ಯಡಿಯೂರಪ್ಪ ಉತ್ಸವಕ್ಕೆ ಬಿವೈವಿ ತಾತ್ಕಾಲಿಕ ಬ್ರೇಕ್‌ - ಸದಸ್ಯತ್ವ, ಸಂಘಟನಾ ಪರ್ವಕ್ಕೆ ಶ್ರಮಿಸಲು ನಿರ್ದೇಶನ

Published : Dec 20, 2024, 05:08 AM IST
vijayendra BSY

ಸಾರಾಂಶ

ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಮತ್ತೆ ಸಕ್ರಿಯವಾಗಿದೆ. ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡ ವಕ್ಫ್‌ ವಿರುದ್ಧ ಎರಡನೇ ಹಂತದ ಹೋರಾಟಕ್ಕೆ ಮುಂದಾದ ಬೆನ್ನಲ್ಲೇ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬೆಂಬಲಿಸಿ ಗುರುವಾರ ಬೆಂಗಳೂರಿನಲ್ಲಿ ಮಾಜಿ ಸಚಿವರು, ಶಾಸಕರು ಸಭೆ ನಡೆಸಿದ್ದಾರೆ.

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಮತ್ತೆ ಸಕ್ರಿಯವಾಗಿದೆ. ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡ ವಕ್ಫ್‌ ವಿರುದ್ಧ ಎರಡನೇ ಹಂತದ ಹೋರಾಟಕ್ಕೆ ಮುಂದಾದ ಬೆನ್ನಲ್ಲೇ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬೆಂಬಲಿಸಿ ಗುರುವಾರ ಬೆಂಗಳೂರಿನಲ್ಲಿ ಮಾಜಿ ಸಚಿವರು, ಶಾಸಕರು ಸಭೆ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹುಟ್ಟುಹಬ್ಬವನ್ನು (ಫೆ.27) ನೆಪವಾಗಿಟ್ಟುಕೊಂಡು ಬೃಹತ್ ಸಮಾವೇಶ ನಡೆಸುವ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಿದ್ದಾರೆ. ಆದರೆ, ಇದಕ್ಕೆ ವಿಜಯೇಂದ್ರ ಅವರು ತಾತ್ಕಾಲಿಕ ಬ್ರೇಕ್ ಹಾಕಿದ್ದು, ಸದ್ಯ ಪಕ್ಷದ ಸದಸ್ಯತ್ವ, ಸಂಘಟನಾ ಪರ್ವ ಯಶಸ್ವಿಗೊಳಿಸಲು ಶ್ರಮಿಸುವಂತೆ ಮನವೊಲಿಸಿದ್ದಾರೆ. ಹೀಗಾಗಿ, ಈ ಸಂಘಟನಾ ಪರ್ವ ಮುಗಿದ ಬಳಿಕ ಮತ್ತೆ ಮಾಜಿ ಸಚಿವರು, ಶಾಸಕರ ಬಣ ಯಡಿಯೂರಪ್ಪ ಅವರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸುವ ಬಗ್ಗೆ ಸಿದ್ಧತೆ ಆರಂಭಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕಟ್ಟಾ ನಿವಾಸದಲ್ಲಿ ಸಭೆ:

ಇದಕ್ಕೂ ಮುನ್ನ ಸದಾಶಿವನಗರದಲ್ಲಿನ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಿವಾಸದಲ್ಲಿ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ್‌ ಸೇರಿದಂತೆ ಕೆಲವು ಮಾಜಿ ಶಾಸಕರು ಸಭೆ ಸೇರಿ ಸಮಾಲೋಚನೆ ನಡೆಸಿದರು.

ಬಳ್ಳಾರಿ ಅಥವಾ ವಿಜಯನಗರದಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡ ಹೋರಾಟಕ್ಕೆ ಅಣಿಯಾಗಿ ಕ್ರಿಯಾಶೀಲವಾಗಿ ಇರುವುದಕ್ಕೆ ತಿರುಗೇಟು ನೀಡಲು ರೇಣುಕಾಚಾರ್ಯ ತಂಡವು ಸಹ ಕ್ರಿಯಾಶೀಲವಾಗಿ ದಾವಣಗೆರೆಯಲ್ಲಿ ಯಡಿಯೂರಪ್ಪ ಹುಟ್ಟುಹಬ್ಬದ ನೆಪದಲ್ಲಿ ವಿಜಯೇಂದ್ರ ಪರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ ಎನ್ನಲಾಗಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಸಂಘಟನೆ ಕುರಿತು ಆರೇಳು ಸಭೆ ನಡೆಸಿದ್ದೇವೆ. ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿಸುವ ಸಂಬಂಧ ಈ ಸಭೆ ನಡೆಸಿದ್ದೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹುಟ್ಟುಹಬ್ಬವನ್ನು ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಯಡಿಯೂರಪ್ಪ ಅಭಿಮಾನಿ ಬಳಗದಿಂದ ಆಚರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಯಡಿಯೂರಪ್ಪ ಅವರು ಪಕ್ಷ ಕಟ್ಟಿ ಬೆಳೆಸಿದವರು. ಮುಖ್ಯಮಂತ್ರಿಯಾಗಿ ಅಭಿವೃದ್ಧಿ ಕೆಲಸ ಕೈಗೊಂಡು ಅಭಿವೃದ್ಧಿ ಎಂದರೆ ಯಡಿಯೂರಪ್ಪ ಎಂಬ ಮಾತಾಗಿತ್ತು. ಪಕ್ಷಾತೀತವಾಗಿ ಯಡಿಯೂರಪ್ಪ ಎಲ್ಲರಿಗೂ ಅನುದಾನ ನೀಡಿದರು. ಅವರ 83ನೇ ಜನ್ಮದಿನವನ್ನು ಆಚರಿಸಲು ತೀರ್ಮಾನ ಮಾಡಿದ್ದು, ಈ ಪ್ರಯುಕ್ತ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಕೇಂದ್ರದ ಎಲ್ಲಾ ನಾಯಕರನ್ನು ಭೇಟಿಯಾಗುತ್ತೇವೆ. ಕೇಂದ್ರದ ನಾಯಕರ ಸಮಯವನ್ನು ನೋಡಿಕೊಂಡು ಸಮಾವೇಶ ಮಾಡುತ್ತೇವೆ ಎಂದು ಹೇಳಿದರು.

ಬಿ.ಸಿ.ಪಾಟೀಲ್‌ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಮಾಡುತ್ತೇವೆ. ಯಾವ ಮುಖಂಡರನ್ನು ಕರೆಯಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಯಡಿಯೂರಪ್ಪ ಅವರ ಅನುಮತಿ ಪಡೆದು ಕಾರ್ಯಕ್ರಮದ ರೂಪರೇಷೆ ಮಾಡುತ್ತೇವೆ ಎಂದರು.

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಐದು ಲಕ್ಷಕ್ಕೂ ಹೆಚ್ಚು ಜನ ಸೇರಲಿದ್ದಾರೆ. ನಾವು ಮಾಜಿ ಶಾಸಕರಲ್ಲ, ಭಾವಿ ಶಾಸಕರು. ಮತ್ತೆ ನಾವೆಲ್ಲಾ ವಿಧಾನಸಭೆ ಮೆಟ್ಟಿಲೇತ್ತುತ್ತೇವೆ ಎಂದು ತಿಳಿಸಿದರು.

ತಾತ್ಕಾಲಿಕ ಬ್ರೇಕ್‌:

ಸಭೆಯ ಬಳಿಕ ಮಾಜಿ ಸಚಿವರು, ಶಾಸಕರು ಯಡಿಯೂರಪ್ಪ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದರು. ವಿಜಯೇಂದ್ರ ಅವರೂ ಆಗಮಿಸಿದ್ದರು. ಈ ವೇಳೆ ವಿಜಯೇಂದ್ರ ಅವರು ಹುಟ್ಟುಹಬ್ಬ ಆಚರಣೆಯನ್ನು ಬದಿಗಿಟ್ಟು ಪಕ್ಷ ಸಂಘಟನೆಯತ್ತ ಗಮನಹರಿಸಿ. ಸದಸ್ಯತ್ವ, ಸಂಘಟನಾ ಪರ್ವದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿಸಬೇಕು ಎಂಬ ಮನವಿ ಮಾಡಿದರು. ಇದಕ್ಕೆ ಮಾಜಿ ಸಚಿವರು, ಶಾಸಕರು ಸಮ್ಮತಿಸಿದರು ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೇಣುಕಾಚಾರ್ಯ, ಡಿ.30ರಂದು ಸಂಘಟನೆ ಪರ್ವ ಇದೆ. ಇದರ ಬಗ್ಗೆ ಗಮನಹರಿಸಬೇಕು ಎಂಬುದಾಗಿ ಪಕ್ಷ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಬೂತ್‌ ಸಮಿತಿ ಸಂಘಟನೆಯ ಪರ್ವಕ್ಕೆ ಹೆಚ್ಚಿನ ಆದ್ಯತೆ ನೀಡಲು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮಹಿಳಾ ಮಂಡಲ ಮುತ್ತಿಗೆಯಿಂದ ಪ್ರಧಾನಿ ಮೋದಿ ಮಾತಿಗೆ ಬ್ರೇಕ್‌
ಜಿ ರಾಮ್‌ ಜಿ ಗೋ ರಾಮ್‌ ಜಿ! - ವಿಧಾನಮಂಡಲದಲ್ಲಿ ಸರ್ಕಾರ ನಿರ್ಣಯ