;Resize=(412,232))
ದ್ವೇಷ ಭಾಷಣ ಮಸೂದೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಈ ಮಸೂದೆ ಸರ್ಕಾರಿ ಅಧಿಕಾರಿಗಳಿಗೆ ಜನರು ಯಾವ ಮಾತನಾಡಲು ಅನುಮತಿಸಬಹುದು ಎಂಬುದನ್ನು ನಿರ್ಧರಿಸುವ ಅಧಿಕಾರ ನೀಡುತ್ತದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ಅಪಾಯ ಉಂಟುಮಾಡುವ ಮಾತುಗಳನ್ನು ಮಾತ್ರ ಗುರಿಯಾಗಿಸದೆ, ಸರ್ಕಾರವಿರೋಧಿ ಧ್ವನಿಗಳನ್ನು ಮುಚ್ಚಿಹಾಕುವ ಸಾಧನವಾಗಿ ಪರಿವರ್ತನೆಗೊಳ್ಳಬಹುದು. ಅಂತಿಮವಾಗಿ, ಸಂವಿಧಾನದಲ್ಲಿ ಖಾತರಿಪಡಿಸಿದ ಮಾತಿನ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಹುದು.
-ಶೋಭಾ ಕರಂದ್ಲಾಜೆ
ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ
ಹೊಸ ಮಸೂದೆ ಸರ್ಕಾರಿ ವಿರೋಧಿ ಧ್ವನಿ ಮುಚ್ಚಿಹಾಕುವ ಅಪಾಯ । ರಾಷ್ಟ್ರಪತಿಗಳ ಪರಿಶೀಲನೆ ಅಗತ್ಯ
ಕರ್ನಾಟಕ ವಿಧಾನಸಭೆಯಲ್ಲಿ ಇತ್ತೀಚೆಗೆ ಅಂಗೀಕೃತಗೊಂಡ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ-2025 ಗಂಭೀರ ಸಾಂವಿಧಾನಿಕ ಕಳವಳಗಳನ್ನು ಹುಟ್ಟುಹಾಕಿದೆ. ಈ ಮಸೂದೆಯನ್ನು ಸಂವಿಧಾನದ ಆರ್ಟಿಕಲ್ 200ರ ಅಡಿಯಲ್ಲಿ, ರಾಷ್ಟ್ರಪತಿಗಳ ಪರಿಶೀಲನೆಗೆ ಕಾಯ್ದಿರಿಸಬೇಕು ಎಂಬ ಒತ್ತಾಯಗಳು ಎದ್ದಿವೆ. ಇದು ದ್ವೇಷ ಭಾಷಣ ಮತ್ತು ಅಪರಾಧಗಳನ್ನು ತಡೆಯುವ ಉದ್ದೇಶ ಹೊಂದಿದ್ದರೂ, ಇದರಿಂದ ಪ್ರಜಾಪ್ರಭುತ್ವದ ಸ್ವಾತಂತ್ರ್ಯಗಳಿಗೆ ಧಕ್ಕೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಈ ಮಸೂದೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ, ಇದು ಸರ್ಕಾರಿ ನಿಯಂತ್ರಿತ ವ್ಯವಸ್ಥೆಗೆ ಜನರ ಮಾತುಗಳ ಮೇಲೆ ನಿಗಾ ವಹಿಸುವ, ಮೌಲ್ಯಮಾಪನ ಮಾಡುವ ಮತ್ತು ಶಿಕ್ಷೆ ವಿಧಿಸುವ ವಿಶಾಲವಾದ ಅಧಿಕಾರ ನೀಡುತ್ತದೆ. ಈ ಮಸೂದೆಯು ಸರ್ಕಾರಿ ಅಧಿಕಾರಿಗಳಿಗೆ ಜನರು ಯಾವ ಮಾತನಾಡಲು ಅನುಮತಿಸಬಹುದು ಎಂಬುದನ್ನು ನಿರ್ಧರಿಸುವ ಅಧಿಕಾರ ನೀಡುತ್ತದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ಸ್ಪಷ್ಟ ಮತ್ತು ತಕ್ಷಣದ ಅಪಾಯ ಉಂಟುಮಾಡುವ ಮಾತುಗಳನ್ನು ಮಾತ್ರ ಗುರಿಯಾಗಿಸದೆ, ಸರ್ಕಾರದ ವಿರೋಧಿ ಧ್ವನಿಗಳನ್ನು ಮುಚ್ಚಿಹಾಕುವ ಸಾಧನವಾಗಿ ಪರಿವರ್ತನೆಗೊಳ್ಳಬಹುದು. ಅಂತಿಮವಾಗಿ, ಸಂವಿಧಾನದಲ್ಲಿ ಖಾತರಿಪಡಿಸಿದ ಮಾತಿನ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯಕ್ಕೆ ಧಕ್ಕೆ ಬೀಳುತ್ತದೆ.
ಸಾಂವಿಧಾನಿಕ ಆಶಯಗಳಿಗೆ ವಿರುದ್ಧ: ಸಂವಿಧಾನದ 19(1)(ಎ) ಅನುಚ್ಛೇದ ಪ್ರತಿಯೊಬ್ಬ ಪೌರನಿಗೆ ಮಾತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುತ್ತದೆ. ಇದಕ್ಕೆ ಕೇವಲ ಅನುಚ್ಛೇದ 19(2)ರಲ್ಲಿ ಹೇಳಿದ ನಿರ್ದಿಷ್ಟ ನಿರ್ಬಂಧಗಳು ಮಾತ್ರ ಅನ್ವಯ. ಆದರೆ ಈ ಮಸೂದೆಯಲ್ಲಿ ‘ಅಸೌಹಾರ್ದತೆ’, ‘ದ್ವೇಷ’, ‘ಪೂರ್ವಾಗ್ರಹಪೀಡಿತ ಹಿತಾಸಕ್ತಿ’ ಎಂಬ ಅಸ್ಪಷ್ಟ ಪದಗಳು ಬಳಕೆಯಾಗಿವೆ. ಇವುಗಳ ಅರ್ಥ ಸ್ಪಷ್ಟವಿಲ್ಲದ ಕಾರಣ ಸರ್ಕಾರಿ ಅಧಿಕಾರಿಗಳು ತಮ್ಮ ಇಚ್ಛೆಯಂತೆ ಬಳಸಿಕೊಳ್ಳಬಹುದು. ಇದು ತಾರತಮ್ಯ ಮತ್ತು ದುರುಪಯೋಗಕ್ಕೆ ದಾರಿ ಮಾಡಿಕೊಡುತ್ತದೆ. ಇದು ಸಂವಿಧಾನದತ್ತ ಅವಕಾಶಗಳಿಗೆ ಹೊಂದಿಕೆಯಾಗುವುದಿಲ್ಲ.
ಮಾತಿನ ನಿಯಂತ್ರಣ ಕಾಯ್ದೆಗಳು ಸ್ಪಷ್ಟವಾಗಿರಬೇಕು ಮತ್ತು ಕಿರಿದಾದ ಮಿತಿಯಲ್ಲಿರಬೇಕು. ಅದರಲ್ಲಿ ಯಾವುದೇ ಅಸ್ಪಷ್ಟತೆ ಇರಬಾರದು. ಕಾನೂನುಗಳು ಅಸ್ಪಷ್ಟತೆಯಿಂದ ಕೂಡಿದ್ದರೆ ಜನರು ಭಯದಿಂದ ಮಾತನಾಡದಂತೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ನ ಶ್ರೇಯಾ ಸಿಂಘಲ್ ಪ್ರಕರಣದ (2015) ತೀರ್ಪು ಸ್ಪಷ್ಟವಾಗಿ ಹೇಳಿದೆ. ಪ್ರಸ್ತುತ ಮಸೂದೆಯ ನಿಬಂಧನೆಗಳು ಇದೇ ರೀತಿಯ ಸಾಂವಿಧಾನಿಕ ದೋಷಗಳಿಂದ ಬಳಲುತ್ತಿದ್ದು, ಅದರ ಸಿಂಧುತ್ವದ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ಈ ಮಸೂದೆಯ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ, ತನಿಖೆ ಮತ್ತು ತೀರ್ಪಿನ ಅಧಿಕಾರಗಳು ಸರ್ಕಾರಿ ಇಲಾಖೆಯಲ್ಲೇ ಕೇಂದ್ರೀಕೃತವಾಗಿವೆ. ನ್ಯಾಯಾಲಯದ ಸಹಭಾಗಿತ್ವ ಕಡಿಮೆಯಿದೆ. ಶಿಕ್ಷೆಗಳನ್ನು ನೇರವಾಗಿ ಸರ್ಕಾರಿ ಅಧಿಕಾರಿಗಳ ನಿರ್ಧಾರಕ್ಕೆ ಜೋಡಿಸಲಾಗಿದೆ. ಇದರಿಂದ ಮೂಲಭೂತ ಹಕ್ಕುಗಳನ್ನು ಕಾಪಾಡಲು ಬೇಕಾದ ನ್ಯಾಯಸಮ್ಮತ ರಕ್ಷಣೆಗಳು ದುರ್ಬಲಗೊಳ್ಳುತ್ತವೆ. ಇಂತಹ ವ್ಯವಸ್ಥೆಯು ನ್ಯಾಯಯುತ ಪ್ರಕ್ರಿಯೆ ಮತ್ತು ಅಧಿಕಾರಗಳನ್ನು ಪ್ರತ್ಯೇಕವಾಗಿರಿಸುವ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ.
ವಿಶೇಷವಾಗಿ ಆತಂಕ ತರುವ ಸಂಗತಿಯೆಂದರೆ, ಈ ಮಸೂದೆಯು ಐತಿಹಾಸಿಕವಾಗಿ ದಮನಿತ ಮತ್ತು ಸಂವಿಧಾನದಲ್ಲಿ ರಕ್ಷಣೆ ಪಡೆದ ಗುಂಪುಗಳ ಮೇಲೆ ಉಂಟುಮಾಡಬಹುದಾದ ಪರಿಣಾಮ. ಮಸೂದೆಯಲ್ಲಿರುವ ಅಸ್ಪಷ್ಟ ಪದಗಳನ್ನು ಕನ್ನಡ ಭಾಷಾ ಹೋರಾಟಗಾರರು, ಮಹಿಳಾ ಸಂಘಟನೆಗಳು, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಪತ್ರಕರ್ತರು, ವಿದ್ಯಾರ್ಥಿ ಸಂಘಟನೆಗಳು ಮತ್ತು ಸಮಾಜ ಸೇವಾ ಸಂಸ್ಥೆಗಳ ವಿರುದ್ಧ ಬಳಸಿಕೊಳ್ಳಬಹುದು. ದುರ್ಬಲ ಸಮುದಾಯಗಳಿಗೆ ಶಕ್ತಿ ನೀಡುವ ಬದಲು, ಈ ಕಾಯ್ದೆಯು ಅವರ ಧ್ವನಿಯನ್ನು ಮುಚ್ಚಿಹಾಕಿ, ಸರಿಯಾದ ಟೀಕೆಗಳನ್ನು ತಡೆಯಬಹುದು. ಆಡಳಿತ, ಸಾಮಾಜಿಕ ನ್ಯಾಯ ಮತ್ತು ಜವಾಬ್ದಾರಿಯ ಬಗ್ಗೆ ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸದಂತೆ ಮಾಡಬಹುದು. ಇಂತಹ ಫಲಿತಾಂಶವು ಸಂವಿಧಾನದಲ್ಲಿ ಭರವಸೆ ನೀಡಿರುವ ಸಮಾನತೆ, ಘನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುತ್ತದೆ.
ಈ ಮಸೂದೆಗೆ ಸಮಾಜ ಸೇವಾ ಸಂಘಟನೆಗಳು, ಪತ್ರಕರ್ತರ ಸಂಘಗಳು, ಕಾನೂನು ಸಂಸ್ಥೆಗಳು ಮತ್ತು ಇತರ ಸಾಮಾಜಿಕ ಹಿತಾಸಕ್ತ ವ್ಯಕ್ತಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅನೇಕರು ಈ ಕಾಯ್ದೆಯು ಸಂವಿಧಾನ ವಿರೋಧಿ ಎಂದು ಟೀಕಿಸಿದ್ದಾರೆ. ಇದು ಸೂಕ್ತವಾದ ವಿಮರ್ಶೆ ಹಾಗೂ ವಿರೋಧಾಭಿಪ್ರಾಯಗಳನ್ನು ಮುಚ್ಚಿಹಾಕಲು ದುರುಪಯೋಗವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಈ ನಿಯಮಗಳು ಸಾರ್ವಜನಿಕ ಚರ್ಚೆಯ ಮೇಲೆ ಎಲ್ಲೆಡೆ ಭಯದ ವಾತಾವರಣ ಸೃಷ್ಟಿಸಿ, ಜನರು ಮಾತನಾಡಲು ಹೆದರುವಂತೆ ಮಾಡಬಹುದು. ಇದು ಪ್ರಜಾಪ್ರಭುತ್ವದ ಆಡಳಿತಕ್ಕೆ ಪೂರ್ತಿ ವಿರುದ್ಧವಾಗಿದೆ.
ಈ ಮಸೂದೆಯು ಸಂವಿಧಾನದ ಮೂರನೇ ಭಾಗದಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಗಂಭೀರ ಸಾಂವಿಧಾನಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆದ್ದರಿಂದ, ಸಂವಿಧಾನದ 200ನೇ ಅನುಚ್ಛೇದದಡಿ ರಾಜ್ಯಪಾಲರ ವಿವೇಚನಾಧಿಕಾರವನ್ನು ಬಳಸುವುದಕ್ಕೆ ಇದು ಸೂಕ್ತ ಪ್ರಕರಣ. ಈ ಮಸೂದೆಯನ್ನು ಮಾನ್ಯ ರಾಷ್ಟ್ರಪತಿಗಳ ಪರಿಶೀಲನೆಗೆ ಕಾಯ್ದಿರಿಸಿದರೆ, ನಾಗರಿಕ ಸ್ವಾತಂತ್ರ್ಯಗಳು ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ವಿಶಾಲವಾದ ಸಾಂವಿಧಾನಾತ್ಮಕ ಪರೀಕ್ಷೆ ನಡೆಯಬಹುದು. ಸಾಂವಿಧಾನಾತ್ಮಕ ಆಡಳಿತ, ಪ್ರಜಾಪ್ರಭುತ್ವದ ಸ್ವಾತಂತ್ರ್ಯಗಳು ಮತ್ತು ಕಾನೂನು ರಕ್ಷಣೆಯ ಹಿತದೃಷ್ಟಿಯಿಂದ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ-2025ಕ್ಕೆ ಅನುಮೋದನೆ ನೀಡದೆ ತಡೆಹಿಡಿಯಬೇಕು. ಸಂವಿಧಾನದ ಮೌಲ್ಯಗಳ ರಕ್ಷಣೆಗಾಗಿ ಈ ಮಸೂದೆಯನ್ನು ರಾಷ್ಟ್ರಪತಿಗಳ ಪರಿಶೀಲನೆಗೆ ಕಾಯ್ದಿರಿಸುವುದು ಅತ್ಯಗತ್ಯ.