ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದ ಸಿಐಡಿ ತನಿಖೆ ವಿಷಯದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ತಾಳಿರುವ ನಿಲುವಿಗೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಪಕ್ಷ, ಇದೀಗ ಸಭಾಪತಿಗಳನ್ನೇ ಬದಲಿಸುವ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಬೆಂಗಳೂರು : ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದ ಸಿಐಡಿ ತನಿಖೆ ವಿಷಯದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ತಾಳಿರುವ ನಿಲುವಿಗೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಪಕ್ಷ, ಇದೀಗ ಸಭಾಪತಿಗಳನ್ನೇ ಬದಲಿಸುವ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಬಲದಿಂದಾಗಿ ಬಸವರಾಜ ಹೊರಟ್ಟಿ ಸಭಾಪತಿ ಹುದ್ದೆಯಲ್ಲಿದ್ದಾರೆ. ಸದನದ ಅತ್ಯಂತ ಹಿರಿಯ ಸದಸ್ಯರಾಗಿರುವ ಹೊರಟ್ಟಿ ಬಗ್ಗೆ ಎಲ್ಲರಿಗೂ ಗೌರವ ಇದೆ. ಹಾಗಾಗಿ ಒಂದು ರೀತಿಯಲ್ಲಿ ಎಲ್ಲ ಪಕ್ಷಗಳ ಸಹಮತದ ಮೇರೆಗೆ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಒಂದು ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಬೇರೆ ಪಕ್ಷದ ಜೊತೆ ಗುರುತಿಸಿಕೊಂಡಿರುವ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಲ್ಲಿ ಮುಂದುವರೆಸುವ ಬದಲು ತಮ್ಮ ಪಕ್ಷದವರೇ ಆ ಸ್ಥಾನದಲ್ಲಿರಲಿ ಎಂಬ ಯೋಚನೆ ಆರಂಭಿಸಿದೆ. ಸಿ.ಟಿ.ರವಿ ಪ್ರಕರಣದ ಬಳಿಕ ಇಂಥ ಯೋಚನೆಗೆ ಮತ್ತಷ್ಟು ಬಲಬಂದಿದೆ.
ಪ್ರಸ್ತುತ ವಿಧಾನ ಪರಿಷತ್ತಿನ ಒಟ್ಟು 75 ಸದಸ್ಯರ ಪೈಕಿ ಸದ್ಯ ಕಾಂಗ್ರೆಸ್ 33, ಬಿಜೆಪಿ 29, ಜೆಡಿಎಸ್ 8 ಸದಸ್ಯರನ್ನು ಹೊಂದಿದೆ, ಇದರ ಜೊತೆಗೆ ಒಬ್ಬರು ಪಕ್ಷೇತರ ಹಾಗೂ ಒಬ್ಬರು ಸಭಾಪತಿಯಾಗಿದ್ದಾರೆ. ಮೂರು ಸ್ಥಾನಗಳು ಖಾಲಿ ಇವೆ.
ಬಿಜೆಪಿ-ಜೆಡಿಎಸ್ಗಿದೆ ಬಲ: ಸದ್ಯ ಸಭಾಪತಿ ಹೊರಟ್ಟಿ ಸೇರಿ ಬಿಜೆಪಿ-ಜೆಡಿಎಸ್ ಮೈತ್ರಿ ಬಲ 38 ಇರುವುದರಿಂದ ಸಭಾಪತಿ ಸ್ಥಾನ ಬದಲಿಸಲು ಸಾಧ್ಯವಿಲ್ಲ. ಈ ತಿಂಗಳು 27ರಂದು ಜೆಡಿಎಸ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರ ಸದಸ್ಯತ್ವ ಅವಧಿ ಮುಗಿಯಲಿದ್ದು, ನಂತರ ಮೈತ್ರಿ ಬಲ 37ಕ್ಕೆ ಇಳಿಯಲಿದೆ. ಹಾಲಿ ಖಾಲಿ ಇರುವ ಮೂರು ನಾಮನಿರ್ದೇಶನ ಸ್ಥಾನ ಹಾಗೂ ತಿಪ್ಪೇಸ್ವಾಮಿ ಅವರಿಂದ ಖಾಲಿಯಾಗಲಿರುವ ಸ್ಥಾನಕ್ಕೆ ಸರ್ಕಾರ ನಾಮಕರಣ ಮಾಡಿದರೆ ಕಾಂಗ್ರೆಸ್ ಬಲ 37ಕ್ಕೆ ಏರಲಿದೆ. ಜತೆಗೆ ಒಬ್ಬ ಪಕ್ಷೇತರ ಸದಸ್ಯರ ಬೆಂಬಲ ಪಡೆದರೆ ಮಾತ್ರ ಬಹುಮತದ ಸಂಖ್ಯೆ 38 ಏರಿಕೆಯಾಗಿ ಸಭಾಪತಿ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡಬಹುದು.
ಆದರೆ ಪಕ್ಷೇತರ ಸದಸ್ಯರಾಗಿರುವ ಲಖನ್ ಜಾರಕಿಹೊಳಿ ಅವರ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಾಲ್ಕು ನಾಮನಿರ್ದೇಶನ ಸ್ಥಾನಗಳನ್ನು ಭರ್ತಿ ಮಾಡಿದ ಮೇಲೆಯೇ ಸ್ಪಷ್ಟ ಚಿತ್ರಣ ದೊರೆಯಲಿದೆ.
ಸಭಾಪತಿ ಹೊರಟ್ಟಿ ಬದಲಿಗೆ
ಕಾಂಗ್ರೆಸ್ನಲ್ಲಿ ಗಂಭೀರ ಚಿಂತನೆ
- ಸಿ.ಟಿ. ರವಿ-ಲಕ್ಷ್ಮಿ ಅವಾಚ್ಯ ಶಬ್ದ ಕೇಸ್ ಪರಿಣಾಮ
- ಈಗ ಆಗದಿದ್ದರೂ ಭವಿಷ್ಯದಲ್ಲಿ ಯತ್ನ
ಬದಲಾವಣೆ ಹೇಗೆ?
- ಸದ್ಯ ಮೇಲ್ಮನೇಲಿ ಬಿಜೆಪಿ ಮೈತ್ರಿಗಿದೆ ಬಹುಮತ
- ಈ ಪರಿಸ್ಥಿತಿಯಲ್ಲಿ ಹೊರಟ್ಟಿ ಬದಲಾವಣೆ ಅಸಾಧ್ಯ
- 4 ಹೊಸ ಸದಸ್ಯರ ನೇಮಕ ಬಳಿ ಸ್ಪಷ್ಟ ಚಿತ್ರಣ
- ಲಖನ್ ಬೆಂಬಲಿಸಿದ್ರೆ ಸಭಾಪತಿ ಬದಲಾವಣೆ ಸುಲಭ
- ಕಾಂಗ್ರೆಸ್ ವಲಯದಲ್ಲಿ ಈ ಬಗ್ಗೆ ಗಂಭೀರ ಚಿಂತನೆ