ಇಸ್ರೇಲ್ ಬಿಟ್ಟು ಭಾರತಕ್ಕೆ ಬರಲ್ಲ: ಕೇರಳ ದಾದಿಯರು

KannadaprabhaNewsNetwork | Published : Oct 12, 2023 12:00 AM

ಸಾರಾಂಶ

ಇಸ್ರೇಲ್‌ನಲ್ಲಿರುವ 18,000ಕ್ಕೂ ಹೆಚ್ಚು ಭಾರತೀಯರ ಪೈಕಿ 7,000ಕ್ಕೂ ಹೆಚ್ಚು ಜನರು ಕೇರಳ ಮೂಲದವರೇ ಆಗಿದ್ದು, ಇವರಲ್ಲಿ ಶೇ.70ರಷ್ಟು ಜನರು ದಾದಿಯರು ಹಾಗೂ ಕೇರ್‌ಟೇಕರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.
ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ರಕ್ತಸಿಕ್ತವಾದ ಘೋರ ಯುದ್ಧ ನಡೆಯುತ್ತಿದ್ದರೂ ಅಲ್ಲಿಂದ ತಮ್ಮ ತವರು ದೇಶ ಭಾರತಕ್ಕೆ ಮರಳು ಕೇರಳ ಮೂಲದ ದಾದಿಯರು ಮುಂದಾಗುತ್ತಿಲ್ಲ.ಇಸ್ರೇಲ್‌ನಲ್ಲಿರುವ 18,000ಕ್ಕೂ ಹೆಚ್ಚು ಭಾರತೀಯರ ಪೈಕಿ 7,000ಕ್ಕೂ ಹೆಚ್ಚು ಜನರು ಕೇರಳ ಮೂಲದವರೇ ಆಗಿದ್ದು, ಇವರಲ್ಲಿ ಶೇ.70ರಷ್ಟು ಜನರು ದಾದಿಯರು ಹಾಗೂ ಕೇರ್‌ಟೇಕರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಭಾರತಕ್ಕೆ ಮರಳದಿರಲು ಕಾರಣವೇನು? ‘ಭಾರತದಲ್ಲಿ ನಾವು ದಾದಿಯಾಗಿ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಅಲ್ಲಿ ನಮಗೆ ಕೊಡುವ ಸಂಬಳ ಕೇವಲ 16,000 ಮಾತ್ರ. ಆದರೆ ಇಸ್ರೇಲ್‌ನಲ್ಲಿ ನಾವು ರೋಗಿಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ತಿಂಗಳಿಗೆ 1.5 ರಿಂದ 2 ಲಕ್ಷ ಸಂಬಳವಿದೆ. ಊಟ ವಸತಿಯನ್ನೂ ಅವರೇ ನೋಡಿಕೊಳ್ಳುತ್ತಾರೆ. ನಾವು ಭಾರತಕ್ಕೆ ಬಂದರೆ ಮತ್ತೆ ಇಸ್ರೇಲ್‌ಗೆ ಬರುವುದು ಸುಲಭವಿಲ್ಲ. ಮತ್ತೆ ನಮಗೆ ಕೆಲಸ ಕೊಡಿಸುವ ಏಜೆಂಟ್‌ಗೆ 15 ರಿಂದ 20 ಲಕ್ಷ ರು. ಕೊಡಬೇಕು’ ಎಂದು ಕೇರಳ ಮೂಲದ ದಾದಿಯರು ಹೇಳಿದ್ದಾರೆ.

Share this article