ಈ ಮಾತುಕತೆ ನಡೆಯುತ್ತಿರುವ ಹೊತ್ತಿಗೆ ಬಾನು ಮುಷ್ತಾಕ್ ಬುಕರ್ ಪ್ರಶಸ್ತಿ ಪಡೆದು ಭಾರತಕ್ಕೆ ಮರಳಿ ಕೆಲವೇ ಗಂಟೆಗಳಾಗಿದ್ದವು. ಮುಂಬಯಿಯಿಂದ ಅವರು ಮಾತಾಡುತ್ತಿದ್ದರು. ಪ್ರಯಾಣದ ಸುಸ್ತು, ಅಪರಾತ್ರಿಯಲ್ಲಿ ಯಾರು ಮಾತಾಡುತ್ತಾರೆ ಅನ್ನುವ ಉದಾಸೀನ ಇಲ್ಲದೇ, 77ರ ಬಾನು ಮಾತಿಗೆ ಮುಂದಾದರು
ಜೋಗಿ
ನಾನು ಅವರಿಗೆ ಪೋನ್ ಮಾಡಿದಾಗ ನಡುರಾತ್ರಿ ಸಮೀಪಿಸುತ್ತಿತ್ತು. ಅವರು ಫೋನೆತ್ತಿಕೊಂಡು ತೆಳುವಾದ ದನಿಯಲ್ಲಿ ಹಲೋ ಅಂದ ನಂತರವೂ ಅಷ್ಟು ಹೊತ್ತಲ್ಲಿ ಫೋನ್ ಮಾಡಬಹುದೇ ಅನ್ನುವ ಆತಂಕದಲ್ಲೇ ಇದ್ದೆ. ನಿಮ್ಮ ಜತೆ ಇಪ್ಪತ್ತೆಂಟು ನಿಮಿಷ ಮಾತಾಡಬೇಕು. ಎಷ್ಟು ಹೊತ್ತಿಗೆ ಫೋನ್ ಮಾಡಲಿ ಅಂತ ಕೇಳಿದೆ. ನನಗೆ ಆಶ್ಚರ್ಯವಾಗುವಂತೆ, ಈಗಲೇ ಮಾತಾಡಿ ಅಂದರು.
ಈ ಮಾತುಕತೆ ನಡೆಯುತ್ತಿರುವ ಹೊತ್ತಿಗೆ ಬಾನು ಮುಷ್ತಾಕ್ ಬುಕರ್ ಪ್ರಶಸ್ತಿ ಪಡೆದು ಭಾರತಕ್ಕೆ ಮರಳಿ ಕೆಲವೇ ಗಂಟೆಗಳಾಗಿದ್ದವು. ಮುಂಬಯಿಯಿಂದ ಅವರು ಮಾತಾಡುತ್ತಿದ್ದರು. ಪ್ರಯಾಣದ ಸುಸ್ತು, ಅಪರಾತ್ರಿಯಲ್ಲಿ ಯಾರು ಮಾತಾಡುತ್ತಾರೆ ಅನ್ನುವ ಉದಾಸೀನ ಇಲ್ಲದೇ, 77ರ ಬಾನು ಮಾತಿಗೆ ಮುಂದಾದರು. ಇಂಥ ಸಂದರ್ಭದಲ್ಲಿ ಕೇಳಲೇಬೇಕಾದ ಪ್ರಶ್ನೆಯೊಂದಿಗೆ ಮಾತು ಆರಂಭಿಸಿದೆ. ಪ್ರಶಸ್ತಿಯ ಕ್ಷಣ ಹೇಗಿತ್ತು ಅನ್ನುವ ಪ್ರಶ್ನೆಗೆ ಅವರು ನೂರಾರು ಸಲ ಉತ್ತರಿಸಿರಬಹುದು. ಅವರೆಂದರು ''ಬುಕರ್ ಅವಾರ್ಡು ಬಂದ ಕ್ಷಣ ಬಹಳ ನಿರೀಕ್ಷೆಯದ್ದಾಗಿತ್ತು. ಆದರೆ ನಾನು ಲಂಡನ್ನಿಗೆ ಹೋಗುವ ಹೊತ್ತಿಗೆ ಬುಕರ್ ಬಂದರೆ ಬರುತ್ತೆ, ಬರದಿದ್ದರೂ ತೊಂದರೆಯಿಲ್ಲ ಅಂದುಕೊಂಡೇ ಹೋಗಿದ್ದೆ. ಗೆಲ್ಲಲೇಬೇಕು ಅನ್ನುವ ಯಾವ ಒತ್ತಡವೂ ಇರಲಿಲ್ಲ. ಆದರೆ ಅಲ್ಲಿಗೆ ಹೋಗಿ, ಬೇರೆ ಬೇರೆ ಗೋಷ್ಠಿಗಳಲ್ಲಿ ಮಾತಾಡಿದ ನಂತರ, ಬುಕರ್ ಗೆಲ್ಲಲೇಬೇಕಾದ ಪ್ರಶಸ್ತಿ ಅನ್ನಿಸಿಬಿಟ್ಟಿತು. ಅಲ್ಲಿಯ ಕ್ರಮವೇ ನನ್ನನ್ನು ಆಕರ್ಷಿಸಿತು. ನನ್ನ ಪುಸ್ತಕವನ್ನು ಅವರು ಕೊಂಡಾಡಿದ ರೀತಿ, ಕನ್ನಡದ ಪುಟ ಓದೋದು, ಇಂಗ್ಲಿಷ್ ಅನುವಾದದ ಒಂದು ಪುಟ ಓದೋದು, ಶಿಸ್ತಾದ ಔತಣ ಕೂಟ, ನಾಜೂಕಾಗಿ ಪ್ಲೇಟು ತಂದಿಟ್ಟು ಎತ್ತಿಕೊಂಡು ಹೋಗುವ ಕ್ರಮ ಎಲ್ಲವೂ ಅಚ್ಚುಕಟ್ಟು. ನನ್ನ ಗ್ರಹಿಕೆಗೆ ಮೀರಿದ್ದೇನೋ ಸುತ್ತಲೂ ನಡೆಯುತ್ತಿತ್ತು. ನಾನು ನೋಡುತ್ತಾ ಇದ್ದೆ. ಬುಕರ್ ಸಮಿತಿಯ ಅಧ್ಯಕ್ಷರು ಬಂದರು. ಸ್ವಲ್ಪ ಸುದೀರ್ಘವಾಗಿ ಮಾತಾಡಿದರು. ಕೊನೆಗೆ ಹಾರ್ಟ್ಲ್ಯಾಂಪ್ ಪುಸ್ತಕಕ್ಕೆ ಬೂಕರ್ ಅಂತ ಘೋಷಿಸಿದರು. ಇದ್ದಕ್ಕಿದ್ದಂತೆ ಎಲ್ಲೆಡೆ ಬೆಳಕಾದಂತೆ ಅನ್ನಿಸಿತು.''
ಅಂಥ ಪುಳಕವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಅದರ ಹಿಂದು ಮುಂದಿನದನ್ನು ಮಾತ್ರ ಸುಲಭವಾಗಿ ವಿವರಿಸಬಹುದು. ಪ್ರಶಸ್ತಿಯ ಹಿಂದಿನ ದಿನ ನಡೆದುದನ್ನು ಬಾನು ವಿವರಿಸಿದರು. `ಯಾರಿಗೆ ಬುಕರ್ ಬರುತ್ತೆ ಅಂತ ಹೇಳಕ್ಕಾಗಲ್ಲ. ಆದರೆ ಎಲ್ಲರೂ ಸ್ವೀಕೃತಿ ಮಾತುಗಳನ್ನು ಸಿದ್ಧಮಾಡಿಟ್ಟುಕೊಳ್ಳಿ ಅಂದಿದ್ದರು. ನನ್ನ ಜತೆಗೆ ಬಂದಿದ್ದ ನನ್ನ ಮಗಳು, ಅಳಿಯಂದಿರೆಲ್ಲ ಲಂಡನ್ ಸುತ್ತಲು ಹೊರಟಾಗ ನಾನು ಪುಟ್ಟ ಭಾಷಣ ಬರೆದಿಟ್ಟುಕೊಂಡಿದ್ದೆ. ಅದನ್ನು ಬಹಳ ಮಂದಿ ಮೆಚ್ಚಿಕೊಂಡರು.'' ಬಾನು ಹಲವು ಪ್ರಥಮಗಳಿಗೆ ಕಾರಣರಾಗಿದ್ದಾರೆ. ಮೊದಲ ಅಂತಾರಾಷ್ಟ್ರೀಯ ಬುಕರ್ ಬಂದಿರೋದರ ಜತೆಗೇ, ಇದೇ ಮೊದಲ ಬಾರಿಗೆ ಸಣ್ಣಕತೆಗಳಿಗೆ ಬುಕರ್ ಬಂದಿದೆ. ಕರ್ನಾಟಕದ ಗ್ರಾಮೀಣ ಪ್ರದೇಶದ ಲೇಖಕಿಗೆ ಬಂದಿದೆ. ಅದಕ್ಕೆ ಕಾರಣ ಅವರ ಕತೆಗಳ ಶಕ್ತಿ. ನಿಮ್ಮ ಕತೆಗಳಲ್ಲಿ ನಿಮ್ಮ ಗಾಯದ ಗುರುತುಗಳಿವೆ ಅಂತ ನನಗೆ ಅನ್ನಿಸುತ್ತಿದೆ, ನೀವದನ್ನು ಕೊಂಚ ವಿವರಿಸಿ ಅಂತ ಕೇಳಿದೆ.
ಬಾನು ನುಸ್ರತ್ ಫತೇ ಆಲಿ ಹಾಡು ನೆನಪಿಸಿಕೊಂಡರು. ಜಗತ್ತಲ್ಲಿ ಯಾರಿಗೆ ಎಲ್ಲೇ ನೋವಾದರೂ ನನ್ನ ಕಣ್ಣು ತುಂಬಿ ಬರುತ್ತದೆ ಅನ್ನುವ ಪ್ರಸಿದ್ಧ ಹಾಡು ಅದು. ಬಾನು ಹೇಳಿದರು ''ಯಾಕೋ ಗೊತ್ತಿಲ್ಲ. ಜಗತ್ತಲ್ಲಿ ಯಾರಿಗೆ ನೋವಾದರೂ ನನಗೂ ನೋವಾಗುತ್ತದೆ. ಸಂಕಟ ಉಕ್ಕಿ ಬರುತ್ತದೆ. ಆ ನೋವನ್ನು ಹೇಳಬೇಕು ಅನ್ನುವ ತುಡಿತ ಎಷ್ಟಿರುತ್ತೆ ಅಂತ ನೀವು ಇಲ್ಲಿ ಇಂಥವರಿಗೆ ನೋವು ಮಾಡಿದ್ದೀರಿ ಅಂತ ಹೇಳದೇ ನಾನು ಉಳಿಯಲಾರೆ. ಅದನ್ನು ಸಹಿಸಿಕೊಂಡಿರೋ ಶಕ್ತಿ ನನಗಿಲ್ಲ.'' ಮಾಯಾ ಏಂಜಲೋ ಬರೆದ ಗೂಡಲ್ಲಿ ಬಂಧಿಯಾದ ಹಕ್ಕಿ ಯಾಕೆ ಹಾಡುತ್ತದೆ ಎಂದು ನನಗೆ ಗೊತ್ತು ಎಂಬ ಸಾಲನ್ನು ನೆನಪಿಸಿದೆ. ಬಾನು ಹೂಂಗುಟ್ಟಿದರು. ಅವರು ಮೊದಲು ಬರೆಯಲು ಶುರುಮಾಡಿದ್ದು ಲಂಕೇಶ್ ಪತ್ರಿಕೆಯಲ್ಲಿಯೇ ಇರಬಹುದಾ ಅಂತ ಅನುಮಾನವಾಯಿತು.
''ಪ್ರಜಾಮತದಲ್ಲಿ'' ಅಂದರು ಬಾನು. ''ಆಗ ನಾನು ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದೆ. ಬೆಂಗಳೂರಲ್ಲಿ ನೆಂಟರ ಮನೆಗೆ ಬಂದಿದ್ದೆ. ಜಯನಗರಕ್ಕೆ ಹೋದಾಗ ದಾರೀಲಿ ಒಂದು ಮನೆ ಕಂಡಿತು. ಹೊರಗೆ ಸಂಪಾದಕರು, ಪ್ರಜಾಮತ ಅಂತ ಬೋರ್ಡು ಇತ್ತು. ಬಾಗಿಲು ತಟ್ಟಿ ಒಳಗೆ ಹೋದೆ. ನಾನು ಕತೆ ಬರೆದಿದ್ದೀನಿ ಅಂದೆ. ಅವರು ಜೋರಾಗಿ ನಕ್ಕರು. ಕಳಿಸಿಕೊಡಿ ಅಂದರು. ನಾನು ಊರಿಗೆ ಹೋಗಿ ಕತೆ ಕಳಿಸಿಕೊಟ್ಟೆ. ಒಂದು ವರ್ಷವಾದರೂ ಪ್ರಿಂಟಾಗಲಿಲ್ಲ. ಕೊನೆಗೆ, ನನ್ನ ಮದುವೆ ಆದ ಹದಿನೈದನೇ ದಿನಕ್ಕೆ ನನ್ನ ಮದುವೆಯ ಉಡುಗೊರೆಯೇನೋ ಎಂಬಂತೆ ಪ್ರಿಂಟಾಯಿತು.'' ಅವರಿಗೆ ನೆನಪಿರುವುದು ಕತೆಯ ಹೆಸರು -ನಾನು ಅಪರಾಧಿ- ಅನ್ನುವುದಷ್ಟೇ. ಕತೆ ಕಳೆದುಹೋಗಿದೆ. ಕಳೆದುಹೋದ ಕತೆಯಷ್ಟು ಒಳ್ಳೆಯ ಕತೆ ಎಲ್ಲಿ ಸಿಗಲು ಸಾಧ್ಯ?
ಹಾಸನಕ್ಕೆ ಮರಳಿದ ಬಾನು ಮದುವೆಯಾದರು. ಮಕ್ಕಳಾದವು. ಸಂಸಾರದ ಪರಿಭ್ರಮಣದಲ್ಲಿ ಸಿಕ್ಕ ಅವರಿಗೆ ಬರೆಯಲು ಅವಕಾಶವೇ ಆಗಲಿಲ್ಲ. ಮದುವೆ ಆಗುತ್ತಿದ್ದಂತೆ ತಾನು ಪಾಠ ಹೇಳುತ್ತಿದ್ದ ಹೈಸ್ಕೂಲಿಗೆ ರಾಜೀನಾಮೆ ಕೊಡುತ್ತಾರೆ. 1974ರಿಂದ 1981ರ ತನಕ ಬರೆವಣಿಗೆ ಇಲ್ಲದ ಮನೆವಾಸ. ಅವರ ಪಾಲಿಗೆ ದುಸ್ತರ ದಿನಗಳು. ಅವರ ಎದೆಯ ಹಣತೆ ಕತೆಯ ನಾಯಕಿ ಅವರೇನಾ ಅಂತ ಲೋಕಕ್ಕೆ ಅನುಮಾನ. ಹೌದೇ ಅಂತ ಕೇಳಿದರೆ ಹೌದು ಮತ್ತು ಅಲ್ಲ ಅಂದರು. ಒಂದು ಸುದೀರ್ಘ ಕತೆ ಹೇಳಿದರು. ''ಕತೆ ನನ್ನದಲ್ಲ, ಅದರ ಕೊನೆ ಮಾತ್ರ ನನ್ನ ಕತೆಯಂತಿದೆ. ನಾನು ಸಂಸಾರದ ವರ್ತುಲದಲ್ಲಿ ಕಳೆದುಹೋಗಿದ್ದೆ. ನನ್ನ ಬೌದ್ಧಿಕ ಚಟುವಟಿಕೆಗಳಿಗೆ ಅವಕಾಶ ಇರಲಿಲ್ಲ. ನನ್ನ ಕಾಲೇಜಲ್ಲೇ ನನಗೆ ಸೀನಿಯರ್ ಆಗಿದ್ದ ಮುಷ್ತಾಕ್ ನಾನು ಚರ್ಚಾಸ್ಪರ್ಧೆಗಳಲ್ಲಿ ಗೆಲ್ಲುವುದು, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ನೋಡಿ, ನನ್ನನ್ನು ಪ್ರೀತಿಸಿ ಮದುವೆಯಾದರು. ನನಗೆ ಅವರೆಂದರೆ ಆಗಲೂ ಅಕ್ಕರೆ, ಈಗಲೂ ಪ್ರೀತಿ. ನನಗೆ ಅತ್ಯುತ್ತಮ ಸಹಚರ್ಯ ಒದಗಿಸಿದರು. ಆದರೆ ಅವಿಭಕ್ತ ಕುಟುಂಬದ ಹಿರಿಯ ಮಗನಾಗಿ ಅವರಿಗೂ ಸಮಸ್ಯೆಗಳಿದ್ದವು. ಮಾಡಬೇಕಾದ್ದನ್ನು ಮಾಡುವ ಸ್ವಾತಂತ್ರ್ಯ ಇರಲಿಲ್ಲ. ಅವರದು ವ್ಯಾಪಾರಿ ಕುಟುಂಬ. ಕನ್ನಡಕ ಮತ್ತು ವಾಚ್ ಅಂಗಡಿಯಿತ್ತು. ಅದನ್ನೇ ನನ್ನ ಗಂಡನೂ ಮುಂದುವರಿಸಿಕೊಂಡು ಹೋಗ್ತಿದ್ದರು. ಅದು ಬಿಟ್ಟರೆ ಬೇರೆ ಆದಾಯ ಇರಲಿಲ್ಲ. ನನಗೂ ಕೆಲಸ ಇರಲಿಲ್ಲ.''
ಇದು ಸ್ಥಿತಿ ಮತ್ತು ಗತಿ. ಇದರಲ್ಲೇ ಮುಂದುವರಿದರೆ ಅಲ್ಲಿ ಕತೆ ಇರುವುದಿಲ್ಲ. ಆದರೆ ಬಾನು ಅವರಿಗೆ ಹಾಗೆ ಮುಂದುವರಿಯುವ ಆಸೆಯಿರಲಿಲ್ಲ. ''ನನ್ನ ಅತ್ತೆ ಮಾವಂದಿರಿಗೆ ಹೆಣ್ಮಕ್ಕಳು ಹೀಗೇ ಇರಬೇಕು ಅಂತ ಇತ್ತು. ಅವರೂ ಒಳ್ಳೆಯವರೇ. ಆದರೆ ನನಗೆ ಬರೆಯೋ ಆಸೆ. ಓದೋ ಆಸೆ. ನನ್ನ ಗಂಡನಿಗೆ ಅದು ಗೊತ್ತಿತ್ತು. ಒಂದು ದಿನ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅಂಗಡಿಗೆ ಬಂದಿದ್ದಾಗ ಮನೆಗೂ ಕರೆದುಕೊಂಡು ಬಂದಿದ್ದರು. ಅವರು ಕೂಡ ಬರೆಯುವ ಬಗ್ಗೆ ಸ್ಫೂರ್ತಿಯ ಮಾತಾಡಿದರು. ಆದರೆ ಪ್ರಚೋದನೆ, ಪ್ರೇರಣೆ ಇಲ್ಲದೇ ಬರೆಯೋದು ಹೇಗೆ? ಈಗ ದಿನಕ್ಕೊಂದು ಕತೆ ಬರೆಯಬಲ್ಲೆ, ಆಗ ತಲೆಯಲ್ಲೇನೂ ಇರಲಿಲ್ಲ.''
ಬರೆಯಬೇಕು ಅನ್ನುವ ಆಸೆ ಮತ್ತು ಏನೂ ಮಾಡುತ್ತಿಲ್ಲ ಎಂಬ ಹತಾಶೆಯಲ್ಲಿದ್ದರು ಬಾನು. ''ನನ್ನ ಐಡೆಂಟಿಟಿ ಕಂಡುಕೊಳ್ಳಬೇಕು ಅನ್ನುವ ಆಸೆಯಿದ್ದರೂ ಆಸ್ಪದ ಇರಲಿಲ್ಲ. ಗಂಡನ ಜತೆ ಜಗಳ ಆಡುತ್ತಿದ್ದೆ. ಅವರಿಗೆ ನನ್ನ ಸಮಸ್ಯೆ ಅರ್ಥವಾದರೂ ಪರಿಹಾರ ಇರಲಿಲ್ಲ. ಅದೇ ಹೊತ್ತಿಗೆ ನಾನು ತಾಯಿಯಾದೆ. ಗಂಡನ ಜತೆ ಜಗಳ ಶುರುಮಾಡಿದೆ. ನನ್ನನ್ನು ಇಲ್ಲಿ ಕಟ್ಟಿ ಹಾಕಿದ್ದೀರಿ, ನನ್ನ ಮೆದುಳಿಗೆ ತುಕ್ಕು ಹಿಡಿಯುತ್ತಿದೆ ಅಂತ ಹೇಳಿದೆ. ಬಹಳ ಡಿಪ್ರೆಸ್ ಆಗಿದ್ದೆ. ನಾನು ಒಡವೆ, ವಸ್ತ್ರ ಬೇಕೆಂದು ಕೇಳಿರಲಿಲ್ಲ. ಬೆಳೆಯೋದಕ್ಕೆ ಅವಕಾಶ ಕೇಳಿದ್ದೆ. ಒಂದು ದಿನ ಇದನ್ನೆಲ್ಲ ತಾಳಲಾರದೆ ಒಂದು ನಿರ್ಧಾರಕ್ಕೆ ಬಂದೆ. ವಾಚ್ ಕ್ಲೀನ್ ಮಾಡಲು ವೈಟ್ ಪೆಟ್ರೋಲ್ ಬಳಸುತ್ತಿದ್ದರು. ಅದು ಮನೆಯಲ್ಲೇ ಇತ್ತು. ಅದನ್ನು ಮೈಮೇಲೆ ಸುರಿದುಕೊಂಡೆ. ಆವೇಶದಲ್ಲಿ ಹಾಗೆ ಮಾಡಿದ್ದೆ. ಅದನ್ನು ನೋಡಿ ನನ್ನ ಗಂಡ ಹೆದರಿದರು, ಬೇಜಾರು ಮಾಡಿಕೊಂಡರು. ನನ್ನ ಮೂರು ತಿಂಗಳ ಮುದ್ದಿನ ಮಗುವನ್ನು ಕಾಲ ಬಳಿ ಮಲಗಿಸಿದರು. ನನ್ನ ಕೈಯಲ್ಲಿದ್ದ ಬೆಂಕಿಪೆಟ್ಟಿಗೆ ಕಿತ್ತುಕೊಂಡರು. ಐದಾರು ನಿಮಿಷಗಳ ನಂತರ ನನ್ನ ಆವೇಶ ಇಳಿಯಿತು. ನಮ್ಮ ಮನೆಯವರಿಗೂ ಎಲ್ಲವೂ ಅರ್ಥವಾಯಿತು. ಮನೆಯ ಹಿರಿಯರು ಎಲ್ಲಾದರೂ ಹೋಗಿ ಬದುಕಿಕೊಳ್ಳಿ ಅಂದರು.'' ಇದನ್ನೆಲ್ಲ ಬರೆದಾಗ ತಾನು ಅನುಭವಿಸಿದ್ದನ್ನೂ ಬಾನು ಹೇಳಿಕೊಂಡರು. ಯಾಕೆ ಬರೀಬೇಕಾಗಿತ್ತು. ಇಂಥದ್ದೆಲ್ಲ ಬರೀತಾರಾ ಮುಂತಾದ ಟೀಕೆಗಳು ಬಂದವು. ಬಾನು ದಿಟ್ಟತನದಿಂದ ಅವನ್ನೆಲ್ಲ ಎದುರಿಸಿದರು. ಇಂಥ ಒತ್ತಡದಲ್ಲಿ ಇರುವ ನೂರಾರು ಹೆಣ್ಣುಮಕ್ಕಳಿಗೆ ಅದೇ ಬದುಕಿನ ಕೊನೆ ಅಲ್ಲ. ಭರವಸೆಯಿಂದ ಹೋರಾಡಬೇಕು ಅನ್ನುವ ಸಂದೇಶ ತಲುಪಬೇಕಾದವರನ್ನು ತಲುಪಿತು. ಸತ್ಯ ಹೇಳುವುದರಲ್ಲಿ ಮಾನ ಹೋಗುವಂಥದ್ದೇನಿಲ್ಲ ಅಂತ ಬಾನು ತೋರಿಸಿಕೊಟ್ಟರು. ನೂರಾರು ಓದುಗರು ಆ ಒಂದು ಕತೆಯಿಂದ ಹುಟ್ಟಿಕೊಂಡರು.
ಈಗೇನು ಬರೆಯುತ್ತಿದ್ದೀರಿ ಅಂತ ಕೇಳಿದೆ. ''ಆತ್ಮಕತೆ ಅರ್ಧ ಮುಗಿದಿದೆ. ಇನ್ನೂ ಹೆಸರಿಟ್ಟಿಲ್ಲ. ಕಾದಂಬರಿಯೂ ಅರ್ಧ ಬರೆದಿದ್ದೇನೆ. ಸದ್ಯದಲ್ಲೇ ಮುಗಿಸಬೇಕಿದೆ.'' ನಿಮಗೆ ಪುರುಸೊತ್ತು ಸಿಗುವುದು ಕಷ್ಟ. ಬುಕರ್ ಪ್ರಶಸ್ತಿ ನಿಮ್ಮನ್ನು ದೇಶದೇಶಗಳು ತಿರುಗುವಂತೆ ಮಾಡುತ್ತದೆ ಅಂದೆ. ಹೌದು ಅಂದರು. ಅವರ ಮುಂದಿನ ಆರು ತಿಂಗಳು ಪ್ರವಾಸದಲ್ಲಿ ಕಳೆಯಲಿದೆ. ನ್ಯೂಯಾರ್ಕ್, ಎಡಿನ್ ಬರೋ, ಲಂಡನ್, ಶ್ರೀಲಂಕಾ- ಹೀಗೆ ಹಲವು ಕಡೆ ಅವರ ಜತೆ ಮಾತುಕತೆ ನಿಗದಿಯಾಗಿದೆ.
ಬಾನು ಅವರ ಅತ್ತೆಮಾವಂದಿರ ಮನೆಯ ಹಿಂಭಾಗದಲ್ಲೇ ಅವರ ತವರು ಮನೆ. ಅಲ್ಲಿದ್ದಾಗ ಮುಷ್ತಾಕ್ ಜತೆ ಲೈಬ್ರರಿಗೆ ಹೋಗುತ್ತಿದ್ದರು. ದಾರಿಯಲ್ಲಿ ದಲಿತ ಸಂಘರ್ಷ ಸಮಿತಿಯ ಸಭೆಗಳು ಎದುರಾಗುತ್ತಿದ್ದವು. ಆ ಸಭೆಯಲ್ಲಿ ಹುಡುಗರು ತಮಟೆ ಬಾರಿಸುತ್ತಿರುತ್ತಿದ್ದರು. ಅದು ಬಾನು ಅವರನ್ನು ಆಕರ್ಷಿಸುತ್ತಿತ್ತು. ಅಲ್ಲಿ ನಿಂತು ಭಾಷಣ ಕೇಳುತ್ತಿದ್ದರು. ಕ್ರಮೇಣ ಶಿಬಿರದಲ್ಲಿ ಭಾಗವಹಿಸಿದರು. ''ಬರೆಯುವ ಆಸೆಯಿದ್ದರೂ ಏನು ಬರೆಯಬೇಕು ಅನ್ನೋದು ಗೊತ್ತಿರಲಿಲ್ಲ. ಅಲ್ಲೀ ತನಕ ಹಿಂದು ಆಚರಣೆಗಳ ಕುರಿತ ಕತೆಗಳು ಬರುತ್ತಿದ್ದವು. ನಡುವೆ ಒಂದೋ ಉದಾರಿಯಾದ ಅಥವಾ ಕ್ರೂರಿಯಾದ ಮುಸ್ಲಿಂ ಪಾತ್ರ ಬರುತ್ತಿತ್ತು. ಮುಸ್ಲಿಂ ಮಹಿಳೆಯರ ಕುರಿತೂ ಯಾರೂ ಬರೆಯುತ್ತಿರಲಿಲ್ಲ. ಇದನ್ನೆಲ್ಲ ಚರ್ಚಿಸುವಾಗ ಬರಗೂರು ರಾಮಚಂದ್ರಪ್ಪ, ಚಂಪಾ, ಕಾಳೇಗೌಡ ನಾಗವಾರ, ಚನ್ನಣ್ಣ ವಾಲೀಕಾರ ಮುಂತಾದವರು ವೈಚಾರಿಕ ಸ್ಪಷ್ಟತೆ ಕೊಡುತ್ತಾ ಬಂದರು. ಈ ಮಧ್ಯೆ ಲವ್ ಬರ್ಡ್ಸ್ ಅನ್ನೋ ವಿಚಿತ್ರ ಕತೆಯನ್ನೂ ಬರೆದಿದ್ದೆ. ಅದರಲ್ಲಿ ಹಿಂದು ಹೆಸರು, ಮುಸ್ಲಿಂ ಆಚರಣೆಗಳಿದ್ದವು. ಆಮೇಲೆ ಲಂಕೇಶ್ ಪತ್ರಿಕೆಗೆ ವರದಿಗಾರಳಾದೆ. ಕೆಲವು ಕತೆಗಳನ್ನೂ ಬರೆದೆ. ಎಲ್ಲಾ ಪತ್ರಿಕೆಗಳ ಭಾನುವಾರದ ಪುರವಣಿಗಳಲ್ಲೂ ಕತೆ ಬರೆಯುತ್ತಿದ್ದೆ.''
ನಿಮ್ಮ ಮನಸ್ಸು ಆಧುನಿಕವಾಗಿ, ಮಾತು ನಿಸ್ಪೃಹತೆಯಿಂದ ತುಂಬಿದೆ. ನೀವು ಅರ್ಥವಾಗದ ಪದಗಳನ್ನು ಬಳಸಿ ಮಾತಾಡುತ್ತಿಲ್ಲ ಅಂದೆ. ಬುಕರ್ ಅವರನ್ನು ಬದಲಾಯಿಸಿದಂತೆ ಅನ್ನಿಸಲಿಲ್ಲ. ಎಂದೋ ಬಿದ್ದ ಕನಸಿನಂತೆ ಅದು ಅವರಲ್ಲಿ ಉಳಿದುಹೋದಂತೆ ಕಂಡಿತು. ಮಾತು ಬದಲಾಯಿಸುವ ಸಲುವಾಗಿ ಕೆಂಪು ಲುಂಗಿ ಕತೆಯ ಬಗ್ಗೆ ಕೇಳಿದೆ. ''ನನ್ನ ಕತೆಯನ್ನು ಬಹಳ ಮಂದಿ ಮೆಚ್ಚುತ್ತಿದ್ದರು. ಅನೇಕರಿಗೆ ಕಿರಿಕಿರಿಯೂ ಆಗುತ್ತಿತ್ತು. ನಮ್ಮ ಹುಳುಕುಗಳನ್ನು ಬರೆದು ಮೆಚ್ಚುಗೆ ಗಳಿಸುತ್ತೀರಿ ಅಂತಲೂ ಹೇಳಿದರು. ನಾನು ಅದೇ ಥರದ ಬರೆವಣಿಗೆ ಮುಂದುವರಿಸಿದೆ. ನನಗೆ ಮೊದಲಿನಿಂದಲೂ ನಾವು ಮುಸ್ಲಿಮರು ಪ್ರವೇಶ ನಿಷಿದ್ಧವಾದ ಲೋಕವನ್ನು ನಿರ್ಮಾಣ ಮಾಡಿಕೊಂಡಿದ್ದೇವೆ ಅಂತಲೇ ಅನ್ನಿಸುತ್ತಿತ್ತು. ನಮಗೂ ಬೇರೆ ಸಮುದಾಯಕ್ಕೂ ನಡುವೆ ಸೇತುವೆ ಬೇಕು ಅಂತಾದರೆ ನಮ್ಮ ರೀತಿ ರಿವಾಜು ಅವರಿಗೂ ಗೊತ್ತಾಗಬೇಕಲ್ಲ. ಮುಸ್ಲಿಂ ಹುಡುಗ ಕೆಂಪು ಲುಂಗಿ ಯಾಕೆ ಉಟ್ಟುಕೊಳ್ಳುತ್ತಾನೆ. ಅದರ ಸುತ್ತಲಿನ ಆಚಾರ ವಿಚಾರಗಳೇನು ಅಂತ ಎಲ್ಲರಿಗೂ ಗೊತ್ತುಪಡಿಸೋಣ ಅಂದೆ. ಆ ದಾರಿ ಸುಲಭದ್ದೇನೂ ಆಗಿರಲಿಲ್ಲ.''
ಬುಕರ್ ಬರಲು ಕಾರಣ ಅನುವಾದ. ಅನುವಾದಿಸಬೇಕು ಅಂತ ಅನ್ನಿಸಿದ್ದೇಕೆ? ನನಗೆ ಹೆಚ್ಚು ಓದುಗರನ್ನು ತಲುಪುವ ಆಸೆಯಿತ್ತು. ಭಾರತೀಯ ಭಾಷೆಗಳಲ್ಲದೇ, ಯುರೋಪಿನ ಓದುಗರೂ ನನ್ನನ್ನು ಓದಬೇಕು ಅನ್ನಿಸುತ್ತಿತ್ತು. ಅದಕ್ಕೆ ಅನುವಾದವೇ ದಾರಿ ಅನ್ನಿಸಿ ಒಂದು ದಿನ ದೀಪಾ ಭಾಸ್ತಿಯವರಿಗೆ ಫೋನ್ ಮಾಡಿದೆ. ಅದು ಇಲ್ಲೀ ತನಕ ಬಂದು ನಿಂತಿದೆ ಅಂದರು ಬಾನು.
ಅವರು ನೋಡಿದ ದೇಶ, ಪುಸ್ತಕದ ಅಂಗಡಿ, ಪುಸ್ತಕ ಪ್ರೇಮ, ನಮ್ಮ ಹುಸಿ ಸಾಹಿತ್ಯ ಪ್ರೀತಿ, ಕಡೆಗಣಿಸುವ ವಿಮರ್ಶಾವಲಯದ ಮಾತುಗಳನ್ನೂ ಮುಕ್ತವಾಗಿ ಬಾನು ಹೇಳಿದರು. ಮಾರನೆಯ ಬೆಳಗ್ಗೆ ಅವರು ಬೆಂಗಳೂರು ವಿಮಾನ ಹತ್ತಬೇಕಿತ್ತು. ಪಕ್ಕದಲ್ಲೇ ಕುಳಿತ ಮಗಳ ದನಿಯೂ ಕೇಳಿಸುತ್ತಿತ್ತು. ನಡುರಾತ್ರಿ ದಾಟಿದ ನಂತರವೂ ಮಾತುಕತೆ ಮುಂದುವರಿಸುವುದು ಸರಿಯಲ್ಲ ಅನ್ನಿಸಿ ನಮಸ್ಕಾರ ಹೇಳಿದೆ. ನಾಳೆ ಸಿಗೋಣ ಅಂತ ಹೇಳಿ ಬಾನು ಮಾತು ಮುಗಿಸಿದರು.