ಭಾರತದ ನಿಧಾನಗತಿ ಪ್ರಗತಿಗೆ ಬ್ರೇಕ್‌ ಹಾಕಿದ್ದೇ ನಮ್ಮ ಸರ್ಕಾರ: ಮೋದಿ

Published : Jun 11, 2026, 06:49 AM IST
india pm modi longest serving prime minister nehru record cabinet resolution nda bjp

ಸಾರಾಂಶ

‘2014ರಿಂದ ಎನ್‌ಡಿಎ ಸರ್ಕಾರದ 12 ವರ್ಷಗಳ ಆಡಳಿತದ ಮಹತ್ತರ ಯಶಸ್ಸೆಂದರೆ, ಅದು ದೇಶವನ್ನು ಕಾಂಗ್ರೆಸ್‌ನಿಂದ ಮುಕ್ತಗೊಳಿಸಿದ್ದು. ಕಾಂಗ್ರೆಸ್‌ನ ಸಂಪೂರ್ಣ ಆಡಳಿತ ವೈಫಲ್ಯವನ್ನು ‘ಕಾಂಗ್ರೆಸ್ ಬೆಳವಣಿಗೆ ದರ’ ಎಂದು ಕರೆಯಬೇಕಾಗಿತ್ತು.

 ನವದೆಹಲಿ: ‘2014ರಿಂದ ಎನ್‌ಡಿಎ ಸರ್ಕಾರದ 12 ವರ್ಷಗಳ ಆಡಳಿತದ ಮಹತ್ತರ ಯಶಸ್ಸೆಂದರೆ, ಅದು ದೇಶವನ್ನು ಕಾಂಗ್ರೆಸ್‌ನಿಂದ ಮುಕ್ತಗೊಳಿಸಿದ್ದು. ಕಾಂಗ್ರೆಸ್‌ನ ಸಂಪೂರ್ಣ ಆಡಳಿತ ವೈಫಲ್ಯವನ್ನು ‘ಕಾಂಗ್ರೆಸ್ ಬೆಳವಣಿಗೆ ದರ’ ಎಂದು ಕರೆಯಬೇಕಾಗಿತ್ತು. ಆದರೆ ಅವರ ಆಳ್ವಿಕೆಯಲ್ಲಿ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ಕುತಂತ್ರದಿಂದ ‘ಹಿಂದೂ ಬೆಳವಣಿಗೆ ದರ’ ಎಂದು ಕರೆಯಲಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇಶ ಕಂಡ ಸುದೀರ್ಘಾವಧಿ ಪ್ರಧಾನಿ ಎಂಬ ಮೈಲುಗಲ್ಲು ಸ್ಥಾಪಿಸಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದ ಎನ್‌ಡಿಎ ಸಮಾವೇಶದಲ್ಲಿ 37 ನಿಮಿಷ ಮಾತನಾಡಿದ ಅವರು, ‘2014ರಿಂದ 12 ವರ್ಷಗಳ ಎನ್‌ಡಿಎ ಆಡಳಿತದ ದೊಡ್ಡ ಯಶಸ್ಸೆಂದರೆ, ಅದು ದೇಶವನ್ನು ಕಾಂಗ್ರೆಸ್‌ನ ದುಷ್ಟ ಬಲೆಯಿಂದ ಮುಕ್ತಗೊಳಿಸಿತು ಮತ್ತು ದೇಶದ ಜನರು ರಾಜಕೀಯ ಸ್ಥಿರತೆ ಹಾಗೂ ನಿರ್ಣಾಯಕ ಆಡಳಿತದ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿತು’ ಎಂದು ಶ್ಲಾಘಿಸಿದರು.

‘ಕಾಂಗ್ರೆಸ್ ಆಳ್ವಿಕೆಯಲ್ಲಿನ ನಿಧಾನಗತಿಯ ಬೆಳವಣಿಗೆಗೆ ‘ಹಿಂದೂ ಬೆಳವಣಿಗೆಯ ದರ’ ಎಂದು ಹಣೆಪಟ್ಟಿ ಕಟ್ಟಲಾಯಿತು. ಇದರ ಶೈಲಿ, ಜವಾಬ್ದಾರಿ ಮತ್ತು ವೈಫಲ್ಯ ಎಲ್ಲವೂ ಕಾಂಗ್ರೆಸ್‌ನದ್ದಾಗಿದ್ದರೂ, ಕಳಂಕವನ್ನು ದೇಶದ ವಿಶಾಲ ಹಿಂದೂ ಸಮಾಜದ ಮೇಲೆ ಹೊರಿಸಲಾಯಿತು. ಇದನ್ನು ಕಾಂಗ್ರೆಸ್ ಬೆಳವಣಿಗೆ ದರ ಎಂದು ಹೆಸರಿಸಬೇಕಿತ್ತು. ಕಾಂಗ್ರೆಸ್ ಬೆಳವಣಿಗೆ ದರ ಎಂದರೆ ಆಡಳಿತ, ನೀತಿ, ಉದ್ದೇಶ ಮತ್ತು ನಿರ್ಣಾಯಕತೆಯ ಸಂಪೂರ್ಣ ಅನುಪಸ್ಥಿತಿ’ ಎಂದು ಕಿಡಿ ಕಾರಿದರು.

ಎನ್‌ಡಿಎ ಅವಧಿಯಲ್ಲಿ ಅಭಿವೃದ್ಧಿಗೆ ವೇಗ:

‘ಅಟಲ್ ಬಿಹಾರಿ ವಾಜಪೇಯಿ ಅವರ ನಾಯಕತ್ವದಲ್ಲಿ ಎನ್‌ಡಿಎ ಸರ್ಕಾರ ಮೊದಲು ಅಧಿಕಾರಕ್ಕೆ ಬಂತು. ಆ ನಂತರವೇ ದೇಶದ ಅಭಿವೃದ್ಧಿ ವೇಗ ಪಡೆಯಿತು. ದುರದೃಷ್ಟವಶಾತ್, 2004ರಲ್ಲಿ ದೇಶವು ಮತ್ತೊಮ್ಮೆ ಅಸ್ಥಿರತೆಯ ಚಕ್ರದಲ್ಲಿ ಸಿಲುಕಿತು. ದೇಶವನ್ನು ಕಾಂಗ್ರೆಸ್ ಬಹುಕೋಟಿ ರು. ಹಗರಣಗಳಿಗೆ ಎಳೆದೊಯ್ದಿತು. 2014ರಲ್ಲಿ ಎನ್‌ಡಿಎ ಸರ್ಕಾರ ರಚನೆಯಾದಾಗ ದೇಶದ ಭವಿಷ್ಯ ಮತ್ತೆ ಬದಲಾಯಿತು. ಉದ್ದೇಶ, ನೀತಿ ಮತ್ತು ನಿರ್ಧಾರ ಕೈಗೊಳ್ಳುವಿಕೆ ಹೊಂದಿಕೆಯಾಗಿ, ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ದೇಶ ಅಭಿವೃದ್ಧಿಯ ವೇಗವನ್ನು ಕಂಡಿತು’ ಎಂದು ಬಣ್ಣಿಸಿದರು.

ಮೂಲಸೌಕರ್ಯದಲ್ಲಿ ಮೈಲುಗಲ್ಲು:

‘2014ರಲ್ಲಿ 74 ಏರ್ಪೋರ್ಟ್‌ಗಳಿಂದ 2026ರ ವೇಳೆಗೆ 160ಕ್ಕೂ ಹೆಚ್ಚು ಏರ್ಪೋರ್ಟ್‌ಗಳಿಗೆ; 2014ರಲ್ಲಿ 1,000 ಕಿ.ಮೀ. ಎಕ್ಸ್‌ಪ್ರೆಸ್‌ವೇಗಳಿಂದ 2026ರ ವೇಳೆಗೆ 6,700 ಕಿ.ಮೀ.ಗಳಿಗೆ; 2014ರಲ್ಲಿ ಕೇವಲ 5 ನಗರಗಳಲ್ಲಿ ಮೆಟ್ರೋ ಸೇವೆಗಳಿಂದ 2026ರ ವೇಳೆಗೆ 20ಕ್ಕೂ ಹೆಚ್ಚು ನಗರಗಳಿಗೆ; 2014ರಲ್ಲಿ ರಕ್ಷಣಾ ರಫ್ತಿನಲ್ಲಿ 700 ಕೋಟಿ ರು.ಗಳಿಂದ 2026ರ ವೇಳೆಗೆ 23,000 ಕೋಟಿ ರು.ಗಳಿಗೆ ದೇಶವು ದೀರ್ಘ ಪ್ರಯಾಣವನ್ನು ಕ್ರಮಿಸಿದೆ. 2014ಕ್ಕಿಂತ ಮೊದಲು, ಹಲವಾರು ದಶಕಗಳು ಅಸ್ಥಿರತೆ ಮತ್ತು ದಂಗೆಗಳಿಂದ ತುಂಬಿದ್ದವು. ಆದರೆ ಈಗ ಜನ ಸ್ಥಿರ ಸರ್ಕಾರದ ಕೆಲಸವನ್ನು ವೀಕ್ಷಿಸುತ್ತಿದ್ದಾರೆ. ಅದರ ನಿರ್ಣಾಯಕತೆಯನ್ನು ಮೆಚ್ಚುತ್ತಿದ್ದಾರೆ’ ಎಂದು ವಿವರಿಸಿದರು. 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

17 ಜಿಲ್ಲೆಯಲ್ಲಿ 1.1 ಲಕ್ಷ ಜನ ಗೃಹಲಕ್ಷ್ಮಿ ಸ್ಕೀಂನಿಂದ ಔಟ್‌
13 ರಿಂದ 6 ದಿನಗಳ ಕಾಲ ಮೋದಿ ಫ್ರಾನ್ಸ್‌, ಸ್ಲೊವೋಕಿಯಾ ಪ್ರವಾಸ