;Resize=(412,232))
ದೇವನಹಳ್ಳಿ: ‘ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ನಿಮಗೆ ಸಾಧ್ಯವಾಗದಿದ್ದರೆ ಗ್ಯಾರಂಟಿಗಳನ್ನು ನೀಡಬೇಡಿ. ನಂತರ ಹಣವಿಲ್ಲದೆ, ಕೇಂದ್ರ ಸರ್ಕಾರವನ್ನು ದೂರಬೇಡಿ’ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ದೊಡ್ಡಬಳ್ಳಾಪುರ-ದಾಬಸ್ಪೇಟೆ ರಾಷ್ಟ್ರೀಯ ಹೆದ್ದಾರಿ ವೀಕ್ಷಣೆ ಬಳಿಕ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಆರ್ಥಿಕ ಪರಿಸ್ಥಿತಿಯ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದ ಸಚಿವರು, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಕ್ಕೂ ಮೊದಲು ರಾಜ್ಯ ಸರ್ಕಾರ ಅದಕ್ಕೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಬೇಕು. ಗ್ಯಾರಂಟಿಗಳನ್ನು ನೀಡುವಷ್ಟು ಆರ್ಥಿಕ ಸಂಪನ್ಮೂಲ ನಿಮ್ಮಲ್ಲಿ ಇದ್ದರೆ ಆ ಬಗ್ಗೆ ಸದನದಲ್ಲಿ ಚರ್ಚಿಸಿ ಪಾರದರ್ಶಕವಾಗಿ ನಿರ್ಧಾರ ಕೈಗೊಳ್ಳಿ. ಗ್ಯಾರಂಟಿಗಳಿಗೆ ಬಜೆಟ್ನಲ್ಲಿ ನಿಧಿ ಸಂಗ್ರಹದ ಬಗ್ಗೆ ಸರಿಯಾಗಿ ಪ್ಲ್ಯಾನ್ ಮಾಡಿ. ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ನಿಮಗೆ ಸಾಧ್ಯವಾಗದಿದ್ದರೆ ಗ್ಯಾರಂಟಿಗಳನ್ನು ನೀಡಬೇಡಿ. ನಂತರ ಹಣವಿಲ್ಲದೆ, ಕೇಂದ್ರ ಸರ್ಕಾರವನ್ನು ದೂರಬೇಡಿ ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರಗಳು ಗ್ಯಾರಂಟಿ ಯೋಜನೆಗಳನ್ನ ಕೊಡುತ್ತಿವೆ. ಬೇಕಾಬಿಟ್ಟಿಯಾಗಿ ಜಾರಿಗೊಳಿಸಲಾಗುವ ಗ್ಯಾರಂಟಿ ಯೋಜನೆಗಳು ರಾಜ್ಯಗಳ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಕೇವಲ ಗ್ಯಾರಂಟಿಗಳಿಗೆ ಆದ್ಯತೆ ನೀಡುವುದರಿಂದ ರಾಜ್ಯದಲ್ಲಿನ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳಿಗೆ ಹಣಕಾಸಿನ ಕೊರತೆ ಎದುರಾಗಬಹುದು ಎಂದು ಅವರು ಎಚ್ಚರಿಸಿದರು.
ಅಧಿಕಾರದ ಹಪಾಹಪಿಗೆ ಗ್ಯಾರಂಟಿ ಘೋಷಣೆ ಮಾಡಿದ್ರು. ಈಗ ಗೃಹಲಕ್ಷ್ಮೀ ಚುನಾವಣಾ ಲಕ್ಷ್ಮೀ ಆಗಿದೆ. ಗ್ಯಾರಂಟಿಯಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಫಲಾನುಭವಿಗಳ ಸಂಖ್ಯೆ ಇಳಿಸಲು ಮುಂದಾಗಿದ್ದಾರೆ. ಅರ್ಹರಿಗೆ ಗ್ಯಾರಂಟಿ ಎಂದು ಮೊದಲೇ ಹೇಳಬೇಕಿತ್ತು. ಈಗ ಪರಿಷ್ಕರಣೆ ನೆಪದಲ್ಲಿ ಕತ್ತರಿ ಸರಿಯಲ್ಲ.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಮರು ಅರ್ಜಿ ಸ್ವೀಕಾರ ಒಳ್ಳೆಯದೇ. ಆದರೆ ಈ ನೆಪದಲ್ಲಿ ಅರ್ಹರಿಗೆ ತೊಂದರೆ ಆಗಬಾರದು. ಮುಂದಿನ ಅನಾಹುತ ಯೋಚಿಸದೇ ಗ್ಯಾರಂಟಿ ಘೋಷಿಸಿದ್ರು. ಇದೀಗ ಅದರ ಪರಿಣಾಮ ಗೊತ್ತಾಗುತ್ತಿದೆ. 2 ತಿಂಗಳು ಗೃಹಲಕ್ಷ್ಮೀ ಬಾಕಿ ಹಣದ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ. ₹5000 ಕೋಟಿ ಬಗ್ಗೆ ಸರ್ಕಾರ ಮೌನಕ್ಕೆ ಜಾರಿದೆ.
ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ