;Resize=(412,232))
ಬೆಂಗಳೂರು : ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಹೊಸದಾಗಿ ಸೃಷ್ಟಿಸಲಾಗಿರುವ ಎರಡು ಖಾತೆಗಳ ಪೈಕಿ ಅನಿವಾಸಿ ಭಾರತೀಯರ ಸಚಿವಾಲಯ (ಎನ್ಆರ್ಐ)ದ ಮಂತ್ರಿ ಸ್ಥಾನ ವಿಧಾನ ಪರಿಷತ್ನ ಕಾಂಗ್ರೆಸ್ ಸದಸ್ಯೆ ಆರತಿ ಕೃಷ್ಣ ಅವರಿಗೆ ಒಲಿಯಲಿದೆಯಾ ಎಂಬ ಚರ್ಚೆ ಶುರುವಾಗಿದೆ.
ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಜೊತೆ ಸಂಪರ್ಕ ಸಾಧಿಸುವುದು, ರಾಜ್ಯದ ಅಭಿವೃದ್ಧಿಗೆ ಅವರಿಂದ ನೆರವು ಪಡೆಯುವುದು, ವಿದೇಶಗಳಲ್ಲಿ ಯಾರಾದರೂ ಕನ್ನಡಿಗರು ಸಂಕಷ್ಟಗಳಿಗೆ ಸಿಲುಕಿದಾಗ ಸ್ಪಂದಿಸುವುದು ಸೇರಿದಂತೆ ಅನಿವಾಸಿ ಭಾರತೀಯ ಕನ್ನಡಿಗರ ಕುಂದು-ಕೊರತೆ ನಿವಾರಿಸುವ ಕೆಲಸವನ್ನು ಆರತಿ ಕೃಷ್ಣ ಅವರು ಮಾಡುತ್ತಾ ಬಂದಿದ್ದಾರೆ. ಇದೇ ಕಾರಣಕ್ಕೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅವರಿಗೆ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷ ಸ್ಥಾನ ನೀಡಿ, ಸಂಪುಟ ದರ್ಜೆ ಸಚಿವರ ಸ್ಥಾನಮಾನ ಕಲ್ಪಿಸಲಾಗಿತ್ತು.
ಇದೀಗ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಎನ್ಆರ್ಐ ಸಚಿವಾಲಯ ತೆರೆಯಲು ಮುಂದಾಗಿರುವ ಹಿನ್ನೆಲೆಯಲ್ಲಿ ಆರತಿ ಕೃಷ್ಣ ಅವರಿಗೆ ಈ ಹೊಸ ಖಾತೆ ಸಿಗುತ್ತಾ ಎಂಬ ಚರ್ಚೆ ಶುರುವಾಗಿದೆ.