ರಾಜ್ಯ ಸರ್ಕಾರಕ್ಕೆ ಬರಗಾಲದ ಬಗ್ಗೆ ಚಿಂತನೆಯಿಲ್ಲ

KannadaprabhaNewsNetwork |  
Published : Nov 07, 2023, 01:30 AM IST

ಸಾರಾಂಶ

ರಾಜ್ಯ ಸರ್ಕಾರಕ್ಕೆ ಬರಗಾಲದ ಬಗ್ಗೆ ಚರ್ಚೆನೂ ಇಲ್ಲ, ಚಿಂತನೆಯೂ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

ರಾಜ್ಯ ಬಿಜೆಪಿಯಿಂದ ಜಿಲ್ಲೆಯಲ್ಲಿ ಬರ ಅಧ್ಯಯನ । ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಶಾಸಕ ಯತ್ನಾಳ್

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ಸರ್ಕಾರಕ್ಕೆ ಬರಗಾಲದ ಬಗ್ಗೆ ಚರ್ಚೆನೂ ಇಲ್ಲ, ಚಿಂತನೆಯೂ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

ತಾಲೂಕಿನಲ್ಲಿ ಬರ ಅಧ್ಯಯನಕ್ಕಾಗಿ ಆಗಮಿಸಿದ್ದ ವೇಳೆ ಸೀಗೇವಾಡಿ ಗ್ರಾಮದ ರೈತ ಮರಿದಾಸನಾಯಕ ಅವರ ಜಮೀನಿನಲ್ಲಿ ಬರ ವೀಕ್ಷಣೆ ಮಾಡಿ, ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಯಾವುದರಲ್ಲಿ ಎಷ್ಟು ಪರ್ಸೆಂಟ್‌ ಬರುತ್ತದೆ, ಯಾವುದರಲ್ಲಿ ದುಡ್ಡು ಮಾಡಿಕೊಳ್ಳಬೇಕು ಎಂಬ ಚಿಂತೆಯಲ್ಲಿ ಸರ್ಕಾರ ತೊಡಗಿದೆ. ಇನ್ನೊಂದೆಡೆ ಶಾಸಕರು, ಮುಖ್ಯಮಂತ್ರಿಯ ಬದಲಾವಣೆಯ ಚಿಂತನೆ ಮಾಡುತ್ತಿದ್ದಾರೆ.ಇವರಿಗೆ ಬರಗಾಲದ ಬಗ್ಗೆ ಚರ್ಚೆನೂ ಇಲ್ಲ, ಚಿಂತನೆಯೂ ಇಲ್ಲ ಎಂದು ಸರ್ಕಾರವನ್ನು ಆರೋಪಿಸಿದರು.

ಲೋಕಸಭೆಗೂ ಮುನ್ನವೇ ಮುಖ್ಯಮಂತ್ರಿ ಸ್ಥಾನದ ಬದಲಾವಣೆಯಾದರೂ ಅಚ್ಚರಿಯಿಲ್ಲ. ಆದ್ದರಿಂದ ಮುಖ್ಯಮಂತ್ರಿಯವರು ತಮ್ಮ ಕುರ್ಚಿ ಕಾಪಾಡುವುದರಲ್ಲಿ ನಿರತರಾಗಿದ್ದಾರೆ. ಉಪಮಖ್ಯಮಂತ್ರಿಯವರು ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ಗದ್ದಲದಲ್ಲಿದ್ದಾರೆ. ಇನ್ನು ಮಾತನಾಡಬಾರದೆಂಬ ಎಚ್ಚರಿಕೆ ಕೊಟ್ಟರೂ ಸಹ ಡಿಕೆಶಿ ಸಿಎಂ ಆಗುತ್ತಾರೆಂದು ಅವರದೇ ಪಕ್ಷದ ಶಾಸಕರೊಬ್ಬರು ಹೇಳಿಕೆ ನೀಡಿದ್ದಾರೆ.ಈಗ ಅವರನ್ನು ಉಚ್ಚಾಟನೆಗೊಳಿಸಲಿ ನೋಡೋಣ ಎಂದು ಹೊಸ ಬಾಂಬ್ ಸಿಡಿಸಿದರು.

ಹೈಬಿಪಿ ಹೈ ಶುಗರ್ ನಿಂದಾಗಿ ಜಾಮೀನು ಪಡೆದು ಡಿ.ಕೆ.ಶಿವಕುಮಾರ್ ಹೊರಗಿದ್ದಾರೆ, ಆರೋಗ್ಯ ಸರಿಹೋದ ಕೂಡಲೇ ಮತ್ತೆ ಜೈಲಿಗೆ ಹೋಗುತ್ತಾರೆ,ಆ ನಿಟ್ಟಿನಲ್ಲಿ ವಕೀಲರ ತಂಡ ದೆಹಲಿಗೆ ಹೋಗಿದೆ, ವಕೀಲರ ತಂಡ ಯಾವ ಫ್ಲೈಟ್ ನಲ್ಲಿ ಹೋಗಿದ್ದಾರೆ ಎಂಬುದನ್ನು ಡಿಸಿಎಂ ಹೇಳಬೇಕು ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.

113 ತಾಲೂಕುಗಳ ಬರ ಘೋಷಿಸಿದವರು, ಈಗ 216 ತಾಲೂಕು ಎಂದು ಹೇಳುತ್ತಿದ್ದು, ಕೇಂದ್ರಕ್ಕೂ ಸರಿಯಾದ ವರದಿಯನ್ನು ಕೊಟ್ಟಿಲ್ಲ, ಬರಗಾಲ ಘೋಷಣೆಗೆ 3 ತಿಂಗಳು ತಡ ಮಾಡಿದ್ದಾರೆ ಎಂದರು. ಜಿಲ್ಲಾಧಿಕಾರಿ ಅವರ ಬಳಿ ಇರುವ ಹಣವನ್ನು ಉಪಯೋಗಿಸುತ್ತಿಲ್ಲ, ಎಸ್ಸಿಎಸ್ಟಿ ಹಣ ತೆಗೆದುಕೊಂಡು ಗ್ಯಾರಂಟಿಗೆ ಹಾಕಿಕೊಂಡು ಆ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿಗೆ ಗೌರವ ಕೊಡುವುದನ್ನು ಕಲಿಯಬೇಕು: ಪ್ರಧಾನಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ದೇಶದ ಪ್ರದಾನಿಗೆ ಸಂವಿಧಾನಾತ್ಮಕವಾಗಿ ಗೌರವ ಕೊಡುವುದನ್ನು ಸಿದ್ದರಾಮಯ್ಯ ಅವರು ಕಲಿಯಬೇಕು. ಮುಖ್ಯಮಂತ್ರಿಗಳು ಪ್ರಧಾನಿ ಭೇಟಿಗೆ ಸಮಯ ತೆಗೆದುಕೊಳ್ಳಬೇಕು, ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಭೇಟಿಗೆ ಒಂದು ವಾರ ಕೂತಿರುತ್ತೀರಾ! ದೇಶದ ಪ್ರದಾನಿ ಭೇಟಿಗೆ ಒಂದೆರಡು ದಿನ ಕೂರಲಿಕ್ಕೆ ಆಗೋಲ್ವಾ? ಸ್ವಲ್ಪ ತಾಳ್ಮೆಯಿಂದ ಕಾದು ಪ್ರದಾನಿ ಭೇಟಿ ಮಾಡಿ ರಾಜ್ಯದ ಪರಿಸ್ಥಿತಿ ಏನಿದೆ, ಬರಗಾಲದ ಸ್ಥಿತಿ ಹೇಗಿದೆ ಎಂದು ತಿಳಿಸಬೇಕು ಎಂದರು.

ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇವರಿಗೆ ಯಾವುದೇ ರೀತಿಯ ರೈತರ ಕಾಳಜಿ ಇಲ್ಲ. ಒಂದು ಕಡೆ ಗ್ಯಾರಂಟಿ ಕೊಡುತ್ತೀರಾ, ಇನ್ನೊಂದು ಕಡೆ ರೈತರಿಗೆ 2 ತಿಂಗಳಾದರೂ ಟಿಸಿ ಕೊಡಲ್ಲ. ತಮ್ಮ ವೈಫಲ್ಯ ಮುಚ್ಚಲಿಕೆ ಮಹಿಷಾಸುರಾನ ಜಾತ್ರೆ ಮಾಡುತ್ತಾರೆ, ಹುಲಿ ಉಗುರು ಚರ್ಚೆ ಮಾಡುತ್ತಾರೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಿಂದ ರೈತರು ಕಣ್ಣೀರು ಹಾಕುತ್ತಿದ್ದಾರೆ ಎಂದು ಅವರು ಸರ್ಕಾರದ ವಿರುದ್ದ ಕಿಡಿ ಕಾರಿದರು.

ರಾಜ್ಯ ಸರ್ಕಾರ ಬರಪರಿಹಾರ ಘೋಷಣೆ ಅಷ್ಟೇ ಅಲ್ಲ, ಕನಿಷ್ಠ ಬರದ ಸರ್ವೆ ಕೂಡ ಮಾಡಿಲ್ಲ, ಈ ಭಾಗದ ಬರ ಅಧ್ಯಯನಕ್ಕೆ ಅಧಿಕಾರಿಗಳು ಇನ್ನೂ ಬಂದಿಲ್ಲ, ಆದರೆ,ರಾಜ್ಯದ ರೈತರ ದ್ಥಿತಿ ಕಂಡು ಸುಮ್ಮನೇ ಕೂರದೇ ಅದ್ಯಯನ ಮಾಡಿ, ಬರದ ವಾಸ್ತವ ಸ್ಥಿತಿ ತಿಳಿದುಕೊಂಡಿದ್ದೇವೆ. ಅಧಿವೇಶನ ಸಂದರ್ಭದಲ್ಲಿ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಸರ್ಕಾರದ ಗಮನಕ್ಕೆ ತರುತ್ತೇವೆ. ವಿರೋಧಪಕ್ಷವಾಗಿ ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದರು.

ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ಬರ ಅಧ್ಯಯನವನ್ನು ಕೈಗೊಂಡಿದ್ದೇವೆ. ಸೋಮವಾರ ಚಾಮರಾಜನಗರ, ಮಂಗಳವಾರ ಮೈಸೂರಿನಲ್ಲಿ ಬರ ಅಧ್ಯಯನ ನಡೆಸಿ ವರದಿಯನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದು ತಿಳಿಸಿದರು.

ಈ ರಾಜ್ಯದ ದೊಡ್ಡ ದುರಂತವೆಂದರೆ ಮಳೆಯಿಲ್ಲ,ವಿದ್ಯುತ್ ಇಲ್ಲ, ಲೋಡ್‌ ಶೆಡ್ಡಿಂಗ್ ಕೂಡ ಬೇಕಾಬಿಟ್ಟಿಯಾಗಿ ಮಾಡುತ್ತಿದ್ದಾರೆ. ರಾತ್ರಿ ಕೇವಲ ಮೂರು ಗಂಟೆ ವಿದ್ಯುತ್ ನೀಡಿ ಲೋಡ್‌ ಶೆಡ್ಡಿಂಗ್‌ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ರೈತರ ಬೆಳೆಗಳು ನೂರರಷ್ಟು ನಾಶವಾಗಿದ್ದು, ಯಾವುದೇ ರೀತಿಯಲ್ಲೂ ಬೆಳೆ ಕೈಗೆ ಬರುವ ಲಕ್ಷಣಗಳಿಲ್ಲ ಎಂದರು.

-------------------

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಯತೀಂದ್ರ ಅವರೇ ನಮ್ಮ ಹೈಕಮಾಂಡ್‌ : ಡಿ.ಕೆ.ಶಿವಕುಮಾರ್‌ ಟಾಂಗ್‌
ನನ್ನ ಸಮಾಧಿ ಅಗೆಯುವುದು ಕಾಂಗ್ರೆಸ್‌ಗೆ ಎಂದೂ ಅಸಾಧ್ಯ : ಮೋದಿ