ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳಿಂದಲೇ ಬೆಂಗಳೂರು ಜಲಮಂಡಳಿಗೆ ₹188 ಕೋಟಿ ನೀರಿನ ಶುಲ್ಕ ಬಾಕಿ

KannadaprabhaNewsNetwork | Updated : Dec 05 2024, 04:51 AM IST

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೆಂಗಳೂರು ಜಲಮಂಡಳಿಯು ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು ಬಾಕಿ ಉಳಿಸಿಕೊಂಡಿರುವ ₹188 ಕೋಟಿ ನೀರಿನ ಬಿಲ್‌ ವಸೂಲಿಗೆ ಮುಂದಾಗಿದೆ.

 ಬೆಂಗಳೂರು : ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೆಂಗಳೂರು ಜಲಮಂಡಳಿಯು ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು ಬಾಕಿ ಉಳಿಸಿಕೊಂಡಿರುವ ₹188 ಕೋಟಿ ನೀರಿನ ಬಿಲ್‌ ವಸೂಲಿಗೆ ಮುಂದಾಗಿದೆ.

ಕಾವೇರಿ 5ನೇ ಹಂತದ ನೀರು ಪೂರೈಕೆ ಆರಂಭಿಸಿದ ನಂತರ ಬೆಂಗಳೂರು ಜಲಮಂಡಳಿಯ ಮಾಸಿಕ ₹81 ಕೋಟಿ ಆರ್ಥಿಕ ಹೊರೆ ಅನುಭವಿಸುತ್ತಿದೆ. ಹೀಗಾಗಿ, ಹಳೇ ಬಾಕಿ ಬಿಲ್‌ ವಸೂಲಿಗೆ ಇದೀಗ ಜಲಮಂಡಳಿ ಅಧಿಕಾರಿಗಳು ಮುಂದಾಗಿದ್ದಾರೆ.

ಈಗಾಗಲೇ ಸಾರ್ವಜನಿಕರಿಂದ ಬರಬೇಕಾಗಿರುವ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಲಾಗಿದ್ದು, ಬಡ್ಡಿ, ದಂಡ ಸಹಿತ ಪಾವತಿಗೆ ನೋಟಿಸ್‌ ನೀಡಲಾಗಿದೆ. ಅದರೊಂದಿಗೆ ಇದೀಗ ಸರ್ಕಾರದ ವಿವಿಧ ಇಲಾಖೆಗಳು ಬಾಕಿ ಉಳಿಸಿಕೊಂಡ ₹188 ಕೋಟಿ ಮೊತ್ತ ವಸೂಲಿಗೆ ಕ್ರಮ ವಹಿಸಿದೆ.

ಈ ಪೈಕಿ ರಾಜ್ಯ ಸರ್ಕಾರದ ಇಲಾಖೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ₹90.27 ಕೋಟಿ ನೀರಿನ ಬಿಲ್‌ ಬಾಕಿ ಉಳಿಸಿಕೊಂಡಿವೆ. ಉಳಿದಂತೆ ರಕ್ಷಣಾ ಇಲಾಖೆಯು ₹37.08 ಕೋಟಿ, ಕೇಂದ್ರ ಸರ್ಕಾರದ ಇಲಾಖೆಗಳು ₹26.54 ಕೋಟಿ, ಬಿಬಿಎಂಪಿಯು ₹23.36 ಕೋಟಿ ಹಾಗೂ ವಿವಿಧ ಸರ್ಕಾರಿ ಅಂಗ ಸಂಸ್ಥೆಗಳು ₹10.69 ಕೋಟಿ ನೀರಿನ ಬಿಲ್‌ ಪಾವತಿಸದೇ ಬಾಕಿ ಉಳಿಸಿಕೊಂಡಿದೆ.

ಆರ್ಥಿಕ ಇಲಾಖೆಗೆ ಪತ್ರ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಬಾಕಿ ಉಳಿಸಿಕೊಂಡಿರುವ ನೀರಿನ ಬಿಲ್‌ ವಸೂಲಿಗೆ ಬೆಂಗಳೂರು ಜಲಮಂಡಳಿಯು ರಾಜ್ಯ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಬಾಕಿ ಉಳಿಸಿಕೊಂಡಿರುವ ಇಲಾಖೆಗಳಿಗೆ ನೀಡುವ ಅನುದಾನದಲ್ಲಿ ಬಾಕಿ ಬಿಲ್‌ ಮೊತ್ತ ಕಡಿತಗೊಳಿಸಿ ಜಲಮಂಡಳಿಗೆ ಪಾವತಿ ಮಾಡಬೇಕೆಂದು ಮನವಿ ಮಾಡಿದೆ.

ಕೇಂದ್ರ ಸರ್ಕಾರಿ ಇಲಾಖೆಗೆ ನೋಟಿಸ್‌: ಇನ್ನು ಕೇಂದ್ರ ಸರ್ಕಾರದ ಇಲಾಖೆಗಳಿಗೆ ಬಾಕಿ ಇರುವ ನೀರಿನ ಬಿಲ್‌ ಪಾವತಿ ಮಾಡುವಂತೆ ನಿಯಮಾನುಸಾರ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ನೋಟಿಸ್‌ ನೀಡಿಯೂ ಪಾವತಿ ಮಾಡದಿದ್ದರೆ ಕಾನೂನು ಪ್ರಕಾರ ವಸೂಲಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಜಲಮಂಡಳಿಯ ಅಧ್ಯಕ್ಷ ಡಾ। ರಾಮಪ್ರಸಾತ್‌ ಮನೋಹರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಅತಿ ಹೆಚ್ಚು ನೀರಿನ ಬಿಲ್‌ ಬಾಕಿ ಉಳಿಸಿಕೊಂಡ ಇಲಾಖೆಗಳು

ಇಲಾಖೆಬಾಕಿ ಮೊತ್ತ (ಕೋಟಿ ₹)

ರಾಜ್ಯ ಪೊಲೀಸ್‌ ಇಲಾಖೆ65.19

ರಕ್ಷಣಾ ಇಲಾಖೆ37.08

ರೈಲ್ವೆ24.34

ಬಿಬಿಎಂಪಿ23.36

ರಾಜ್ಯ ಶಿಕ್ಷಣ ಇಲಾಖೆ12.97

₹685 ಕೋಟಿ ಕಟ್ಟದ ಜನರು

ನಗರದಲ್ಲಿ 5.17 ಲಕ್ಷ ಮಂದಿ ಕಾವೇರಿ ನೀರಿನ ಬಿಲ್‌ ಬಾಕಿ ಉಳಿಸಿಕೊಂಡಿದ್ದಾರೆ. ₹433.43 ಕೋಟಿ ಬಾಕಿ ಬಿಲ್‌ ಮೊತ್ತ ಹಾಗೂ ₹252.44 ಕೋಟಿ ಬಡ್ಡಿ ಸೇರಿದಂತೆ ಒಟ್ಟು ₹685.87 ಕೋಟಿ ನೀರಿನ ಬಿಲ್‌ ಬಾಕಿ ಇದೆ. ವಸೂಲಿಗೆ ನೋಟಿಸ್‌ ಜಾರಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.