;Resize=(412,232))
ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಘೋಷಿಸಿರುವ 101 ಬರ ಪೀಡಿತ ತಾಲೂಕುಗಳಲ್ಲಿ ಒಟ್ಟಾರೆ 18 ಸಾವಿರ ಕೋಟಿ ರು. ನಷ್ಟು ಬೆಳೆ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಕಂದಾಯ ಸಚಿವರು ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಇನ್ನೂ 42 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಸಲಾಗುತ್ತಿದೆ. ಈ ಪೈಕಿ 24 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಪೂರ್ಣಗೊಂಡು, ಉಳಿದ 18 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಬಾಕಿ ತಾಲೂಕುಗಳ ವರದಿ ಬಂದ ನಂತರ ಹೆಚ್ಚುವರಿ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗುವುದು ಎಂದರು.
101 ಬರಪೀಡಿತ ತಾಲೂಕುಗಳಲ್ಲಿ 18 ಸಾವಿರ ಕೋಟಿ ರು. ಬೆಳೆ ನಷ್ಟದ ಅಂದಾಜು ಮಾಡಲಾಗಿದೆ. ಆದರೆ, ಇಷ್ಟು ಮೊತ್ತದ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ 2020ರಲ್ಲಿ ಬರಪೀಡಿತ ಪ್ರದೇಶ ಘೋಷಿಸಲು ಮಾನದಂಡಗಳನ್ನು ಸಿದ್ಧಪಡಿಸಿದೆ. ಎನ್ಡಿಆರ್ಎಫ್ ಮಾರ್ಗಸೂಚಿ ಅನುಸಾರ ಲೆಕ್ಕಾಚಾರ ನಡೆಸಿ ಬರ ಪರಿಹಾರ ಕೇಳಲಾಗುವುದು ಎಂದರು.
ಕಳೆದ ಬಾರಿ 39 ಸಾವಿರ ಕೋಟಿ ರು. ಬೆಳೆ ನಷ್ಟವಾಗಿತ್ತು. ಆದರೆ, ನಾವು ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಬರ ಪರಿಹಾರ ಕೇಳಿದ್ದೆವು. ಆದರೂ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ. ಕೊನೆಗೆ ಸುಪ್ರೀಂ ಕೋರ್ಟ್ ಮೊರೆ ಹೋದೆವು. ಆಗ ನಮ್ಮ ಮನವಿ ಆಲಿಸಿದ ಸುಪ್ರೀಂ ಕೋರ್ಟ್ 3,454 ಕೋಟಿ ಬರ ಪರಿಹಾರ ಒದಗಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿತು. ಅದಾದ ನಂತರವಷ್ಟೇ ಕೇಂದ್ರ ₹3,454 ಕೋಟಿ ಪರಿಹಾರ ಬಿಡುಗಡೆಗೊಳಿಸಿತು. ಈ ಬಾರಿ ಹಾಗೆ ಆಗುವುದಿಲ್ಲ ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಲಿದೆ ಎಂಬ ವಿಶ್ವಾಸವಿದೆ ಎಂದರು.