ಮಾಲೂರು :
ದೇಶದ ಅಭಿವೃದ್ಧಿ, ರಕ್ಷಣೆಗಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಬಿ. ಕೃಷ್ಣಪ್ಪ ಹೇಳಿದರು.ಅವರು ತಾಲೂಕಿನ ಅಂಚೆಮುಸ್ಕೂರು, ಚಿಕ್ಕತಿರುಪತಿ, ಜಯಮಂಗಲ, ದೊಡ್ಡಶಿವಾರ, ನೊಸಗೆರೆ, ಎಚ್.ಹೊಸಕೋಟೆ ಗಳಲ್ಲಿ ಎನ್ಡಿಎ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಹಗರಣ ರಹಿತ ಆಡಳಿತ
ರಾಜ್ಯ ಸರ್ಕಾರವು ಐದು ಗ್ಯಾರಂಟಿ ಮೇಲೆ ಚುನಾವಣೆ ಎದುರಿಸಲು ಹೊರಟಿದೆ. ಇದು ಲೋಕಸಭೆ ಚುನಾವಣೆಯಾಗಿದ್ದರೂ ಹಿಂದಿನ ಹತ್ತು ವರ್ಷದ ಯುಪಿಎ ಸರ್ಕಾರದ ಸಾಧನೆ ಪಟ್ಟಿ ಮೇಲೆ ಮತ ಕೇಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅಭಿವೃದ್ಧಿಕ್ಕಿಂತ ಭ್ರಷ್ಟಾಚಾರದ ಪಟ್ಟಿಯೇ ಅಲ್ಲಿ ಹೆಚ್ಚಾಗಿದೆ. ಮೋದಿ ಅವರ ಹಗರಣ ರಹಿತ ಹತ್ತು ವರ್ಷದ ಆಡಳಿತದ ಜತೆಯಲ್ಲಿ ಕೇವಲ 11 ತಿಂಗಳು ಪ್ರಧಾನಿಯಾಗಿದ್ದ ದೇವೇಗೌಡರ ಜನಹಿತ ಆಡಳಿತ ನಮಗೆ ಶ್ರೀ ರಕ್ಷೆಯಾಗಿದೆ ಎಂದರು.
ದೇಶ ಮೊದಲು ಎನ್ನುವ ಈ ಇಬ್ಬರು ಪ್ರಭಾವಿ ಶಕ್ತಿಗಳು ಒಂದು ವೇದಿಕೆಯಲ್ಲಿ ಕೈಜೋಡಿಸಿರುವುದು ನಮ್ಮ ಸೌಭಾಗ್ಯ ಎಂದ ಕೃಷ್ಣಪ್ಪ ಅವರು ೩ ನೇ ಅವಧಿಯಲ್ಲಿ ದೇಶದ ಹಿತದೃಷ್ಟಿಯಿಂದ ಮೋದಿ ಅವರು ಕಠಿಣ ಕ್ರಮ ತೆಗೆದುಕೊಳ್ಳಲಿದ್ದು, ಅವರ ಕೈ ಬಲ ಪಡಿಸಲು ಮೈತ್ರಿ ಪಕ್ಷದ ಪ್ರತಿ ಕಾರ್ಕಕರ್ತರು ಕ್ಷೇತ್ರದ ಮನೆಮನೆಗೆ ತೆರಳಿ ಎನ್ಡಿಎ ಅಭ್ಯರ್ಥಿ ಮಲ್ಲೇಶ್ ಬಾಬು ಪರವಾಗಿ ಮತ ಚಲಾಯಿಸಬೇಕೆಂಬ ಅರಿವು ಮೂಡಿಸಬೇಕು ಎಂದರು.ಮೊದಲು ದೇಶ ಎಂಬ ಮಂತ್ರ
ಜೆಡಿಎಸ್ ಮುಖಂಡ ಜಿ.ಇ. ರಾಮೇಗೌಡ ಮಾತನಾಡಿ ದೇಶದ ಭವಿಷ್ಯಕ್ಕಾಗಿ ನಡೆಯಲಿರುವ ಈ ಚುನಾವಣೆಯು ರಾಜ್ಯ ರಾಜಕಾರಣದಲ್ಲೂ ಮಹತ್ತರ ಬದಲಾವಣೆಗೆ ಕಾರಣವಾಗಲಿದೆ. ದೇಶ ಮೊದಲು ಎನ್ನುವ ಬಿಜೆಪಿ-ಜೆಡಿಎಸ್ ಪಕ್ಷ ಮೈತ್ರಿ ಪವಿತ್ರವಾಗಿದ್ದು, ರಾಜಕಾರಣಕ್ಕಾಗಿ ಹುಟ್ಟಿಕೊಂಡಿರುವ ಕೋಮುವಾದ, ಜಾತ್ಯತೀತತೆ ಈಗ ಅಪ್ರಸ್ತುತ. ಏಕೆಂದರೆ ಹೆಚ್ಚಿನ ಜಾತಿ ರಾಜಕಾರಣ, ಒಂದು ಸಮುದಾಯದ ಓಲೈಕೆ ಮಾಡುತ್ತಿರುವುದೇ ಕಾಂಗ್ರೆಸ್. ಈ ಕ್ಷೇತ್ರ ಮೊದಲಿನಿಂದಲೂ ಜೆಡಿಎಸ್ ಬೆಲ್ಟ್ ಆಗಿದ್ದು, ಬಿಜೆಪಿ ಮೈತ್ರಿ ಸೇರಿರುವುದರಿಂದ ನಮ್ಮ ಅಭ್ಯರ್ಥಿ ಮಲ್ಲೇಶ್ ಬಾಬು ಗೆಲಿವಿನ ಅಂತರ ಹೆಚ್ಚಾಗಲಿದೆ ಎಂದರು.ಜೆಡಿಎಸ್ ಅಧ್ಯಕ್ಷ ಬಲ್ಲಹಳ್ಳಿ ನಾರಾಯಣಸ್ವಾಮಿ ,ಜಿ.ಪಂ. ಸದಸ್ಯ ಚಿನ್ನಸ್ವಾಮಿಗೌಡ, ಪುರಸಭೆ ಸದಸ್ಯ ವೇಮನ, ಚೀಟಿ ವೇಣುಗೋಪಾಲ್, ಶೇಷಗಿರಿ, ಭಾರತಮ್ಮ ನಂಜುಂಡ, ಅಶ್ವಥನಾರಾಯಣ ಗೌಡ, ದೊಡ್ಡಶಿವಾರ ರಘು, ರಾಮಸ್ವಾಮಿ ರೆಡ್ಡಿ, ಸುರೇಶ್ ಬಾಬು, ಟಿ. ರಾಮಚಂದ್ರ ಇನ್ನಿತರರು ಇದ್ದರು.