ಯುವಕನೋರ್ವ ನಾನು ಕಳೆದ ಹತ್ತು ವರ್ಷಗಳಿಂದ ಸುತ್ತಾಡಿದರೂ ಕನ್ಯಾ ಸಿಗ್ತಾ ಇಲ್ಲ, ರೈತನಾಗಿರುವುದರಿಂದ ಕನ್ಯಾ ನೀಡುತ್ತಿಲ್ಲ. ಹೀಗಾಗಿ, ನೀವು ನನಗೊಂದು ಕನ್ಯಾ ಕೊಡಿಸಿ ಎಂದು ಅರ್ಜಿ ಸಲ್ಲಿಸಿದ್ದ. ಇದಕ್ಕಾಗಿ ನಾನು ಸಹ ಪ್ರಯತ್ನ ಮಾಡಿದೆ. ಆದರೂ ಆ ಯುವಕನಿಗೆ ಕನ್ಯಾ ಕೊಡಿಸಲು ಆಗಲೇ ಇಲ್ಲ ಎನ್ನುವುದೇ ನನಗೆ ದೊಡ್ಡ ಕೊರಗು. ಅದೊಂದು ಕೆಲಸ ನಾನು ಮಾಡಲೇಬೇಕಾಗಿತ್ತು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳುತ್ತಿದ್ದಂತೆ ಅಲ್ಲಿದ್ದವರು ಬಿದ್ದು ಬಿದ್ದು ನಕ್ಕರು.
ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಸಾಮಾನ್ಯ. ಹೀಗೆ ವರ್ಗಾವಣೆ ಆಗುವಾಗ ಸೇವಾ ಅವಧಿಯಲ್ಲಿ ಮಾಡಿದ ಕೆಲಸದ ಬಗ್ಗೆ ಬಹುತೇಕ ತೃಪ್ತಿ, ಸಮಾಧಾನ ಹೊಂದಿರುತ್ತಾರೆ. ಆದರೆ ಸುಮಾರು ಒಂದು ವರ್ಷ 10 ತಿಂಗಳು ಕೊಪ್ಪಳ ಜಿಲ್ಲಾಧಿಕಾರಿಯಾಗಿದ್ದ ನಲಿನ್ ಅತುಲ್ ಸಾಹೇಬ್ರು ಮಾತ್ರ ಬಹು ದೊಡ್ಡ ಕೊರಗಿನಿಂದ ಬೇರೆ ಕಡೆಗೆ ವರ್ಗಾವಣೆ ಆಗುತ್ತಿರುವುದಾಗಿ ನೋವಿನಿಂದ ಹೇಳಿಕೊಂಡಿದ್ದಾರೆ!!!
ಬೇರಡೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ತಮಗೆ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ನಲಿನ್ ಅತುಲ್ ಅವರು ಎಲ್ಲರ ಮುಂದೆ ಈ ನೋವು ಹಂಚಿಕೊಂಡರು.
ಕೊಪ್ಪಳ ಜಿಲ್ಲೆಯಲ್ಲಿ ಒಂದು ವರ್ಷ 10 ತಿಂಗಳ ಕಾಲ ನಾನು ಕೆಲಸ ಮಾಡಿದ್ದೇನೆ. ಈ ವೇಳೆ ನಾನು ನನಗೆ ಸಾಧ್ಯವಾಗಿದ್ದನ್ನು ಮಾಡಿದ್ದೇನೆ, ಆಡಳಿತದ ದೃಷ್ಟಿಯಿಂದ ಕೆಲವರ ಮೇಲೆ ರೇಗಾಡಿದ್ದೇನೆಯೇ ಹೊರತು ವೈಯಕ್ತಿಕ ದ್ವೇಷದಿಂದಲ್ಲ ಎಂದೆಲ್ಲ ತಮ್ಮ ಆಡಳಿತ ಅವಧಿಯಲ್ಲಿನ ಒಂದೊಂದೇ ಘಟನೆಗಳನ್ನು ಎಳೆ ಎಳೆಯಾಗಿ ಹೇಳುತ್ತಾ ನೋವಿನ ಸಂಗತಿ ಹೇಳತೊಡಗಿದರು.
ಕನಕಗಿರಿಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಯುವಕನೋರ್ವ, ‘ನಾನು ಕಳೆದ ಹತ್ತು ವರ್ಷಗಳಿಂದ ಸುತ್ತಾಡಿದರೂ ಕನ್ಯಾ ಸಿಗ್ತಾ ಇಲ್ಲ, ರೈತನಾಗಿರುವುದರಿಂದ ಕನ್ಯಾ ನೀಡುತ್ತಿಲ್ಲ. ಹೀಗಾಗಿ, ನೀವು ನನಗೊಂದು ಕನ್ಯಾ ಕೊಡಿಸಿ’ ಎಂದು ಅರ್ಜಿ ಸಲ್ಲಿಸಿದ್ದ. ಇದಕ್ಕಾಗಿ ನಾನು ಸಹ ಪ್ರಯತ್ನ ಮಾಡಿದೆ. ಆದರೂ ಆ ಯುವಕನಿಗೆ ಕನ್ಯಾ ಕೊಡಿಸಲು ಆಗಲೇ ಇಲ್ಲ ಎನ್ನುವುದೇ ನನಗೆ ದೊಡ್ಡ ಕೊರಗು. ಅದೊಂದು ಕೆಲಸ ನಾನು ಮಾಡಲೇಬೇಕಾಗಿತ್ತು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳುತ್ತಿದ್ದಂತೆ ಅಲ್ಲಿದ್ದವರು ಬಿದ್ದು ಬಿದ್ದು ನಕ್ಕರು.
ಲಾಡ್ ಸಾಹೇಬರ ತರಾಟೆ ಪ್ರಸಂಗ!
ಸಾಮಾನ್ಯವಾಗಿ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅಧಿಕಾರಿಗಳನ್ನು ಜನಪ್ರತಿನಿಧಿಗಳು ತರಾಟೆಗೆ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಮಿಕ ಸಚಿವರೂ ಆದ ಸಂತೋಷ್ ಲಾಡ್ ಸಾಹೇಬರು ಈ ವಿಚಾರದಲ್ಲಿ ಜಿಲ್ಲೆಗೆ ವರ್ಲ್ಡ್ ಫೇಮಸ್ಸು!
ಇತ್ತೀಚೆಗೆ ಅತಿಯಾದ ಮಳೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಪಂಚಾಯಿತಿಯಲ್ಲಿ ನಡೆಸಿದ ಸಭೆಯಲ್ಲಿ ಮಳೆ ಬಂದಾಗ ತಲಾಟಿಗಳು, ಗ್ರಾಮಾಡಳಿತಾಧಿಕಾರಿಗಳು ಕಾರ್ಯ ಸ್ಥಾನದಲ್ಲಿ ಇರುವುದಿಲ್ಲ. ಮಳೆ ಹಾನಿ ಪ್ರದೇಶಕ್ಕೆ ನಾವು ಹೋದಾಗ ಜನ ನಮಗೆ ಛೀ-ಥೂ ಅಂತಾರೆ. ಮೇಲಾಧಿಕಾರಿಗಳು ಗ್ರಾಮಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿ ಅವರು ಕಾರ್ಯಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಗಟಾರು, ಗುಂಡಿಗಳು ತೆರೆದಿದ್ದು ಜನ ಸಾಯುತ್ತಿದ್ದಾರೆ? ನೀವೆಲ್ಲರೂ ಎಲ್ಲಿದ್ದೀರಿ ಎಂದು ಅಧಿಕಾರಿಗಳಿಗೆ ಜಾಡಿಸಿದರು. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಲಾಡ್ ಸಾಹೇಬರು, ಇಬ್ಬರು ತಲಾಟಿ ಹಾಗೂ ಗ್ರಾಮಾಡಳಿತಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿಯೂ, ‘ನೀವೆಲ್ಲಿದ್ದೀರಿ? ಏನು ಕೆಲಸ ಮಾಡುತ್ತಿದ್ದೀರಿ’ ಎಂದು ಕೇಳಿದ್ದು ಆಯ್ತು. ಆಕಸ್ಮಾತ್ ಸಚಿವರು ಕರೆ ಮಾಡಿ ಮಾತನಾಡಿದ ಅಧಿಕಾರಿಗಳೆಲ್ಲರೂ ಆಯಾ ಗ್ರಾಪಂನಲ್ಲೇ ಇದ್ದಿದ್ದು ಅವರ ಅದೃಷ್ಟ.
ಹೀಗೆ ಅಧಿಕಾರಿಗಳಿಗೆ ಯಶಸ್ವಿಯಾಗಿ ತರಾಟೆಗೆ ತೆಗೆದುಕೊಂಡ ನಂತರ ಲಾಡ್ ಸಾಹೇಬರು ಸುದ್ದಿಗೋಷ್ಠಿಗೆ ಮುಂದಾದರು. ಆಗ ಅವರಿಗೆ ಎದುರಾದ ಮೊದಲ ಪ್ರಶ್ನೆ-‘ಲಾಡ್ ಸಾಹೇಬರೇ, ಅಧಿಕಾರಿಗಳು ಕಾರ್ಯ ಸ್ಥಾನದಲ್ಲಿರಬೇಕು ಎಂದು ಅಧಿಕಾರಿಗಳಿಗೆ ಸರಿಯಾಗೇ ಹೇಳಿದಿರಿ. ಹೀಗೆ ಅಧಿಕಾರಿಗಳನ್ನು ಪ್ರಶ್ನಿಸುವ ಸಚಿವರು ದೊರೆತದ್ದು ಈ ಜಿಲ್ಲೆಯ ಪುಣ್ಯ. ಬಟ್, ಆದರೆ, ಪರಂತು, ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿರುವ ತಾವು ಬೆಂಗಳೂರಿಗೆ ಹೋದರೆ ಜಿಲ್ಲೆಯನ್ನೇ ಮರೆತು ಬಿಡುತ್ತೀರಲ್ಲ, ಇದು, ನ್ಯಾಯವೇ?’
-ಸೋಮರಡ್ಡಿ ಅಳವಂಡಿ
-ಬಸವರಾಜ ಹಿರೇಮಠ