ಚಿಕ್ಕಬಳ್ಳಾಪುರ : ಜುಲೈ 15 ರಿಂದ ಆರಂಭವಾಗುವ ಕರ್ನಾಟಕ ವಿಧಾನಸಭಾ ಅಧಿವೇಶನಕ್ಕೆ ಪೂರ್ವಭಾವಿಯಾಗಿ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಅವಲೋಕನಕ್ಕಾಗಿ ಶನಿವಾರ ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಎರಡನೇ ದುಂಡು ಮೇಜಿನ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಗೆ ಬಯಲು ಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಹಾಗೂ ಬೆಂಗಳೂರು ಗ್ರಾಮಾಂತರದ ಮೂರು ಜಿಲ್ಲೆಗಳ ಎಲ್ಲಾ ಚುನಾಯಿತ ಶಾಸಕರನ್ನು ಪಕ್ಷಾತೀತವಾಗಿ ಆಹ್ವಾನಿಸಲಾಗಿತ್ತಾದರೂ ಸಭೆಗೆ ಏಕೈಕ ಶಾಸಕರಾಗಿ ಮುಳಬಾಗಿಲಿನ ಶಾಸಕ ಸಂಮೃದ್ದಿ ಮಂಜುನಾಥ್ ಬಿಟ್ಟರೆ ಯಾವ ಚುನಾಯಿತ ಪ್ರತಿನಿಧಿಗಳು ಸಭೆಗೆ ಬಾರದೆ ಗೈರಾಗಿದ್ದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಆಂಜನೇಯರೆಡ್ಡಿ ಮಾತನಾಡಿ, ಬಯಲು ಸೀಮೆಯ ಈ ಮೂರು ಜಿಲ್ಲೆಗಳು ಬರಪೀಡಿತ ಜಿಲ್ಲೆಗಳೆಂಬ ಹಣೆಪಟ್ಟಿ ಹೊತ್ತಿದ್ದು ಕಳೆದ 20 ವರ್ಷದಿಂದ ರೈತರು ಕೃಷಿಗೆ ನೀರಾವರಿ ಸೌಲಭ್ಯಗಳಿಲ್ಲದೆ ದೂರವಾಗಿದ್ದಾರೆ, ಇದಕ್ಕೆ ಸರ್ಕಾರಗಳ ಆಡಳಿತದಲ್ಲಿನ ತಾರತಮ್ಯಗಳು ಮತ್ತು ನಮ್ಮ ಜನ ಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೇ ಕಾರಣ ಎಂದು ಆರೋಪಿಸಿದರು.
ಕೃಷ್ಣ ಬೈರೇಗೌಡರ ವಿರುದ್ಧ ಆರೋಪ
ಮುಳಬಾಗಿಲು ಶಾಸಕ ಸಂಮೃದ್ದಿ ಮಂಜುನಾಥ್ ಮಾತನಾಡಿ, ಬಯಲು ಸೀಮೆಯ ಜಿಲ್ಲೆಗಳ ನೀರಾವರಿ ಸಮಸ್ಯೆ ಮತ್ತು ಶಾಶ್ವತವಾಗಿ ನೀರಾವರಿ ಮಾಡುವ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸಿದಾಗ ಜಿಲ್ಲೆಯವರೇ ಆದ ಮಂತ್ರಿ ಕೃಷ್ಣ ಭೈರೇಗೌಡರು ಅಡ್ಡಗಾಲು ಹಾಕಿದರು. ಬೆಂಗಳೂರಿನ ಕೊಳಚೆ ನೀರನ್ನು ಮೂರು ಬಾರಿ ಸಂಸ್ಕರಿಸದೆ ಹರಿಸಿರುವ ಪರಿಣಾಮ ಈಗಾಗಲೆ ಇಲ್ಲಿ ಬೆಳೆಯುವ ಹಣ್ಣು ತರಕಾರಿಗಳನ್ನು ಮುಂದಿನ 8 -10 ವರ್ಷಗಳಲ್ಲಿ ಕೊಳ್ಳುವವರೆ ಇರುವುದಿಲ್ಲಾ ಎಂದರು.
ಖಂಡಿತ ಈ ಬಾರಿಯ ಅಧಿವೇಶನದಲ್ಲಿ ಯಾರು ಸಾಥ್ ನೀಡಲಿ ಬಿಡಲಿ ಮತ್ತೆ ಚಿಕ್ಕಬಳ್ಳಾಪುರ, ಕೋಲಾರ, ಹಾಗೂ ಬೆಂಗಳೂರು ಗ್ರಾಮಾಂತರದ ಮೂರು ಜಿಲ್ಲೆಗಳ ಶಾಶ್ವತ ನೀರಾವರಿ ಬಗ್ಗೆ ಧ್ವನಿ ಎತ್ತುತ್ತೇನೆ ಎಂದರು.ಸುದ್ದಿಗೋಷ್ಟಿಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮಳ್ಳೂರು ಹರಿಶ್, ಉಷಾ ಆಂಜನೇಯ ರೆಡ್ಡಿ,ಸಿ.ಎನ್.ಸುಷ್ಮಾ ಶ್ರೀನಿವಾಸ್, ಯುವಶಕ್ತಿ ಪ್ರಕಾಶ್, ವಿಜಯ ಭಾವರೆಡ್ಡಿ, ಲಕ್ಷ್ಮೀನಾರಾಯಣರೆಡ್ಡಿ, ರೈತ ಸಂಘದ ಜಿ.ಜಿ.ನಾರಾಯಣಸ್ವಾಮಿ, ಸಿಪಿಐ ಎಂ ನ ಲಕ್ಷ್ಮಯ್ಯ,ಕನ್ನಡ ಸೇನೆಯ ರವಿಕುಮಾರ್, ತಿಪ್ಪೇನಹಳ್ಳಿನಾರಾಯಣಸ್ವಾಮಿ, ಮತ್ತಿತರರು ಇದ್ದರು.