲ್ಲ. ಹಾಗಾಗಿ ಅವರನ್ನು ಅನಿವಾರ್ಯವಾಗಿ ಬೆಂಬಲಿಸಬೇಕಾಯಿತು. ದೇವೇಗೌಡರದ್ದು ಹೋರಾಟದ ಬದುಕು. ಅಧಿಕಾರ ಕೇಳಿಕೊಂಡು ಇನ್ನೊಬ್ಬರ ಮನೆ ಬಾಗಿಲಿಗೆ ಎಂದೂ ಹೋಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದರು ಎಂದರು.

ರಾಜ್ಯದಲ್ಲಿ ಒಕ್ಕಲಿಗ ಮುಖ್ಯಮಂತ್ರಿ ಇರಬೇಕಾದರೆ ರಾಜ್ಯಸಭೆ ತೆಗೆದುಕೊಂಡು ಏನು ಮಾಡುತ್ತೀರಾ. ಏನು ಮಾಡುವರೆಂದು ಎರಡು ತಿಂಗಳು ಕಾದು ನೋಡೋಣ ಎಂದ ಕುಮಾರಸ್ವಾಮಿ, ನಾನು ಸಲಹೆ ನೀಡುವಷ್ಟು ದೊಡ್ಡವನಲ್ಲ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಏನು ಹರಿದಿದ್ದಾರೆ ಎಂದು ಅವರೇ (ಡಿ.ಕೆ.ಶಿವಕುಮಾರ್) ಹೇಳಿದ್ದಾರೆ. ಎಲ್ಲದಕ್ಕೂ ಸಾಕ್ಷಿ ಗುಡ್ಡೆ ಕೇಳುತ್ತಾರೆ. ಹಾಗಾಗಿ ನಾನೇನು ಹರಿದಿಲ್ಲ, ನಮ್ಮ ಬಳಿ ಏನು ಸಲಹೆ ಕೇಳುತ್ತಾರೆ ಎಂದು ವ್ಯಂಗ್ಯವಾಡಿದರಲ್ಲದೇ, ‘ಅತಿ ವಿನಯಂ ಧೂರ್ತ ಲಕ್ಷಣಂ’ ಎಂದು ಮೂದಲಿಸಿದರು.

ಮುಂದಿನ ೨೦೨೮ರ ಚುನಾವಣೆಯಲ್ಲಿ ಗೆದ್ದು ನಾನು ಸಿಎಂ ಆಗುವುದಕ್ಕಿಂತ ಹೆಚ್ಚಾಗಿ ರಾಜ್ಯದ ಜನರನ್ನು ಉಳಿಸಬೇಕಿದೆ. ಆ ಶಕ್ತಿ ಮೈತ್ರಿ ಪಕ್ಷಗಳಿಗೆ ತರುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಧಾನ ಪರಿಷತ್‌ಗೆ ಜೆಡಿಎಸ್‌ನಿಂದ ಅಭ್ಯರ್ಥಿ ಹಾಕಿರುವ ವಿಚಾರದ ಬಗ್ಗೆ ಕೇಳಿದಾಗ, ನಮಗೂ ಎರಡು ಮತ ಬೇಕು, ಕಾಂಗ್ರೆಸ್‌ನವರಿಗೂ ಎರಡು ಮತ ಬೇಕು. ಇದರಲ್ಲಿ ಯಾವುದೇ ಗೇಮ್ ಪ್ಲಾನ್ ಇಲ್ಲ. ನಾವು ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಯತ್ನಾಳ್ ಅವರನ್ನು ಕೇಳುತ್ತೇವೆ. ಅವರಿಗೆ ಹಣ ಬಲ ಇದೆ, ನೋಡೋಣ ಏನಾಗುತ್ತೆ ಎಂದರು.

ಗ್ಯಾಸ್, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಕೇಳಿದಾಗ, ಜನರ ಮೇಲೆ ಬೇಕೂಂತ ಕೇಂದ್ರ ಹೊರೆ ಹಾಕಿಲ್ಲ. ಕೊಲ್ಲಿ ಯುದ್ಧದ ಪರಿಣಾಮ ಏರಿಕೆಯಾಗಿದೆ. ಇದು ಕೇವಲ ಭಾರತದಲ್ಲಿ ಮಾತ್ರ ಆಗಿರುವುದಲ್ಲ. ವಿಶ್ವದ ಎಲ್ಲಾ ದೇಶಗಳಿಗೂ ಈ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್‌ನವರು ಎಲ್ಲದಕ್ಕೂ ಬೆಲೆ ಏರಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಏನು ಮಾಡುತ್ತಿದ್ದರು ಎಂದು ಖಾರವಾಗಿ ಪ್ರಶ್ನಿಸಿದರು.

ತಾಲೂಕಿನ ತಗ್ಗಹಳ್ಲಿ ಗ್ರಾಮದಲ್ಲಿ ೩೨.೫೦ ಲಕ್ಷ ರು. ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಲಾಗಿದೆ. ಚೀರನಹಳ್ಳಿಯಲ್ಲೂ ೩೨ ಲಕ್ಷ ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದ್ದೇವೆ. ಕೀಲಾರ ಗ್ರಾಮದ ಸುತ್ತಮುತ್ತಲ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ. ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತಿದ್ದು, ಜೊತೆಗೆ ಜಿಲ್ಲೆಯ ರಸ್ತೆಗಳ ನಿರ್ಮಾಣಕ್ಕೆ ಸಿಎಸ್‌ಆರ್ ನಿಧಿಯಿಂದ ೫೪ ಕೋಟಿ ರು. ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದರು.

ತಗ್ಗಹಳ್ಳಿ ಗ್ರಾಮದ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ ನೆರವು ನೀಡಿದ ಮಿಚಿಲಿನ್ ಇಂಡಿಯಾ ಪ್ರೈವೇಟ್ ಕಂಪನಿ ನಿರ್ದೇಶಕ ಸಿದ್ದಾರ್ಥ ಪ್ರಸಾದ್, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ಇತರರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಗೌಡರಿಗೆ ಬಿಜೆಪಿ ಟಿಕೆಟ್‌ ಕೊಟ್ಟಿದ್ದರೆ ಗೌರವ ಹೆಚ್ಚುತ್ತಿತ್ತು: ಕೆ.ಎಂ.ಉದಯ್‌
ದಳ ಅಭ್ಯರ್ಥಿ ಗೋವಿಂದರಾಜು ಆಸ್ತಿ ₹173 ಕೋಟಿ!