ನವದೆಹಲಿ: ವೈದ್ಯಕೀಯ ಪ್ರವೇಶ, ಪರೀಕ್ಷೆ, ಹಿಂದುತ್ವ, ರೈತರ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಸರ್ಕಾರದ ವೈಫಲ್ಯವನ್ನು ಎತ್ತಿತೋರಿಸುವ ನಿಟ್ಟಿನಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಮಾಡಿದ್ದ ಪ್ರಖರ ಭಾಷಣದ ಪ್ರಮುಖ ಅಂಶಗಳಿಗೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಕತ್ತರಿ ಹಾಕಿದ್ದಾರೆ.ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ‘ಹಿಂದುಗಳೆಂದು ತಮ್ಮನ್ನು ಕರೆದುಕೊಳ್ಳುವವರು ನಿರಂತರವಾಗಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಇಂಥವರು ಹಿಂದೂಗಳೇ ಅಲ್ಲ. ಬಿಜೆಪಿ ಮತ್ತು ಆರ್ಎಸ್ಎಸ್ ಹಿಂಸಾಚಾರದಲ್ಲಿ ತೊಡಗಿಸಿಕೊಂಡಿವೆ’ ಎಂದು ಕಿಡಿಕಾರಿದ್ದರು. ಅಲ್ಲದೆ ಪ್ರವೇಶ ಪರೀಕ್ಷೆಗಳನ್ನು ಸರ್ಕಾರ ಉದ್ಯಮ ಮಾಡಿಕೊಂಡಿದೆ. ಅಗ್ನಿವೀರ್ ಯೋಜನೆ ಯುವಜನರನ್ನು ಯೂಸ್ ಆ್ಯಂಡ್ ಥ್ರೋ ರೀತಿ ಪರಿಗಣಿಸುವ ಯೋಜನೆಯಾಗಿದೆ. ರೈತರ ಸಮಸ್ಯೆಗಳಿಗೆ ಸರ್ಕಾರ ಧ್ವನಿಯಾಗುತ್ತಿಲ್ಲ ಎಂದೆಲ್ಲಾ ಕಿಡಿಕಾರಿದ್ದರು.ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯಾಗಿ ಬಿಜೆಪಿಯ ನಾಯಕರು ಸರಣಿಯಾಗಿ ತಿರುಗೇಟು ನೀಡಿದ್ದರು.
ಅದರ ಬೆನ್ನಲ್ಲೇ ಕಡತದಲ್ಲಿ ಸೇರ್ಪಡೆ ಮಾಡುವ ರಾಹುಲ್ ಭಾಷಣದಿಂದ ಹಿಂದುತ್ವ, ನೀಟ್, ಅಗ್ನಿವೀರ್, ರೈತರ ಸಮಸ್ಯೆ ಉಲ್ಲೇಖಿಸಿ ಉದ್ಯಮಿಗಳ ಟೀಕೆ, ಬಿಜೆಪಿ, ಆರ್ಎಸ್ಎಸ್ ಮೊದಲಾದ ಅಂಶಗಳನ್ನು ತೆಗೆದುಹಾಕುವಂತೆ ಸ್ಪೀಕರ್ ಓಂ ಬಿರ್ಲಾ ಸೂಚಿಸಿದ್ದಾರೆ.ಮೋದಿ ಜಗತ್ತಿಂದ ಪದ ತೆಗೀಬಹುದು, ವಾಸ್ತವ ಜಗತ್ತಿಂದಲ್ಲ: ರಾಹುಲ್ನವದೆಹಲಿ: ಲೋಕಸಭೆಯಲ್ಲಿನ ತಮ್ಮ ಚೊಚ್ಚಲ ಭಾಷಣದ ಅಂಶಗಳನ್ನು ಕಡತದಿಂದ ತೆಗೆದು ಹಾಕಿದ ಸ್ಪೀಕರ್ ಓಂ ಬಿರ್ಲಾ ಕ್ರಮಕ್ಕೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಅವನ್ನು ಪುನಃ ಕಡತಕ್ಕೆ ಸೇರಿಸುವಂತೆ ಸ್ಪೀಕರ್ಗೆ ಪತ್ರ ಬರೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ‘ನರೇಂದ್ರ ಮೋದಿ ಅವರ ಜಗತ್ತಿನಿಂದ ಈ ಪದಗಳನ್ನು ತೆಗೆದು ಹಾಕಬಹುದು. ಆದರೆ ವಾಸ್ತವತೆಯಿಂದಲ್ಲ. ನಾನು ಏನು ಹೇಳಬೇಕಿತ್ತೋ ಅದನ್ನು ಹೇಳಿದ್ದೇನೆ, ಅದೇ ಸತ್ಯಾಂಶ. ಅವರಿಗೆ ಎಷ್ಟು ಬೇಕೋ ಅಷ್ಟು ಪದಗಳನ್ನು ತೆಗೆದುಹಾಕಲಿ. ಅದರೆ ಸತ್ಯಕ್ಕೆ ಜಯವಾಗಲಿದೆ. ಮೋದಿಯ ಜಗತ್ತಿನಿಂದ ಪದಗಳನ್ನು ತೆಗೆಯಬಹುದು, ಆದರೆ ವಾಸ್ತವ ಜಗತ್ತಿನಲ್ಲಿ ಸತ್ಯವನ್ನು ತೆಗೆದು ಹಾಕಲಾಗದು’ ಎಂದರು.ಸ್ಪೀಕರ್ಗೆ ಪತ್ರ:
ಇದೇ ವೇಳೆ ತಮ್ಮ ಭಾಷಣದಿಂದ ಆಯ್ದ ಭಾಗಗಳನ್ನು ತೆಗೆದು ಹಾಕಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿ ಸ್ಪೀಕರ್ಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, ‘ಸಭಾಪತಿಗಳು ಸದಸ್ಯರ ಭಾಷಣದ ಕೆಲವೊಂದು ಪದಗಳನ್ನು ತೆಗೆದು ಹಾಕುವ ಅಧಿಕಾರ ಹೊಂದಿದ್ದಾರೆ. ಅಂಥ ಪದಗಳು ಯಾವುವು ಎಂಬುದನ್ನು ಲೋಕಸಭಾ ಕಲಾಪ ನಿಯಮ 380ರಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಇದೀಗ ಆಯ್ದ ಪದಗಳನ್ನು ತೆಗೆದು ಹಾಕುವುದು ತರ್ಕಬದ್ಧವಾಗಿಲ್ಲ. ಇದನ್ನು ನೋಡಿ ನನಗೆ ಆಘಾತವಾಗಿದೆ. ಹೀಗಾಗಿ ತೆಗೆದುಹಾಕಿರುವ ಪದಗಳನ್ನು ಮರಳಿ ಕಡತದಲ್ಲಿ ಸೇರಿಸಬೇಕು’ ಎಂದು ಒತ್ತಾಯಿಸಿದ್ದಾರೆ.