ಎಲ್ಲಾ ತ್ಯಾಗಕ್ಕೆ ನಾಗೇಂದ್ರ ಸಿದ್ಧ: ಡಿಕೆ

Published : Aug 28, 2026, 06:51 AM IST
dk shivakumar and B Nagendra

ಸಾರಾಂಶ

ವಾಲ್ಮೀಕಿ ಹಗರಣದ ಆರೋಪಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪಾದಯಾತ್ರೆಗೆ ಸಜ್ಜಾಗುತ್ತಿರುವ ನಡುವೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗುರುವಾರ ದೆಹಲಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಜೊತೆ ಮಹತ್ವದ ಮಾತುಕತೆ ನಡೆಸಿದರು.

 ಬೆಂಗಳೂರು : ವಾಲ್ಮೀಕಿ ಹಗರಣದ ಆರೋಪಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪಾದಯಾತ್ರೆಗೆ ಸಜ್ಜಾಗುತ್ತಿರುವ ನಡುವೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗುರುವಾರ ದೆಹಲಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಜೊತೆ ಮಹತ್ವದ ಮಾತುಕತೆ ನಡೆಸಿದರು.

ಸುಮಾರು ಒಂದೂಕಾಲು ಗಂಟೆ ನಡೆದ ಮಾತುಕತೆ ವೇಳೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು, ಖಾಲಿ ಇರುವ ಸಚಿವ ಸ್ಥಾನ ತುಂಬುವುದು ಹಾಗೂ ಸಂಪುಟದಲ್ಲಿ ಬದಲಾವಣೆ ಮಾಡುವ ವಿಚಾರಗಳ ಕುರಿತು ಸುದೀರ್ಘ ಮಾತುಕತೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ. ಬಳಿಕ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಜೊತೆಗೂ ಅವರು ಮಾತುಕತೆ ನಡೆಸಿದರು. ಈ ಮಧ್ಯೆ, ಸಚಿವ ನಾಗೇಂದ್ರ ಕೂಡ ದೆಹಲಿಗೆ ಆಗಮಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಆದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಅಥವಾ ಸೋಮವಾರ ಮತ್ತೆ ದೆಹಲಿಗೆ ಆಗಮಿಸುವ ಸೂಚನೆಯನ್ನು ಇದೇ ವೇಳೆ ನೀಡಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರದ ಚರ್ಚೆ ಅಪೂರ್ಣಗೊಂಡಿದೆ ಎಂದು ಭಾವಿಸಲಾಗುತ್ತಿದೆ. ಭಾನುವಾರ ಮತ್ತೆ ಆಗಮಿಸಲಿರುವ ಮುಖ್ಯಮಂತ್ರಿಯವರು ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರ ಜತೆ ಚರ್ಚಿಸಿದ ನಂತರ ಈ ವಿಚಾರದಲ್ಲಿ ಸ್ಪಷ್ಟತೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಾಗೇಂದ್ರ ಪಕ್ಷದ ಆಸ್ತಿ:

ರಾಹುಲ್ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್‌, ನಾಗೇಂದ್ರ ಅವರು ಪಕ್ಷ ನಿಷ್ಠ ನಾಯಕ. ಅವರು ಪಕ್ಷಕ್ಕೆ ಆಸ್ತಿ, ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಅಗತ್ಯ ಬಿದ್ದರೆ ಪಕ್ಷದ ಹಿತಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧರಾಗಿದ್ದಾರೆ. ನಾಗೇಂದ್ರ ಅವರ ವಿಷಯದಲ್ಲಿ ಬಿಜೆಪಿಯವರು ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ಹೈಕಮಾಂಡ್ ಮುಂದೆ ವಾಸ್ತವಾಂಶ ಹೇಳಿದ್ದೇನೆ. ಈ ಬಗ್ಗೆ ಹೈಕಮಾಂಡ್‌ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವ ಮೂಲಕ ಕುತೂಹಲ ಮೂಡಿಸಿದರು.

ರಾಹುಲ್ ಗಾಂಧಿ ಭೇಟಿ ವೇಳೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದೇನೆ. ರಾಹುಲ್ ಗಾಂಧಿಯವರು ಗಿಗ್ ವರ್ಕರ್ಸ್‌ ಸಮಾವೇಶದಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಬರಲಿದ್ದಾರೆ ಎಂದರು.

ಹಾಗಿದ್ದರೆ, ಸಚಿವ ಸ್ಥಾನಕ್ಕೆ ನಾಗೇಂದ್ರ ಅವರು ರಾಜೀನಾಮೆ ನೀಡುತ್ತಾರಾ ಎಂಬ ಪ್ರಶ್ನೆಗೆ, ವಿಪಕ್ಷಗಳ ಒತ್ತಡಕ್ಕೆ ಮಣಿಸುವ ಸಮಯ ಬಂದಿಲ್ಲ. ಕೇಂದ್ರ ಸಚಿವರ ಮೇಲೆ ಕೇಸ್ ಇಲ್ವಾ? ನಾಗೇಂದ್ರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲು ಬಿಜೆಪಿಯವರು ಸಿದ್ಧರಿಲ್ಲ. ನಾವು ಎಸ್ಟಿ ಸ್ಥಾನಗಳನ್ನು ಹೆಚ್ಚು ಗೆದ್ದಿದ್ದೇವೆ ಎಂಬ ಕಾರಣಕ್ಕಾಗಿ ಬಿಜೆಪಿ ಈ ರೀತಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿ, ಪಾದಯಾತ್ರೆ ಮಾಡುವವರನ್ನು ತಡೆಯಲು ಸಾಧ್ಯವಿಲ್ಲ. ವಿಧಾನಸಭೆಯಲ್ಲಿ ಚರ್ಚೆಗೆ ಅವರು ಸಿದ್ಧ ಇಲ್ಲ. ಸುಮ್ಮನೆ ಮಾತನಾಡುತ್ತಾರೆ. ಭೋವಿ ಹಗರಣ ಸೇರಿ ಹಲವು ವಿಷಯ ಇತ್ತು, ಅದಕ್ಕೆ ಭಯದಲ್ಲಿ ಚರ್ಚೆ ಮಾಡಲಿಲ್ಲ ಎಂದು ಆರೋಪಿಸಿದರು.

ಸಚಿವ ನಾಗೇಂದ್ರ ದೆಹಲಿಗೆ

ನವದೆಹಲಿ: ವಾಲ್ಮೀಕಿ ನಿಗಮ ಹಗರಣದಲ್ಲಿ ಆರೋಪ ಹೊತ್ತಿರುವ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಯ ವಿಚಾರ ಈಗ ದೆಹಲಿ ಹೈಕಮಾಂಡ್‌ ಅಂಗಳ ತಲುಪಿದೆ. ಸಚಿವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯವರು ಪಾದಯಾತ್ರೆಗೆ ಸಜ್ಜಾಗುತ್ತಿರುವಂತೆಯೇ ಸಚಿವ ನಾಗೇಂದ್ರ ಕೂಡ ದೆಹಲಿಗೆ ತೆರಳಿದ್ದು, ಅಗತ್ಯ ಬಿದ್ದರೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಈ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ.

ನಿಗಮ ಮಂಡಳಿ ಸ್ಥಾನಕ್ಕಾಗಿ ಇಂದು 10 ಶಾಸಕರು ದಿಲ್ಲಿಗೆ

ಬೆಂಗಳೂರು: ಪ್ರಬಲ ಆಕಾಂಕ್ಷಿಗಳಾಗಿದ್ದರೂ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದ ಹಿರಿಯ ಶಾಸಕರ ಗುಂಪು ಇದೀಗ ತಮಗೆ ಕನಿಷ್ಠ ಪಕ್ಷ ಪ್ರಮುಖ ನಿಗಮ ಮಂಡಳಿ ಸ್ಥಾನ ನೀಡುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಶುಕ್ರವಾರ ದೆಹಲಿಗೆ ತೆರಳಲು ಮುಂದಾಗಿದೆ. ಪ್ರಮುಖವಾಗಿ ರಾಯದುರ್ಗ ಶಾಸಕ ಅಶೋಕ್‌ ಪಟ್ಟಣ್‌, ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್‌, ಹೊನ್ನಾಳಿ-ನ್ಯಾಮತಿ ಶಾಸಕ ಡಿ.ಜಿ. ಶಾಂತನಗೌಡ ಮೊದಲಾದವರು ದೆಹಲಿ ಭೇಟಿಗೆ ಸಜ್ಜಾಗಿದ್ದಾರೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ದಸರಾ ಗಜಪಯಣಕ್ಕೆ ಅದ್ಧೂರಿ ಚಾಲನೆ - ವೀರನಹೊಸಹಳ್ಳಿಯಿಂದ ಮೈಸೂರಿಗೆ ಬಂದ 9 ಆನೆಗಳು
ಪಾರ್ಕ್‌ಗಳ ತಿದ್ದುಪಡಿ ಕಾಯ್ದೆ ತಿರಸ್ಕಾರಕ್ಕೆ ಗೌರ್ನರ್‌ಗೆ ಮನವಿ