ಇನ್ನೂ 50 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ

KannadaprabhaNewsNetwork |  
Published : Apr 16, 2024, 01:08 AM ISTUpdated : Apr 16, 2024, 04:53 AM IST
K Sudhakar

ಸಾರಾಂಶ

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಇರುವವರೆಗೂ ಕಾಂಗ್ರೆಸ್‌ ವಿರೋಧ ಪಕ್ಷದ ಸ್ಥಾನದಲ್ಲೇ ಉಳಿಯಲಿದೆ. ಬಿಜೆಪಿ ಯಾವಾಗಲೂ ಆಡಳಿತದ ಸ್ಥಾನದಲ್ಲಿದ್ದು ಜನ ಕಲ್ಯಾಣ ಕಾರ್ಯಗಳನ್ನು ಮಾಡಲಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನೀರಾವರಿಗೆ ಕೊಟ್ಟಷ್ಟು ಕೊಡುಗೆಗಳನ್ನು ಯಾರೂ ಕೊಟ್ಟಿಲ್ಲ.

 ಚಿಕ್ಕಬಳ್ಳಾಪುರ :  ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಮಾಗಮದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ತ್ರಿಬಲ್‌ ಎಂಜಿನ್‌ನ ಗೆಲುವಿನ ಗಾಳಿ ಬೀಸುತ್ತಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಳಿದರು. ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಡಾ.ಕೆ.ಸುಧಾಕರ್‌ ಪ್ರಚಾರ ನಡೆಸಿ, ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಎಚ್ಡಿಕೆ ವಿರುದ್ಧ ಅಪಪ್ರಚಾರ

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಇರುವವರೆಗೂ ಕಾಂಗ್ರೆಸ್‌ ವಿರೋಧ ಪಕ್ಷದ ಸ್ಥಾನದಲ್ಲೇ ಉಳಿಯಲಿದೆ. ಬಿಜೆಪಿ ಯಾವಾಗಲೂ ಆಡಳಿತದ ಸ್ಥಾನದಲ್ಲಿದ್ದು ಜನ ಕಲ್ಯಾಣ ಕಾರ್ಯಗಳನ್ನು ಮಾಡಲಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನೀರಾವರಿಗೆ ಕೊಟ್ಟಷ್ಟು ಕೊಡುಗೆಗಳನ್ನು ಯಾರೂ ಕೊಟ್ಟಿಲ್ಲ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಹೇಳಿದ್ದಾರೆಂದು ಅಪಪ್ರಚಾರ ಮಾಡಲಾಗುತ್ತಿದೆ. ಅದರೆ ಮಹಿಳೆಯರಿಗಾಗಿಯೇ ಕುಮಾರಸ್ವಾಮಿ ಸಾರಾಯಿ ನಿಷೇಧ ಮಾಡಿದ್ದರು. ರೈತರ ಸಾಲ ಮನ್ನಾ ಮಾಡಿದ್ದರು. ಕಾಂಗ್ರೆಸ್‌ಗೆ ಹೇಳಲು ಸಾಧನೆಗಳ ಸರಕು ಇಲ್ಲದೆ ಈ ರೀತಿಯ ತಂತ್ರ ಹೆಣೆಯುತ್ತಿದೆ ಎಂದರು. ಕಾಂಗ್ರೆಸ್‌ ಬಂದರೆ ದೇಶ ಅ‍ವನತಿ

ಕಾಂಗ್ರೆಸ್‌ ಇಂಡಿಯ ಕೂಟ ಮಾಡಿಕೊಂಡು ಮಂಡಿಯಲ್ಲಿ ಭಾರತವನ್ನೇ ಮಾರಾಟ ಮಾಡಲು ಮುಂದಾಗಿದೆ. ಇಂಡಿಯಕ್ಕೆ 40 ಸ್ಥಾನಕ್ಕಿಂತ ಹೆಚ್ಚು ಬರಲ್ಲ ಎನ್ನುವುದು ಗೊತ್ತಿದೆ. ಕಾಂಗ್ರೆಸ್‌ಗೆ ಮುಂದಿನ 50 ವರ್ಷ ಅಧಿಕಾರ ಸಿಗದಿರುವುದು ಖಚಿತವಾಗಿರುವುದರಿಂದ ಗ್ಯಾರಂಟಿ ಕಾರ್ಡುಗಳನ್ನು ನೀಡುತ್ತಿದೆ. 2,000 ರೂ. ಕೊಡುತ್ತಿರುವುದರಿಂದಲೇ ರಾಜ್ಯದ ಸ್ಥಿತಿ ಅಧೋಗತಿಗೆ ಸಾಗಿದೆ. ದೇಶದ ಬೊಕ್ಕಸದಿಂದ ಇದೇ ರೀತಿ ಹಣ ನೀಡಿದರೆ ಇಡೀ ದೇಶ ಹಾಳಾಗಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶವನ್ನು ಪಾಕಿಸ್ತಾನಕ್ಕಿಂತ ಹಿಂದಕ್ಕೆ ಕೊಂಡೊಯ್ಯಲಿದೆ ಎಂದರು. ನಿಮ್ಮೂರ ಮಗನ ಚುನಾವಣೆ

ಈ ಚುನಾವಣೆ ನಿಮ್ಮೂರ ಮಗನ ಚುನಾವಣೆ, ಇದು ನಿಮ್ಮ ಚುನಾವಣೆಯಾಗಿದೆ. ಕಾಂಗ್ರೆಸ್‌ ಸರ್ಕಾರ ಆಳಲು ಬಂದು ರಾಜ್ಯವನ್ನು ಹಾಳು ಮಾಡಿದೆ. ಕಾಂಗ್ರೆಸ್‌ ಅಭ್ಯರ್ಥಿ ಹೆಸರಿನಲ್ಲಿ ರಾಮನ ಹೆಸರಿದೆ, ಅವರಿಗೆ ಟಿಕೆಟ್ ಕೊಡಿಸಿದವರ ಹೆಸರಿನಲ್ಲೂ ರಾಮ ಇದ್ದಾನೆ. ಆದರೆ ಅವರು ರಾಮ ಮಂದಿರಕ್ಕೆ ಹೋಗುವುದಿಲ್ಲ, ಅವರ ಹೃದಯದಲ್ಲಿ ರಾಮನ ಬಗ್ಗೆ ಭಕ್ತಿ ಇಲ್ಲ. ಇಂಥವರಿಗೆ ಹಿಂದೂಗಳು ಮತ ನೀಡಬೇಕಾ ಎಂದು ಪ್ರಶ್ನೆ ಮಾಡಿದರು. 

ಅಭಿವೃದ್ಧಿ ಕಾರ್ಯಗಳು ಸ್ಥಗಿತಮಾಜಿ ಮುಖ್ಯ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗಳನ್ನು ತೋರಿಸಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ನೀಡುತ್ತಿರುವ ಎರಡು ಸಾವಿರದ ಜೊತೆಗೆ ನಾಲ್ಕು ಸಾವಿರ ಹೆಚ್ಚುವರಿ ಹಣ ನೀಡಿದರೂ ನನ್ನ ತಕರಾರು ಇಲ್ಲ. ಕಳೆದ ವಿಧಾನಸಭೆ ಚುನಾವಣೆಗೆ ಬಂದಾಗ 75 ವರ್ಷ ಮೀರಿದ ತಂದೆ-ತಾಯಂದಿರಿಗೆ ತಿಂಗಳ ಐದು ಸಾವಿರ ನೀಡುವ ಘೋಷಣೆ ಮಾಡಿದ್ದೆ. ಅಷ್ಟೆ ಅಲ್ಲ ನಾಡಿನ ಪ್ರತಿ ಕುಟುಂಬಕ್ಕೆ ಶ್ರೀಮಂತ ಕುಟುಂಬ ಪಡೆಯುವಂತ ಉತ್ತಮ ಶಿಕ್ಷಣ ಕೊಡಬೇಕೆಂಬುದು ನನ್ನ ಕಾರ್ಯಕ್ರಮವಾಗಿತ್ತು ಎಂದರು.

ಪಿಕ್‌ ಪಾಕೆಟ್‌ ಸರ್ಕಾರಆದರೆ ಈಗ ಎರಡು ಸಾವಿರ ತಗೊಂಡು, ಮಗುನ ಖಾಸಗಿ ಶಾಲೆಗೆ ಸೇರಿಸಿ ಡೊನೇಷನ್ ಕಟ್ಟಲು ಸಾಧ್ಯವೇ, ಆಯ್ತು ಎರಡು ಸಾವಿರ ಕೊಡ್ತಾವ್ರೆ.. ಅದಕ್ಕೆ ಬೆಲೆ ತೆತ್ತುತ್ತಾ ಇರೋದ್ ಯಾರು, ಕಾಂಗ್ರೆಸ್ ಸರ್ಕಾರದ ಮನೆಯಿಂದ ತಂದ್ಕೊಡ್ತಾವ್ರಾ. ಹೆಣ್ಣುಮಕ್ಕಳಿಗೆ ಎರಡು ಸಾವಿರ ಕೊಟ್ಟು ಶ್ರಮ ಜೀವಿಗಳು, ಹಿರಿಯರು, ಯುವಕರು ಶ್ರಮ ಕಡಿಮೆ ಮಾಡಿಕೊಳ್ಳಲು ಸಂಜೆ ಮದ್ಯದ ಅಂಗಡಿಗೆ ಹೋದರೆ ಅಲ್ಲಿ ಬೆಲೆ ಏರಿಕೆ ಮೂಲಕ ಪಿಕ್ ಪಾಕೇಟ್ ಕೆಲಸ ಮಾಡ್ತಾ ಇದ್ದಾರೆ. ಇದು ಪಿಕ್ ಪಾಕೇಟ್ ಸರ್ಕಾರ ಅಲ್ಲವೆ ಎಂದರು.

ರಿಜಿಸ್ಟರ್ ಮಾಡಿಸಲು ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿ ನಿಮ್ಮ ತಲೆಗೆ ಕಟ್ಟಿ, ನುಡಿದಂತೆ ನಡೆದಿದ್ದೇವೆ ಅಂತಾರೆ. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಸಾಲ ಮನ್ನಾ ಘೋಷಣೆ ಮಾಡಿದಂತೆ, ಸಮ್ಮಿಶ್ರವಾಗಿದ್ದ ಕಾಂಗ್ರೆಸ್ ಅಸಹಕಾರದ ನಡುವೆಯೂ, ಜನರಿಗೆ ಯಾವುದೇ ತೊಂದರೆ ನೀಡದೆ ಸಾಲ ಮನ್ನಾ ಮಾಡಿದೆ. ಆದರೆ ಈ ಸರ್ಕಾರ ಜನರ ಮೇಲೆ ಬೆಲೆ ಹೆಚ್ಚಳದ ಜೊತೆಗೆ ದುಡ್ ಕೊಡ್ಲಿಲ್ಲ, ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಆಡಿದಂತೆ ನಾಟಕ ಆಡಿದ್ನಾ ಎಂದು ಪ್ರಶ್ನಿಸಿದರು.ಕಾಂಗ್ರೆಸ್ಸಿಗರಿಂದ ಅಪಪ್ರಚಾರ

ತುಮಕೂರಿನಲ್ಲಿ ಮಾತನಾಡುವ ವೇಳೆ, ತಾಯಂದಿರಿಗೆ ಗ್ಯಾರಂಟಿಗೆ ಮರುಳಾಗಿ ಮತ ನೀಡಬೇಡಿ ಎಂದು ಭಾಷಣ ಮಾಡಿದರೆ.. ಅಯ್ಯೋ ಈ ರಾಜ್ಯದ ಮಹಿಳೆಯರಿಗೆ ಕುಮಾರಸ್ವಾಮಿ ಅವಮಾನ ಮಾಡಿಬಿಟ್ಟ ಎಂದು ಕಾಂಗ್ರೆಸ್ ‌ನವರು ಹಬ್ಬಿಸಿದರು. ಗ್ರಾಮ ವಾಸ್ತವ್ಯಕ್ಕೆ ಬಂದಾಗ ತಾಯಂದಿರು ಸಾರಾಯಿ ನಿಷೇಧ ಮಾಡುವಂತೆ ಮನವಿ ಮಾಡಿದರು. 

ಅವರ ಮನವಿಗೆ ಸ್ಪಂದಿಸಿ, ಸಾರಾಯಿ ನಿಷೇಧಂತಹ ದಿಟ್ಟ ಕ್ರಮಕೈಗೊಂಡೆ ಇದು ತಾಯಂದಿರಿಗೆ ಅವಮಾನವೇ, ರಾಜ್ಯದಲ್ಲಿ ಆನ್‌ಲೈನ್ ಲಾಟರಿ, ಇಡೀ ಲಾಟರಿ ನಿಷೇಧ ಮಾಡಿದೆ ಇದು ಮಹಿಳೆಯರಿಗೆ ಮಾಡಿದ ಅವಮಾನವೇ ಪ್ರಶ್ನಿಸಿದರು.ಈ ಸಂಧರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಮಾಜಿ ವಿಧಾನ ಪರಿಷತ್ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಡಿ.ರಾಮಲಿಂಗಪ್ಪ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್,ಜಿಪಂ ಮಾಜಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್‌ಕಿರಣ್‌, ಒಕ್ಕಲಿಗರ ಸಂಘದ ನಿರ್ದೇಶಕ ಕೋನಪ್ಪರೆಡ್ಡಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮುಕ್ತ ಮುನಿಯಪ್ಪ, ಮತ್ತಿತರರು ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು
ಒಬ್ಬ ವ್ಯಕ್ತಿಯ ಮಾತನ್ನು ದ್ವೇಷಭಾಷಣ ಅಂತ ಹೇಗೆ ಸಾಬೀತು ಮಾಡುತ್ತೀರಿ?