ಬೆಂಗಳೂರು: ಕಳೆದ ಚುನಾವಣೆಯಲ್ಲಿ ಕಡಿಮೆ ಮತಗಳಿಕೆಯಾದ ಮತಗಟ್ಟೆ ಹಾಗೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಮತಗಳಿಸಲು ಕಾರ್ಯತಂತ್ರ ರೂಪಿಸಲಾಗಿದೆ. ನಮ್ಮ ಕಾರ್ಯಕರ್ತರು, ನಮ್ಮ ಸಂಘಟನೆ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವು ಸಾಧಿಸಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ಪದೇಪದೆ ಅಭ್ಯರ್ಥಿ ಬದಲಾವಣೆ ಮತ್ತು ಸಂಘಟನೆ ಕೊರತೆಯಿಂದ ಕಾಂಗ್ರಸ್ಗೆ ಹಿನ್ನಡೆಯಾಗುತ್ತಿತ್ತು. ಆದರೆ, ಈ ಬಾರಿ ಕಡಿಮೆ ಮತಗಳಿಕೆಯಾದ ಮತಗಟ್ಟೆಗಳನ್ನು ಗುರುತಿಸಿ ಹೆಚ್ಚಿನ ಮತಗಳಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಸಂಘಟನೆ ಚೆನ್ನಾಗಿದ್ದು, ಈ ಬಾರಿ ಸೌಮ್ಯಾ ರೆಡ್ಡಿ ಗೆಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 5 ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಕನಸು ಕಾಣುವುದು ತಪ್ಪು ಎನ್ನುವುದಕ್ಕಾಗುವುದಿಲ್ಲ. ಬಿಜೆಪಿ ಬೆಂಗಳೂರಿನ ಜನರಿಗೆ ಏನು ಮಾಡಿದೆ ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಹಲಾಲ್, ಹಿಜಾಬ್ ಎನ್ನುತ್ತಲೇ ಕಾಲಹರಣ ಮಾಡಿದರು. ಭ್ರಷ್ಟಾಚಾರವೇ ಅವರ ಸಾಧನೆಯಾಯಿತು. ಜನರಿಗೆ ಬೇಕಾಗುವ ಕೆಲಸವನ್ನೇ ಮಾಡಲಿಲ್ಲ. ಹಾಗೇನಾದರೂ ಕೆಲಸ ಮಾಡಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಕೇವಲ 65 ಸ್ಥಾನ ಬರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಬೆಂಗಳೂರು ಸೇರಿದಂತೆ ನಗರ ಭಾಗದಲ್ಲಿ ಬಿಜೆಪಿ ಕಡೆ ಜನರ ಒಲವಿದೆ ಎಂದು ಹೇಳುತ್ತಾರೆ. ಆದರೆ, ನಗರದ ಜನರು ಬಿಜೆಪಿ ಬಗ್ಗೆ ರೋಸಿ ಹೋಗಿದ್ದಾರೆ. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸುಳ್ಳು ಹೇಳಿಯೇ ಗೆಲುವು ಸಾಧಿಸಿತು. ಈಗ ಅವರ ಬಂಡವಾಳ ಜನರಿಗೆ ಗೊತ್ತಾಗಿದೆ. ಬಿಜೆಪಿ ತಪ್ಪುಗಳು, ನಮ್ಮ ಪ್ರಣಾಳಿಕೆ, ಸೌಮ್ಯಾ ರೆಡ್ಡಿ ಅವರ ಭ್ರಷ್ಟಾಚಾರ ರಹಿತ ಗುಣ ಈ ಬಾರಿ ಚುನಾವಣೆಯಲ್ಲಿ ನಮಗೆ ಅನುಕೂಲವಾಗಲಿದ ಎಂದು ತಿಳಿಸಿದರು.ಬಿಜೆಪಿಯವರು ಬೆಲೆ ಏರಿಕೆ ನಿಯಂತ್ರಿಸುತ್ತೇವೆ ಎಂದರು. ಆದರೆ, ಗಾಳಿ, ಬೆಳಕು ಬಿಟ್ಟು ಉಳಿದೆಲ್ಲವಕ್ಕೂ ತೆರಿಗೆ ಹಾಕಿದ್ದಾರೆ. ರಾಜ್ಯದಿಂದ ಬಿಜೆಪಿಯ 25 ಮಂದಿ ಸಂಸದರಿದ್ದರೂ ಬರ ಪರಿಹಾರದ ಬಗ್ಗೆ ಒಂದೇ ಒಂದು ಮಾತನಾಡಲಿಲ್ಲ. ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಕೇಂದ್ರದ ಬಿಜೆಪಿ ನಾಯಕರು ಚುನಾವಣೆ ಬಂದರೆ ಸಾಕು ಕರ್ನಾಟಕಕ್ಕೆ ಬರುತ್ತಾರೆ. ಆದರೆ, ಬರ ಪರಿಹಾರ ಮಾತ್ರ ಕೊಡುತ್ತಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರೂ ಸೇರಿದಂತೆ ಬಿಜೆಪಿಯ ಸಂಸದರೆಲ್ಲರೂ ಸಂಸತ್ನಲ್ಲಿ ರಾಜ್ಯದ ಬಗ್ಗೆ ಮಾತನಾಡುವುದಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲಿ ಎಂದು ತಿಳಿಸಿದರು.ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಕೂಡ ಜನರಲ್ಲಿ ಮತಯಾಚಿಸಿ, ಸಂಸದರಾದ ಮೇಲೆ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭಿವೃದ್ಧಿ ಕುರಿತಂತೆ ತಮ್ಮ ಗುರಿಯನ್ನು ಜನರಿಗೆ ವಿವರಿಸಿದರು.