;Resize=(412,232))
ಬೆಂಗಳೂರು : ರಾಜ್ಯದ ಎಲ್ಲ ಮುಖ್ಯರಸ್ತೆಗಳ ಅಕ್ಕಪಕ್ಕದಲ್ಲಿ ಜಮೀನು ಹೊಂದಿರುವ ರೈತರಿಗೆ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸರ್ಕಾರದಿಂದ ಉಚಿತವಾಗಿ ತೇಗದ ಗಿಡಗಳನ್ನು ವಿತರಿಸಲು ‘ತೇಗ ಸಿರಿ’ ಎಂಬ ಯೋಜನೆ ಜಾರಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ.
ಈ ಸಂಬಂಧ ರಾಜ್ಯಮಟ್ಟದ ಸಮಗ್ರ ‘ತೇಗ ಸಿರಿ’ ವೃಕ್ಷಾಭಿವೃದ್ಧಿ ಯೋಜನೆಯನ್ನು 493.09 ಕೋಟಿ ರು.ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅಂತಹ ಜಮೀನಿಗೆ ‘ಟ್ರೀ ಪಟ್ಟಾ’ ಎಂದು ನೀಡಲಾಗುವುದು ಎಂದು ಸಭೆ ಬಳಿಕ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸರ್ಕಾರ ಉಚಿತವಾಗಿ ನೀಡುವ ತೇಗದ ಗಿಡಗಳನ್ನು ನೆಟ್ಟು ಬೆಳೆಸುವುದು ರೈತರ ಜವಾಬ್ದಾರಿ. ನಂತರ ಅವು ಹದಿನೈದು ಇಪ್ಪತ್ತು ವರ್ಷವಾದ ಬಳಿಕ ಸರ್ಕಾರ ಇಲ್ಲವೇ ಖಾಸಗಿಯವರಿಗೆ ಮಾರಾಟ ಮಾಡಬಹುದು. ಅದರಲ್ಲಿ ಶೇ.70ರಷ್ಟು ಆದಾಯ ರೈತರಿಗೆ, ಉಳಿದ ಶೇ.30ರಷ್ಟು ಆದಾಯ ಸರ್ಕಾರ ಪಡೆಯಲಿದೆ.
ಇನ್ನು, ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಸಭೆಯಲ್ಲಿ ಒಪ್ಪಿಗೆ ದೊರಕಿದೆ. ಬೆಂಗಳೂರಿನಲ್ಲಿ ಇಂಟರ್ನ್ಯಾಷನಲ್ ಆರ್ಬಿಟ್ರೇಷನ್ ಸೆಂಟರ್ ಸ್ಥಾಪಿಸಲು ಸಮ್ಮತಿ ಸಿಕ್ಕಿದೆ ಎಂದು ತಿಳಿಸಿದರು.
ಮನೆ, ನಿವೇಶನ ರಹಿತರಿಗೆ ಪ್ರತಿ ಜಿಲ್ಲೆಯಲ್ಲೂ 50 ಸಾವಿರ ನಿವೇಶನ ಹಂಚಿಕೆ ಮಾಡಲೂ ತೀರ್ಮಾನಿಸಲಾಗಿದೆ. ಇದಕ್ಕಾಗಿ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ 10 ಸಾವಿರ ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು.
ಎಲ್ಲ ಜಿಲ್ಲೆಗಳಲ್ಲಿ ಒಟ್ಟು 15 ಲಕ್ಷ ನಿವೇಶನ ಹಂಚಿಕೆ ಮಾಡಲಾಗುವುದು. ಮೊದಲ ಹಂತದಲ್ಲಿ ಅಕ್ಟೋಬರ್ನಲ್ಲಿ 5 ಲಕ್ಷ ನಿವೇಶ, ನಂತರ ಹಂತ ಹಂತ ಹಂತವಾಗಿ ಉಳಿದ ನಿವೇಶನ ಹಂಚಿಕೆ ಮಾಡಲಾಗುವುದು. ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು ಹಾಗೂ ಇತರೆ ಹಿಂದುಳಿದ ವರ್ಗಗಳ ಬಡವರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.