ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾನಾಗಲಿ, ನನ್ನ ಮನೆಯವರಾಗಲಿ ಅಭ್ಯರ್ಥಿ ಆಗೋಲ್ಲ, ಸಚಿವರು ಸ್ಪರ್ಧೆ ಮಾಡಬೇಕು ಎಂದು ನಮ್ಮ ಹೈಕಮಾಂಡ್ ಯಾವ ಸೂಚನೆಯನ್ನೂ ಕೊಟ್ಟಿಲ್ಲ. ಸೂಕ್ತ ಸಮಯದಲ್ಲಿ ಹೆಸರನ್ನು ಪ್ರಕಟಿಸುತ್ತೇವೆ. ಪಾಪ... ಸುನೀಲ್ ಬಹಳ ಹೈ ಟೋನ್ ಬಳಸಿ ನೋಡಿದರು. ಆದರೆ, ಪಕ್ಷದ ಅಧ್ಯಕ್ಷನೂ ಆಗಲಿಲ್ಲ, ವಿಪಕ್ಷ ನಾಯಕನೂ ಆಗಲಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಸರು ಫೈನಲ್ ಆಗಿದೆ. ಅಭ್ಯರ್ಥಿಯ ಹೆಸರನ್ನು ಸೂಕ್ತ ಸಮಯದಲ್ಲಿ ಪ್ರಕಟಿಸುತ್ತೇವೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸೂಚ್ಯವಾಗಿ ಹೇಳಿದರು.
ಚುನಾವಣೆಗೆ ನಾನಾಗಲೀ ಅಥವಾ ನಮ್ಮ ಮನೆಯವರಾಗಲೀ ಸ್ಪರ್ಧೆ ಮಾಡುತ್ತಿಲ್ಲ. ಸಚಿವರು ಸ್ಪರ್ಧೆ ಮಾಡಬೇಕು ಎಂದು ನಮ್ಮ ಹೈಕಮಾಂಡ್ ಯಾವ ಸೂಚನೆಯನ್ನೂ ಕೊಟ್ಟಿಲ್ಲ. ಜಿಲ್ಲೆಯ ಎಲ್ಲರನ್ನೂ ಒಟ್ಟಾಗಿಸಿ ಅಭ್ಯರ್ಥಿ ಆಯ್ಕೆ ಮಾಡೋ ಸೂಚನೆ ಕೊಟ್ಟಿದೆ. ಅದನ್ನು ಶಿರಸಾವಹಿಸಿ ನಮ್ಮ ಜಿಲ್ಲೆಯ ಶಾಸಕರು, ಮುಖಂಡರು ನಿರ್ವಹಿಸುವುದಾಗಿ ಮಂಡ್ಯದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಿಎಂ ಆಹ್ವಾನಿಸದೆ ರಾಜಕೀಯ:
ಅಯೋಧ್ಯೆಯಲ್ಲಿ ಜ. ೨೨ರಂದು ಶ್ರೀರಾಮಂದಿರ ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡದೆ ಬಿಜೆಪಿಗರು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಇಂತಹ ನಡವಳಿಕೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಶ್ರೀರಾಮ ಎಲ್ಲರಿಗೂ ಸೇರಿದ ದೇವರು. ರಾಮಮಂದಿರ ಕಟ್ಟಿರುವುದಕ್ಕೆ ಬಿಜೆಪಿಯವರಿಗಿಂತ ನಾವೇ ಹೆಚ್ಚು ಖುಷಿ ಪಡುತ್ತೇವೆ. ರಾಮಮಂದಿರ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾವಣ ಮಾತ್ರ ಅಲ್ಲ ಸಿದ್ದರಾಮಯ್ಯ ಕೂಡ ರಾಮನ ವಿರೋಧಿ ಎಂಬ ಹೇಳಿಕೆ ನೀಡಿರುವ ಮಾಜಿ ಸಚಿವ ಸುನೀಲ್ ಕುಮಾರ್ಗೆ ಟಾಂಗ್ ನೀಡಿದ ಸಚಿವರು, ಪಾಪ... ಸುನೀಲ್ ಬಹಳ ಹೈ ಟೋನ್ ಬಳಸಿ ನೋಡಿದರು. ಆದರೆ, ಪಕ್ಷದ ಅಧ್ಯಕ್ಷನೂ ಆಗಲಿಲ್ಲ, ವಿಪಕ್ಷ ನಾಯಕನೂ ಆಗಲಿಲ್ಲ. ಈಗ ಇನ್ನೇನಾದರೂ ಹುದ್ದೆ ತಪ್ಪಿಹೋಗಬಹುದು ಎಂಬ ಭಯದಿಂದ ಸುನೀಲ್, ಅಶ್ವಥ್ ನಾರಾಯಣ್ ಎಲ್ಲಾ ಕೂಗಾಡ್ತಾ ಇದ್ದಾರೆ. ಅವರೆಲ್ಲರೂ ನನಗೂ ಆತ್ಮೀಯರೇ, ಪಾಪ ಕೂಗ್ಲಿ ಬಿಡಿ ಎಂದು ಪ್ರತಿಕ್ರಿಯಿಸಿದರು.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.