ವಿಜಯ್ ಮಹಾಂತೇಶ ಪಾಪನಾಳ
ಸ್ವತಂತ್ರ ಸಂಶೋಧಕರು, ಪ್ರಾಚೀನ ಇತಿಹಾಸ ಮತ್ತು ಶಾಸನ ಶಾಸ್ತ್ರ
‘ಕೆಲಬರೋದದೆ ಕೇಳದೆ ಕಲ್ಗಳಂತೆ ಗರ್ವಿತರಡಸಿರ್ಪರ್’ ಇದು ಕವಿ ಚಕ್ರವರ್ತಿ ರನ್ನನು ತನ್ನ ‘ಸಾಹಸ ಭೀಮ ವಿಜಯಂ’ ಕಾವ್ಯದಲ್ಲಿ ಹೇಳುವ ಮಾತು. ಓದದೆ, ಕೇಳದೆ ಗರ್ವ ಅಡರಿ ಕಲ್ಲುಗಳಂತೆ ಸಂವೇದನರಹಿತರಾಗಿರುವವರ ಕುರಿತು ರನ್ನನು ಬೀಸುವ ಚಾಟಿಯ ಏಟು.
ಇತ್ತೀಚೆಗೆ ಕನ್ನಡ ಭಾಷೆಯ ಕುರಿತಾಗಿ ಅತ್ಯಂತ ಅವಿವೇಕದ ಮತ್ತು ಅಸತ್ಯದ ಮಾತಾಡಿರುವ ಕಮಲ್ ಹಾಸನ್ ಎಂಬ ನಟನಿಗೆ ಈ ಮಾತು ಸರಿಯಾಗಿಯೇ ಅನ್ವಯವಾಗುತ್ತದೆ.
ತನ್ನ ಚಲನಚಿತ್ರವೊಂದರ ಬಿಡುಗಡೆ ಪೂರ್ವದ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಎನ್ನುವ ನಟನು, ‘ಕನ್ನಡವು ತಮಿಳಿನಿಂದ ಬಂದಿದೆ’ ಎಂದು ಹೇಳಿದ್ದು ಈಗ ಕನ್ನಡ ನಾಡಿನಾದ್ಯಂತ ತೀವ್ರ ಪ್ರತಿಭಟನೆಗಳಿಗೆ ಕಾರಣವಾಗುತ್ತಿರುವುದು ಸಹಜವೇ ಆಗಿದೆ. ಕನ್ನಡ ಭಾಷೆಗೆ ಅಪಮಾನ ಮಾಡುವಂಥ ಇಂಥ ಸುಳ್ಳು ಹೇಳಿಕೆಗಳನ್ನು ಖಂಡಿಸಿ, ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನಿಗಿದೆ. ಈ ಹಿನ್ನೆಲೆಯಲ್ಲಿ, ಈಗ ನಾವು ಮಾಡುತ್ತಿರುವ ಕಾನೂನಾತ್ಮಕವಾದ ಹೋರಾಟಕ್ಕೆ ಒಂದು ನೈತಿಕ ಬಲವಿದೆ. ಕನ್ನಡವೇ ಪ್ರಾಚೀನ - ಬಹುಮುಖಿ ಆಧಾರಗಳು ಈಗ ಮೊದಲು ಕಮಲ್ ಹಾಸನ್ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಅದಕ್ಕೆ ಯಾವ ಆಧಾರಗಳೂ ಇಲ್ಲ ಎನ್ನುವುದನ್ನೂ, ಅದರ ಜೊತೆಗೆ, ಅತ್ಯಂತ ಪ್ರಮುಖವಾಗಿ ಕನ್ನಡವೇ ತಮಿಳಿಗಿಂತ ಪ್ರಾಚೀನ ಎನ್ನುವುದಕ್ಕೆ ಇರುವ ಆಧಾರಗಳನ್ನೂ ನೋಡೋಣ.
ಪದ ಸಂರಚನೆ
ಈ ಕೆಳಗಿನ ಕೆಲವು ಹಳಗನ್ನಡದ ಶಬ್ದಗಳನ್ನೂ, ದೈನಂದಿನ ಜೀವನದಲ್ಲಿ ನಿತ್ಯ ಬಳಸುವ ಸಾಮಾನ್ಯ ಕನ್ನಡ ಶಬ್ದಗಳನ್ನೂ, ಅವುಗಳಿಗೆ ಸಂವಾದಿಯಾಗಿ ತಮಿಳಿನಲ್ಲಿರುವ ಶಬ್ದಗಳನ್ನೂ ಗಮನಿಸಿ. ಕನ್ನಡ: ಪೆಸರ್ (ಹೆಸರು), ಕಿವಿ, ಕೆಸರು, ಮನೆ, ಕೇಳ್ದ (ಕೇಳಿದ), (ಕರ್ವು, ಕರ್ಬು) ಕಬ್ಬು, ಪೆರ್ಮೆ, ನೋಡು (ನೋಟ), ನಾಡು
ತಮಿಳು: ಪೆಯರ್, ಚೆವಿ, ಚೆಯರು, ಮನೈ, ಕೇಟ್ಟ, ಕರುಂಬು, ಪೆರುಮೈ, ನೋಕ್ಕು, ನಾಟ್ಟ ಈ ನಿದರ್ಶನಗಳಲ್ಲಿ ಕನ್ನಡದ ಶಬ್ದಗಳು ಮೂಲಸ್ವರೂಪದವಾಗಿದ್ದು ತಮಿಳಿನ ಶಬ್ದಗಳು ಕನ್ನಡ ಪದಗಳಿಂದ ರೂಪಾಂತರಗೊಳಿಸಿಕೊಂಡ ಶಬ್ದಗಳಾಗಿವೆ. ಇವು ಕೇವಲ ಕೆಲವು ಸೀಮಿತ ಉದಾಹರಣೆಗಳಷ್ಟೆ. ಇಂಥ ಇನ್ನೂ ಅನೇಕ ಶಬ್ದಗಳ ಮೂಲ ಸ್ವರೂಪಗಳು ಕನ್ನಡದಲ್ಲಿಯೇ ಇವೆ.
ಮೂಲ ದ್ರಾವಿಡ ಸ್ವರಗಳು ಮತ್ತು ವ್ಯಂಜನಗಳು
ಈ ಲೇಖನದ ಆರಂಭದಲ್ಲಿಯೇ ನಾನು ಉಲ್ಲೇಖಿಸಿರುವ ಕವಿಚಕ್ರವರ್ತಿ ರನ್ನನ ‘ಗದಾಯುದ್ಧ’ ಕಾವ್ಯದಲ್ಲಿನ ಉಕ್ತಿಯಲ್ಲಿರುವ ‘ಇರ್ಪರ್’ ಎಂಬಂಥ 8-9 ನೆಯ ಶತಮಾನದ ಪದಬಳಕೆಗಳೂ, ಪ್ರಾಚೀನ ಶಾಸನಗಳಲ್ಲಿ ಕಾಣುವ ‘ನಾಡುಳ್, ಅಪ್ಪೊರ್, ವಿಟ್ಟಾರ್, ಅದಾನ್, ಅಳಿವೋನ್, ಸಂದೋನ್, ಕೊಟ್ಟಾರ್’ ಎಂಬಂತಹ ಪೂರ್ವದ ಹಳಗನ್ನಡದ ಪದಗಳೂ ನಮಗೆ ಭಾಷೆಯ ಕಾಲಾನುಕ್ರಮ ವಿಕಸನದ ಹಿಂದಿನ ರೂಪಗಳನ್ನು ಅಧ್ಯಯನ ಮಾಡಲು ಅತ್ಯಂತ ಸಹಾಯಕ. ಈ ರೀತಿಯ ಪದ ಸಂರಚನೆಗಳ ಆಧಾರದಲ್ಲಿ ನಾವು ‘ಆದಿ ದ್ರಾವಿಡ’ ಭಾಷೆಯಲ್ಲಿ 10 ಸ್ವರಗಳನ್ನು ಪುನರ್ ರಚಿಸಿಕೊಳ್ಳಬಹುದು. ಅವುಗಳಲ್ಲಿ ಇಂದು ಕನ್ನಡದಲ್ಲಿ ಬಳಕೆಯಲ್ಲಿರುವ ಎಲ್ಲ ಸ್ವರಗಳಿದ್ದು ಭಾಷೆಯ ವಿಕಸನದ ಜೊತೆಗೆ ನಾಲ್ಕು ಹೆಚ್ಚಿನ ಸ್ವರಗಳು ಇಂದಿನ ಕನ್ನಡದಲ್ಲಿ ಇವೆ. ಹಾಗೆಯೇ, ‘ಕ, ಚ, ಟ, ತ, ಪ’ ವರ್ಗದ ವ್ಯಂಜನಗಳು ಸಹ ಮುಂದುವರಿದಿವೆ. ಆದರೆ ತಮಿಳು ಭಾಷೆಯಲ್ಲಿ ಈ ಸ್ವರ-ವ್ಯಂಜನಗಳಲ್ಲಿ ಆದ ಬದಲಾವಣೆಗಳು ಅನೇಕ. ಅನೇಕ ಪದಗಳಲ್ಲಿ ಮೂಲ ‘ಆದಿ ದ್ರಾವಿಡ’ ಸ್ವರವಾದ ‘ಇ’ ಕನ್ನಡದಲ್ಲಿ ಹಾಗೆಯೇ ಉಳಿದುಕೊಂಡು ಬಂದಿದ್ದರೆ ಇದೇ ಸ್ವರವು ತಮಿಳಿನಲ್ಲಿ ‘ಎ’ ಎಂದು ಬದಲಾಗಿದೆ. ಉದಾಹರಣೆಗೆ ‘ಹಿರಿಯ’ ಎನ್ನುವ ಅರ್ಥ ಕೊಡುವ ಹಳಗನ್ನಡದ ‘ಪಿರಿಯ’ ಎಂಬ ಪದ ತಮಿಳಿನಲ್ಲಿ ‘ಪೆರಿಯ’ ಎಂದಾಗುತ್ತದೆ. ಹಾಗೆಯೇ ‘ಎನೆತು’ ಎಂಬ ಪೂರ್ವದ ಹಳಗನ್ನಡದ ಪದವು ಹಳಗನ್ನಡಕ್ಕೆ ಬಂದಾಗ ‘ಎನಿತು’ ಎಂದಾಗುತ್ತದೆ. ಆದರೆ ಇದೇ ಪದ ತಮಿಳಿನಲ್ಲಿ ‘ಏನೈತ್ತು’ ಎಂದಾಗುತ್ತದೆ. ಪಂಪನ ಕಾಲದ ಹಳಗನ್ನಡದ ‘ಇಲ್ಲೆಯೊ’ ಎಂಬ ಶಬ್ದ ಇಂದಿನ ಹೊಸಗನ್ನಡದಲ್ಲಿ ‘ಇಲ್ಲ’ ಎಂದು ಸರಳ ರೂಪದಲ್ಲಿ ಬದಲಾದರೆ ಇದೇ ಪದ ತಮಿಳಿನಲ್ಲಿ ‘ಇಲ್ಲೈ’ ಎಂದು ಸಂಕೀರ್ಣ ವ್ಯಂಜನ ದ್ವಿತ್ವವಾಗುತ್ತದೆ. ಈ ಉದಾಹರಣೆಗಳಿಂದ ನಮಗೆ ತಿಳಿಯುವುದು ಏನೆಂದರೆ ಕನ್ನಡವು ತನ್ನ ಸ್ವರ-ವ್ಯಂಜನಗಳ ಭಾಷಾ ಸ್ವರೂಪದ ಸರಳತೆ ಮತ್ತು ಸ್ವಚ್ಚತೆಯ ಆಧಾರದಲ್ಲಿ ತಮಿಳಿಗಿಂತ ಪ್ರಾಚೀನವಾದುದು.
ಕನ್ನಡದ ಧ್ವನಿಮಾಗಳು - ‘ಕ’ ಮತ್ತು ‘ಚ’ ಕಾರಗಳು: [Phonemes]
ಭಾಷಾಶಾಸ್ತ್ರದಲ್ಲಿ ಧ್ವನಿಮಾಗಳೆಂದರೆ ಒಂದು ಭಾಷೆಯ ನುಡಿಗಳ, ಶಬ್ದಗಳ ಉಚ್ಚಾರದ ಧ್ವನಿಯಲ್ಲಿ ಇರುವ ಅತೀ ಸಣ್ಣ ಆದರೆ ಅತ್ಯಂತ ಮೂಲಭೂತ ಅಂಶಗಳು. ಸರಳವಾಗಿ ಹೇಳುವುದಾದರೆ: ಧ್ವನಿಯ ಅತಿ ಸಣ್ಣ ಭಾಗ. ಕನ್ನಡದ ನುಡಿಗಳ ಅನೇಕ ಧ್ವನಿಮಾಗಳು ಪ್ರಾಚೀನ ಸ್ವರೂಪದ ಸಾರಭೂತ ಅವಿಭಾಜ್ಯ ಅಂಶಗಳಾಗಿವೆ.
ಈ ‘ಕ’ ಮತ್ತು ‘ಚ’ ಕಾರದ ಧ್ವನಿಮಾಗಳ ಸಾಕ್ಷ್ಯವು ಕನ್ನಡದ ಪ್ರಾಚೀನತೆಯನ್ನು ಅತ್ಯಂತ ದೃಢವಾಗಿ ನಿರೂಪಿಸುವ ಭಾಷಾಶಾಸ್ತ್ರೀಯ ಅಂಶವಾಗಿದೆ. ‘ಕ್’ ಮತ್ತು ‘ಚ್’ - ಈ ಎರಡೂ ಧ್ವನಿಗಳಿರುವ ಶಬ್ದಗಳಲ್ಲಿ ‘ಕ’ ಕಾರವು ‘ಚ’ ಕಾರಕ್ಕಿಂತ ಹೆಚ್ಚು ಹಳೆಯದು, ಪ್ರಾಚೀನವಾದುದು. ಇಂಥ ಹೆಚ್ಚು ಪ್ರಾಚೀನವಾದ ‘ಕ’ ಕಾರದ ಶಬ್ದಗಳು ಕನ್ನಡದಲ್ಲಿಯೇ ಇದ್ದು ಈ ಪದಗಳು ತಮಿಳಿನಲ್ಲಿ ನಂತರದ ಕಾಲದ ‘ಚ’ ಕಾರದ ಶಬ್ದಗಳಾಗಿ ಮಾರ್ಪಾಟಾಗುತ್ತವೆ. ಉದಾಹರಣೆಗೆ: (1) ಕನ್ನಡದಲ್ಲಿ ‘ಕೇರುವುದು’ ಎಂದರೆ ಮೊರದಲ್ಲಿ ಹಾಕಿಕೊಂಡು ದವಸಧಾನ್ಯಗಳನ್ನು ಸ್ವಚ್ಛ ಮಾಡುವುದು ಎಂದರ್ಥ. ಇದು ‘ಕೇರ್’ ಎಂಬ ಧಾತುವಿನಿಂದ ಆದದ್ದು. ಕನ್ನಡದ ‘ಕೇರು’ ಎಂಬ ಪದವು ತಮಿಳಿನಲ್ಲಿ ‘ಚೇರು’ ಎಂದಾಗುತ್ತದೆ.
(2) ಹಾಗೆಯೇ, ಕನ್ನಡದಲ್ಲಿ ‘ಕೆಸರು’ ಎಂದಿರುವ ಪದ ತಮಿಳಿನಲ್ಲಿ ‘ಚೆಯರು’ ಎಂದಾಗುತ್ತದೆ.
ಈ ಎಲ್ಲ ಉದಾಹರಣೆಗಳು ತೋರಿಸುವುದೇನೆಂದರೆ ಕನ್ನಡವು ತಮಿಳಿಗಿಂತಲೂ ಹೆಚ್ಚು ಹಳೆಯದಾದ ಶಬ್ದ ಸ್ವರೂಪಗಳನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ಕನ್ನಡದ ಆಕೃತಿಮಾಗಳು: [Morphemes] ಆಕೃತಿಮಾಗಳೆಂದರೆ ಒಂದು ಭಾಷೆಯ ಶಬ್ದದೊಳಗಿನ ಅರ್ಥವನ್ನು ಹೊರಡಿಸಬಲ್ಲ ಒಂದು ಅವಿಭಾಜ್ಯ ಅಂಗ. ಒಂದೇ ಶಬ್ದದಲ್ಲಿ ಒಂದಕ್ಕಿಂತ ಹೆಚ್ಚು ಆಕೃತಿಮಾಗಳಿರಲೂ ಸಾಧ್ಯ. ಸರಳವಾಗಿ ಹೇಳಬೇಕೆಂದರೆ: ಪದಾರ್ಥ/ಶಬ್ದಾರ್ಥದ ಅತೀ ಸಣ್ಣ ಭಾಗ.
ಕನ್ನಡ ಭಾಷೆಯಲ್ಲಿನ ಆಕೃತಿಮಾಗಳು ಆರಂಭ ಕಾಲದಿಂದಲೂ ತಮಿಳು ಭಾಷೆಯಲ್ಲಿ ಕಂಡುಬರುತ್ತವೆ. ಉದಾಹರಣೆಗೆ: ನಲ್ಲಿಯೂರ್ ಎನ್ನುವ ಪದದ ಆಕೃತಿಮಾ ಸ್ವರೂಪವಾದ ‘ನಲ್ಲಿಯೂರಾ’ ಎಂಬುದು ಕ್ರಿ.ಪೂ 2 ನೆಯ ಶತಮಾನದಲ್ಲಿಯೇ ತಮಿಳಿನಲ್ಲಿ ಕಾಣಿಸಿಕೊಂಡಿದೆ. ಈ ದೀರ್ಘ ‘ಆ’ ಸ್ವರದ ಆಕೃತಿಮಾ ತಮಿಳಿಗೆ ಕನ್ನಡದಿಂದ ಹೋಗಿರುವ ರಚನೆಯಾಗಿದೆ. ಇದರ ಹೃಸ್ವವಾದ ‘ಅ’ ಎನ್ನುವ ಆಕೃತಿಮಾಗಿಂತಲೂ ಇದು ಪ್ರಾಚೀನ. ಸಂಸ್ಕೃತದ ಕರ್ಮಣಿ ಪ್ರಯೋಗ ತಮಿಳಿನಲ್ಲಿ ಏಕೆ ಹೇರಳವಾಗಿದೆ? ಇದು ತಮಿಳು ಭಾಷೆಯೇ ಪ್ರಾಚೀನ, ಮತ್ತು ಯಾವ ಭಾಷೆಯಿಂದಲೂ ಏನನ್ನೂ ಸ್ವೀಕರಿಸಿಲ್ಲ, ಪ್ರಭಾವಕ್ಕೆ ಒಳಗಾಗಿಲ್ಲ ಎಂದು ಹೇಳುವವರು ಉತ್ತರಿಸಬೇಕಾದ ಪ್ರಶ್ನೆ. ನಾವು ಭಾಷೆಯಲ್ಲಿ ‘ಕರ್ತರಿ’ ಮತ್ತು ‘ಕರ್ಮಣಿ’ ಎಂಬ ಎರಡು ಪ್ರಯೋಗಗಳನ್ನು ಮಾಡುತ್ತೇವೆ. ಆದರೆ ಈ ಕರ್ಮಣಿ ಪ್ರಯೋಗ ಎನ್ನುವುದು ದ್ರಾವಿಡ ಭಾಷಾ ಸಮೂಹಕ್ಕೆ ಸಹಜವಾಗಿ ಬಂದದ್ದಲ್ಲ ಮತ್ತು ದ್ರಾವಿಡ ಭಾಷೆಗಳ ಲಕ್ಷಣವಲ್ಲ. ಅದು ಇಂಗ್ಲೀಷ್ ಮತ್ತು ಸಂಸ್ಕೃತದಂತಹ ‘ಇಂಡೋ-ಯುರೋಪಿಯನ್’ ಭಾಷೆಗಳ ಲಕ್ಷಣ ಮತ್ತು ವೈಶಿಷ್ಟ್ಯ.
ಇಂಥ ಕರ್ಮಣಿ ಪ್ರಯೋಗವನ್ನು ತಮಿಳಿನಲ್ಲಿ ನಾವು ಹೇರಳವಾಗಿ ನೋಡುತ್ತೇವೆ. ಕನ್ನಡದಲ್ಲಿ ಈ ಕರ್ಮಣಿ ಪ್ರಯೋಗ ಇಲ್ಲ. ತೀರ ಕ್ವಚಿತ್ತಾಗಿ ಎಲ್ಲೋ ಒಂದು ಅಪವಾದವೆಂಬಂತೆ ಪೂರ್ವದ ಹಳಗನ್ನಡದ ಶಾಸನಗಳಲ್ಲಿ ಮತ್ತು ಪಂಪ, ಪೊನ್ನ, ರನ್ನರ ಕಾವ್ಯಗಳಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿ ಕಾಣಬರುತ್ತದೆ. ಆದರೆ ತಮಿಳು ಭಾಷೆಯಲ್ಲಿ ಹಳೆಯದೆನ್ನುವ ‘ಸಂಗಂ’ ಸಾಹಿತ್ಯದಲ್ಲಿಯೂ, ಜೊತೆಗೆ ಇಂದಿನ ಕಾಲದ ತಮಿಳಿನಲ್ಲಿಯೂ ಸಂಸ್ಕೃತ ಪ್ರಭಾವದ ಕರ್ಮಣಿ ಪ್ರಯೋಗ ಹೇರಳವಾಗಿದೆ. ಆದಾಗ್ಯೂ, ತಮಿಳರು ತಮ್ಮನ್ನು ತಾವು ಸಂಸ್ಕೃತದಿಂದ ಪ್ರಭಾವಿತರಾಗದೆ ಸ್ಪಟಿಕದಷ್ಟು ಸ್ವಚ್ಛ ನಮ್ಮ ಭಾಷೆ ಎಂದು ಹೇಳುವುದರಲ್ಲಿ ನಿಸ್ಸೀಮರು. ಸಂಸ್ಕೃತದ ಕರ್ಮಣಿಯು ಏಕಾಯಿತು ತಮಿಳಿನ ಕಣ್ಮಣಿ ಎಂದರೆ ಏನುತ್ತರ ಕೊಡುತ್ತಾರೆ ಇವರು? ಸಂಗಂ (ಚಂಗ) ಸಾಹಿತ್ಯದ ಸುಳ್ಳು ಪ್ರಾಚೀನತೆ ಹಾಗೂ ಸಾಹಿತ್ಯಕ ಸಾಕ್ಷ್ಯಗಳು: ತಮಿಳರು ತಮ್ಮ ಭಾಷೆ ಎಲ್ಲಕ್ಕಿಂತ ಪ್ರಾಚೀನ ಎಂದು ಪದೇಪದೇ ಬೆರಳು ಮಾಡಿ ತೋರಿಸುವುದು ಈ ‘ಸಂಗಂ’ ಎಂಬ ಅವರ ಸಾಹಿತ್ಯದ ಕಡೆಗೆ. ಅನೇಕ ತಮಿಳು ಪಂಡಿತರು ಈ ಸಂಗಂ ಸಾಹಿತ್ಯದ ಕಾಲವನ್ನು ಕ್ರಿ. ಪೂ 7ನೆಯ ಶತಮಾನದಿಂದ ಕ್ರಿ.ಶ 5ನೆಯ ಶತಮಾನದ ತನಕ ತಲೆಗೊಬ್ಬರಂತೆ ಪ್ರಾಚೀನತೆಯ ತೂಗುಯ್ಯಾಲೆಯಲ್ಲಿ ತೇಲಾಡಿಸಿ ಒಬ್ಬೊಬ್ಬರೂ ಒಂದೊಂದು ಇಸವಿಯನ್ನು ಅಂಟಿಸಿಬಿಟ್ಟಿದ್ದಾರೆ. ತಮಿಳು ಪಂಡಿತರ ಪ್ರಕಾರ ಒಟ್ಟು ಮೂರು ‘ಚಂಗ’ ಕಾಲಗಳಿದ್ದುವೆಂದೂ, ಈ ಮೂರೂ ವಿಭಿನ್ನ ಕಾಲಘಟ್ಟಗಳಲ್ಲಿ ತಮಿಳು ಭಾಷೆಯಲ್ಲಿ ವಿಫುಲವಾದ ಸಾಹಿತ್ಯ ಸೃಷ್ಟಿಯಾಯಿತೆಂದೂ, ಇದೇ ದ್ರಾವಿಡ ಭಾಷೆಗಳ ಅತ್ಯಂತ ಪುರಾತನ ಸಾಹಿತ್ಯವೆಂದೂ ಹೇಳುತ್ತಾರೆ. ಅವರು ಹೇಳುವ ಪ್ರಕಾರ ಈ ಮೂರೂ ‘ಚಂಗ’ ಗಳ ಕಾಲಾವಧಿ ಇಂತಿದೆ:
ಮೊದಲ ‘ಚಂಗ’ ಕಾಲದ ಒಟ್ಟು ಅವಧಿ: 4440 ವರ್ಷಗಳು; ಎರಡನೇ ‘ಚಂಗ’ ಕಾಲದ ಒಟ್ಟು ಅವಧಿ: 3700 ವರ್ಷಗಳು ಮತ್ತು ಮೂರನೇ ‘ಚಂಗ’ ಕಾಲದ ಒಟ್ಟು ಅವಧಿ: 1850 ವರ್ಷಗಳು.
ಒಟ್ಟು ಲೆಕ್ಕ ಹಾಕಿದರೆ 9990 ವರ್ಷಗಳು. ಎಂದರೆ, ಹತ್ತು ಕಡಿಮೆ ಹತ್ತು ಸಾವಿರ ವರ್ಷಗಳು. ಇಷ್ಟು ಅವಧಿಯವರೆಗೆ ‘ಚಂಗ’ ಸಾಹಿತ್ಯವಿತ್ತು ಎಂದು ಹೇಳಿಕೊಳ್ಳುತ್ತಾರೆ ತಮಿಳರು.
ಇಂದು ನಾವಿರುವುದು 2025 ರ ಇಸವಿಯಲ್ಲಿ.
ಕಾಲದಲ್ಲಿ ನಾವು ಈ ಮೂರನೇ ಮತ್ತು ಎರಡನೇ ‘ಚಂಗ’ ಗಳನ್ನು ದಾಟಿಕೊಂಡು ಒಂದನೇ ‘ಚಂಗ’ ಕಾಲವನ್ನು ಮುಟ್ಟಿದರೆ ನಾವು ಹತ್ತತ್ತಿರ ಕ್ರಿ.ಪೂ 10,000 ಇಸವಿಯಲ್ಲಿರುತ್ತೇವೆ.
ಆದರೆ, ಪ್ರಿಯ ಓದುಗ ಮಿತ್ರರೆ - ಈ ಕ್ರಿ.ಪೂ 10,000ದ ಇಸವಿಯಲ್ಲಿ ಇಡೀ ಭೂಮಂಡಲದ ಮೇಲೆ ಆಗ ಏನಾಗುತ್ತಿತ್ತು ಗೊತ್ತೆ? ಆಗ ಇಡೀ ಭೂಮಂಡಲದ ಮೇಲೆ ಅದೇ ತಾನೇ ಕೊನೆಯ ಹಿಮಯುಗ [Ice Age] ಮುಗಿದು ಮನುಷ್ಯನನ್ನೂ ಸೇರಿದಂತೆ ಇನ್ನಿತರೆ ಎಲ್ಲ ಪ್ರಾಣಿ-ಪಕ್ಷಿ-ಸಸ್ಯ ಪ್ರಭೇದಗಳೂ ಬದಲಾದ ವಾತಾವರಣಕ್ಕೆ ಹೊಂದಿಕೊಂಡು ವಿಕಸನ ಹೊಂದುವ ಹಂತದಲ್ಲಿದ್ದವು. ಆಗ ತಾನೇ ಮನುಷ್ಯ ಒಂದೆಡೆ ನೆಲೆ ನಿಂತು ಜೀವಿಸುವುದೇ ಉತ್ತಮ ಎಂದು ಕಂಡುಕೊಂಡು ಸಣ್ಣ ಗುಂಪುಗಳಲ್ಲಿ ಒಂದೆಡೆ ನೆಲೆ ನಿಲ್ಲತೊಡಗಿದ್ದ. ಆದರೆ, ಎಂಥ ಚೋದ್ಯವೋ ನೋಡಿ - ಹಾಗೆಲ್ಲ ಇಡೀ ಭೂಮಂಡಲದ ಮೇಲೆ ಹಿಮಯುಗ ಅದೇ ತಾನೇ ಮುಗಿದು ನವಶಿಲಾಯುಗ ಆರಂಭಗೊಂಡಿದ್ದರೆ, ಈ ತಮಿಳುನಾಡಿನಲ್ಲಿ ಮಾತ್ರ ಅದಾಗಲೇ ಅಮೋಘವಾದ ಸಾಹಿತ್ಯ ಸೃಷ್ಟಿಯಾಗಿಬಿಟ್ಟಿತ್ತು! ಎಂದರೆ, ಮಿಕ್ಕೆಲ್ಲ ಭೂಭಾಗಗಳಲ್ಲಿ ಮನುಷ್ಯನಿಗೆ ನೆಟ್ಟಗೆ ಮಾನ ಮುಚ್ಚಿಕೊಳ್ಳಲು ಬಟ್ಟೆ ಧರಿಸುವುದೂ ಇನ್ನೂ ಸಂಪೂರ್ಣವಾಗಿ ಬಂದಿರಲಿಲ್ಲ ಆದರೆ ತಮಿಳರು ಮಾತ್ರ ಠಾಕುಠೀಕಾಗಿ ಕೂತಗೊಂಡು ಸಾಹಿತ್ಯ ಕಾವ್ಯಗಳನ್ನೇ ಬರೆಯಲು ಶುರುಮಾಡಿಬಿಟ್ಟಿದ್ದರು!! ಎಂಥ ಚಂದಮಾಮದ ಕಥೆಯಲ್ಲವೇ ಇದು? ನವಶಿಲಾಯುಗದ ಕಾಲದಿಂದಲೇ ‘ಚಂಗ’ ಸಾಹಿತ್ಯ ಸೃಷ್ಟಿ ಆರಂಭಗೊಂಡಿತ್ತು ಎಂದರೆ ಹೇಗೆ ನಂಬುವುದು? ಈ ‘ಚಂಗ’ ಸಾಹಿತ್ಯದ ಕುರಿತು ತಮಿಳರು ಕಟ್ಟಿರುವ ಕಥೆಗಳು ಒಂದೆರಡಲ್ಲ. ತಮಿಳರು ತಮ್ಮ ಮೂಲ ನೆಲೆ ಎಂದೆನ್ನುವ ‘ಲೆಮೂರಿಯಾ’ ಎಂಬ ಭೂಖಂಡದ ಕಲ್ಪನೆಯೂ ಮತ್ತು ಅದು ಈಗ ಸಮುದ್ರದಲ್ಲಿ ಮುಳುಗಿ ಹೋಗಿದೆ ಎಂಬ ಕಥೆಯಂತೂ ಯಾವುದೇ ಮೈ ನವಿರೇಳಿಸುವ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ಇದರಿಂದ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ, ವೈಜ್ಞಾನಿಕವಾಗಿಯೂ ಮತ್ತು ತಾರ್ಕಿಕವಾಗಿಯೂ ಯೋಚಿಸಿದರೆ ಈ ‘ಚಂಗ’ ಸಾಹಿತ್ಯ ಅಷ್ಟು ಪ್ರಾಚೀನವಾಗಿರಲು ಸಾಧ್ಯವೇ ಇಲ್ಲ ಎನ್ನುವುದು. ಶಾಸನ ಸಾಕ್ಷ್ಯಗಳು: ತಮಿಳರು ನಮ್ಮ ದೇಶದಲ್ಲಿ ಮೌರ್ಯರ ಅಶೋಕ ಚಕ್ರವರ್ತಿಯ ಪ್ರಾಕೃತ ಶಿಲಾಶಾಸನಗಳ ನಂತರದ ಅತೀ ಪ್ರಾಚೀನ ಶಾಸನಗಳು ನಮ್ಮವು ಎನ್ನುತ್ತಾರೆ. ಇವು ಕ್ರಿ.ಪೂ 2 ಮತ್ತು ಕ್ರಿ.ಶಕದ 4ನೆಯ ಶತಮಾನಕ್ಕೆ ಸೇರಿದ ಶಾಸನಗಳು. ಇವು ಗುಹೆಗಳಲ್ಲಿ ಕೊರೆಯಲಾಗಿರುವ ಶಾಸನಗಳು. ಇವುಗಳು ತುಂಬ ಚಿಕ್ಕ, ಹೆಚ್ಚೆಂದರೆ ಏಳೆಂಟು ಶಬ್ದಗಳಿಗೂ ಕಡಿಮೆಯಿರುವ ಪುಟ್ಟ ಶಿಲಾ ಲೇಖಗಳು. ಇವುಗಳಲ್ಲಿಯೇ ಅತಿ ದೊಡ್ಡದು ಎಂದರೆ ಅದು ಮಂಗುಳಂ ಅಥವಾ ಮೀನಾಕ್ಷಿಪುರಂ ಗುಹೆಯಲ್ಲಿರುವ 56 ಅಕ್ಷರಗಳ ಶಾಸನ.
ತಮಿಳು ಲಿಪಿಯ ‘ಬ್ರಾಹ್ಮಿ’ಯ ಕೌತುಕ:
ಈ ಶಾಸನಗಳಲ್ಲಿ ಬಳಕೆಯಾದ ಲಿಪಿಯನ್ನು ತಮಿಳು ವಿದ್ವಾಂಸರು ‘ತಮಿಳು ಬ್ರಾಹ್ಮಿ’ ಎಂದು ಕರೆದಿದ್ದಾರೆ. ‘ತಮಿಳು ಲಿಪಿ’ ಎಂದಿದ್ದರೆ ಸಾಕಿತ್ತಲ್ಲವೆ? ಅದ್ಯಾಕೆ ‘ತಮಿಳು ಬ್ರಾಹ್ಮಿ? ಯಾಕೆಂದರೆ, ಬ್ರಾಹ್ಮಿ ಲಿಪಿಯಷ್ಟೇ ನಮ್ಮದೂ ಪ್ರಾಚೀನ ಎಂದು ಹೇಗಾದರೂ ಮಾಡಿ ಸಾಧಿಸಬೇಕಲ್ಲವೆ? ಹೀಗಾಗಿ, ಅದನ್ನು ‘ತಮಿಳು ಬ್ರಾಹ್ಮಿ'''' ಎಂದು ಕರೆದರು. ಈ ರೀತಿಯ ನಾಮಕರಣಗಳು ಉಂಟು ಮಾಡುವ ಪ್ರಭಾವಗಳು ಅಷ್ಟಿಷ್ಟಲ್ಲ. ಶಾಸನ, ಲಿಪಿ ಇತ್ಯಾದಿಗಳ ಪರಿಚಯವಿಲ್ಲದ ವಿದ್ಯಾವಂತರಲ್ಲೂ ಸಹ ಈ ರೀತಿಯ ನಾಮಕರಣಗಳು ಓದಿದ ತಕ್ಷಣವೆ ಓಹೋ, ಇವು ಅಶೋಕನ ಬ್ರಾಹ್ಮಿಗೆ ಪರ್ಯಾಯವಾಗಿ ತಮಿಳರು ತಾವೇ ಅಳವಡಿಸಿಕೊಂಡ ಲಿಪಿ ಎಂಬ ವಿಭ್ರಾಂತಿಯನ್ನು ಉಂಟು ಮಾಡಿಬಿಡುತ್ತವೆ. ಹೀಗಾಗಿ ಕನ್ನಡದ ಪ್ರಾರಂಭಿಕ ಲಿಪಿಯನ್ನು ‘ಕನ್ನಡ ಬ್ರಾಹ್ಮಿ’ ಎಂದು ನಾವೂ ಸಹ ಕರೆದುಬಿಟ್ಟಿದ್ದರೆ ನಮ್ಮ ಭಾಷೆಯ ಲಿಪಿಯ ಪ್ರಾಚೀನತೆಯ ಸೊಗಡು ಇನ್ನಷ್ಟು ಹೆಚ್ಚಾಗುತ್ತಿತ್ತೇನೋ! ಆದರೆ, ತಮಿಳರು ಈ ಆರಂಭಿಕ ಗುಹಾ ಶಾಸನಗಳ ಲಿಪಿಯನ್ನು ‘ತಮಿಳು ಬ್ರಾಹ್ಮಿ'''' ಎಂದು ಕರೆದು ಅಲ್ಲಿಗೆ ತಮ್ಮ ಲಿಪಿಯು ಅಶೋಕನ ಮೂಲ ಬ್ರಾಹ್ಮಿ ಲಿಪಿಗೆ ಸಮಕಾಲೀನ ಅಥವಾ ಸ್ವತಂತ್ರ ಎಂದು ಬಿಂಬಿಸಿಬಿಟ್ಟರು. ಇನ್ನು ಕೆಲವು ತಮಿಳರಂತೂ ಅಶೋಕನ ಬ್ರಾಹ್ಮಿ ಲಿಪಿಗಿಂತಲೂ ಇವು ಪ್ರಾಚೀನವೆಂದೂ, ಅಶೋಕನ ಲಿಪಿಯೂ ಸಹ ಈ ತಮಿಳು ಬ್ರಾಹ್ಮಿ ಲಿಪಿಯಿಂದಲೆ ಉಗಮಿಸಿದೆ ಎಂದೂ ಸಹ ಹೇಳುತ್ತಾರೆ.
ಈ ಶಾಸನಗಳಲ್ಲಿ ಎದ್ದು ಕಾಣುವುದು ಏನೆಂದರೆ ಅಕ್ಷರಗಳಲ್ಲಿನ ಅಸಂಗತ ರೂಪ ಮತ್ತು ಭಿನ್ನತೆ. ಅನೇಕ ದೋಷಗಳು ಮತ್ತು ತಮಿಳಿಗೆ ಸ್ವಂತದ್ದಲ್ಲದ ಅಕ್ಷರಗಳೂ ಇವೆ. ಎಲ್ಲಕ್ಕಿಂತ ಮಿಗಿಲಾಗಿ ಈ ಪುಟ್ಟ ಶಾಸನಗಳ ಭಾಷೆ ತಮಿಳು ಆಗಿರದೆ ದೋಷಪೂರಿತ ಪ್ರಾಕೃತ ಆಗಿರುವ ಸಾಧ್ಯತೆಯೂ ಇದೆ. ಅದೂ ಅಲ್ಲದೇ, ಇವನ್ನು ಓದಿರುವ ತಮಿಳು ವಿದ್ವಾಂಸರು ಇವುಗಳಲ್ಲಿರುವ ವಿಷಯವನ್ನು ಅತ್ಯಂತ ಪ್ರಯಾಸದಿಂದ, ಅನೇಕ ಅಸಮಂಜಸ ಹೊಂದಾಣಿಕೆ ಮಾಡಿ, ಒಂದು ಪೂರ್ವಾಗ್ರಹಪೀಡಿತ ದೃಷ್ಟಿಯಿಂದ ಓದಿ ಬಲವಂತವಾಗಿ ತಮಿಳು ಭಾಷೆಯ ಶಾಸನಗಳು ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ ಎನಿಸುತ್ತದೆ. ಅಂಥ ಕೆಲವು ಅಸಂಗತ ವಿಷಯಗಳು ಎಂದರೆ: ತಮಿಳು ವರ್ಣಮಾಲೆಯಲ್ಲಿ ಇರದ ಅಕ್ಷರಗಳ ಬಳಕೆ, ಶುದ್ಧ ವ್ಯಂಜನಾಕ್ಷರಗಳ ಸಮಸ್ಯೆ ಮತ್ತು ಮಹಾಪ್ರಾಣಾಕ್ಷರಗಳ ಗೊಂದಲ ಇತ್ಯಾದಿ. ಇವೆಲ್ಲವನ್ನೂ ಗಮನಿಸಿದರೆ ಈ ಶಾಸನಗಳು ನಿಜವಾಗಿಯೂ ತಮಿಳು ಭಾಷೆಯಲ್ಲಿ ಬರೆದ ಶಾಸನಗಳೆ ಎಂಬ ಪ್ರಶ್ನೆ ಮೂಡುತ್ತದೆ. ಆದ್ದರಿಂದ, ಈ ಶಾಸನಗಳ ಪುನರ್ ಅಧ್ಯಯನ ನಡೆಯಬೇಕಿದೆ.
ಏಳನೆಯ ಶತಮಾನದ ‘ಪುಳ್ಳಿ’ ಕ್ರಿ.ಪೂರ್ವದ ತಮಿಳು ಶಾಸನಗಳಲ್ಲಿ ಹೇಗೆ ಬಂತು? ಪುಳ್ಳಿ ಎಂದರೆ ತಮಿಳಿನಲ್ಲಿ ಶುದ್ಧ ವ್ಯಂಜನಗಳನ್ನು ಸೂಚಿಸಲು ಬಳಸುವ ಒಂದು ಚುಕ್ಕಿ. ಆದರೆ ತಮಿಳು ಶಾಸನಗಳಲ್ಲಿ ಈ ‘ಪುಳ್ಳಿ’ ಯು ಕ್ರಿ.ಶ ಏಳನೆಯ ಶತಮಾನದ ನಂತರವೇ ಸ್ಥಿರವಾಗಿ, ನಿರಂತರವಾಗಿ ಬಳಕೆಯಾಗಿದೆ. ಕ್ರಿ.ಪೂರ್ವದ ಶಾಸನಗಳಲ್ಲಿ ಇರುವ ಈ ‘ಪುಳ್ಳಿ’ ಯು ಎರಡು ಸಾಧ್ಯತೆಗಳನ್ನು ಎದುರಿಗಿಡುತ್ತದೆ:
ಪುಳ್ಳಿ ಬಳಕೆಯಾಗಿರುವುದರಿಂದ ಈ ಪುಟ್ಟ ಗುಹಾ ಶಾಸನಗಳು ಕ್ರಿ.ಶ ಏಳನೆಯ ಶತಮಾನದ ಕಾಲಕ್ಕೆ ಸೇರಬೇಕು ಇಲ್ಲವೆ ಶುದ್ಧ ವ್ಯಂಜನಗಳನ್ನು ಸೂಚಿಸದ ಕಾರಣ ಈ ಶಾಸನಗಳ ಭಾಷೆ ದೋಷಪೂರಿತ ಪ್ರಾಕೃತ ಎಂದಾಗಬೇಕು. ಯಾವುದಾದರೂ ಸರಿಯೇ, ಈ ತಥಾಕಥಿತ ‘ತಮಿಳು ಬ್ರಾಹ್ಮಿ’ ಶಾಸನಗಳ ತಮಿಳಿನ ಪರದೆಯನ್ನು ಈ ಸಾಧ್ಯತೆಗಳು ತೊಡೆದು ಹಾಕಿ ಸತ್ಯ ಬೇರೆಯೇ ಇದೆ ಎಂದು ಸೂಚಿಸುತ್ತದೆ.
ತಮಿಳರು ಇವೆರಡರಲ್ಲಿ ಯಾವುದನ್ನು ಒಪ್ಪುತ್ತಾರೆ?
ವಿವಾದಾತೀತವಾದ ಪೂರ್ಣ ಸ್ವರೂಪದ ತಮಿಳಿನ ಮೊಟ್ಟ ಮೊದಲ ಶಾಸನ ಯಾವುದು? ಈಗ ಸ್ವಲ್ಪ ವಿವಾದಾಸ್ಪದವಾದವಾದ ಆ ಚಿಕ್ಕ ಗುಹಾ ಶಾಸನಗಳನ್ನು ಬಿಟ್ಟು ತಮಿಳಿನ ಪೂರ್ಣ ಪ್ರಮಾಣದ ಶಾಸನಗಳನ್ನು ನೋಡೋಣ. ಇಂಥ ಪೂರ್ಣ ಪ್ರಮಾಣದ ಅತೀ ಪ್ರಾಚೀನ ತಮಿಳು ಶಾಸನಗಳು ಏಳನೆಯ ಶತಮಾನದ ಪಲ್ಲವ ಒಂದನೇ ಮಹೇಂದ್ರವರ್ಮನ ಕಾಲಕ್ಕೆ ಸೇರಿವೆ. ಇವುಗಳಲ್ಲಿ ನಾವು ವಿಲ್ಲುಪುರಂ ಜಿಲ್ಲೆಯ ಶಿಂಗವರಂ ಅಥವಾ ಜಿಂಜಿ ಗ್ರಾಮದ ಹತ್ತಿರದ ತಿರುನಾಥರ್ಕುನ್ರು ಜೈನ ಬೆಟ್ಟದ ಮೇಲಿನ ನಾಲ್ಕು ಸಾಲಿನ ನಿಶಿಧಿ ಶಾಸನವನ್ನು ಉದಾಹರಿಸಬಹುದು. ಇದರ ಜೊತೆಗೆ ಪುದುಕೊಟ್ಟೈ ಸಮೀಪದ ಕುಡಿಮಿಯಾಮಲೈ ಶಾಸನ ಮತ್ತು ತಿರುಚಿರಾಪಳ್ಳಿಯ ಶಾಸನಗಳನ್ನು ಸಹ ಪರಿಗಣಿಸಬಹುದು. ಈ ಎಲ್ಲ ಶಾಸನಗಳ ಕಾಲ ಏಳನೆಯ ಶತಮಾನ.
ನಮ್ಮ ಕನ್ನಡದ ಪೂರ್ಣ ಪ್ರಮಾಣದ ಶಾಸನ ಹಲ್ಮಿಡಿ ಶಾಸನ ಮತ್ತು ಇದರ ಕಾಲ ಕ್ರಿ.ಶ 450. ಇದರ ನಂತರ ಕನ್ನಡವು ತನ್ನದೇ ಲಿಪಿಯಲ್ಲಿ ನಿರಂತರವಾಗಿ ಶಾಸನಗಳಲ್ಲಿ ಕಾಣಿಸಿಕೊಳ್ಳುತ್ತ ಬಾದಾಮಿ ಚಾಲುಕ್ಯರ ಕಾಲಕ್ಕೆ ಆಡಳಿತ ಭಾಷೆಯ (ರಾಜ್ಯ ಭಾಷೆ) ಯ ಸ್ಥಾನವನ್ನು ಪಡೆಯುತ್ತದೆ. ಆದರೆ, ತಮಿಳಿನಲ್ಲಿ ಪೂರ್ಣ ಪ್ರಮಾಣದ ಶಾಸನಗಳು ಬಂದಿದ್ದೇ ಏಳನೇ ಶತಮಾನದಲ್ಲಿ. ತಮಿಳಿಗೆ ಗ್ರಂಥ ಲಿಪಿಯನ್ನು ಕೊಟ್ಟ ಭಾಷೆ ಕನ್ನಡ: ಪಲ್ಲವರು ವಟ್ಟೆಳುತ್ತು ಎಂಬ ಲಿಪಿಯನ್ನು ಮೊದಲು ಬಳಸಿ ನಂತರ ಗ್ರಂಥ ಲಿಪಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಗ್ರಂಥ ಲಿಪಿಗೆ ಮೂಲ ಆಧಾರ ಯಾವುದು ಗೊತ್ತೇ? ಅದು ಗಂಗರ ಕಾಲದ ಕನ್ನಡ ಲಿಪಿ. ಎಂದರೆ, ತಮಿಳಿನ ಪಲ್ಲವರು ತಮ್ಮ ಶಾಸನಗಳನ್ನು ಹಾಕಿಸಲು ಅವಲಂಬಿಸಿದ್ದು ಕನ್ನಡಮೂಲದ ಗ್ರಂಥ ಲಿಪಿಯನ್ನು! ಅರ್ಥಾತ್, ಆರು-ಏಳನೆಯ ಶತಮಾನದಲ್ಲಿ ತಮಿಳಿಗೆ ಒಂದು ಲಿಪಿಯನ್ನು ಕೊಟ್ಟ ಭಾಷೆ ಕನ್ನಡ!
ಕನ್ನಡ ವಿದ್ವಾಂಸ ಬಿ.ಎಂ.ಶ್ರೀಕಂಠಯ್ಯನವರ ವಿಚಾರಗಳು:
ಹತ್ತನೆಯ ಅಖಿಲ ಭಾರತ ಪೌರ್ವಾತ್ಯ ಸಮ್ಮೇಳನವು ತಿರುಪತಿಯಲ್ಲಿ 1940 ರ ಮಾರ್ಚ್ ತಿಂಗಳಲ್ಲಿ ನಡೆಯಿತು. ಆ ಸಮ್ಮೇಳನದಲ್ಲಿ ಕನ್ನಡ ವಿಭಾಗದ ಅಧ್ಯಕ್ಷರಾಗಿದ್ದವರು ಪ್ರಾತಃಸ್ಮರಣೀಯರಾದ ಬಿ.ಎಂ.ಶ್ರೀಕಂಠಯ್ಯನವರು. ‘ಪೂರ್ವದ ಹಳಗನ್ನಡ ಮತ್ತು ತಮಿಳು’ ಎಂಬ ವಿಷಯದ ಕುರಿತು ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀಯವರು ಕನ್ನಡವೇ ಪ್ರಾಚೀನ ಎನ್ನುವುದನ್ನು ಭಾಷಾಶಾಸ್ತ್ರೀಯ ನೆಲೆಗಟ್ಟಿನಲ್ಲಿ ನಿರೂಪಿಸಿದರು. ಅಂದು ಅವರು ಹೇಳಿದ ಕೆಲವು ಮಾತುಗಳು ಹೀಗಿವೆ: ‘(ಪದಗಳ) ಕೊನೆಗೆ ಇನ್ನೂ ಅನುನಾಸಿಕ ಧ್ವನಿಗಳನ್ನು ಉಳಿಸಿಕೊಂಡಿರುವ ತಮಿಳು ತನ್ನ ಇಂಥ ರೂಪದಿಂದ ಹಳೆಯದು ಎಂಬ ಭ್ರಾಂತಿಯನ್ನು ಉಂಟುಮಾಡುತ್ತದೆ. ಮತ್ತು ಈ ರೀತಿಯ ಭ್ರಾಮಕವಾದ ಪ್ರಾಚೀನತೆಯ ರೂಪ ಧರಿಸಿರುವುದರಿಂದ ತಮಿಳನ್ನು ನಾವು ಕನ್ನಡಕ್ಕಿಂತಲೂ ಪ್ರಾಚೀನ ಎಂದು ತಿಳಿಯಬೇಕಿಲ್ಲ. ಅನೇಕ ಶಬ್ದಗಳು ಮತ್ತು ವ್ಯಾಕರಣದ ರೂಪಗಳು ಭಾಷಾಶಾಸ್ತ್ರೀಯವಾಗಿ ಕನ್ನಡದಲ್ಲಿಯೇ ಮೊದಲ ಪ್ರಾಚೀನ ರೂಪದಲ್ಲಿವೆ’. ತಮಿಳು ವಿದ್ವಾಂಸ ಐರಾವತಮ್ ಮಹಾದೇವನ್ ವಿಚಾರಗಳು:
ತಮಿಳು ಗುಹಾ ಶಾಸನಗಳ ಅಧ್ಯಯನ ಮಾಡಿದ ಐ.ಮಹಾದೇವನ್ ಹೇಳುವ ಮಾತುಗಳು: ‘ಪ್ರಸ್ತುತ ಅಧ್ಯಯನವು ಕ್ರಿ.ಪೂ 2ನೆಯ ಶತಮಾನದಿಂದ ಕ್ರಿ.ಶ 4ನೆಯ ಶತಮಾನದವರೆಗಿನ ತಮಿಳು ಬ್ರಾಹ್ಮಿಯ ಶಾಸನಗಳ ಮೇಲೆ ಹಳಗನ್ನಡದ ಸಂದೇಹಾತೀತವಾದ ಪ್ರಭಾವವನ್ನು ಬೆಳಕಿಗೆ ತಂದಿದೆ’
‘(ತಾಯಿಯರು ಎಂಬ ಪದವು) ಸ್ಪಷ್ಟವಾಗಿ ತಮಿಳು ಭಾಷೆಯು ಕನ್ನಡದಿಂದ ಸಾಲ ಪಡೆದ ಶಬ್ದವಾಗಿದೆ’ ಎಂದರೆ, ಯಾವ ಶಾಸನಗಳನ್ನು ತಮಿಳರು ತಮ್ಮ ಅತ್ಯಂತ ಪುರಾತನವಾದ ಕ್ರಿ.ಪೂರ್ವದ ಶಾಸನಗಳು ಎನ್ನುತ್ತಾರೆಯೋ ಅಂಥ ಶಾಸನಗಳ ಮೇಲೆಯೇ ಹಳಗನ್ನಡದ ಪ್ರಭಾವ ನಿಚ್ಚಳವಾಗಿದೆ. ಅರ್ಥಾತ್, ತಮಿಳು ಪಂಡಿತರೇ ಹೇಳುವಂತೆ ತಮಿಳಿಗಿಂತ ಮೊದಲೇ ಕನ್ನಡ ಒಂದು ಸ್ವತಂತ್ರ ಭಾಷೆಯಾಗಿ ಅಸ್ತಿತ್ವಕ್ಕೆ ಬಂದಾಗಿತ್ತು!
ಈಗ, ಈ ಕಮಲ್ ಹಾಸನ್ ಎಂಬ ನಟನನ್ನು ಕೇಳಿ:
‘ಅಲ್ಲಪ್ಪಾ, ಮಹಾಶಯ - ನಿಮ್ಮ ತಮಿಳುನಾಡಿನ ವಿದ್ವಾಂಸರೇ ಅತ್ಯಂತ ಪುರಾತನವಾದ ನಿಮ್ಮ ತಮಿಳು ಬ್ರಾಹ್ಮಿ ಶಾಸನಗಳ ಮೇಲೆಯೇ ಕನ್ನಡ ಭಾಷೆಯ ಪ್ರಭಾವವನ್ನೂ ಮತ್ತು ಅವುಗಳಲ್ಲಿ ಕನ್ನಡದ ಪದಗಳು, ವ್ಯಾಕರಣಾತ್ಮಕ ಅಂಶಗಳೂ ಇರುವುದನ್ನು ಒಪ್ಪಿಕೊಂಡಿರುವಾಗ, ಅದ್ಯಾವ ಆಧಾರದ ಮೇಲೆ ನೀನು ಕನ್ನಡ ತಮಿಳಿನಿಂದ ಬಂದಿದೆ ಎಂದು ಹೇಳಿದೆ?’ ‘ವಿಚಿತ್ರಚಿತ್ತ, ಸಂಕೀರ್ಣಜಾತಿ’
ಇದೇನು ಎಂದು ಬೆರಗುಗೊಂಡಿರಾ ಓದುಗ ಮಿತ್ರರೆ? ಏನಿಲ್ಲ, ಅವು ಬಿರುದುಗಳು. ಈ ಪ್ರಾಚೀನ ಕಾಲದ ರಾಜ ಮಹಾರಾಜ, ಚಕ್ರವರ್ತಿಗಳು ಶಾಸನಗಳಲ್ಲಿ ತಮಗೆ ತಾವೇ ಕೊಟ್ಟುಕೊಂಡ ಬಿರುದುಗಳು ತುಂಬ ಆಸಕ್ತಿಕರವಾಗಿರುತ್ತವೆ. ಶಾಸನ ಶಾಸ್ತ್ರದಲ್ಲಿ ಸಂಶೋಧನೆ, ಅಧ್ಯಯನದಲ್ಲಿ ನಿರತರಾಗಿರುವವರು ಇವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತೇವೆ. ಏಕೆಂದರೆ, ಐತಿಹಾಸಿಕ ರಾಜ-ಮಹಾರಾಜರುಗಳು ಆವಾಹಿಸಿಕೊಂಡ ಈ ಬಿರುದುಗಳು ಆಯಾ ರಾಜನ ಅಭಿರುಚಿ, ಅಭೀಪ್ಸೆ, ಆಕಾಂಕ್ಷೆ, ಆಲೋಚನಾಕ್ರಮ ಇತ್ಯಾದಿಗಳನ್ನು ಪ್ರಕಟಪಡಿಸಿ ಒಟ್ಟಂದದಲ್ಲಿ ಅವರ ವ್ಯಕ್ತಿತ್ವವನ್ನು ತಿಳಿಯಲು ಸಹಾಯ ಮಾಡುತ್ತವೆ. ಉದಾಹರಣೆಗೆ ನಮ್ಮ ಕದಂಬರು ‘ಧರ್ಮಮಹಾರಾಜಾಧಿರಾಜರು’; ಬಾದಾಮಿ ಚಾಲುಕ್ಯರು ‘ಪೃಥ್ವಿ ವಲ್ಲಭರು, ಸತ್ಯಾಶ್ರಯರು’; ಕಲ್ಯಾಣಿ ಚಾಲುಕ್ಯರು ‘ತ್ರಿಭುವನಮಲ್ಲರು, ಆಹವಮಲ್ಲರು’ ಇತ್ಯಾದಿ. ಇದೇ ರೀತಿ ತಮಿಳುನಾಡಿನ ಪಲ್ಲವರು ತಮಗೆ ತಾವೇ ಕೊಟ್ಟುಕೊಂಡ ಬಿರುದುಗಳು: ‘ವಿಚಿತ್ರ ಚಿತ್ತ’ ಮತ್ತು ‘ಸಂಕೀರ್ಣ ಜಾತಿ’ ಎಂದು! ಅಂದಿನ ಕಾಲದ ಮಾತು ಹೇಗಿತ್ತೋ ಏನೋ, ಆದರೆ ಇಂದಿನ ಕಾಲದಲ್ಲಿ ಮಾತ್ರ ವಿನಾಕಾರಣ ಇಂಥ ಭಾಷಾ ವಿವಾದ ಸೃಷ್ಟಿಸಿ ಸರಳವಾಗಿ ಮುಗಿಯಬಹುದಾದ ವಿಷಯವನ್ನು ಇನ್ನಷ್ಟು ಸಂಕೀರ್ಣಗೊಳಿಸಿ ಗೋಜಲಾಗಿಸುವ ಸಂದರ್ಭಕ್ಕೆ ತಕ್ಕಂತಿವೆ ಎನಿಸಿದರೆ ಅದು ನಿಮ್ಮ ಚಿತ್ತ!