ಕಳಸ-ಬಂಡೂರಿ ಯೋಜನೆ: ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ - ದೆಹಲಿಯಲ್ಲಿ ನಿನ್ನೆ ನಡೆದ ವನ್ಯಜೀವಿ ಮಂಡಳಿ ಸಭೆ

ಸಾರಾಂಶ

ಕಳಸ ಬಂಡೂರಿ ಯೋಜನೆ ವಿಚಾರ ಸಂಬಂಧ ದೆಹಲಿಯಲ್ಲಿ ಬುಧವಾರ ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಸಿಂಗ್ ಯಾದವ್ ನೇತೃತ್ವದಲ್ಲಿ ರಾಷ್ಟ್ರೀಯ ವನ್ಯ ಜೀವಿ ಮಂಡಳಿ ಸಭೆ ನಡೆದಿದೆ.

ನವದೆಹಲಿ : ಕಳಸ ಬಂಡೂರಿ ಯೋಜನೆ ವಿಚಾರ ಸಂಬಂಧ ದೆಹಲಿಯಲ್ಲಿ ಬುಧವಾರ ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಸಿಂಗ್ ಯಾದವ್ ನೇತೃತ್ವದಲ್ಲಿ ರಾಷ್ಟ್ರೀಯ ವನ್ಯ ಜೀವಿ ಮಂಡಳಿ ಸಭೆ ನಡೆದಿದ್ದು, ಈ ವೇಳೆ ಕರ್ನಾಟಕ ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ನಾವು ಯೋಜನೆ ಕೈಗೊಂಡಿದ್ದೇವೆ. ಅಲ್ಲದೆ ನಾವು ಸಲ್ಲಿಸಿದ ಹೊಸ ಡಿಪಿಆರ್‌ಗೆ ಕೇಂದ್ರ ಜಲ ಆಯೋಗ ಕೂಡ ಒಪ್ಪಿಗೆ ನೀಡಿದೆ ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕದ ಅಹವಾಲು ಆಲಿಸಿದ ಕೇಂದ್ರ ಸಚಿವ ಭೂಪೇಂದರ್ ಸಿಂಗ್ ಅವರು ಯೋಜನೆ ಕುರಿತು ಶೀಘ್ರ ದಾಖಲೆಗಳ ಜೊತೆಗೆ ವರದಿ ಸಲ್ಲಿಸುವಂತೆ ಸೂಚಿಸಿದರು. ಸಭೆಯಲ್ಲಿ ಯೋಜನೆ ಜಾರಿ ಕುರಿತು ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದರು.

ರಾಜ್ಯದ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ಸಭೆಯಲ್ಲಿ ಭಾಗಿಯಾಗಿ, ಸುಪ್ರೀಂ ಕೋರ್ಟ್ ತೀರ್ಪಿನಂತೆ ನಾವು ಯೋಜನೆ ಕೈಗೊಂಡಿದ್ದೇವೆ. ಗೋವಾದ ಅರ್ಜಿ ಎರಡು ಬಾರಿ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಯೋಜನೆ ಕುರಿತು ಕೇಂದ್ರ ಸರ್ಕಾರ ಯಾವುದೇ ಅನುಮತಿ ನೀಡಬಾರದು ಎನ್ನುವ ಅರ್ಜಿ ತಿರಿಸ್ಕರಿಸಿದೆ. ಕರ್ನಾಟಕವು ಮಹದಾಯಿಗೆ ಸಂಬಂಧಿಸಿ ಯಾವ ಯೋಜನೆಯನ್ನೂ ಕೈಗೆತ್ತಿಕೊಳ್ಳಬಾರದು, ಗೋವಾ ಪ್ರಾಣಿ ಸಂಕುಲಕ್ಕೆ ತೊಂದರೆ ಆಗುತ್ತೆ ಎಂದು ಸಲ್ಲಿಸಿದ್ದ ಅರ್ಜಿಯೂ ವಜಾ ಆಗಿದೆ ಎಂದರು.

ಇದೇ ವೇಳೆ 2023ರಲ್ಲಿ ಗೋವಾದ ವನ್ಯಜೀವಿ ಮಂಡಳಿ ಚೀಫ್ ವಾರ್ಡನ್ ಕರ್ನಾಟಕಕ್ಕೆ ನೋಟಿಸ್ ಕೊಟ್ಟಿದ್ದಾರೆ. ಇದು ಕಾನೂನಿನಲ್ಲಿ ಸಾಧ್ಯ ಇದೆಯಾ? ಹೆಚ್ಚಿನ ಸಮಸ್ಯೆ ಇರುವುದು ಜಲಸಂಪನ್ಮೂಲಕ್ಕೆ ಸಂಬಂಧಿಸಿದ್ದು. ವನ್ಯಜೀವಿ ಮಂಡಳಿ ಆ ದೃಷ್ಟಿಯಿಂದ ನೋಡಬೇಕು ಎಂದು ಮಂಜುನಾಥ್ ಪ್ರಸಾದ್ ವಾದ ಮಂಡಿಸಿದರು. ಅಲ್ಲದೆ, ಹೊಸ ಡಿಪಿಆರ್ ಕೇಂದ್ರ ಜಲ ಆಯೋಗ ಒಪ್ಪಿದೆ. ಯೋಜನೆ ಅನುಷ್ಠಾನಕ್ಕೆ 60 ಹೆಕ್ಟೇರ್ ಅಗತ್ಯ ಭೂಮಿ ಬೇಕಿದೆ. ಈ ಕುರಿತ ಕಾರ್ಯ ಪ್ರಗತಿಯಲ್ಲಿದೆ. ರಾಷ್ಟ್ರೀಯ ಹುಲಿ ಪ್ರಾಧಿಕಾರ ಕೂಡ ಕರ್ನಾಟಕದ ಪರ ವರದಿ ಕೊಟ್ಟಿದೆ ಎಂದು ಸಚಿವರ ಗಮನಕ್ಕೆ ತಂದರು.

Share this article