ಬಿಜೆಪಿ ಮಾಜಿ ಶಾಸಕ ವೀರಯ್ಯ ಬಂಧನ

KannadaprabhaNewsNetwork |  
Published : Jul 13, 2024, 01:40 AM ISTUpdated : Jul 13, 2024, 04:52 AM IST
D S Veeraiah

ಸಾರಾಂಶ

ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಲಿ. (ಡಿಡಿಯುಟಿಟಿಎಲ್‌) ನಿಗಮದ 47.10 ಕೋಟಿ ರು. ಅವ್ಯವಹಾರ ಪ್ರಕರಣ ಸಂಬಂಧ ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿಯ ಮಾಜಿ ಶಾಸಕ ಡಿ.ಎಸ್‌.ವೀರಯ್ಯ ಅವರನ್ನು ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬೆಂಗಳೂರು :  ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಲಿ. (ಡಿಡಿಯುಟಿಟಿಎಲ್‌) ನಿಗಮದ 47.10 ಕೋಟಿ ರು. ಅವ್ಯವಹಾರ ಪ್ರಕರಣ ಸಂಬಂಧ ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿಯ ಮಾಜಿ ಶಾಸಕ ಡಿ.ಎಸ್‌.ವೀರಯ್ಯ ಅವರನ್ನು ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧನ ಭೀತಿಯಿಂದ ನ್ಯಾಯಾಲಯದಲ್ಲಿ ಪಡೆದಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದಾದ ಬೆನ್ನಲ್ಲೇ ವೀರಯ್ಯ ಅವರನ್ನು ಮೈಸೂರು ರಸ್ತೆಯಲ್ಲಿ ಸಿಐಡಿ ಪೊಲೀಸರು ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ಕೆಲ ದಿನಗಳ ಹಿಂದೆ ಇದೇ ಪ್ರಕರಣದಲ್ಲಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾಣಿಜ್ಯ ಪ್ರಚಾರ ಶಾಖೆಯ ಉಪನಿರ್ದೇಶಕ ಎಸ್.ಶಂಕರಪ್ಪ ಅವರನ್ನು ಸಿಐಡಿ ಬಂಧಿಸಿತ್ತು. ಆಗ ವಿಚಾರಣೆ ವೇಳೆ ಶಂಕರಪ್ಪ ನೀಡಿದ್ದ ಮಾಹಿತಿ ವೀರಯ್ಯ ಅವರಿಗೆ ಸಂಕಷ್ಟ ತಂದೊಡ್ಡಿದೆ ಎನ್ನಲಾಗಿದೆ.

ಏನಿದು ಪ್ರಕರಣ?: 2021-23ರ ಅವಧಿಯಲ್ಲಿ ನಿಗಮದ ಟರ್ಮಿನಲ್‌ಗಳ ನವೀಕರಣ ಮತ್ತು ನಿರ್ವಹಣೆ ಗುತ್ತಿಗೆಯಲ್ಲಿ 47.10 ಕೋಟಿ ರು. ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಲ್ಸನ್ ಗಾರ್ಡನ್ ಠಾಣೆಗೆ ನಿಗಮದ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್‌.ಶಿವಪ್ರಕಾಶ್ ದೂರು ನೀಡಿದ್ದರು. ಈ ದೂರಿನ ಮೇರೆಗೆ ಅಪರಾಧಿಕ ಸಂಚು ಹಾಗೂ ವಂಚನೆ, ನಕಲಿ ದಾಖಲೆ ಸೃಷ್ಟಿ ಸೇರಿದಂತೆ ಇತರೆ ಆರೋಪಗಳಡಿ ಎಫ್‌ಐಆರ್ ದಾಖಲಾಯಿತು. ಬಳಿಕ ಪ್ರಕರಣವನ್ನು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ವಹಿಸಿತ್ತು.

ತನಿಖೆ ಕೈಗೆತ್ತಿಕೊಂಡ ಸಿಐಡಿ, ಕಳೆದ ಮೇ 28ರಂದು ಶಂಕರಪ್ಪ ಅವರನ್ನು ಬಂಧಿಸಿತ್ತು. ಆಗ ಬಂಧನ ಭೀತಿಯಿಂದ ನ್ಯಾಯಾಲಯದಲ್ಲಿ ವೀರಯ್ಯ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದರು.

ಈ ಜಾಮೀನು ರದ್ದು ಕೋರಿ ಸಿಐಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸ್ವೀಕರಿಸಿದ ನ್ಯಾಯಾಲಯವು, ಕೊನೆಗೆ ಜಾಮೀನು ಅನೂರ್ಜಿತಗೊಳಿಸಿತು. ಈ ಬೆ‍ಳ‍ವಣಿಗೆ ಬೆನ್ನಲ್ಲೇ ವೀರಯ್ಯ ಅವರನ್ನು ಸಿಐಡಿ ಬಂಧಿಸಿದೆ ಎಂದು ತಿಳಿದು ಬಂದಿದೆ.

ವೀರಯ್ಯ ಖಾತೆಗೆ ಅಕ್ರಮ ಹಣ ವರ್ಗಾವಣೆ: ಟ್ರಕ್ ಟರ್ಮಿನಲ್‌ಗಳ ನವೀಕರಣ ಹಾಗೂ ನಿರ್ವಹಣೆ ಕಾಮಗಾರಿ ನಡೆಸದೆ ನಕಲಿ ದಾಖಲೆ ಸೃಷ್ಟಿಸಿದ 47.10 ಕೋಟಿ ರು. ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಟರ್ಮಿನಲ್‌ಗಳ ನವೀಕರಣ ಸಂಬಂಧ 10 ಕೋಟಿ ರು. ಮೌಲ್ಯದ ದೊಡ್ಡ ಮೊತ್ತದ ಕಾಮಗಾರಿಗೆ ಟರ್ಮಿನಲ್‌ ಮಂಡಳಿಯ ಸಭೆಯಲ್ಲಿ ಅನುಮೋದನೆ ಪಡೆದು ಬಳಿಕ 5 ಲಕ್ಷ ರು. ಮೌಲ್ಯದ ತುಂಡು ಗುತ್ತಿಗೆ ನೀಡಿ ಭಾನಗಡಿ ನಡೆಸಿದ್ದರು. ಈ ಅಕ್ರಮದಲ್ಲಿ ಟ್ರಕ್ ಟರ್ಮಿನಲ್‌ ವೀರಯ್ಯ ಹಾಗೂ ಶಂಕರಪ್ಪ ಶಾಮೀಲಾಗಿದ್ದಾರೆ. ಹೀಗೆ ಲಪಟಾಯಿಸಿದ ಹಣವನ್ನು ಅಕ್ರಮವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಇಬ್ಬರು ವರ್ಗಾಯಿಸಿಕೊಂಡಿದ್ದರು. ಈ ಅಕ್ರಮ ಹಣ ವರ್ಗಾವಣೆ ಸಂಬಂಧ ದಾಖಲೆಗಳು ಪತ್ತೆಯಾಗಿವೆ ಎಂದು ಮೂಲಗಳು ಹೇಳಿವೆ.

ಟರ್ಮಿನಲ್‌ನಲ್ಲಿ ₹39 ಕೋಟಿ ಗುಳುಂ?: ಟ್ರಕ್‌ ಟ್ರರ್ಮಿನಲ್‌ನಲ್ಲಿ 39 ಕೋಟಿ ರು. ಅಕ್ರಮ ನಡೆದಿರುವುದಕ್ಕೆ ಪುರಾವೆಗಳು ಪತ್ತೆಯಾಗಿವೆ. ಈ ಹಣವನ್ನು ನಿಗಮದ ಮಾಜಿ ಅಧ್ಯಕ್ಷ ವೀರಯ್ಯ ಹಾಗೂ ಮಾಜಿ ಎಂಡಿ ಶಂಕರಪ್ಪ ಹಂಚಿಕೊಂಡಿರುವ ಬಗ್ಗೆ ತನಿಖೆ ಮುಂದುವರೆದಿದೆ. ತುಂಡು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರ ವಿಚಾರಣೆ ಸಹ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇ.ಡಿ.ಗೆ ಪತ್ರ ಬರೆದಿದ್ದ ಸಿಐಡಿ: ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಜಾರಿನಿರ್ದೇಶನಾಲಯಕ್ಕೆ (ಇ.ಡಿ.) ಸಿಐಡಿ ಅಧಿಕಾರಿಗಳು ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಆದರೆ ಈ ಪತ್ರಕ್ಕೆ ಇದುವರೆಗೆ ಇ.ಡಿ. ಪ್ರತಿಕ್ರಿಯಿಸಿಲ್ಲ ಎಂದು ಮೂಲಗಳು ತಿಳಿಸಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ರಾಜ್ಯ ರಾಜಕೀಯ ವಿಚಾರ : ಹೊಸ ಬಾಂಬ್ ಸಿಡಿಸಿದ ಎಚ್.ಡಿ.ಕುಮಾರಸ್ವಾಮಿ
ಶ್ರೀಮಂತರು ಗ್ಯಾರಂಟಿ ಸೌಲಭ್ಯ ಕೈಬಿಡಿ: ಎಂಬಿಪಾ - ಮಾತು ತಪ್ಪಿದ ಸರ್ಕಾರ: ಅಶೋಕ್‌ ಕಿಡಿ