ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ಸಂತೋಷ ಭಾರತಿ ಸ್ವಾಮೀಜಿ, ಅಮೂಲ್ಯ ಸಂಪತ್ತಿನ ನಂದಿ ಬೆಟ್ಟ ಉಳಿಸಬೇಕು. ಇಲ್ಲಿ ಐತಿಹಾಸಿಕ ಯೋಗ ಮತ್ತು ಭೋಗ ನಂದೀಶ್ವರ ದೇವಸ್ಥಾನಗಳಿವೆ. ಐದು ನದಿಗಳ ಉಗಮ ಸ್ಥಾನವಿದ್ದು, ಇದನ್ನು ಉಳಿಸಬೇಕು. ಕೆಲ ದುಷ್ಟಶಕ್ತಿಗಳು ಪ್ರಕೃತಿ ನಾಶ ಮಾಡುತ್ತಿವೆ. ಅಭಿವೃದ್ಧಿ ಕಾರ್ಯಗಳಿಂದಾಗಿ ಅನಾಹುತ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಪರಿಸರ ತಜ್ಞ ಡಾ.ಯಲ್ಲಪ್ಪ ರೆಡ್ಡಿ ಮಾತನಾಡಿ, ನಂದಿಬೆಟ್ಟದಲ್ಲಿ ಇಲ್ಲಿಯವರೆಗೂ 600ಕ್ಕೂ ಅಧಿಕ ಟ್ರ್ಯಾಕ್ಟರ್ ಪ್ಲಾಸ್ಟಿಕ್, ಮದ್ಯದ ಬಾಟಲ್ಗಳನ್ನು ತೆರವುಗೊಳಿಸಲಾಗಿದೆ. ಪ್ರಾಣವಾಯು, ಜೀವಜಲದಿಂದ ಮನುಷ್ಯ ರೋಗಮುಕ್ತನಾಗಿ ಜೀವನ ಸಾಗಿಸಬಹುದು. ನಿಸರ್ಗ ಕುರಿತು ಜನರು ಅರಿತುಕೊಳ್ಳಬೇಕು ಎಂದರು.ಇದೇ ವೇಳೆ ನಂದಿಬೆಟ್ಟ ಉಳಿಸಿ ಎಂಬ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಚಿತ್ರ ನಿರ್ದೇಶಕ ಡಾ.ಎಸ್.ವಿ.ರಾಜೇಂದ್ರಸಿಂಗ್ ಬಾಬು, ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಸಿ.ಡಿ.ಕಿರಣ್ ಮತ್ತಿತರರು ಹಾಜರಿದ್ದರು.