ಸುವರ್ಣ ವಿಧಾನಸಭೆ : ಪ್ರಯಾಣ ದರ ಹೆಚ್ಚಿಸದ ಕಾರಣ ಬಿಎಂಟಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ ಎಂಬುದನ್ನು ಬಹಿರಂಗಪಡಿಸಿರುವ 2024ನೇ ಸಾಲಿನ ಲೆಕ್ಕಪರಿಶೋಧನಾ ವರದಿ, 2014ರಿಂದ ಪ್ರಯಾಣ ದರ ಪರಿಷ್ಕರಿಸದ ಕಾರಣದಿಂದಾಗಿ 649.74 ಕೋಟಿ ರು. ಸಂಭಾವ್ಯ ಸಂಚಾರ ಆದಾಯ ಕಳೆದುಕೊಂಡಿದೆ ಎಂದು ತಿಳಿಸಲಾಗಿದೆ.
ವಿಧಾನಸಭೆಯಲ್ಲಿ ಗುರುವಾರ ಬಿಎಂಟಿಸಿ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆಯ ಲೆಕ್ಕಪರಿಶೋಧನಾ ವರದಿ ಮಂಡಿಸಲಾಯಿತು. ವರದಿಯಲ್ಲಿ ಬಿಎಂಟಿಸಿ ಆರ್ಥಿಕ ನಿರ್ವಹಣೆಯಲ್ಲಿನ ಸಮಸ್ಯೆಗಳ ಕುರಿತು ಹಲವು ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಅದರಂತೆ ನಿಗಮದ ಬಸ್ಗಳ ಪ್ರತಿ ಕಿ.ಮೀ. ಗಳಿಕೆಯು ವೆಚ್ಚಕ್ಕಿಂತ ಕಡಿಮೆಯಿದೆ. ಅದರಂತೆ 2017-18ರಲ್ಲಿ ಶೇ.133.59ರಷ್ಟಿದ್ದ ನಿರ್ವಹಣಾ ವೆಚ್ಚದ ಅನುಪಾತ ಶೇ.133.59ರಿಂದ 2021-22ಕ್ಕೆ ಶೇ. 222.62 ಹೆಚ್ಚಳವಾಯಿತು. ಅದರಲ್ಲಿ ಸಿಬ್ಬಂದಿ ವೆಚ್ಚ ಶೇ. 60, ಇಂಧನ ವೆಚ್ಚ ಶೇ. 27ರಷ್ಟಾಗಿದೆ.
ಅದರ ನಡುವೆ 2014ರಿಂದ ಪ್ರಯಾಣ ದರ ಪರಿಷ್ಕರಣೆ ಮಾಡದ ಕಾರಣದಿಂದಾಗಿ 649.74 ಕೋಟಿ ರು. ಸಂಭಾವ್ಯ ಸಂಚಾರ ಆದಾಯ ಖೋತಾ ಆಗುವಂತಾಗಿದೆ. ಅದರ ಜತೆಗೆ ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಸೇರಿ ಇನ್ನಿತರ ಪ್ರಯಾಣಿಕರಿಗೆ ರಿಯಾಯಿತಿ ಬಸ್ ಪಾಸ್ಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿರುವ ಕಾರಣದಿಂದಾಗಿ ಸರ್ಕಾರವೂ ಬಿಎಂಟಿಸಿಗೆ ನೆರವು ನೀಡಲು ಸಾಧ್ಯವಾಗಿಲ್ಲ. ಇದೆಲ್ಲವೂ ಬಿಎಂಟಿಸಿ ಸಂಸ್ಥೆ ಆರ್ಥಿಕವಾಗಿ ಕುಸಿಯಲು ಕಾರಣವಾಗಿದ್ದು, ಅದನ್ನು ಸರಿಪಡಿಸಲು ಸರ್ಕಾರ ಕಾಲಕಾಲಕ್ಕೆ ಬಜೆಟ್ ಬೆಂಬಲ ನೀಡಬೇಕು ಹಾಗೂ ರಿಯಾಯಿತಿ ಬಸ್ ಪಾಸ್ ಯೋಜನೆಗಳಲ್ಲಿ ಸರ್ಕಾರದ ಪಾಲು ಮರುಪಾವತಿಸಬೇಕು ಎಂದು ವರದಿಯಲ್ಲಿ ಸೂಚಿಸಲಾಗಿದೆ.
ಬಿಎಂಟಿಸಿ ಘಟಕಗಳಲ್ಲಿ ಬಸ್ಗಳ ಸಮರ್ಪಕ ನಿರ್ವಹಣೆ ಮಾಡದ ಕಾರಣದಿಂದಾಗಿ ಬಸ್ಗಳ ಎಂಜಿನ್ಗಳು, ಬ್ಯಾಟರಿ, ಬಿಡಿಭಾಗಗಳ ಕಾರ್ಯಕ್ಷಮತೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಕೆಲ ಬಿಡಿಭಾಗಗಳ ಖರೀದಿ, ಎಂಜಿನ್ಗಳು, ಇಂಧನ ಇಂಜೆಕ್ಷನ್ ಪಂಪ್ಗಳ ಮರುಪರಿಶೀಲನೆಗಾಗಿ ಕೆಎಸ್ಸಾರ್ಟಿಸಿಯನ್ನು ಅವಲಂಬಿಸಿದೆ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.