;Resize=(412,232))
ಬೆಂಗಳೂರು : ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿದ್ದರಿಂದ ಕಾಂಗ್ರೆಸ್ ವಲಯದಲ್ಲಿ ಬುಧವಾರ ಇಡೀ ದಿನ ಹೈಡ್ರಾಮಾ ಸೃಷ್ಟಿಯಾಗಿತ್ತು.
ನಾಗೇಂದ್ರ ರಾಜೀನಾಮೆಗೆ ಸಿದ್ಧವಾಗಿದ್ದಾರೆ ಎಂಬ ವದಂತಿ ಹಬ್ಬಿದ್ದ ಹಿನ್ನೆಲೆಯಲ್ಲಿ ‘ಅಂಥ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೊನೆಗೆ ರಾಜ್ಯದ ಯಾವ ಹಿರಿಯ ನಾಯಕರೂ ತಮಗೆ ಅಂತಹ ಸೂಚನೆ ನೀಡಿಲ್ಲ’ ಎಂದು ಖುದ್ದು ನಾಗೇಂದ್ರ ಸ್ಪಷ್ಟನೆ ನೀಡಬೇಕಾಗಿ ಬಂತು. ಇದಾದ ನಂತರವೂ ಶೀಘ್ರ ಕಿರುಗಾತ್ರದ ಸಂಪುಟ ಪುನಾರಚನೆ ನಡೆಯಲಿದ್ದು, ಆ ವೇಳೆ ನಾಗೇಂದ್ರ ಅವರ ಬದಲಾವಣೆ ವಿಚಾರದ ಬಗ್ಗೆ ಹೈಕಮಾಂಡ್ ನಿಲುವು ತಿಳಿಯಲು ರಾಜ್ಯ ಕಾಂಗ್ರೆಸ್ ವಲಯದಲ್ಲಿ ಕೆಲ ಹಿರಿಯ ನಾಯಕರು ಚಿಂತಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಸೆ.1 ರಿಂದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಘೋಷಿಸಿದ್ದು, ಮತ್ತೊಂದೆಡೆ ಸಿಬಿಐ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದೆ. ಒಂದು ವೇಳೆ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರೆ ಸರ್ಕಾರಕ್ಕೆ ವಿನಾ ಕಾರಣ ಮುಜುಗರವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ನಾಗೇಂದ್ರ ಅವರ ರಾಜೀನಾಮೆ ಪಡೆಯುವುದು ಸೂಕ್ತ ಎಂಬ ಭಾವನೆ ಕಾಂಗ್ರೆಸ್ ಕೆಲ ಹಿರಿಯ ನಾಯಕರ ವಲಯದಲ್ಲಿದೆ.
ಮೂಲಗಳ ಪ್ರಕಾರ, ಹಿರಿಯ ನಾಯಕರು ನಾಗೇಂದ್ರ ಅವರನ್ನು ಬುಧವಾರ ಸಂಪರ್ಕಿಸಿ ಇಂತಹದೊಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇಂತಹ ಸಲಹೆ ಬಂದ ಹಿನ್ನೆಲೆಯಲ್ಲಿ ಗಾಬರಿಯಾದ ನಾಗೇಂದ್ರ ಅವರು ಕೂಡಲೇ ಹೈಕಮಾಂಡ್ನಲ್ಲಿ ಪ್ರಭಾವಿಯಾಗಿರುವ ತಮ್ಮ ಆಪ್ತ ನಾಯಕರಿಗೆ ಈ ಮಾಹಿತಿ ನೀಡಿ ಮಾರ್ಗದರ್ಶನ ಕೋರಿದ್ದಾರೆ ಎನ್ನಲಾಗಿದೆ.
ಇದಕ್ಕೆ ಆ ವರಿಷ್ಠರು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಹೀಗಾಗಿ ನಾಗೇಂದ್ರ ಅವರು ‘ರಾಜೀನಾಮೆ ಚರ್ಚೆಯೇ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಸಚಿವ ನಾಗೇಂದ್ರ, ‘ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರ. ಮುಖ್ಯಮಂತ್ರಿ ಕಚೇರಿಯಿಂದ ನನಗೆ ಯಾವುದೇ ಕರೆ ಬಂದಿಲ್ಲ ಮತ್ತು ರಾಜೀನಾಮೆಗೆ ಸಂಬಂಧಿಸಿ ಯಾವುದೇ ಚರ್ಚೆ ನಡೆದಿಲ್ಲ. ನಿಮ್ಮ ಸಹಕಾರ ಕೋರುತ್ತೇನೆ’ ಎಂದು ಹೇಳಿದರು.
ಇಷ್ಟಾಗಿಯೂ ಶೀಘ್ರವೇ ಕಿರು ಗಾತ್ರದ ಸಂಪುಟ ಪುನಾರಚನೆ ಹಾಗೂ ಆ ವೇಳೆ ನಾಗೇಂದ್ರ ಅವರ ರಾಜೀನಾಮೆ ಪಡೆಯುವ ಸಾಧ್ಯತೆಯ ಬಗ್ಗೆ ಇನ್ನೂ ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆದಿದೆ.
ಹಾಲಿ ಸಚಿವ ಸಂಪುಟದಲ್ಲಿ ಮಹಿಳೆಗೆ ಅವಕಾಶ ನೀಡಲಾಗಿಲ್ಲ. ಅಲ್ಲದೆ, ತಾವು ಸೂಚಿಸಿದ ಕುರುಬ ಸಮುದಾಯದ ಶಾಸಕ ಬಸವರಾಜ ಶಿವಣ್ಣನವರ್ಗೆ ಸಂಪುಟದಲ್ಲಿ ಅವಕಾಶ ನೀಡದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುನಿದಿದ್ದಾರೆ. ಸಂಪುಟದಲ್ಲಿ ಒಂದು ಸ್ಥಾನ ತುಂಬಲು ಅವಕಾಶವಿದೆ. ನಾಗೇಂದ್ರ ರಾಜೀನಾಮೆ ನೀಡಿದರೆ ಆಗ ಮಹಿಳೆಯೊಬ್ಬರಿಗೆ ಹಾಗೂ ಶಿವಣ್ಣನವರ್ಗೆ ಅವಕಾಶ ನೀಡಿ ಸಮಸ್ಯೆ ಬಗೆಹರಿಸಬಹುದು ಎಂಬ ಭಾವನೆ ರಾಜ್ಯ ಹಿರಿಯ ನಾಯಕರಲ್ಲಿದೆ.
ಆದರೆ, ಇದಕ್ಕೆ ಹೈಕಮಾಂಡ್ ಇನ್ನೂ ತನ್ನ ಒಪ್ಪಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ವಿಚಾರದ ಬಗ್ಗೆ ಹೈಕಮಾಂಡ್ ನಿಲುವು ತಿಳಿದುಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.