ಜನರು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Nov 09, 2025, 02:30 AM IST
Kanaka Dasa 3 | Kannada Prabha

ಸಾರಾಂಶ

ಶೋಷಣೆಗೆ ಒಳಗಾಗುವುದನ್ನು ತಡೆಗಟ್ಟಲು ಜನರು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು, ಆಗ ಮಾತ್ರ ಮನುಷ್ಯರಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶೋಷಣೆಗೆ ಒಳಗಾಗುವುದನ್ನು ತಡೆಗಟ್ಟಲು ಜನರು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು, ಆಗ ಮಾತ್ರ ಮನುಷ್ಯರಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಸಂತಶ್ರೇಷ್ಠ ಕನಕದಾಸ ಜಯಂತಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಮಾನತೆ ನಿರ್ಮಾಣಕ್ಕಾಗಿ ಭಾಗ್ಯಗಳನ್ನು ಜಾರಿಗೆ ತಂದಿದ್ದೆ. ಈಗ ಗ್ಯಾರಂಟಿ ಯೋಜನೆಗಳ ಮೂಲಕ ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ಜನರು ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು.

ಸಮಾಜದಲ್ಲಿನ ಅಸಮಾನತೆ ವಿರುದ್ಧ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌, ಕನಕದಾಸರು ಧ್ವನಿ ಎತ್ತಿದ್ದಾರೆ. ಆದರೂ ನಮ್ಮದು ಚಲನಶೀಲವಲ್ಲದ ಜಡ್ಡುಗಟ್ಟಿದ ಜಾತಿ ವ್ಯವಸ್ಥೆಯಾಗಿದೆ.ಎರಡೂವರೆ ಸಾವಿರ ವರ್ಷಗಳಿಂದಲೂ ಜಾತಿ ವ್ಯವಸ್ಥೆ ಹೋಗಲಾಡಿಸಲು ಅನೇಕ ಮಹನೀಯರು ಶ್ರಮಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಷಾದಿಸಿದರು.

ಸಮೀಕ್ಷೆಗೆ ವಿರೋಧ ಸರಿಯಲ್ಲ

ಸಚಿವ ಶಿವರಾಜ ತಂಗಡಗಿ ಮಾತನಾಡಿ, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಮುಂದುವರಿದ ಜಾತಿಗಳಲ್ಲಿನ ಬಡವರ ಸ್ಥಿತಿಗತಿ ತಿಳಿದುಕೊಳ್ಳಲು ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲು ಮುಂದಾದಾಗ ಬಹಳಷ್ಟು ವಿರೋಧ ವ್ಯಕ್ತವಾದರೂ ಸಿದ್ದರಾಮಯ್ಯ ಅವರ ಪ್ರಯತ್ನದಿಂದಾಗಿ ಸಮೀಕ್ಷೆ ನಡೆಯಿತು ಎಂದರು.

ಇದೇ ಸಂದರ್ಭದಲ್ಲಿ ವಿಜಯಪುರದ ಚಂದ್ರಕಾಂತ ಬಿಜ್ಜರಗಿ ಅವರಿಗೆ ಕನಕಶ್ರೀ ಪ್ರಶಸ್ತಿ, ಮೈಸೂರಿನ ವಿದ್ವಾಂಸೆ ಡಾ.ಅಕ್ಕ ಮಹಾದೇವಿ ಅವರಿಗೆ ಕನಕ ಗೌರವ, ಬೀದರ್‌ನ ಡಾ.ರವೀಂದ್ರ ಲಂಜವಾಡಕರ್‌ ಅವರಿಗೆ ಕನಕ ಯುವ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರೊ.ಎ.ಎಂ.ಶಿವಸ್ವಾಮಿ ಅವರು ಕನಕದಾಸರ ಬಗ್ಗೆ ಉಪನ್ಯಾಸ ನೀಡಿದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಎಂ.ಈರಣ್ಣ ಮತ್ತಿತರರು ಉಪಸ್ಥಿತರಿದ್ದರು.ಪ್ರಶಸ್ತಿಯ ಮಾನದಂಡ ಪಾಲನೆಯಿಲ್ಲ

ಸರ್ಕಾರದ ಪ್ರಶಸ್ತಿಗಳು ಅರ್ಹರನ್ನು ತಲುಪುತ್ತಿಲ್ಲ. ಮಾನದಂಡಗಳನ್ನು ಸರಿಯಾಗಿ ಅನುಸರಿಸುತ್ತಿಲ್ಲ ಎಂದು ಕನಕಶ್ರೀ ಪ್ರಶಸ್ತಿಗೆ ಭಾಜನರಾದ ವಿಜಯಪುರದ ಚಂದ್ರಕಾಂತ ಬಿಜ್ಜರಗಿ ಅಸಮಾಧಾನ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ನಾನು ಸಂಶೋಧನೆ ನಡೆಸುತ್ತಿದ್ದರೂ ಯಾರೂ ಗುರುತಿಸಿರಲಿಲ್ಲ. ಕ್ಷೇತ್ರ ಭೇಟಿ ನಡೆಸದವರನ್ನೂ ಪ್ರಶಸ್ತಿಗೆ ಪರಿಗಣಿಸಲಾಗುತ್ತಿದೆ. 100 ರಿಂದ 150 ಪುಟ ಸಂಪಾದನೆ ಮಾಡಿದವರಿಗೂ ಪ್ರಶಸ್ತಿ ಸಿಗುತ್ತಿವೆ. ನೈಜ ಸಂಶೋಧಕರಿಗೆ ಪ್ರಶಸ್ತಿ, ಸ್ಥಾನಮಾನ ಸಿಗುತ್ತಿಲ್ಲ. ಉಡುಪಿಯಲ್ಲಿ ಕನಕನ ಕಿಂಡಿಯನ್ನು ಕೃತಕವಾಗಿ ಸೃಷ್ಟಿಸಲಾಗಿದೆ. ಇದನ್ನು ಹೇಳಿದರೆ ಕೆಲವರು ಜೀವ ಬೆದರಿಕೆ ಹಾಕುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.ವಿವಿಗೆ ಹೆಸರಿಡಿ, ಅಕಾಡೆಮಿ ಸ್ಥಾಪಿಸಿ

ರಾಜ್ಯದ ಯಾವುದಾದರೊಂದು ಉತ್ತಮ ವಿಶ್ವವಿದ್ಯಾನಿಲಯಕ್ಕೆ ಕನಕದಾಸರ ಹೆಸರನ್ನು ನಾಮಕರಣ ಮಾಡಬೇಕು. ಕುರುಬರ ಸಾಂಸ್ಕೃತಿಕ ಕಲೆಗಳು ನಾಶವಾಗುತ್ತಿದ್ದು ಪುನರುಜ್ಜೀವನಕ್ಕಾಗಿ ಅಕಾಡೆಮಿ ಸ್ಥಾಪಿಸಬೇಕು ಎಂದು ತಿಂಥಿಣಿ ಮಠದ ಸಿದ್ದರಾಮಾನಂದ ಸ್ವಾಮೀಜಿ ಮನವಿ ಮಾಡಿದರು.

ರಾಜ್ಯಾದ್ಯಂತ ಕನಕಭವನಗಳು ನಿರ್ಮಾಣವಾಗಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸರ್ಕಾರದಿಂದ ಕನಕ ಭವನ ನಿರ್ಮಿಸಬೇಕು ಎಂದು ಶ್ರೀಗಳು ಸರ್ಕಾರವನ್ನು ಕೋರಿದರು.

PREV

Recommended Stories

ರಾಜ್ಯದ 1.12 ಕೋಟಿ ಜನರಿಂದ ಮತಚೋರಿ ಬಗ್ಗೆ ಕೈ ಸಹಿ ಸಂಗ್ರಹ
ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಖಡಕ್‌ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ರಾಮಲಿಂಗಾರೆಡ್ಡಿ ಆಗ್ರಹ