‘ನಮ್ಮ ಎಲ್ಲಾ ನ್ಯಾಯಾಲಯಗಳ ಮೇಲೆ ಒಂದು ಅತ್ಯುನ್ನತ ನ್ಯಾಯಾಲಯ ಇದೆ. ಅದೇ ಆತ್ಮಸಾಕ್ಷಿ ನ್ಯಾಯಾಲಯ. ಕೆಲವು ಸಾರಿ ನ್ಯಾಯಾಲಯಗಳಲ್ಲಿ ಎಲ್ಲರಿಗೂ ನ್ಯಾಯ ಸಿಗದೆ ಇರಬಹುದು. ಆದರೆ, ನಾವು ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು.’
ಬೆಂಗಳೂರು : ‘ನಮ್ಮ ಎಲ್ಲಾ ನ್ಯಾಯಾಲಯಗಳ ಮೇಲೆ ಒಂದು ಅತ್ಯುನ್ನತ ನ್ಯಾಯಾಲಯ ಇದೆ. ಅದೇ ಆತ್ಮಸಾಕ್ಷಿ ನ್ಯಾಯಾಲಯ. ಕೆಲವು ಸಾರಿ ನ್ಯಾಯಾಲಯಗಳಲ್ಲಿ ಎಲ್ಲರಿಗೂ ನ್ಯಾಯ ಸಿಗದೆ ಇರಬಹುದು. ಆದರೆ, ನಾವು ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು.’
- ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್, ಗಾಂಧಿಭವನ ಹಾಗೂ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪ್ರತ್ಯೇಕ ಗಾಂಧಿಜಯಂತಿ ಕಾರ್ಯಕ್ರಮಗಳಲ್ಲಿ ಆತ್ಮಸಾಕ್ಷಿ ನ್ಯಾಯಾಲಯಕ್ಕೆ ತಲೆಬಾಗಿ ನಡೆಯಬೇಕು ಎಂದು ಒತ್ತಿ ಹೇಳಿದರು. ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಹಗರಣದ ಬೆನ್ನಲ್ಲೇ ಮುಖ್ಯಮಂತ್ರಿಯವರು ಹೀಗೆ ಆತ್ಮಸಾಕ್ಷಿ ನ್ಯಾಯಾಲಯದ ಬಗ್ಗೆ ಮತ್ತೆ ಮತ್ತೆ ಮಾತನಾಡಿದ್ದು ಕುತೂಹಲಕ್ಕೆ ಕಾರಣವಾಯಿತು.
‘ಮಹಾತ್ಮಗಾಂಧಿ ಅವರ ಆದರ್ಶ, ಆಶಯಗಳಂತೆ ನಾವು ನಡೆದುಕೊಳ್ಳಬೇಕು. ನಮ್ಮ ನ್ಯಾಯಾಲಯಗಳ ಮೇಲೆ ಒಂದು ನ್ಯಾಯಾಲಯ ಇದೆ. ಅದೇ ಆತ್ಮಸಾಕ್ಷಿ ನ್ಯಾಯಾಲಯ. ಅದು ಇತರ ಎಲ್ಲಾ ನ್ಯಾಯಾಲಯಗಳನ್ನೂ ಮೀರಿಸುತ್ತದೆ ಎಂದು ಗಾಂಧೀಜಿ ಹೇಳಿದ್ದಾರೆ. ಅದರಿಂದ ನಾವೆಲ್ಲರೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು’ ಎಂದು ಹೇಳಿದರು.
‘ಯಾರಾದರೂ ಹೊಗಳಲಿ, ತೆಗಳಲಿ. ಟೀಕೆ ಮಾಡಲಿ, ಬಿಡಲಿ. ಗುರುತಿಸಲಿ ಬಿಡಲಿ ನಾವು ಪ್ರತಿಯೊಬ್ಬರೂ ಆತ್ಮಸಾಕ್ಷಿಯ ನ್ಯಾಯಾಲಯದಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿಯೇ ನಡೆದುಕೊಳ್ಳಬೇಕು’ ಎಂದು ಕರೆ ನೀಡಿದರು.
‘ಇಂದು ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ. ಇವರಿಬ್ಬರ ಬದುಕಿನ ಮೌಲ್ಯ ಮತ್ತು ಸಂದೇಶಗಳನ್ನು ಜನ ಮಾನಸದಲ್ಲಿ ವಿಸ್ತರಿಸುತ್ತಲೇ ಸರ್ಕಾರ ಸಮ ಸಮಾಜ ನಿರ್ಮಿಸಲು ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ನಾವು ಈ ಮಹಾತ್ಮರಿಗೆ ಸಲ್ಲಿಸುವ ನಿಜವಾದ ಗೌರವ’ ಎಂದು ಹೇಳಿದರು.