ಬಸನಗೌಡ ಪಾಟೀಲ್ ಯತ್ನಾಳ್ ಹಿಂದುಗಳ ಹುಲಿಯಲ್ಲ, ಇಲಿ. ನಿಮ್ಮ ಆಟ ಇನ್ನು ನಡೆಯೋದಿಲ್ಲ : ರೇಣುಕಾಚಾರ್ಯ

KannadaprabhaNewsNetwork |  
Published : Dec 01, 2024, 01:30 AM ISTUpdated : Dec 01, 2024, 05:27 AM IST
14 | Kannada Prabha

ಸಾರಾಂಶ

ಬಸನಗೌಡ ಪಾಟೀಲ್ ಯತ್ನಾಳ್ ಹಿಂದುಗಳ ಹುಲಿಯಲ್ಲ, ಇಲಿ. ನಿಮ್ಮ ಆಟ ಇನ್ನು ಹೆಚ್ಚು ದಿನ‌ ನಡೆಯೋದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.

 ಮೈಸೂರು : ಬಸನಗೌಡ ಪಾಟೀಲ್ ಯತ್ನಾಳ್ ಹಿಂದುಗಳ ಹುಲಿಯಲ್ಲ, ಇಲಿ. ನಿಮ್ಮ ಆಟ ಇನ್ನು ಹೆಚ್ಚು ದಿನ‌ ನಡೆಯೋದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಬಿಜೆಪಿಯ ಬೃಹತ್ ಸಮಾವೇಶ ಮಾಡುತ್ತೇವೆ. ರಾಷ್ಟ್ರ, ರಾಜ್ಯದ ಪ್ರಮುಖ‌ ನಾಯಕರನ್ನು ಸಮಾವೇಶಕ್ಕೆ ಕರೆಸುತ್ತೇವೆ. ಉಪ‌ ಚುನಾವಣೆ ಸೋಲಿನಿಂದ ನೋವಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷವನ್ನು ಸದೃಢಗೊಳಿಸುತ್ತೇವೆ. ಯತ್ನಾಳ್‌ರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಪಕ್ಷದ ಹಿರಿಯ ನಾಯಕರನ್ನು ಒತ್ತಾಯಿಸುತ್ತೇವೆ ಎಂದರು.

ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಬೈದರೆ, ಅದು ಪಕ್ಷದ ವರಿಷ್ಠರನ್ನು ಬೈದಂತೆ. ಏಕೆಂದರೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಪಕ್ಷದ ವರಿಷ್ಠರು. ಇದು ನಿಮಗೆ ಇಷ್ಟವಾಗಿಲ್ಲ ಎಂದರೆ ಪಕ್ಷದಿಂದ ಹೊರಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯತ್ನಾಳ್ ಬಾಯಿ ಚಟಕ್ಕೋಸ್ಕರ ಮಾತನಾಡುತ್ತಿದ್ದಾರೆ. ಹಿಂದುತ್ವದ ಮುಖವಾಡ ಹಾಕಿಕೊಂಡು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಅವರ ಹರಕಲು ಬಾಯಿಯಿಂದ ನನ್ನಂತ ಹಲವು ಮಂದಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಾಯಿತು. ಜೊತೆಗೆ ಉಪ ಚುನಾವಣೆಯಲ್ಲಿ ಸೋಲಲು ನೀನೇ ಕಾರಣ ಎಂದು ಆರೋಪಿಸಿದರು.

ಬಿ.ಎಸ್‌.ಯಡಿಯೂರಪ್ಪ, ಸದಾನಂದಗೌಡ ಹಾಗೂ ವಿಜಯೇಂದ್ರ ಬಗ್ಗೆ ಮಾತನಾಡುವ ನೀವು ವಿಜಯಪುರ ಜಿಲ್ಲೆಯಿಂದ ಎಷ್ಟು ಶಾಸಕರನ್ನು ಗೆಲ್ಲಿಸಿಕೊಂಡು ಬಂದಿದ್ದೀರಾ. ವಿಜಯಪುರ ಜಿಲ್ಲೆಯಲ್ಲಿ ಅವರನ್ನು ಬಿಟ್ಟು ಬೇರೆಯವರು ಯಾರು ಬಿಜೆಪಿಯಿಂದ ಗೆಲ್ಲದಂತೆ ನೋಡಿಕೊಂಡಿದ್ದಾರೆ. ಅದಕ್ಕಾಗಿ ಕಾಂಗ್ರೆಸ್‌ನ ಪ್ರಭಾವಿ ಸಚಿವರೊಂದಿಗೆ ಶಾಮೀಲಾಗಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಸುಫಾರಿ ಪಡೆದು ಹೋರಾಟ:

ಯತ್ನಾಳ್ ಅವರದ್ದು ನಾಲ್ಕು ಜನರ ಒಂದು ಗುಂಪು ಅಷ್ಟೇ. ಅದೊಂದು ತಂಡವಲ್ಲ. ಕಾಂಗ್ರೆಸ್‌ನಿಂದ ಸುಫಾರಿ ಪಡೆದು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ರಾಜಕೀಯಕ್ಕೆ ಬಂದಾಗ ಇನ್ನೂ ಕಣ್ಣು ಬಿಡದ ಅವರು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಸೈಕಲ್ ತುಳಿದು ಪಕ್ಷ ಕಟ್ಟಿದ್ದಾರೆ. ಪಕ್ಷಕ್ಕೆ ನಿಮ್ಮ ಕೊಡುಗೆ ಏನು? ಯಡಿಯೂರಪ್ಪ ಬಿಜೆಪಿ ಅಧ್ಯಕ್ಷರಾಗಿದ್ದಾಗ, 3 ಬಾರಿ ಸಿಎಂ ಆಗಿದ್ದಾಗಲೂ ತೊಂದರೆ ಕೊಟ್ಟಾಯಿತು. ಈಗ ಅವರ ಪುತ್ರ ವಿಜಯೇಂದ್ರ ಅವರಿಗೆ ತೊಂದರೆ ನೀಡುತ್ತಿದ್ದೀರಿ. ವಿಜಯೇಂದ್ರರನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ನಾವಲ್ಲ, ಕೇಂದ್ರದ ಬಿಜೆಪಿ ನಾಯಕರು ಎಂದರು.

ಯಡಿಯೂರಪ್ಪ, ವಿಜಯೇಂದ್ರ, ಸದಾನಂದಗೌಡ ಅವರ ವಿರುದ್ಧ ಹೋರಾಟ ಮಾಡುವ ಬದಲು ಸರ್ಕಾರದ ಮುಡಾ, ವಾಲ್ಮೀಕಿ ಹಗರಣ ವಿರುದ್ಧ ಹೋರಾಟ ಮಾಡಿ. ಮುಡಾ ಹಗರಣದ ವಿರುದ್ಧ ಬಿಜೆಪಿ ಪಾದಯಾತ್ರೆ ಮಾಡಿದಾಗ ಕಾಂಗ್ರೆಸ್ ಸರ್ಕಾರದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಪಾದಯಾತ್ರೆಯಿಂದ ದೂರ ಉಳಿದಿರಿ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.

ಲೋಕಸಭೆ ಟಿಕೆಟ್ ವಂಚಿತರು, ಸೋತವರು ಒಂದಷ್ಟು ಜನರನ್ನು ಜೊತೆಗಿರಿಸಿಕೊಂಡು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದೀರಿ. ನೀವು ಸೇರಿದಂತೆ ನಿಮ್ಮ ಜೊತೆಗಿರುವವರ ವಿರುದ್ಧ ಕ್ರಮ ಆಗುತ್ತದೆ. ನಿಮ್ಮ ಬ್ಲಾಕ್ ಮೇಲ್ ರಾಜಕಾರಣ ಎಂದಿಗೂ ನಡೆಯುವುದಿಲ್ಲ. ಮಾತೆತ್ತಿದರೆ ಬಸವಣ್ಣನವರ ಬಗ್ಗೆ ಮಾತನಾಡುವ ಯತ್ನಾಳ್ ಅವರನ್ನು ಮಠಾದೀಶರು ಛೀಮಾರಿ ಹಾಕಬೇಕು. ರಾಜ್ಯದ ಜನತೆ ಇಂತಹವರನ್ನು ಕ್ಷಮಿಸುವುದಿಲ್ಲ ಎಂದರು.

ಪಕ್ಷದ ವರಿಷ್ಠರು ಶೀಘ್ರದ ಯತ್ನಾಳ್‌ರನ್ನು ಪಕ್ಷದಿಂದ ಉಚ್ಛಾಟನೆ ಮಾಡುತ್ತಾರೆ. ಈ ಕೆಲಸ ಅತೀ ಶೀಘ್ರದ ಆಗುತ್ತದೆ. ನಮ್ಮ ಪಕ್ಷದಲ್ಲಿ ಆಂತರಿಕ ಶತ್ರುಗಳ ಸಂಖ್ಯೆ ಜಾಸ್ತಿಯಾಗಿದೆ. ಶತ್ರುಗಳು ನಾಶ ಆಗಲೇಬೇಕು. ಅದಕ್ಕಾಗಿ ಚಾಮುಂಡೇಶ್ವರಿ ದೇವಿಯಲ್ಲಿ ಪೂಜೆ ಮಾಡಿದ್ದೇವೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ ಆದಷ್ಟು ಬೇಗ ಯತ್ನಾಳ್ ಉಚ್ಛಾಟನೆ ಖಚಿತ.

- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ

ಶಿಗ್ಗಾವಿ ಸೋಲಿಗೆ ಯತ್ನಾಳ್ ಕಾರಣ

ಯತ್ನಾಳ್ ಅವರ ನಡೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಕುಗ್ಗಿದೆ. ಅವರ ಹೇಳಿಕೆಗಳಿಂದ ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆಗುತ್ತಿದೆ. ಅವರು ಪಕ್ಷಕ್ಕೆ ಮುಜುಗರವಾಗುವ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಯಡಿಯೂರಪ್ಪ ಕುಟುಂಬದ ಬಗ್ಗೆ ದ್ವೇಷ ಇದ್ದರೆ, ಕೇಂದ್ರದ ನಾಯಕರನ್ನು ಭೇಟಿಯಾಗಿ ಚರ್ಚೆ ಮಾಡಿ, ತಮಗೆ ಬೇಕಾದ ಸ್ಥಾನ ಪಡೆದುಕೊಳ್ಳಲಿ ಎಂದು ಶಾಸಕ ಮಡಾಳ್ ವಿರೂಪಾಕ್ಷಪ್ಪ ಹೇಳಿದರು.

ಉಪ ಚುನಾವಣೆಯಲ್ಲಿ ಶಿಗ್ಗಾವಿ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಸೋಲಲು ಯತ್ನಾಳ್ ಕಾರಣ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಗರಣಗಳನ್ನು ಮುಚ್ಚಿಹಾಕಲು ಜೊತೆಗೆ ನಿಂತಿದ್ದಾರೆ ಎಂದು ಅವರು ಆರೋಪಿಸಿದರು.

ಯತ್ನಾಳ್ ಮಾತುಗಳು ಸರಿಯಿಲ್ಲ

ವಿಜಯೇಂದ್ರ ಅವರಿಗೆ ಪಕ್ಷ ರಾಜ್ಯಾಧ್ಯಕ್ಷ ಸ್ಥಾನ ನೀಡಿದೆ. ಅದನ್ನು ನಾವು ಒಪ್ಪಲೇಬೇಕು. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದಾಗಿನಿಂದ ಎಲ್ಲಾ ಕಡೆ ಸಂಚಾರ ನಡೆಸಿ ಪಕ್ಷ ಸಂಘಟಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ನಡೆದ ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣದ ಹೋರಾಟದಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾಗಿದ್ದಲ್ಲದೇ ಆತಂಕಕ್ಕೀಡಾಗಿದ್ದಾರೆ. ಇದು ಪಕ್ಷದ ಹೋರಾಟದಿಂದ ಆಗಿದ್ದು. ಪರಿಸ್ಥಿತಿ ಹೀಗಿರುವಾಗ ಯತ್ನಾಳ್ ಆಡುತ್ತಿರುವ ಮಾತುಗಳು ಸರಿಯಿಲ್ಲ. ಅವರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದರು.

ತಪ್ಪು ಸಂದೇಶ ಹೋಗಿದೆ

ಯತ್ನಾಳ್ ಅವರ ಪಕ್ಷ ವಿರೋಧಿ ನಡೆಯಿಂದ ಜನರಿಗೆ ತಪ್ಪು ಸಂದೇಶ ಹೋಗಿದೆ. ಇದು ಮುಂದಿನ ಚುನಾವಣೆಗೆ ಕಷ್ಟವಾಗಲಿದೆ. ನನ್ನ ಕ್ಷೇತ್ರದಲ್ಲಿ ಚುನಾವಣೆ ಸಂದರ್ಭ ಹೊಡೆತ ಬೀಳಲಿದೆ. ಬಾಯಿಗೆ ಬಂದಂತೆ ಅಧ್ಯಕ್ಷರ ಬಗ್ಗೆ ಮಾತನಾಡುವ ಯತ್ನಾಳ್ ಬಂದು ನನ್ನನ್ನು ಗೆಲ್ಲಿಸುತ್ತಾರಾ?, ಸರ್ಕಾರದ ಹಗರಣದ ವಿರುದ್ಧ, ಬೆಲೆ ಏರಿಕೆ ವಿರುದ್ಧ ಮಾತನಾಡುವ ಬದಲು ವರಿಷ್ಠರ ಬಗ್ಗೆ ಏಕೆ ಮಾತನಾಡುತ್ತೀರಿ?, ನಿಮಗೆ ಏನೇ ಅಸಮಾಧಾನ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಿ ಎಂದು ಮಾಜಿ ಶಾಸಕ ಸಂಪಂಗಿ ಕಿಡಿಕಾರಿದರು.

ಕಾರ್ಯಕರ್ತರಿಗೆ ಗೊಂದಲ

ಬಿಜೆಪಿಯಿಂದ ವಕ್ಫ್ ಬೋರ್ಡ್ ವಿರುದ್ಧ ಮೂರು ತಂಡ ರಚಿಸಿ ಹೋರಾಟ ನಡೆಸಲಾಗುತ್ತಿದೆ. ಆದರೆ, ಯತ್ನಾಳ್ ಅವರು ಪ್ರತ್ಯೇಕ ತಂಡ ಕಟ್ಟಿಕೊಂಡು ಪಕ್ಷ ವಿರೋಧಿ ನಡೆ ಅನುಸರಿಸುವ ಮೂಲಕ ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರ ಮನಸ್ಸು ನೋಯಿಸಿದ್ದಾರೆ. ಅವರ ನಡೆಯಿಂದ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಇದು ಹೀಗೆ ಮುಂದುವರೆದರೆ ನಾವು ಎಂತಹದ್ದೇ ಹೋರಾಟಕ್ಕೂ ಸಿದ್ಧ ಎಂದು ಬಿಜೆಪಿ ಮೈಸೂರು ನಗರಾಧ್ಯಕ್ಷ, ಮಾಜಿ ಶಾಸಕ ಎಲ್.ನಾಗೇಂದ್ರ ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು