ಕನ್ನಡಪ್ರಭ ವಾರ್ತೆ ನಾಗಮಂಗಲ
ದೇವರ ಆಶೀರ್ವಾದವಿದ್ದರೆ ಮುಂದೆ ಮಂಡ್ಯದಲ್ಲಿ ಮನೆ ಕಟ್ಟುತ್ತೇನೆ. ನನಗಿಂತ ಅಭಿಗೆ ಮಂಡ್ಯದಲ್ಲಿ ಮನೆ ಕಟ್ಟಲು ತುಂಬಾ ಆಸೆ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಮಂಡ್ಯದಲ್ಲಿ ನಾನು ಬಾಡಿಗೆ ಮನೆಯಲ್ಲಿದ್ದೇನೆ. ಅಂಬರೀಶ್ ಇದ್ದ ಕಾಲದಿಂದಲೂ ಅದೇ ಮನೆಯಲ್ಲಿದ್ದೇನೆ. ಹನಕೆರೆ ಬಳಿ ಭೂಮಿ ತೆಗೆದುಕೊಂಡು ಗುದ್ದಲಿ ಪೂಜೆ ಮಾಡಿ ಮನೆಕಟ್ಟುವ ಆಸೆ ಇತ್ತು. ಅದರಲ್ಲಿಯೂ ರಾಜಕಾರಣ ನಡೆಯಿತು. ಮನೆ ಕಟ್ಟಲು ಪೂಜೆ ಮಾಡಿದರ ಹಿಂದೆಯೇ ಅಡಚಣೆಗಳು, ಸಮಸ್ಯೆಗಳನ್ನು ಸೃಷ್ಟಿ ಮಾಡಿದರು. ಆ ನಂತರದಲ್ಲಿ ಆ ಕಾರ್ಯವನ್ನು ಅಲ್ಲಿಗೇ ಸ್ಥಗಿತಗೊಳಿಸಿದೆ. ದೇವರು ಆಶೀರ್ವಾದ ಮಾಡಿದ್ರೆ ಮುಂದೆ ಮನೆ ಕಟ್ಟೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೆಫೆಯಲ್ಲಿ ಸ್ಫೋಟವನ್ನು ನಿರ್ಲಕ್ಷ್ಯಿಸಬೇಡಿ: ಸುಮಲತಾರಾಮೇಶ್ವರಂ ಕೆಫೆ ಸ್ಫೋಟ ವಿಚಾರವನ್ನು ಯಾರೂ ಲಘುವಾಗಿ ಪರಿಗಣಿಸಬಾರದು, ನಿರ್ಲಕ್ಷಿಸಲೂಬಾರದು ಮತ್ತು ಸಮರ್ಥನೆ ಮಾಡುವ ಕೆಲಸವನ್ನೂ ಮಾಡಬಾರದು. ಇದು ಅತ್ಯಂತ ಭಯಾನಕ ವಿಚಾರ ಎಂದು ಸಂಸದೆ ಸುಮಲತಾ ಅಂಬರೀಶ್ ಆತಂಕ ವ್ಯಕ್ತಪಡಿಸಿದರು.
ಸ್ಫೋಟ ಪ್ರಕರಣವನ್ನು ಪಕ್ಷಾತೀತವಾಗಿ ಎಲ್ಲರೂ ಸೇರಿ ಖಂಡಿಸಬೇಕು. ಕೃತ್ಯವೆಸಗಿದವರಿಗೆ ಕಠಿಣಾತಿ ಕಠಿಣ ಶಿಕ್ಷೆ ಕೊಡಿಸಬೇಕು. ಈ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುವ ಅವಶ್ಯಕತೆ ಇದೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ಕೊಡೋದು. ಅವರ ಪರವಾದ ರೀತಿಯಲ್ಲಿ ಹೇಳಿಕೆ ಕೊಡೋದು ಮಹಾಪರಾಧ ಎಂದು ಸುದ್ದಿಗಾರರಿಗೆ ತಿಳಿಸಿದರು.ಸ್ಫೋಟ ಪ್ರಕರಣವನ್ನು ಬೇಧಿಸಲು ಪೊಲೀಸರು ಚುರುಕಾಗಿ ತನಿಖೆ ನಡೆಸುತ್ತಿದ್ದಾರೆ. ಸ್ಫೋಟದ ಹಿಂದಿರುವವರನ್ನು ಬೇಗ ಬಂಧಿಸುವರೆಂಬ ವಿಶ್ವಾಸವಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕಿಂತ ಹೆಚ್ಚಾಗಿಉಗ್ರವಾದಿ ಅಥವಾ ಆತಂಕವಾದಿಗಳು ಈ ರೀತಿಯ ಕೃತ್ಯಗಳನ್ನ ಮಾಡಬಹುದು. ಯಾರೇ ಆದರೂ ಇದನ್ನು ಉತ್ತೇಜಿಸುವಂತಹ ಹೇಳಿಕೆ ನೀಡಬಾರದು ಎಂದರು.
ಚುಂಚಶ್ರೀಗಳ ಆಶೀರ್ವಾದ ಪಡೆಯಲು ಬಂದೆ:ಕಳೆದ ಬಾರಿ ಚುನಾವಣೆಗೂ ಮೊದಲು ಶ್ರೀಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೆ ಒಳ್ಳೆಯದಾಗಿತ್ತು. ಶುಭವಾಗಿತ್ತು. ಅದೇ ನಂಬಿಕೆ, ವಿಶ್ವಾಸದೊಂದಿಗೆ ಈ ಬಾರಿಯೂ ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.ಭಾನುವಾರ ಶ್ರೀಗಳು ಮಠದಲ್ಲೇ ಇರುತ್ತಾರೆ ಎಂಬ ವಿಷಯ ತಿಳಿದು ನಾನು ಇಲ್ಲಿಗೆ ಬಂದಿರುವೆ. ಶ್ರೀಗಳ ಭೇಟಿ ಹಿಂದೆ ಯಾವುದೇ ಮಹತ್ವದ ವಿಚಾರವಿಲ್ಲ. ಚುನಾವಣಾ ಪ್ರಚಾರ ಆರಂಭಿಸುವ ಉದ್ದೇಶದಿಂದಲೂ ಇಲ್ಲಿಗೆ ಬಂದಿಲ್ಲ. ನಾಗಮಂಗಲದಲ್ಲಿ ನನಗೆ ಒಂದಷ್ಟು ಕಾರ್ಯಕ್ರಮ ಇತ್ತು. ಅದರೊಂದಿಗೆ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನಷ್ಟೇ ಎಂದರು.