ಬೆಂಗಳೂರು : ಕೇಂದ್ರ ಸರ್ಕಾರವು ವಿದ್ಯುತ್‌ ಪ್ರಸರಣ, ಸರಬರಾಜು ನಿಗಮಗಳನ್ನು ಖಾಸಗೀಕರಣ ಮಾಡುವ ಉದ್ದೇಶದಿಂದ ಜಾರಿ ಮಾಡಲು ಹೊರಟಿರುವ ವಿದ್ಯುತ್ ತಿದ್ದುಪಡಿ ಕಾಯಿದೆ-2026 ಅನ್ನು ವಿರೋಧಿಸಿ ಕರ್ನಾಟಕ ವಿದ್ಯುತ್‌ ಪ್ರಸರಣಾ ನೌಕರರ ಸಂಘ ಹಾಗೂ ನೌಕರರ ಒಕ್ಕೂಟವು ಗುರುವಾರ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸಿತು.

ಕೆಪಿಟಿಸಿಎಲ್‌ ಎಂಜಿನಿಯರ್‌ಗಳು, ನೌಕರರು ಪ್ರತಿಭಟನೆ

ಇಂಧನ ಭವನ ಬಳಿ ಕೆಪಿಟಿಸಿಎಲ್‌ ಎಂಜಿನಿಯರ್‌ಗಳು, ನೌಕರರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರವು ಯಾವುದೇ ಕಾರಣಕ್ಕೂ ಈ ಬಿಲ್‌ ತರಬಾರದು. ಇಂಧನ ಇಲಾಖೆ ಸಾರ್ವಜನಿಕರ ಆಸ್ತಿ. ಇದನ್ನು ಖಾಸಗಿಯವರ ಕೈಗೆ ಇಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ರಾಮ್‌ ಪ್ರಸಾತ್ ಮನೋಹರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯಾದ್ಯಂತ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಗಳಿಂದಲೂ ಪ್ರತಿಭಟನೆ ನಡೆಸಲಾಗಿದೆ. ಜತೆಗೆ ಎಸ್ಕಾಂಗಳ ನೌಕರರು ಸಹ ಕೇಂದ್ರದ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.


ಇಂಧನ ಇಲಾಖೆ ಪಾಲಿಗೆ ಮರಣ ಶಾಸನ:

ಕೆಪಿಟಿಸಿಎಲ್‌ ನೌಕರರ ಸಂಘ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ಬಲರಾಂ ಮಾತನಾಡಿ, ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣ ಉದ್ದೇಶ ಹೊಂದಿರುವ ಕಾಯ್ದೆ ಇಂಧನ ಇಲಾಖೆ ಪಾಲಿಗೆ ಮರಣ ಶಾಸನ. ಉದ್ದೇಶಿತ ತಿದ್ದುಪಡಿ ಕಾಯಿದೆ ವಿರುದ್ಧ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ರಾಜ್ಯ ಕೆಪಿಟಿಸಿಎಲ್‌, ಎಸ್ಕಾಂಗಳ ನೌಕರರು, ಎಂಜಿನಿಯರ್‌ಗಳು ಸಹ ಕೂಡಲೇ ಕೇಂದ್ರ ಸರ್ಕಾರ ತಿದ್ದುಪಡಿ ನಿರ್ಧಾರ ಹಿಂಪಡೆಯಬೇಕು ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

ಇಂಧನ ಇಲಾಖೆಯ ಆಸ್ತಿಗಳನ್ನು ಖಾಸಗಿ ಕೈಗೆ ಇಡುವುದು ಅಪಾಯಕಾರಿ ನಡೆ. ಇದರಿಂದ ಮುಂದೆ ವಿದ್ಯುತ್‌ ಗ್ರಾಹಕರು ಸಹ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಇಲಾಖೆಯಡಿಯ ಸಂಸ್ಥೆಗಳು ನೌಕರರು ಶ್ರಮಪಟ್ಟು ಕಟ್ಟಿ ಬೃಹದಾಕಾರವಾಗಿ ಬೆಳೆಸಿದ್ದಾರೆ. ಈಗ ಬೆಳೆದಿರುವ ಸಂಸ್ಥೆಗಳು, ಪ್ರಸರಣ ಜಾಲವನ್ನು ಖಾಸಗಿ ಕೈಗೆ ಇಡುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯುತ್‌ ಪ್ರಸರಣಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಟಿಸಿಎಲ್ ಎಂಜಿನಿಯರ್‌ ಸಂಘದ ಅಧ್ಯಕ್ಷ ಬಸವಣ್ಣ ಸೇರಿದಂತೆ ಹಲವರು ಹಾಜರಿದ್ದರು.