ಪ್ರಬುದ್ಧ ಮತದಾರರು ಸಂವಿಧಾನದ ಆಶಯದಂತೆ ನಡೆದುಕೊಳ್ಳುತ್ತಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ

KannadaprabhaNewsNetwork | Published : Jan 26, 2024 1:46 AM

ಸಾರಾಂಶ

ಶ್ರೀರಾಮ ಸರ್ವಜನಾಂಗದ ವ್ಯಕ್ತಿ. ಆತನ ರಾಜ್ಯಭಾರದಲ್ಲಿ ಎಲ್ಲ ವರ್ಗದ ಜನರಿಗೂ ಸಮಾನ ನ್ಯಾಯ ನೀಡಿದ್ದ. ಶ್ರೀರಾಮ ಎಲ್ಲಾ ಜನರಿಗೂ ನ್ಯಾಯಕೊಟ್ಟ. ಆದ್ದರಿಂದಲೇ ರಾಮರಾಜ್ಯದ ಕಲ್ಪನೆ ಬಂತು. ಎಲ್ಲಾ ಜನರು ಆತನ ಕಾಲದಲ್ಲಿ ಸುಖಿಯಾಗಿದ್ದಾಗಿದ್ದರು. ರಾಜಕೀಯವಾಗಿ ಬಳಸಿಕೊಳ್ಳಬೇಕು ಎಂಬ ಕಾರಣಕ್ಕೆ ಆತುರವಾಗಿ ಮತ್ತು ಅಪೂರ್ಣಗೊಂಡಿರುವ ಮಂದಿರವನ್ನು ಉದ್ಘಾಟಿಸಲಾಗಿದೆ. ದೇಶವು ಜಾತ್ಯತೀತ ರಾಷ್ಟ್ರ. ಸಂವಿಧಾನವನ್ನು ಒಪ್ಪಿಕೊಂಡಿರುವ ದೇಶ. ಏನೇ ಮಾಡಿದರೂ ಅದು ನಡೆಯಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜಕೀಯವಾಗಿ ರಾಮನನ್ನು ಬಿಜೆಪಿ ಬಳಸಿಕೊಂಡರೂ ಪ್ರಬುದ್ಧ ಮತದಾರರು ಸಂವಿಧಾನದ ಆಶಯದಂತೆ ನಡೆದುಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಸರ್ವಜನಾಂಗದ ವ್ಯಕ್ತಿ. ಆತನ ರಾಜ್ಯಭಾರದಲ್ಲಿ ಎಲ್ಲಾ ವರ್ಗದ ಜನರಿಗೂ ಸಮಾನ ನ್ಯಾಯ ನೀಡಿದ್ದ. ಶ್ರೀರಾಮ ಎಲ್ಲಾ ಜನರಿಗೂ ನ್ಯಾಯಕೊಟ್ಟ. ಆದ್ದರಿಂದಲೇ ರಾಮರಾಜ್ಯದ ಕಲ್ಪನೆ ಬಂತು. ಎಲ್ಲಾ ಜನರು ಆತನ ಕಾಲದಲ್ಲಿ ಸುಖಿಯಾಗಿದ್ದಾಗಿ ತಿಳಿಸಿದರು.

ರಾಜಕೀಯವಾಗಿ ಬಳಸಿಕೊಳ್ಳಬೇಕು ಎಂಬ ಕಾರಣಕ್ಕೆ ಆತುರವಾಗಿ ಮತ್ತು ಅಪೂರ್ಣಗೊಂಡಿರುವ ಮಂದಿರವನ್ನು ಉದ್ಘಾಟಿಸಲಾಗಿದೆ. ದೇಶವು ಜಾತ್ಯತೀತ ರಾಷ್ಟ್ರ. ಸಂವಿಧಾನವನ್ನು ಒಪ್ಪಿಕೊಂಡಿರುವ ದೇಶ. ಏನೇ ಮಾಡಿದರೂ ಅದು ನಡೆಯಲ್ಲ. ಶ್ರೀರಾಮ ಸರ್ವಜನಾಂಗದ ವ್ಯಕ್ತಿ. ರಾಮರಾಜ್ಯದ ಕಲ್ಪನೆಯ ಆಡಳಿತವನ್ನು ಕಂಡವರು. ಕಾಡಿಗೆ ಯಾವ ಕಾರಣಕ್ಕಾಗಿ ಹೋದ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ, ಏನೇ ಮಾಡಿದರೂ ಅದು ನಡೆಯಲ್ಲ ಎಂದರು.

ನಾನು ಹಿಂದೂ ಧರ್ಮದಂತೆ ನಡೆಯುತ್ತೇನೆ. ಇಸ್ಲಾಂ, ಕ್ರೈಸ್ತ, ಬೌದ್ದ, ಸಿಖ್ ಅವರವರ ಧರ್ಮದಂತೆ ನಡೆದುಕೊಳ್ಳುತ್ತಾರೆ. ಎಲ್ಲಾ ಧರ್ಮಗಳಲ್ಲೂ ಮನುಷ್ಯತ್ವವನ್ನು ಪ್ರೀತಿಸುವ ಗುಣಗಳು ಇವೆಯೇ ಹೊರತು ದ್ವೇಷಿಸುವಂತೆ ಹೇಳಿಲ್ಲ. ಆಸ್ಸಾಂನಲ್ಲಿ ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆಗೆ ತಡೆಯಾಕಿರುವ ಜತೆಗೆ ಅವರ ಮೇಲೆ ಎಫ್‌ಐಆರ್ ದಾಖಲಿಸಿರುವುದು ರಾಜಕೀಯ ಪ್ರೇರಿತ ಮತ್ತು ಉದ್ದೇಶ ಪೂರ್ವಕ ಎಂದು ಅವರು ಟೀಕಿಸಿದರು.

ದೇಶದಲ್ಲಿ ಕಾಡುತ್ತಿರುವ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಯಾತ್ರೆ ಸಫಲವಾಗದಂತೆ ತಡೆಯುವ ಕೆಲಸ ಮಾಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ತಿರುಗುಬಾಣವಾಗಲಿದೆ ಎಂದರು.

ಇಂಡಿಯಾ ಒಕ್ಕೂಟದಲ್ಲಿನ ಮೈತ್ರಿ ಪಕ್ಷಗಳ ಸ್ವತಂತ್ರ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ. ನನಗೇನೂ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಚುನಾವಣೆ ನಡೆಯುವ ತನಕ ಮಾತುಕತೆ, ಚರ್ಚೆಗಳು ಇರುತ್ತವೆ. ಯಾವುದು ಅಂತಿಮವಾಗಿರಲ್ಲ ಎಂದರು.ಜಾತಿಗಣತಿ ವರದಿ ಸಲ್ಲಿಸುವ ಕುರಿತು ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸಮಯ ಕೇಳಿಲ್ಲ. ಸಮಯ ಕೇಳಿದರೆ ಕೊಡುತ್ತೇನೆ. ವರದಿ ಸ್ವೀಕಾರ ಮಾಡುವ ಮುನ್ನವೇ ಅಪಸ್ವರದ ಮಾತುಗಳು ಬೇಡ. ವರದಿಯಲ್ಲಿ ಏನಿದೆ ಎಂಬುದು ನನಗೂ ಗೊತ್ತಿಲ್ಲ, ಅದು ವೈಜ್ಞಾನಿಕವಾಗಿದೆಯೋ, ಅವೈಜ್ಞಾನಿಕವಾಗಿದೆಯೋ ಎಂಬುದು ನೋಡಿದ ಮೇಲಲ್ಲವೇ ತಿಳಿಯುವುದು? ನಿಮಗೇನಾದರೂ ಗೊತ್ತಿದೆಯೇ ಅವರು ಪ್ರಶ್ನಿಸಿದರು.

ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವುದಕ್ಕೆ ಪಟ್ಟಿ ಅಂತಿಮಗೊಳಿಸಿ ಹೈಕಮಾಂಡ್‌ ಗೆ ಕಳುಹಿಸಲಾಗಿದೆ. ಅದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಒಪ್ಪಿಗೆ ದೊರೆಯುತ್ತಿದ್ದಂತೆ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಸಂವಿಧಾನಕ್ಕೆ ಅಪಾಯ ಆಗುತ್ತಿದೆ ಎಂದು ಹೇಳಲಾಗದು. ಆದರೆ ಸಂವಿಧಾನಕ್ಕೆ ಧಕ್ಕೆ ತರುವ ಮತ್ತು ಅಗೌರವವನ್ನುಂಟು ಮಾಡುವ ಕಲಸ ನಡೆಯುತ್ತಿದೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

Share this article