ಗುಜರಾತಿಗೊಂದು ಕರ್ನಾಟಕಕ್ಕೊಂದು ನ್ಯಾಯ ಸಹಿಸಲ್ಲ!

KannadaprabhaNewsNetwork |  
Published : Feb 15, 2024, 01:33 AM ISTUpdated : Feb 15, 2024, 12:27 PM IST
DK Suresh

ಸಾರಾಂಶ

ಸಂಸತ್‌ನಲ್ಲಿ ದಕ್ಷಿಣ ಭಾರತ ಬಗ್ಗೆ ಮಾತನಾಡಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್‌ ಕನ್ನಡಪ್ರಭದೊಂದಿಗೆ ಮಾತನಾಡಿದ್ದಾರೆ.

ಎಸ್‌. ಗಿರೀಶ್‌ ಬಾಬು
ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡಪ್ರಭ ವಿಶೇಷ ಸಂದರ್ಶನ

ನಮ್ಮ ತೆರಿಗೆ, ನಮ್ಮ ಹಕ್ಕು ಎಂಬ ಆಂದೋಲನ ಹುಟ್ಟಲು ಕಾರಣವಾದ ಸಂಸದ ಡಿ.ಕೆ.ಸುರೇಶ್‌ ಅವರ ಒಂದು ಹೇಳಿಕೆ ಇಡೀ ದೇಶದಲ್ಲಿ ಸಂಚಲನ ಹುಟ್ಟುಹಾಕಿದೆ. ಹೊಸ ಚರ್ಚೆಗೆ ನಾಂದಿ ಹಾಡಿತು. 

ಈ ಹೇಳಿಕೆಯ ಬಿಸಿ ಯಾವ ಮಟ್ಟಿಗೆ ಇತ್ತು ಎಂದರೆ ಕೇಂದ್ರದ ಹಣಕಾಸು ಸಚಿವರು. ಅಷ್ಟೇ ಏಕೆ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಪ್ರತಿಕ್ರಿಯೆ ನೀಡುವಂಥ ಪರಿಸ್ಥಿತಿ ನಿರ್ಮಾಣ‍ವಾಯ್ತು. 

ದೇಶಾದ್ಯಂತ ಸಂಗ್ರಹವಾಗುವ ತೆರಿಗೆಯಲ್ಲಿ ಹೆಚ್ಚಿನ ಹಣವನ್ನು ಉತ್ತರ ಭಾರತದ ಬೆರಳೆಣಿಕೆ ರಾಜ್ಯಗಳಿಗೆ ನೀಡಲಾಗುತ್ತಿದೆ. ಅಭಿವೃದ್ಧಿಯನ್ನು ಉತ್ತರ ರಾಜ್ಯಗಳಿಗಷ್ಟೇ ಮಾಡಲಾಗುತ್ತಿದೆ. 

ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಬಿಂಬಿಸುವ, ಇದೇ ಪರಿಸ್ಥಿತಿ ಮುಂದುವರೆದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾದೀತು ಎಂಬರ್ಥದ ಈ ಹೇಳಿಕೆ ನೀಡುವ ಹಿಂದಿನ ಮನಸ್ಥಿತಿ ಏನು? ಸುರೇಶ್‌ ಅ‍‍ವರು ಈ ಹೇಳಿಕೆ ನೀಡಲು ನಿಜ ಕಾರಣವೇನು?

ದಕ್ಷಿಣದ ಬಗ್ಗೆ ಉತ್ತರದವರಿಗೆ ತಾತ್ಸಾರವಿದೆಯೇ ಅಥವಾ ಅನುದಾನಕ್ಕಷ್ಟೇ ಈ ಧೋರಣೆ ಸೀಮಿತವೇ? ಹೇಗೆ ಮತ್ತು ಯಾವ್ಯಾವ ರೀತಿ ದಕ್ಷಿಣದವರಿಗೆ ಅನ್ಯಾಯವಾಗುತ್ತಿದೆ. 

ಇದನ್ನು ಸರಿಪಡಿಸಲು ಏನಾಗಬೇಕು? ಒಗ್ಗಟ್ಟಿನ ಹೋರಾಟ ಮುಂದಿದೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾದ್ದಾರೆ ಸಂಸದ ಡಿ.ಕೆ.ಸುರೇಶ್‌.

ಇಡೀ ರಾಷ್ಟ್ರ ಗಾಬರಿಗೊಳ್ಳೋ ಹೇಳಿಕೆ ನೀಡಿದ್ದಿರಿ. ಇದಕ್ಕೆ ಕಾರಣ?
ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳು ಇತ್ತೀಚೆಗೆ ಉತ್ತರ ಭಾರತದ ಕಡೆ ಕೇಂದ್ರೀಕೃತವಾಗುತ್ತಿದೆ. ದಕ್ಷಿಣ ಭಾರತೀಯರು ಅದರಲ್ಲೂ ಕರ್ನಾಟಕದವರು ಎಂದರೆ ನಮ್ಮ ಧ್ವನಿಯೇ ಅಲ್ಲಿ ಇರುವುದಿಲ್ಲ. 

ಈ ವಿಚಾರ ಬಹಳ ದಿನಗಳಿಂದ ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಈಗ 15ನೇ ಹಣಕಾಸು ಆಯೋಗ ರಚನೆಯಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮೆಡೆಗಿನ ನಿರ್ಲಕ್ಷ್ಯದ ಬಗ್ಗೆ ಧ್ವನಿಯೆತ್ತದಿದ್ದರೆ ಬಹಳ ಅನ್ಯಾಯವಾಗುತ್ತಿತ್ತು. ಹೀಗಾಗಿ ಕರ್ನಾಟಕ ಹಾಗೂ ದಕ್ಷಿಣ ಭಾರತಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿಯೆತ್ತಲು ನಿರ್ಧರಿಸಿದೆ. 

ಹಣಕಾಸು ಆಯೋಗದ ಶಿಫಾರಸಿನಂತೆ ನಡೆದಿದ್ದೇವೆ ಎನ್ನುತ್ತಾರಲ್ಲ ಹಣಕಾಸು ಸಚಿವರು?
ಹಣಕಾಸು ಆಯೋಗ ಶಿಫಾರಸು ನೀಡುವುದರ ಹಿಂದಿನ ಮಾನದಂಡ ರೂಪಿಸುವುದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಇರುತ್ತದೆಯಲ್ಲವೇ? ಹೀಗಿರುವಾಗ ಒಕ್ಕೂಟ ವ್ಯವಸ್ಥೆ ಸುಲಲಿತವಾಗಿ ಮುಂದುವರೆಯಬೇಕು ಎಂದರೆ ಕೇಂದ್ರವು ಯಾವ ರಾಜ್ಯಕ್ಕೆ ನ್ಯಾಯಯುತವಾಗಿ ಎಷ್ಟು ನೀಡಬೇಕು ಎಂಬುದನ್ನು ತೀರ್ಮಾನಿಸಬೇಕು. 

ಪ್ರಗತಿ ಸಾಧಿಸುತ್ತಿರುವ ರಾಜ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಕೇಂದ್ರದ ಕರ್ತವ್ಯ. ಗುಜರಾತಿಗೆ ಒಂದು ನ್ಯಾಯ ಹಾಗೂ ಕರ್ನಾಟಕಕ್ಕೆ ಮತ್ತೊಂದು ನ್ಯಾಯ ಮಾಡಿದರೆ ಹೇಗೆ? ‍ವಿದೇಶಗಳಲ್ಲಿ ನಡೆಯುವ ಅನ್ಯಾಯದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡುತ್ತಾರೆ. ಆದರೆ, ದೇಶದ ಒಳಗೆ ನಡೆಯುತ್ತಿರುವ ಈ ಅನ್ಯಾಯ ಅವರ ಕಣ್ಣಿಗೆ ಕಾಣುವುದಿಲ್ಲವೇ?

ಯುಪಿಎಗಿಂತ ಈಗ 200 ಪಟ್ಟು ಹೆಚ್ಚು ಹಣ ಕರ್ನಾಟಕಕ್ಕೆ ನೀಡಿದ್ದೇವೆ ಎನ್ನುತ್ತಾರಲ್ಲ?
ಸಮರ್ಥನೆಯನ್ನು ಯಾರು ಹೇಗೆ ಬೇಕಾದರೂ ಮಾಡಬಹುದು. ಅದಕ್ಕೆ ಅರ್ಥವಿರುವುದಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷ ಆಗಿದೆ. ಹನಿಮೂನ್ ಪೀರಿಯಡ್‌ ಮುಗಿದಿದೆ. 

ದೇಶದ ಪರಿಸ್ಥಿತಿ ಅವರಿಗೆ ಚೆನ್ನಾಗಿ ಗೊತ್ತಿದೆ. ಅನುದಾನದ ಕೊರತೆಯಿಂದ ದಕ್ಷಿಣ ಭಾರತದ ರಾಜ್ಯಗಳು ಯಾವ ರೀತಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ ಎಂಬುದೂ ಅವರಿಗೆ ಗೊತ್ತಿದೆ. 

ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಬಾರದು ಎಂದರೆ ನ್ಯಾಯಯುತ ಪಾಲು ದಕ್ಷಿಣ ಭಾರತದ ರಾಜ್ಯಗಳಿಗೆ ನೀಡಬೇಕು. ಉತ್ತರದ ರಾಜ್ಯಗಳು ಎಷ್ಟು ತೆರಿಗೆ ನೀಡುತ್ತಿವೆ, ಅದಕ್ಕೆ ತಕ್ಕಂತೆ ಅವರಿಗೆ ಅನುದಾನ ನೀಡಲಿ. ಉಳಿದದ್ದು ನಮಗೆ ನೀಡಲಿ. ಇಲ್ಲಿಂದ ಕಿತ್ತು ಅಲ್ಲಿಗೆ ನೀಡುವುದನ್ನು ಒಪ್ಪಲ್ಲ.

ಕರ್ನಾಟಕದವರು ಗ್ಯಾರಂಟಿ ಯೋಜನೆಗೆ ಹಣ ಖಾಲಿ ಮಾಡಿಕೊಂಡಿದ್ದಾರೆ ಅಂದಿದ್ದಾರಲ್ಲ?
ನಾವು ಖಾಲಿ ಮಾಡಿಕೊಂಡಿಲ್ಲ (ಕೆಲ ಕ್ಷಣ ಮೌನವಾಗಿ)... ನಾನು ಮಾತನಾಡಿದರೆ ಈ ವಿಚಾರ ಬೇರೆ ಕಡೆ ಹೋಗುತ್ತೆ. ಬೇರೆ ಆಯಾಮ ಪಡೆದುಕೊಳ್ಳುತ್ತದೆ. 

ಅಲ್ರೀ.. ನಾವೇನು ಅವರ ಬಳಿ ಭಿಕ್ಷೆ ಬೇಡಬೇಕಾ? ರಾಜ್ಯದ ಪ್ರತಿಯೊಬ್ಬ ಕೂಲಿ ಕಾರ್ಮಿಕ, ರೈತ ಎಲ್ಲರಿಂದಲೂ ತೆರಿಗೆ ವಸೂಲಿ ಮಾಡುತ್ತಾರೆ. ಆ ತೆರಿಗೆ ಹಣವನ್ನು ರಾಜ್ಯಕ್ಕೆ ಹಿಂತಿರುಗಿಸುವಾಗ ಗೌರವಯುತವಾಗಿ ನಡೆದುಕೊಳ್ಳಬೇಕು. 

ನಾವೇನು ಇವರ ಬಳಿ ಭಿಕ್ಷೆ ಬೇಡುತ್ತಿಲ್ಲ. ನ್ಯಾಯಯುತ ಪಾಲು ಕೇಳುತ್ತಿದ್ದೇವೆ. ಈ ಬಿಜೆಪಿಯವರು ಲೂಟಿ ಮಾಡಿದ 40 ಪರ್ಸೇಂಟ್‌ನಲ್ಲಿ ನಾವು ಹಣ ಕೇಳುತ್ತಿಲ್ಲವಲ್ಲ. 

ನಾವು ತೆರಿಗೆ ಕೊಟ್ಟಿದ್ದೇವೆ. ಆರ್ಥಿಕ ಶಿಸ್ತು ಪಾಲಿಸಿದ್ದೇವೆ. ಜನಸಂಖ್ಯಾ ನಿಯಂತ್ರಣ ಮಾಡಿದ್ದೇವೆ. ನಮ್ಮ ಅಧಿಕಾರ ಏನಿದೆ ಅದು ಕೊಡಲಿ. ಭಿಕ್ಷೆ ನೀಡುವಂತೆ ವರ್ತಿಸುವುದು ಬೇಡ.

ನಿಮ್ಮ ಪ್ರಕಾರ ಈ ಅನ್ಯಾಯ ಸರಿಪಡಿಸೋದು ಅಂದರೆ ಹೇಗೆ? 
ಉತ್ತರ ಭಾರತದ ರಾಜ್ಯಗಳಿಂದ ಎಷ್ಟು ತೆರಿಗೆ ಸಂಗ್ರಹ ಮಾಡುತ್ತಾರೋ ಅಷ್ಟೆ ಮೊತ್ತವನ್ನು ನಮ್ಮಿಂದ ಸಂಗ್ರಹವಾಗುವ ತೆರಿಗೆ ಬಾಬ್ತಿನಿಂದಲೂ ಕೇಂದ್ರ ಸರ್ಕಾರ ತೆಗೆದುಕೊಳ್ಳಲಿ. ಉಳಿದ ಮೊತ್ತವನ್ನು ರಾಜ್ಯದ ಅಭಿವೃದ್ಧಿಗಾಗಿ ನಮಗೆ ಹಿಂತಿರುಗಿಸಲಿ. ಅಷ್ಟೇ.

ಈ ವಾದ ಅವರು ಒಪ್ಪಲ್ಲ. ಬೆಂಗಳೂರಿನಲ್ಲಿ ಕಲೆಕ್ಟ್‌ ಆಗಿದ್ದು ಇಡೀ ರಾಜ್ಯಕ್ಕೆ ಕೊಡಲ್ವ ಅಂತಾರೆ?
ರೀ... ಅದು ಕರ್ನಾಟಕದ ವಿಚಾರ. ನಮ್ಮ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ದಕ್ಷಿಣ ಭಾರತಕ್ಕೆ ಸಂಬಂಧಿಸಿದ ವಿಚಾರ. ಇಂತಹ ಸಮರ್ಥನೆಗಳನ್ನು ಮಾಡಿಕೊಳ್ಳಬೇಡಿ. 

ಅದು ಅನವಶ್ಯಕ. ಕನ್ನಡಿಗರು ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿದ್ದಾರೆ. ದೇಶ-ವಿದೇಶದಿಂದ ಈ ರಾಜ್ಯಕ್ಕೆ ಬಂದರೂ ಗೌರವದಿಂದ, ಉದ್ಯೋಗ, ವಸತಿ ನೆರವು ಎಲ್ಲವನ್ನು ಕೊಡುತ್ತಿದ್ದಾರೆ. 

ಒಕ್ಕೂಟ ವ್ಯವಸ್ಥೆಗಾಗಿ ಕನ್ನಡಿಗರು ಸ್ವಾಭಿಮಾನವನ್ನು ಬಿಟ್ಟು ಅದರೊಂದಿಗೆ ಸಹಕಾರ ನೀಡುತ್ತಿದ್ದಾರೆ. ಅದನ್ನು ಉಳಿಸಿಕೊಳ್ಳಬೇಕಾದದ್ದು ಕೇಂದ್ರದ ಜವಾಬ್ದಾರಿ.

ಕರ್ನಾಟಕ ರಾಜ್ಯ ಬಿಜೆಪಿ ನಿಮ್ಮ ಹೇಳಿಕೆ ವಿರೋಧಿಸುತ್ತಿದೆ?
ನನ್ನ ಹೇಳಿಕೆ ವಿರೋಧಿಸುತ್ತಿರುವ ಬಿಜೆಪಿಯ ಸಂಸದರು ಹಾಗೂ ನಾಯಕರಿಗೆ ಒಂದೇ ಒಂದು ಮಾತು ಕೇಳುತ್ತೇನೆ. ಮೊಂಡು ವಾದ, ವಾಗ್ವಾದ ಮಾಡುವುದು ಬೇಡ. 

ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆಯೋ ಇಲ್ಲವೋ? ಕರ್ನಾಟಕದ ಅಭಿವೃದ್ಧಿಗೆ ನಾವು ನೀಡಿದ ತೆರಿಗೆಯಲ್ಲಿ ನಮ್ಮ ಪಾಲು ರಾಜ್ಯಕ್ಕೆ ಬರಬೇಕಾ ಅಥವಾ ಬೇಡವಾ? ಹೌದು ಅಥವಾ ಇಲ್ಲ ಎಂದು ನೇರವಾಗಿ ಹೇಳಿ ಬಿಡಲಿ ನೋಡೋಣ.

ಅನ್ಯಾಯ ನಿಜವಾಗಿದ್ದರೆ ತಮಿಳುನಾಡಿನಂತೆ ಪಕ್ಷಾತೀತ ಹೋರಾಟ ನಮ್ಮಲ್ಲಿ ಏಕಿಲ್ಲ?
ಪಾಪ... ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಚುವುದರಲ್ಲಿ ಬ್ಯುಸಿಯಾಗಿದ್ದಾರೆ. ಬಿಜೆಪಿಯವರಿಗೆ ನನ್ನ ಹೇಳಿಕೆಯಲ್ಲಿ ರಾಜಕಾರಣ ಕಾಣುತ್ತಿದೆಯೋ ಅಥವಾ ಜನರ ಹಿತ ಕಾಣುತ್ತಿದೆಯೋ ಎಂಬುದು ನನಗೆ ಗೊತ್ತಾಗುತ್ತಿಲ್ಲ. 

ದಯವಿಟ್ಟು, ರಾಜ್ಯದ ಜನರ ಅಭಿವೃದ್ಧಿ ಬಗ್ಗೆ ತಾವು ಮತ್ತೊಮ್ಮೆ ಚಿಂತನೆ ಮಾಡಿ, ಈ ಬಗ್ಗೆ ಧ್ವನಿ ಎತ್ತಿ ಎಂದು ಬಿಜೆಪಿ ನಾಯಕರಿಗೂ ನಾನು ಮನವಿ ಮಾಡುತ್ತೇನೆ. 

ಬಿಜೆಪಿ ನಾಯಕ ಈಶ್ವರಪ್ಪ ನಿಮಗೆ ಗುಂಡು ಹೊಡೆಯಬೇಕು ಅಂತಾರೆ?
ಇಂತಹ ಹೇಳಿಕೆ ನೀಡಿ ಈಶ್ವರಪ್ಪ ಅವರು ಅಮಾಯಕರನ್ನು ಪ್ರಚೋದಿಸುವುದು ಬೇಡ. ನಾನೇ ಅವರ ಬಳಿ ಹೋಗುತ್ತೇನೆ. ಅವರ ಬಳಿ ಬಂದೂಕು ಇದೆಯೋ, ಲೈಸೆನ್ಸ್‌ ಪಡೆದಿದ್ದಾರೋ ಗೊತ್ತಿಲ್ಲ. 

ನಾನು ಹೋಗುತ್ತೇನೆ. ಅದ್ಯಾವ ಗುಂಡು ಹೊಡೆಯುತ್ತಾರೋ, ಕತ್ತರಿಸುತ್ತಾರೋ ಕತ್ತರಿಸಲಿ. ಕನ್ನಡಿಗರು ಅದನ್ನು ನೋಡಲಿ...

ನೀವು ಕ್ಷಮೆ ಕೋರಬೇಕು ಅಂತ ವಿಧಾನಸಭೆಯಲ್ಲಿ ಆಗ್ರಹಿಸುತ್ತಾರಂತೆ?
ನಾನು ಬಿಜೆಪಿಯವರ ಮೊಂಡವಾದಕ್ಕೆ ಯಾವತ್ತೂ ಕ್ಷಮೆ ಕೇಳಲ್ಲ. ನಮ್ಮ ತೆರಿಗೆ, ನಮ್ಮ ಹಕ್ಕು. ನಮಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಕೇಳುತ್ತಿದ್ದೇವೆಯೇ ಹೊರತು ಈ ಬಿಜೆಪಿಯವರು 40 ಪರ್ಸೆಂಟ್‌ ದುಡ್ಡು ಹೊಡೆದಿಟ್ಟಿದ್ದಾರಲ್ಲ ಅದನ್ನು ಕೇಳುತ್ತಿಲ್ಲ. 

ಬಿಜೆಪಿಯವರು ‍ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡಿದರೆ, ಒಳ್ಳೆಯದು, ಮಾಡಲಿ. ಅವರು ಪ್ರಸ್ತಾಪ ಮಾಡಬೇಕು. ಈ ವಿಚಾರ ಚರ್ಚೆಯಾಗಬೇಕು.

ಉತ್ತರದವರ ಕಣ್ಣಿಗೆ ದಕ್ಷಿಣದವರು 2ನೇ ದರ್ಜೆಯವರು ಎಂಬುದು ನಿಮ್ಮ ವಾದವೇ?
ಹೌದು, ಖಂಡಿತವಾಗಿಯೂ ಇಂತಹ ಧೋರಣೆ ಕೇಂದ್ರದ ಅಧಿಕಾರ ಸ್ಥಾನದಲ್ಲಿ ಇರುವವರಿಗೆ ಇದೆ. ನಾವು ಪ್ರತಿಪಕ್ಷದವರು ಬಿಡಿ. ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್‌ ಸಂಸ್ಥೆಯನ್ನು ತರಲು ಪ್ರಹ್ಲಾದ್ ಜೋಶಿ ಅವರು ಎಷ್ಟು ಹೋರಾಟ ಮಾಡುತ್ತಿದ್ದಾರೆ ಗೊತ್ತಲ್ಲವೇ? ಪ್ರಹ್ಲಾದ್‌ ಜೋಶಿ ಎಂದರೆ ಯಾರು? ಕೇಂದ್ರದ ಪ್ರಭಾವಿ ಸಚಿವರು. 

ಅಂತಹವರೇ ಹರಸಾಹಸ ಮಾಡುತ್ತಿದ್ದರೂ ಏಮ್ಸ್‌ ನಂತಹ ಒಂದು ಸಂಸ್ಥೆ ಸಿಗುತ್ತಿಲ್ಲ. ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರಿನ ಕಳಸಾ ಬಂಡೂರಿ ಯೋಜನೆಗೆ ಅನುಮೋದನೆ ದೊರೆತು ಐದು ವರ್ಷವಾದರೂ ಅದಕ್ಕಿರುವ ತೊಡಕು ನಿವಾರಿಸುತ್ತಿಲ್ಲ. 

ಕೃಷ್ಣಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿಸುವ ಭರವಸೆ ಈಡೇರಿಸುತ್ತಿಲ್ಲ. ತುಂಗಾ ಮೇಲ್ದಂಡೆ ಯೋಜನೆಗೆ ಹಣವಿಟ್ಟರೂ ಅದನ್ನು ಬಿಡುಗಡೆ ಮಾಡುತ್ತಿಲ್ಲ. 

ಬೆಂಗಳೂರಿನಿಂದ ತೆರಿಗೆ ವಸೂಲಿ ಮಾಡಿ ಅದನ್ನು ಇಡೀ ದೇಶಕ್ಕೆ ಹಂಚುತ್ತಾರಲ್ಲ. ಇಂತಹ ಬೆಂಗಳೂರಿಗೆ ಕುಡಿಯುವ ನೀರು ನೀಡುವ ಮೇಕೆದಾಟು ಯೋಜನೆ ಬಗ್ಗೆ ಮೀನ ಮೇಷ ಎಣಿಸುತ್ತಾರೆ.

ಈ ಧೋರಣೆ ಕೇಂದ್ರದ ಬಿಜೆಪಿ ಸರ್ಕಾರದ್ದೋ ಅಥವಾ ಯಾವಾಗಲೂ ಉತ್ತರ ಭಾರತೀಯರ ಧೋರಣೆ ಹೀಗೆ ಇತ್ತೋ?
ಅಭಿವೃದ್ಧಿ ಎಂಬುದು ಕೇವಲ ಉತ್ತರ ಭಾರತದ ರಾಜ್ಯಗಳತ್ತ ಕೇಂದ್ರೀಕೃತವಾಗುವ ಪ್ರಕ್ರಿಯೆ ಕಳೆದ 10 ವರ್ಷದಿಂದ ನಡೆದಿದೆ ಎಂದು ನನಗೆ ಅನಿಸುತ್ತೆ. 

ಕಳೆದ 10 ವರ್ಷದಲ್ಲಿ ಕರ್ನಾಟಕಕ್ಕೆ ಏನು ಬಂದಿದೆ. ಉತ್ತರ ಭಾರತದ ರಾಜ್ಯಗಳಿಗೆ ಏನು ಹೋಗಿದೆ ಲೆಕ್ಕ ಹಾಕಿ ನೋಡಿ ಸತ್ಯ ಗೊತ್ತಾಗತ್ತೆ. ಅಲ್ಲ ಈ ಬುಲೆಟ್‌ ಟ್ರೈನ್‌ ಅನ್ನು ಅಹಮದಾಬಾದ್‌-ಮುಂಬೈಗೆ ಮಾಡುತ್ತಾರೆ. 

ಅದೇ ಚೆನ್ನೈ-ಬೆಂಗಳೂರು- ಮುಂಬೈಗೆ ಏಕಿಲ್ಲ. ಇನ್ನೂ ಅನ್ಯಾಯ ನೋಡಿ. ಮುಂಬೈಗೆ ಪರ್ಯಾಯವಾಗಿ ಜಾಗತಿಕ ಆರ್ಥಿಕ ನಗರ ( ಗಿಫ್ಟ್ ಸಿಟಿ) ಗುಜರಾತಿನಲ್ಲೇ ಏಕೆ ಮಾಡುತ್ತಾರೆ? ಚೆನ್ನೈನಲ್ಲೋ, ಹೈದರಾಬಾದ್‌ನಲ್ಲೋ ಅಥವಾ ಬೆಂಗಳೂರಿನಲ್ಲಿ ಏಕೆ ಮಾಡುತ್ತಿಲ್ಲ. ಇದೆಲ್ಲ ಏನು ಹೇಳುತ್ತದೆ?

ನಿಮ್ಮ ಹೇಳಿಕೆಯನ್ನು ತುಕ್ಡೆ ಗ್ಯಾಂಗ್ ಹೇಳಿಕೆ ಅಂತ ಬಿಂಬಿಸುತ್ತಿದ್ದಾರೆ?
ನಾವು ನಮ್ಮ ಹಕ್ಕು ಕೇಳಿದರೆ ಅದನ್ನು ಸಲೀಸಾಗಿ ದೇಶ ವಿಭಜನೆ ಅಂತ ಬಿಂಬಿಸಿ ಬಿಡುತ್ತಾರೆ. ಪ್ರಧಾನಮಂತ್ರಿ ಮೋದಿ ಹಾಗೂ ಹಣಕಾಸು ಸಚಿವರೇ ಹೀಗೆ ಹೇಳಿಬಿಟ್ಟರೆ ಅರ್ಥ‍‍‍‍ವಿದೆಯೇ? ನಮಗೆ ಅನ್ಯಾಯವಾಗುತ್ತಿದೆ ಎಂದು ಸರಿಪಡಿಸಿ ಎಂದರೆ ಅದನ್ನು ವಿಭಜನೆ ಎನ್ನುವುದು ಸರಿಯಲ್ಲ. 

ನಾನು ಭಾರತೀಯ. ಒಕ್ಕೂಟ ವ್ಯವಸ್ಥೆಯಲ್ಲಿ ಸ್ವತಂತ್ರ ಭಾರತಕ್ಕೆ ಸ್ವತಂತ್ರ ತಂದುಕೊಂಡಿದ್ದು ಕಾಂಗ್ರೆಸ್‌. ಅದರಲ್ಲಿ ನಂಬಿಕೆ ಹೊಂದಿರುವವರು ನಾವು. ದೇಶವನ್ನು ತುಕ್ಡೆ ಮಾಡಬೇಕು ಅಂತ ಹೊರಟಿರುವವರು ಅವರು (ಬಿಜೆಪಿ), ರಾಜಕಾರಣಕ್ಕಾಗಿ ಈ ದೇಶವನ್ನು ಯಾವ ರೀತಿ ಧರ್ಮ, ಜಾತಿ ಹೆಸರಿನಲ್ಲಿ ವಿಭಜನೆ ಮಾಡುತ್ತಿದ್ದಾರೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ.

ಪ್ರತಿಭಟನೆ ಓಕೆ. ವಿಭಜನೆ ಮಾತು ಏಕೆ ಅಂತ ನಿಮ್ಮ ಪಕ್ಷದವರೇ ಹೇಳುತ್ತಾರೆ?
ನನ್ನ ಹೇಳಿಕೆಯನ್ನು ಯಾರು ಯಾವ್ಯಾವ ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೋ ಗೊತ್ತಿಲ್ಲ. ನನ್ನ ಹೇಳಿಕೆ ಸ್ಪಷ್ಟವಿದೆ. ಒಬ್ಬ ಭಾರತೀಯನಾಗಿ, ಕನ್ನಡಿಗನಾಗಿ ನನ್ನ ರಾಜ್ಯದ ಜನರ ಹಿತವನ್ನು ಕಾಪಾಡುವ ದೃಷ್ಟಿಯಲ್ಲಿ ನನ್ನ ಧ್ವನಿ ಎತ್ತಿದ್ದೇನೆ.

ಉತ್ತರದಲ್ಲಿ ಕಾಂಗ್ರೆಸ್‌ ನೆಲೆ ಕಳೆದುಕೊಳ್ಳುತ್ತಿದೆ. ಹೀಗಾಗಿ ದಕ್ಷಿಣ ಭಾರತದ ಪರ ಹೇಳಿಕೆ ಬರುತ್ತಿದೆ ಅಂತಾರಲ್ಲ?
ರಾಜಕೀಯ ವಿಶ್ಲೇಷಕರು ನನ್ನ ಹೇಳಿಕೆಯನ್ನು ಹೇಗೆ ಹೇಗೆ ವಿಶ್ಲೇಷಿಸುತ್ತಿದ್ದಾರೋ ನನಗೆ ಗೊತ್ತಿಲ್ಲ. ನನ್ನ ಗುರಿಯೊಂದೇ ದಕ್ಷಿಣ ಭಾರತಕ್ಕೆ, ಕರ್ನಾಟಕಕ್ಕೆ ಅನ್ಯಾಯವಾಗಬಾರದು. ಅಷ್ಟೇ.

ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದಿರಿ, ಕೇಂದ್ರ ಸ್ಪಂದಿಸುತ್ತಿಲ್ಲ, ಮುಂದೇನು?ಇದು ನನ್ನೊಬ್ಬನ ಕೂಗು ಅಲ್ಲ. ಇದು ಏಳು ಕೋಟಿ ಕನ್ನಡಿಗರ ಕೂಗು. ದಕ್ಷಿಣ ಭಾರತದ ಏಳು ರಾಜ್ಯಗಳ ಸಮಾನ ಚಿಂತನೆ ಹೊಂದಿರುವವರ ಕೂಗು ಇದು. ಈ ಕೂಗು ಹೆಚ್ಚಾಗಲು ಕೇಂದ್ರ ಅವಕಾಶವನ್ನುಮಾಡಬಾರದು ಎಂಬುದು ನಮ್ಮ ಒತ್ತಾಯ.

ಆದರೆ, ಕರ್ನಾಟಕ ಈ ವಿಚಾರದಲ್ಲಿ ಕೂಗೆಬ್ಬಿಸಿರುವಷ್ಟು ಬೇರೆ ದಕ್ಷಿಣ ರಾಜ್ಯಗಳಲ್ಲಿ ಎದ್ದಿಲ್ಲ?
ಈ ವಿಚಾರದಲ್ಲಿ ಜಾಗೃತಿ ಮೂಡಬೇಕಾದ ಅಗತ್ಯವಿದೆ. ಮಾಧ್ಯಮಗಳ ಪಾತ್ರವೂ ಇದರಲ್ಲಿ ಇದೆ. ಮಾಧ್ಯಮಗಳು ಕರ್ನಾಟಕಕ್ಕೆ, ದಕ್ಷಿಣ ಭಾರತಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಜಾಗೃತಿ ಮೂಡಿಸಬೇಕು. 

ನಿಮ್ಮ ಮಕ್ಕಳು ಕರ್ನಾಟಕದಲ್ಲಿ ನ್ಯಾಯಯುತ ಹಕ್ಕು ಪಡೆಯಬೇಕಾದರೆ ನೀವು ಜಾಗೃತಿ ಮೂಡಿಸಬೇಕು.

ದಕ್ಷಿಣ ಭಾರತ ರಾಜ್ಯಗಳೂ ಒಗ್ಗೂಡಿ ಒತ್ತಡ ಹಾಕುವ ಪ್ರಯತ್ನ ನಡೆದಿದೆಯಂತಲ್ಲ?
ಆ ಬಗ್ಗೆ ನಾನು ಏನೂ ಮಾತನಾಡುವಂತಿಲ್ಲ. ಈಗಾಗಲೇ ಕಾಂಟ್ರವರ್ಸಿಯಲ್ಲಿ ಇದ್ದೇನೆ. ಹೆಚ್ಚು ಮಾತನಾಡಲ್ಲ.

ಬಿಜೆಪಿ ರಾಮ ಮಂದಿರ ವಿಚಾರ ಮುಂದಿಟ್ಟಿದೆ. ನೀವು ದಕ್ಷಿಣ ಭಾರತ ವಿಚಾರ ಎತ್ತಿದ್ದೀರಾ. ಲೋಕಸಭೆ ಚುನಾವಣೆಗೆ ಇದರ ಪ್ರಭಾವ ಇರುತ್ತಾ?
ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಅಭಿವೃದ್ಧಿ ವಿಚಾರ ಪ್ರಸ್ತಾಪ ಮಾಡಿದ್ದೇವೆ. ಗ್ಯಾರಂಟಿ ವಿಚಾರ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ. ಜನ ಯಾವ್ಯಾವ ವಿಚಾರ ಮುಂದಿಟ್ಟುಕೊಂಡು ಮತದಾನ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಲೋಕಸಭಾ ಚುನಾವಣೆ ನಂತರ ರಾಜ್ಯ ರಾಜಕಾರಣ ಬದಲಾಗುತ್ತಂತೆ?
ರಾಜಕೀಯವಾಗಿ ಅಸ್ತಿತ್ವ ಕಳೆದುಕೊಂಡ ಕೆಲವರು ಇಂತಹ ಹೇಳಿಕೆ ನೀಡುತ್ತಾರೆ. 

ಅಧಿಕಾರ ಹಸ್ತಾಂತರ ಕೂಡ ಲೋಕಸಭೆ ಚುನಾವಣೆ ನಂತರ ನಡೆಯುತ್ತಂತೆ?
ಅದು ನನಗೆ ಗೊತ್ತಿಲ್ಲ. ಅದು ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಧಿಸಿದ ವಿಚಾರ.

ಕೆಪಿಸಿಸಿ ಅಧ್ಯಕ್ಷರು ಈ ಅವಧಿಯಲ್ಲೇ ಮುಖ್ಯಮಂತ್ರಿಯಾಗುತ್ತಾರಾ? 
ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ವೈಯಕ್ತಿಕವಾಗಿ ನನ್ನ ಆಸೆ. ಆದರೆ, ತೀರ್ಮಾನ ಮಾಡಬೇಕಾದವರು ಪಕ್ಷದ ವರಿಷ್ಟರು. 

ರಾಜ್ಯ ರಾಜಕಾರಣಕ್ಕೆ ಬರುವಿರಾ?
ಸದ್ಯಕ್ಕೆ ರಾಜಕಾರಣವೇ ಬೇಡ ಅಂತ ಅನಿಸಿದೆ.

ಅದ್ಯಾಕೆ?
ನೇರ ನುಡಿಗೆ ರಾಜಕಾರಣ ಸರಿ ಬರಲ್ಲ ಅನಿಸಿದೆ. ನೇರ ನಡೆ ಹಾಗೂ ನೇರ ನುಡಿಗೆ ರಾಜಕಾರಣ ಸರಿ ಬರಲ್ಲ.

ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಲೋಕಸಭೆಗೆ ಗೆದ್ದವರು ನೀವೊಬ್ಬರೆ. ಈ ಬಾರಿ?
15 ಸ್ಥಾನಗಳನ್ನು ಗೆಲ್ಲುತ್ತೇವೆ.

ಯಾಕೆ ಆ ವಿಶ್ವಾಸ?
ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವ. ಇವುಗಳನ್ನು ನೋಡಿ ಮತ ಹಾಕುತ್ತಾರೆ.

ನಿಮ್ಮ ಸ್ಪರ್ಧೆ ಎಲ್ಲಿಂದ? ಬೆಂ.ಗ್ರಾಮಾಂತರವೇ ಅಥವಾ ಬೇರೆ ಕಡೆ ಹೋಗುತ್ತಿರಾ?
ಪಕ್ಷ ಎಲ್ಲಿ ಹೇಳುತ್ತದೆಯೋ ಅಲ್ಲಿ ಸ್ಪರ್ಧಿಸುತ್ತೇನೆ. ಮನೆಯಲ್ಲಿರು ಅಂದರೆ ಮನೆಯಲ್ಲಿರುತ್ತೇನೆ.

PREV

Recommended Stories

ರೋಬೋಟಿಕ್ ತಂತ್ರಜ್ಞಾನ ಬಳಸಿ ಯಶಸ್ವಿ ಡಬಲ್ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಅಪೋಲೋ
ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ