ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ 200 ಕೋಟಿ ರು. ವೆಚ್ಚದಲ್ಲಿ 200 ಅಡಿಗಳ ಡಾ.ಬಿ.ಆರ್. ಅಂಬೇಡ್ಕರ್ ಅವರ ಬೃಹತ್ ಪ್ರತಿಮೆಯನ್ನು ಒಳಗೊಂಡ ಅಂಬೇಡ್ಕರ್ ಥೀಮ್ ಪಾರ್ಕ್ ಹಾಗೂ ಸಂವಿಧಾನ ಮ್ಯೂಸಿಯಂ ಸ್ಥಾಪನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ಸಭೆ ನಡೆಸಲಾಗಿದೆ.
200 ಕೋಟಿ ರು. ವೆಚ್ಚದಲ್ಲಿ ಅಂಬೇಡ್ಕರ್ ಥೀಮ್ ಪಾರ್ಕ್ ಹಾಗೂ ಸಂವಿಧಾನ ಮ್ಯೂಸಿಯಂ ಸ್ಥಾಪಿಸುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಇದೀಗ ಬೆಂಗಳೂರು ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ಸಂಸ್ಥೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದೊಂದಿಗೆ ಚರ್ಚಿಸಿದ್ದು, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿಯ ಮುಖ್ಯದ್ವಾರ (ಬೆಂಗಳೂರು-ಮೈಸೂರು ರೈಲ್ವೆಟ್ರ್ಯಾಕ್) ನಿಂದ ಎನ್.ಎಸ್.ಎಸ್ ಕೇಂದ್ರದ ಮಧ್ಯಭಾಗದಲ್ಲಿ (ರಸ್ತೆಯ ಬಲಬದಿಗೆ) ಲಭ್ಯವಿರುವ 25 ಎಕರೆ ಜಾಗ ಸೂಕ್ತ ಎಂದು ನಿರ್ಧರಿಸಿದ್ದು, ಈ ಬಗ್ಗೆ ಚರ್ಚಿಸಲಾಯಿತು.ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿಗಳು ಹಾಗೂ ಬೆಂಗಳೂರುವಿಶ್ವವಿದ್ಯಾಲಯದ ಉಪ ಕುಲಪತಿಗಳೊಂದಿಗೆ ಸಮನ್ವಯ ಸಾಧಿಸಿ ಇಲಾಖೆಯ ವಶಕ್ಕೆ ನೀಡಲು ನಿರ್ದೇಶಿಸಬೇಕು ಎಂದು ಕೋರಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವರು ಹಾಜರಿದ್ದರು.
ಥೀಮ್ ಪಾರ್ಕ್ನಲ್ಲಿ ಏನೇನಿರಲಿದೆ?
ಡಾ.ಬಿ.ಆರ್.ಅಂಬೇಡ್ಕರ್ ರವರ 200 ಅಡಿ ಎತ್ತರದ ಪ್ರತಿಮೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಬರಹ, ಸಾಧನೆ ಹಾಗೂ ಭಾರತ ಸಂವಿಧಾನ ರಚನೆಯ ಇತಿಹಾಸದ ಬಗ್ಗೆ ಮ್ಯೂಸಿಯಂ ಸ್ಥಾಪನೆಯಾಗುತ್ತದೆ.
ಜತೆಗೆ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಬೃಹತ್ ಗ್ರಂಥಾಲಯ, ಬೌದ್ಧ ಸ್ತೂಪಗಳು ಮತ್ತು ವಿವಿಧ ಶಿಲ್ಪ ಕಲಾಕೃತಿಗಳು, ಕಾನ್ಫರೆನ್ಸ್ ಹಾಲ್, ಮಿನಿಥಿಯೇಟರ್ ಜತೆಗೆ ಉದ್ಯಾನವನ, ಸಂಗೀತ ಕಾರಂಜಿ ನಿರ್ಮಿಸಲು ಉದ್ದೇಶಿಸಲಾಗಿದೆ.