ವಕ್ಫ್‌ ವಿವಾದ ಬಳಸಿ ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಪ್ರಯತ್ನ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ಸಾರಾಂಶ

ವಕ್ಫ್‌ ವಿಚಾರ ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾರೆ.

ಬೆಂಗಳೂರು : ವಕ್ಫ್‌ ವಿಚಾರ ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್‌ ಭೂಮಿ ವಿಚಾರವಾಗಿ ಬಿಜೆಪಿ ಅಭಿಯಾನ ನಡೆಸುವುದಾಗಿ ಹೇಳುತ್ತಿದೆ. ಅದು ಅವರ ಮೂರ್ಖತನ. ರೈತರ ಪಹಣಿಗಳಲ್ಲಿ ವಕ್ಫ್‌ ಎಂದು ನಮೂದಾಗಿರುವುದೇ ಬಿಜೆಪಿ ಕಾಲದಲ್ಲಿ. ನಮ್ಮವರು ತಡವಾಗಿ ಗಮನಿಸಿದ್ದಾರೆ. ಈ ಬಗ್ಗೆ ನಮ್ಮ ಬಳಿ ಎಲ್ಲ ದಾಖಲೆಗಳಿವೆ. ಚುನಾವಣೆ ಕಾರಣದಿಂದಾಗಿ ಅದನ್ನು ಬಹಿರಂಗಪಡಿಸಿಲ್ಲ. ಆದರೆ, ಈಗ ಬಿಜೆಪಿ ಅಭಿಯಾನದ ಹೆಸರಿನಲ್ಲಿ ಕೋಮುಗಲಭೆ ಎಬ್ಬಿಸುವ ಪ್ರಯತ್ನ ನಡೆಸಿದೆ ಎಂದರು.

ಹಿಂದೆ ಖರೀದಿಸಿದ್ದ ಶಾಸಕರು ಕುರಿಗಳೇ?:

ಶಾಸಕರ ಖರೀದಿ ಮಾಡಲು ಶಾಸಕರು ಕುರಿಗಳೇ ಎಂದು ಬಿಜೆಪಿ ಅವರು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ದನ, ಕುರಿಗಳನ್ನು ಖರೀದಿ ಮಾಡಿದಂತೆ ಶಾಸಕರನ್ನು ಖರೀದಿ ಮಾಡಿದ್ದರು. ಹಾಗಾದರೆ ಅವರೆಲ್ಲ ಕುರಿಗಳಾಗಿದ್ದರೇ ಎಂದು ಪ್ರಶ್ನಿಸಿದ ಅವರು, ಸಿ.ಪಿ. ಯೋಗೇಶ್ವರ್‌ ಅವರು ಅಶ್ವತ್ಥನಾರಾಯಣ ಜತೆಗೂಡಿ ಶ್ರೀನಿವಾಸಗೌಡ ಅವರ ಮನೆಗೆ ಹೋಗಿ ಹಣ ಇಟ್ಟು ಬಂದಿದ್ದೆ ಎಂದು ಸದನದಲ್ಲೇ ಹೇಳಿದ್ದರಲ್ಲ ಎಂದು ಹರಿಹಾಯ್ದರು.

Share this article