ಸ್ವಾಮೀಜಿ ಹೇಳಿದರೆಂದು ಸಿಎಂ ಬದಲಾಗಲ್ಲ- ಶಾಮನೂರು

ಸಾರಾಂಶ

ಸ್ವಾಮೀಜಿಗಳು ಹೇಳಿದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾಂಗ್ರೆಸ್‌ ನ ಹಿರಿಯ ಶಾಸಕ, ಆಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ದಾವಣಗೆರೆ :  ಸ್ವಾಮೀಜಿಗಳು ಹೇಳಿದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾಂಗ್ರೆಸ್‌ ನ ಹಿರಿಯ ಶಾಸಕ, ಆಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ನಗರದ ಗುರುವಾರ ಡಿ.ಕೆ.ಶಿವಕುಮಾರ್‌ ಅವರನ್ನು ಸಿಎಂ ಮಾಡಬೇಕು ಎಂಬ ಒಕ್ಕಲಿಗ ಸಮಾಜದ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ವಾಮೀಜಿಗಳು ಹೇಳಿದರೆ ಮುಖ್ಯಮಂತ್ರಿ ಬದಲಾವಣೆ ಮಾಡುವುದಕ್ಕೆ ಆಗದು. ನಮ್ಮ ಪಕ್ಷದ ಹೈಕಮಾಂಡ್ ಹೇಳಿದಂತೆ ಆಗುತ್ತದೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಚೆನ್ನಾಗಿಯೇ ಆಡಳಿತ ನೀಡುತ್ತಿದ್ದಾರೆ. ನಾನಾಗಲಿ, ಯಾವುದೇ ಸ್ವಾಮೀಜಿಗಳಾಗಲಿ ಹೇಳಿದಾಕ್ಷಣ ಮುಖ್ಯಮಂತ್ರಿ ಬದಲಿಸುತ್ತಾರಾ? ಸ್ವಾಮೀಜಿಗಳು ಹೇಳಿದರೆಂದು ಮುಖ್ಯಮಂತ್ರಿ ಬದಲಾವಣೆ ಅಸಾಧ್ಯ. ಹೈಕಮಾಂಡ್ ಹೇಳಿದರಷ್ಟೇ ಬದಲಾವಣೆ ಸಾಧ್ಯ. ಸಿಎಂ ಸಿದ್ದರಾಮಯ್ಯ ಏನೇ ಸಮಸ್ಯೆಯಾದರೂ ಸರಿಯಾಗಿ ಉತ್ತರ ನೀಡುತ್ತಾರೆ. ಮುಖ್ಯಮಂತ್ರಿಯವರು ಸಹ ಹೈಕಮಾಂಡ್ ಪ್ರಕಾರ ನಡೆದುಕೊಳ್ಳುತ್ತಾರೆ ಎಂದು ಹೇಳಿದರು.

ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಉತ್ತಮ ಕೆಲಸಗಳು ಆಗಿವೆ. ಗ್ಯಾರಂಟಿ ಯೋಜನೆ ಮೂಲಕ ಜನಪ್ರಿಯ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹೆಸರು ಮಾಡಿದ್ದಾರೆ. ಸಿದ್ದರಾಮಯ್ಯ ಉತ್ತಮವಾಗಿ ಕೆಲಸ ಮಾಡಿಲ್ಲ ಅಂತಾ ಹೇಳಿದ್ದು ಯಾರು? ಯಾರೇನೇ ಹೇಳಿದರೂ ಹೈಕಮಾಂಡ್ ಮುಂದೆ ಏನೂ ನಡೆಯಲ್ಲ ಎಂದರು.

ಜಾತಿವಾರು ಉಪ ಮುಖ್ಯಮಂತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದೆಲ್ಲಾ ಆಗುವುದಲ್ಲ, ಮಾಡುವುದಲ್ಲ. ಅದನ್ನೆಲ್ಲಾ ಮಾಡಿದರೆ ಹೈಕಮಾಂಡ್ ಮಾಡಬೇಕಷ್ಟೆ. ಅವನಿಗೇನು (ಚನ್ನಗಿರ ಶಾಸಕ ಬಸವರಾಜ ವಿ.ಶಿವಗಂಗಾ) ಗೊತ್ತು? ಹೊಸ ಶಾಸಕ. ಅವನಿಗೆ ಯಾರು ಬೇಕೋ ಅಂತವರ ಪರ ಮಾತನಾಡುತ್ತಾನೆ. ಅವನಿಗೆ ಯಾರೋ ಚಾರ್ಜ್ ಮಾಡಿ, ಹಿಂಗೇ ಹೇಳು ಅಂತಾ ಹೇಳಿರಬೇಕಷ್ಟೇ ಎಂದರು.

Share this article